Home ರಾಜಕೀಯ ವಿಶ್ವಾಸಮತ ಯಾಚನೆ ಮಂಡಿಸಿದ ಕೇಜ್ರಿವಾಲ್

ವಿಶ್ವಾಸಮತ ಯಾಚನೆ ಮಂಡಿಸಿದ ಕೇಜ್ರಿವಾಲ್

0

ದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ಎಎಪಿ ಸರ್ಕಾರವನ್ನು ಬೀಳಿಸಲು ಷಡ್ಯಂತ್ರ ನಡೆಸುತ್ತಿದೆ ಎಂದು ಕೆಲ ದಿನಗಳಿಂದ ಆರೋಪ ಮಾಡುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗ ಆ ಆರೋಪಕ್ಕೆ ತೆರೆ ಎಳೆದಿದ್ದಾರೆ.

Delhi CM Arvind Kejriwal moves Motion of Confidence in Delhi Assembly.: ಶುಕ್ರವಾರ ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ಮಂಡಿಸಲಾಯಿತು. ಈ ನಿರ್ಣಯದ ಮೇಲಿನ ಚರ್ಚೆಯ ನಂತರ ನಾಳೆ (ಫೆಬ್ರವರಿ 17) ಮತದಾನ ನಡೆಯಲಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್‌ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.

‘‘ಬೇರೆ ರಾಜ್ಯಗಳಲ್ಲಿ ಸುಳ್ಳು ಪ್ರಕರಣಗಳಲ್ಲಿ ಪಕ್ಷಗಳನ್ನು ಒಡೆದು ಸರಕಾರಗಳನ್ನು ಉರುಳಿಸುವುದನ್ನು ನೋಡುತ್ತಿದ್ದೇವೆ. ದೆಹಲಿ ಮದ್ಯ ಹಗರಣ ಪ್ರಕರಣದ ನೆಪದಲ್ಲಿ ಎಎಪಿ ನಾಯಕರನ್ನು ಬಂಧಿಸಲು ಅವರು ಬಯಸಿದ್ದಾರೆ. ಅವರು ಎಎಪಿ ಸರ್ಕಾರವನ್ನು ಉರುಳಿಸಲು ನೋಡುತ್ತಿದ್ದಾರೆ. ಏಕೆಂದರೆ ನಮ್ಮ ಪಕ್ಷ ಇರುವ ತನಕ ಅವರು ದೆಹಲಿ ಚುನಾವಣೆಯಲ್ಲಿ ಎಂದಿಗೂ ಗೆಲ್ಲುವುದಿಲ್ಲ. ಆದರೆ, ನಮ್ಮ ಪಕ್ಷದ ಯಾವೊಬ್ಬ ಶಾಸಕರೂ ಪಕ್ಷ ಬಿಟ್ಟಿಲ್ಲ. ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ ಎಂಬುದನ್ನು ಜನತೆಗೆ ಸಾಬೀತುಪಡಿಸಲು ವಿಶ್ವಾಸಮತ ಯಾಚನೆ ಮಾಡುತ್ತಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಮದ್ಯದ ಪ್ರಕರಣಕ್ಕೆ ಹಾಜರಾಗುವಂತೆ ಇಡಿ ಪದೇ ಪದೇ ಸಮನ್ಸ್ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮದ್ಯದ ಹಗರಣ ಎಂದು ಕರೆಯಲಾಗುತ್ತಿರುವುದು ಹಗರಣವಲ್ಲ ಮತ್ತು ನಿಷ್ಪಕ್ಷಪಾತ ತನಿಖೆ ಅವರಿಗೆ ಬೇಕಾಗಿಲ್ಲ. ಎಲ್ಲಾ ಎಎಪಿ ನಾಯಕರನ್ನು ಹಗರಣದ ನೆಪದಲ್ಲಿ ಬಂಧಿಸಲಾಯಿತು ಮತ್ತು ಅವರ ಏಕೈಕ ಗುರಿ ದೆಹಲಿ ಸರ್ಕಾರವನ್ನು ಹೇಗಾದರೂ ಬೀಳಿಸುವುದಾಗಿದೆ ಎಂದು ಅವರು ಹೇಳಿದರು.

25 ಕೋಟಿ ನೀಡುವುದಾಗಿ ಭರವಸೆ ನೀಡಿ ಬಿಜೆಪಿಯವರು ತಮ್ಮ ಬಳಿಗೆ ಬಂದಿದ್ದಾರೆ ಎಂದು ಇಬ್ಬರು ಆಪ್ ಶಾಸಕರು ಹೇಳಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಸರ್ಕಾರ ಬೀಳಿಸುವ ಮೂಲಕ ಶಾಸಕರನ್ನು ಹೆದರಿಸಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವಂತೆ ವಿಧಾನಸಭೆ ಸಾಕ್ಷಿಯಾಗಿ ಶಾಸಕರಿಗೆ ಕೇಜ್ರಿವಾಲ್ ಕೇಳಿಕೊಂಡರು.

You cannot copy content of this page

Exit mobile version