ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(CJP) ಎಕ್ಸ್ (ಟ್ವಿಟರ್) ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮುಂದಿನ ಪರಿಣಾಮಗಳ ದೃಷ್ಟಿಯಿಂದ ಮತ್ತು ಸರ್ಕಾರದ ವಾದಗಳನ್ನು ಆಲಿಸಿದ ನಂತರವಷ್ಟೇ ಈ ರೀತಿಯ ಪರಿಹಾರವನ್ನು ನೀಡಲು ಸಾಧ್ಯ ಎಂದು ಜಸ್ಟಿಸ್ ಪುರುಷೇಂದ್ರ ಕುಮಾರ್ ಕೌರವ್ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಸ್ತುತ ವಿದೇಶದಲ್ಲಿದ್ದು, ಐಟಿ ನಿಯಮಗಳ ಅಡಿಯಲ್ಲಿ ರಚಿಸಲಾದ ಪರಿಶೀಲನಾ ಸಮಿತಿಯನ್ನು (Review Committee) ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಪರಿಶೀಲನಾ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ, ಐಟಿ ನಿಯಮಗಳ ಅಡಿಯಲ್ಲಿ ಯಾವುದೇ ವಿಷಯ ಅಥವಾ ಮಾಹಿತಿಯನ್ನು ನಿರ್ಬಂಧಿಸಲು (ಬ್ಲಾಕ್ ಮಾಡಲು) ಹೊರಡಿಸಲಾದ ಆದೇಶಗಳು ಕಾನೂನುಬದ್ಧವಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಕೋರ್ಟ್ ವಿವರಿಸಿದೆ.
ಪರಿಶೀಲನೆಯ ನಂತರ ಸಮಿತಿಯು ಆ ನಿರ್ಬಂಧದ ಆದೇಶಗಳನ್ನು ರದ್ದುಗೊಳಿಸಿ, ಖಾತೆಯನ್ನು ಮರುಸ್ಥಾಪಿಸಲು ಆದೇಶ ಹೊರಡಿಸಬಹುದಾಗಿದೆ. ಮುಂದಿನ ವಿಚಾರಣೆಯ ದಿನಾಂಕದ ಒಳಗಾಗಿಯೇ ಪರಿಶೀಲನಾ ಸಮಿತಿಯು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ತನ್ನ ನಿರ್ಧಾರವನ್ನು ದಾಖಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ದೀಪ್ಕೆ ಅವರು ವರ್ಚುವಲ್ ಆಗಿ ಸಮಿತಿಯ ಮುಂದೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿದೆ. ಕೇಂದ್ರ ಸರ್ಕಾರವು ಮೇ 21 ರಂದು ಸಿಜೆಪಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಿತ್ತು.
