ಹಾಸನ : ದೇವರ ದಾಸಿಮಯ್ಯ ಅವರು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಸಮಸ್ತ ಕುಲ ಕೋಟಿಗೆ ಸೇರಿದವರಾಗಿದ್ದಾರೆ, ಇವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ನಗರ ಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಗರದ ಆರ್.ಸಿ ರಸ್ತೆಯಲ್ಲಿ ದೇವರ ದಾಸಿಮಯ್ಯ ಅವರ ಸರ್ಕಲ್ ನಿರ್ಮಿಸಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಕ್ರಿಯೆ ಜ್ಞಾನದಿಂದ ಉತ್ತಮ ಮನುಷ್ಯರಾಗಬಲ್ಲಿರಿ ಎಂದು ದೇವರ ದಾಸಿಮಯ್ಯ ಅವರು ಹೇಳಿದ್ದಾರೆ. ಇವರು ದೇವರಿಗೆ ಪ್ರಶ್ನೆ ಮಾಡಿದ ಮಹಾನ್ ಮೇಧಾವಿ ಆಗಿದ್ದಾರೆ ಎಂದರು.
ಸಾಹಿತಿಗಳಾದ ಗೊರೂರು ಅನಂತರಾಜು ಅವರು ಮಾತನಾಡಿ ನೇಯ್ಗೆ ಕಾಯಕದ ಅವತಾರ ಪುರುಷ ದೇವರ ದಾಸಿಮಯ್ಯ ಅವರಾಗಿದ್ದಾರೆ, ಇವರು ಬಸವಾದಿ ಶರಣರಿಗೂ ಮಾರ್ಗದರ್ಶಕರಾಗಿದ್ದವರು, ನೇಯ್ಗೆ ವೃತ್ತಿಯಿಂದ ಕಾಯಕಕ್ಕೆ ಬುನಾದಿ ಹಾಕಿದವರು, ವಚನ ಸಾಹಿತ್ಯಕ್ಕೆ ಪೀಠಿಕೆ ಬರೆದು ಮುನ್ನುಡಿ ಹಾಕಿದವರು ದೇವರ ದಾಸಿಮಯ್ಯ, ಶರಣರ ತತ್ವಗಳನ್ನು ಪ್ರಚಾರ ಮಾಡಿದವರಾಗಿದ್ದಾರೆ. ಬಸವಣ್ಣನವರು ಕೂಡ ಇವರ ಕುರಿತು ವಚನಗಳಲ್ಲಿ ಹಾಡಿ ಹೊಗಳಿದ್ದಾರೆ ಎಂದು ದೇವರ ದಾಸಿಮಯ್ಯ ಅವರ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್, ತಹಶೀಲ್ದಾರರಾದ ಮೋಹನ್ ಕುಮಾರ್, ಹಾಸನ ನೌಕರ ಸಂಘದ ಗೌವಾಧ್ಯಕ್ಷರಾದ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.