Saturday, June 21, 2025

ಸತ್ಯ | ನ್ಯಾಯ |ಧರ್ಮ

‘ದಿಗ್ವಿಜಯ’ ಸುದ್ದಿವಾಹಿನಿ ಇನ್ನು ‘ರಿಪಬ್ಲಿಕ್’ ತೆಕ್ಕೆಗೆ

ಉದ್ಯಮಿ ವಿಜಯ್ ಸಂಕೇಶ್ವರ್ ಮಾಲೀಕತ್ವದ ವಿಆರ್‌ಎಲ್ ಸಂಸ್ಥೆ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಪಾಲಾಗಿದೆ. 2017 ರಲ್ಲಿ ಕಾರ್ಯಾರಂಭ ಮಾಡಿದ್ದ ದಿಗ್ವಿಜಯ ನ್ಯೂಸನ್ನು ಸಂಪೂರ್ಣವಾಗಿ ರಿಪಬ್ಲಿಕ್ ಸಂಸ್ಥೆಯ ಜೊತೆಗೆ ವಿಲೀನ ಮಾಡಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ವಿಶಾಲವಾದ ಸ್ಟುಡಿಯೋ ಹಾಗೂ ಕಾರ್ಪೊರೇಟ್ ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ದಿಗ್ವಿಜಯ ನ್ಯೂಸ್ 2017ರಲ್ಲಿ ಕಾರ್ಯಾರಂಭ ಮಾಡಿತ್ತು. ಆದರೀಗ ಈ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಸತತ ಐದು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ರಿಪಬ್ಲಿಕ್ ಚಾನಲ್‌ನೊಂದಿಗೆ ವಿಲೀನಗೊಳಿಸಲಾಗಿದೆ.

ಕೆಲವು ತಾಂತ್ರಿಕ ಕೆಲಸಗಳು ಬಾಕಿ ಇರುವ ಕಾರಣ ಮುಂದಿನ ಕೆಲ ತಿಂಗಳ ಕಾಲ ‘ದಿಗ್ವಿಜಯ’ ಎನ್ನುವ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರಿಯಲಿದ್ದು ಆದಾದ ಬಳಿಕ ‘ರಿಪಬ್ಲಿಕ್ ಕನ್ನಡ’ ಎನ್ನುವ ಹೆಸರಿನಲ್ಲಿಯೇ ಕಾರ್ಯಚರಣೆ ನಡೆಸುವುದು ಬಹುತೇಕ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

2017 ರ ಸಂದರ್ಭದಲ್ಲೇ ಅರ್ನಬ್ ಗೋಸ್ವಾಮಿ ತಮ್ಮದೇ ರಿಪಬ್ಲಿಕ್ ಟಿವಿಯನ್ನು ಆರಂಭಿಸಿದ್ದರು. ಆರಂಭಗೊಂಡ ಮೊದಲ ವಾರದಿಂದಲೇ ಟಿಆರ್‌ಪಿಯಲ್ಲಿ ಮೊದಲ ಸ್ಥಾನವನ್ನು ರಿಪಬ್ಲಿಕ್ ಚಾನೆಲ್ ಕಾಯ್ದುಕೊಂಡಿತ್ತು. 2021 ರ ಆಸುಪಾಸಿನಲ್ಲಿ ಬಾರ್ಕ್ (BARC) ಮುಖ್ಯಸ್ಥರ ಜೊತೆಗೆ ನಡೆಸಿದ ವಾಟ್ಸಾಪ್ ಸಂಭಾಷಣೆ ಹ್ಯಾಕ್ (Hack) ಆದಾಗ ‘ರಿಪಬ್ಲಿಕ್ ಟಿವಿ’ ಬಾರ್ಕ್ ನಲ್ಲಿ ಮೊದಲ ಸ್ಥಾನಕ್ಕೆ ಉಳಿಯಲು ಏನೇಲ್ಲಾ ಅಡ್ಡದಾರಿಗೆ ಹೆಜ್ಜೆ ಇಟ್ಟಿತ್ತು ಎಂಬುದು ಬಹಿರಂಗಗೊಂಡಿತ್ತು.

ಈಗಾಗಲೇ ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವರ್ಲ್ಡ್, ರಿಪಬ್ಲಿಕ್ ಬಾಂಗ್ಲ ಚಾನೆಲ್ ಮೂಲಕ ಇಂಗ್ಲಿಷ್, ಹಿಂದಿ ಹಾಗೂ ಬೆಂಗಾಲ ಭಾಷೆಯಲ್ಲಿ ಅರ್ನಬ್ ಗೋಸ್ವಾಮಿ ನೇತೃತ್ವದ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಕನ್ನಡದಲ್ಲಿಯೂ ಅರ್ನಬ್ ತನ್ನ ‘ನೇಷನ್ ವಾಂಟ್ಸ್ ಟು ನೌ’ (Nation wants to know) ಕೂಗಾಟ ಶುರು ಮಾಡುವ ತಯಾರಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರ ಸಂಜೆಯಿಂದಲೇ ದಿಗ್ವಿಜಯ ವಾಹಿನಿಯಲ್ಲಿ ಅರ್ನಬ್ ಮುಖ ಕಾಣಿಸಿಕೊಳ್ಳಬಹುದು.

ಈಗಾಗಲೇ ಸುದ್ದಿ ವಾಹಿನಿಯ ಮಾಲೀಕತ್ವವನ್ನು ಸಂಕೇಶ್ವರ್ ಅವರು ಅರ್ನಬ್ ಗೋಸ್ವಾಮಿ ಅವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಕೂಡಲೇ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಲು ಹಿಂದೆಯೇ ಕಾರ್ಯಕ್ರಮವೊಂದರ ಸಹಭಾಗಿತ್ವವನ್ನು ವಹಿಸಿಕೊಂಡಿರುವುದರಿಂದ, ಈ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಹೆಸರು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page