ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್ ಸ್ಥಾನದ ಅನರ್ಹತೆಯನ್ನ ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ವಾಪಸ್ ಪಡೆದಿದ್ದಾರೆ. ಆ ಮೂಲಕ ಸುಪ್ರೀಂಕೋರ್ಟ್ ಆದೇಶದ ನಂತರ ರಾಹುಲ್ ಅಧಿಕೃತವಾಗಿ ಸಂಸದರಾಗಿ ಮರಳಿದ್ದಾರೆ. ರಾಹುಲ್ ಅನರ್ಹತೆ ರದ್ಧಾಗುತ್ತಿದ್ದಂತೆ ಮಣಿಪುರದ ಶಾಂತಿ ಸ್ಥಾಪನೆಗೆ ಮುಂದೆ ನಿಂತಿರುವ INDIA ಒಕ್ಕೂಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.
ಈಗಾಗಲೇ INDIA ಒಕ್ಕೂಟ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಜನಪ್ರತಿನಿಧಿಗಳ ಒಂದು ನಿಯೋಗ ರಚಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಒಂದು ತಂಡ ಅಲ್ಲಿಗೆ ತೆರಳಿ, ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿದೆ. ಇನ್ನು ರಾಹುಲ್ ಆಗಮನದ ನಂತರ ಅಲ್ಲಿನ ಸರ್ಕಾರಕ್ಕೆ ಒತ್ತಡ ಹಾಕುವುದಕ್ಕೆ, NDA ಒಕ್ಕೂಟದ ಓಟಕ್ಕೆ ಬ್ರೇಕ್ ಹಾಕಲು ರಾಹುಲ್ ಗಾಂಧಿ ಕಡೆಯಿಂದ ಹೆಚ್ಚಿನ ಬಲ ಬರಲಿದೆ ಎಂದೇ ನಿರೀಕ್ಷಿಸಲಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಮಣಿಪುರ ಹಿಂಸಾಚಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟ ಹಲವಷ್ಟು ಪ್ರತಿಭಟನೆಗಳನ್ನು ಕೂಡ ನಡೆಸಿವೆ.
ಈಗಾಗಲೇ ಮಣಿಪುರ ಹಿಂಸಾಚಾರ ಕುರಿತಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಮಣಿಪುರ ಹಿಂಸಾಚಾರ ತಡೆಯಲು ಆಡಳಿತ ಪಕ್ಷದ ಮೌನ ಮತ್ತು ಅಸಮರ್ಥತೆ ಬಗ್ಗೆ ವಿಪಕ್ಷಗಳು ಸಂಸತ್ ನಲ್ಲಿ ಚರ್ಚೆಗೆ ಆಗ್ರಹಿಸಿವೆ. ಚರ್ಚೆಗೆ ಕಲಾಪ ಸಲಹಾ ಸಮಿತಿ 12 ಗಂಟೆಗಳಷ್ಟು ಅವಕಾಶ ನೀಡಿದೆ.
ಈ ನಡುವೆ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರ ಕೊಡಬಹುದು ಎಂದೇ ನಿರೀಕ್ಷೆ ಮಾಡಲಾಗಿದೆ. ಮಣಿಪುರ ಹಿಂಸಾಚಾರ ಕುರಿತಂತೆ ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಆದರೆ ಸರ್ಕಾರ ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದಕ್ಕಾಗಿಯೇ ಮೋದಿಯನ್ನು ಮಾತನಾಡುವಂತೆ ಮಾಡಲು ವಿಪಕ್ಷಗಳು ಅವಿಶ್ವಾಸ ನಿರ್ಣಯ ಎನ್ನುವ ಅಸ್ತ್ರ ಪ್ರಯೋಗಿಸಿವೆ.
ರಾಹುಲ್ ಗಾಂಧಿ ಈಗ ಸಂಸದರ ಸ್ಥಾನ ಮರಳಿ ಪಡೆದುಕೊಂಡಿದ್ದು, ಸಂಸತ್ ಕಲಾಪದಲ್ಲಿ ಭಾಗವಹಿಸುವುದರಿಂದ ಮಣಿಪುರ ವಿಚಾರದಲ್ಲಿ ವಿಪಕ್ಷಗಳಿಗೆ ಮತ್ತಷ್ಟು ಬಲ ಬಂದಿದೆ. ಈ ಹಿಂದೆಯೂ ರಾಹುಲ್ ಗಾಂಧಿ ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಇಂಡಿಯಾ ಪಕ್ಷಗಳ ಒಕ್ಕೂಟ ಶ್ರಮಿಸುತ್ತದೆ ಎಂದು ಹೇಳಿದ್ದರು.
ಹಲವು ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಹಾಕುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಧ್ವನಿ ಎತ್ತಲಿದ್ದಾರೆ. ವಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.