ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಾಧ್ಯಮಗಳು ‘ಆಪರೇಷನ್ ಸಿಂಧೂರ್’ ಕುರಿತು ವ್ಯಾಪಕ ವರದಿ ನೀಡುತ್ತಿವೆ.
ಈ ನಿಟ್ಟಿನಲ್ಲಿ, ಸುದ್ದಿ ಕಾರ್ಯಕ್ರಮಗಳಲ್ಲಿ ನಾಗರಿಕರನ್ನು ಎಚ್ಚರಿಸಲು ಬಳಸುವ ವಾಯುದಾಳಿ ಸೈರನ್ಗಳನ್ನು ಬಳಸದಂತೆ ಕೇಂದ್ರವು ಮಾಧ್ಯಮ ವಾಹಿನಿಗಳಿಗೆ ಸೂಚನೆ ನೀಡಿದೆ. ಅಣಕು ಪ್ರದರ್ಶನದ ಸಮಯದಲ್ಲಿ ನಾಗರಿಕರು ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಇದನ್ನು ಬಳಸಬೇಕೆಂದು ನೋಟಿಸಿನಲ್ಲಿ ಹೇಳಲಾಗಿದೆ.
“ಈ ಶಬ್ದಗಳನ್ನು (ಸೈರನ್) ಪದೇಪದೇ ಬಳಸುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸೈರನ್ ಮೊಳಗಿಸಿದಾಗ ಜನರು ಸರಿಯಾಗಿ ಪ್ರತಿಕ್ರಿಯಿಸದೆ ಇರುವ ಸಾಧ್ಯತೆಯಿರುತ್ತದೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳ ಇಲಾಖೆಗಳ ಮಹಾನಿರ್ದೇಶನಾಲಯವು ಈ ಸೂಚನೆಯನ್ನು ಹೊರಡಿಸಿದೆ.