ಭಾರತದ ಸುದ್ದಿ ಮಾಧ್ಯಮದ ಆಗಸ ಯುದ್ಧದ ಕಾರ್ಮೋಡದಿಂದ ಆವೃತವಾಗಿದೆ. ಗಡಿಯಲ್ಲಿ ಏನಾಗುತ್ತಿದೆ ಎಂಬುದು ಅಸ್ಪಷ್ಟವಾಗಿದ್ದು, ಅಧಿಕೃತ ಮಾಹಿತಿಗಾಗಿ ಕಾಯುವುದು ಅನಿವಾರ್ಯವಾಗಿದೆ. ಆದರೆ, ಬಿಜೆಪಿಯ ಪರವಾಗಿರುವ ಕೆಲವು “ಗೋದಿ ಮೀಡಿಯಾ” ಸಂಸ್ಥೆಗಳು ಸ್ವಯಂ-ನಿಯಂತ್ರಣದ ಮಿತಿಯನ್ನೂ ಮೀರಿ ಕಟ್ಟುಕತೆಗಳನ್ನು ಹರಡುತ್ತಿವೆ.
ಆರ್ಎಸ್ಎಸ್ನ ಹಿಂದೂತ್ವದ ಕಾರ್ಯಸೂಚಿಯನ್ನು ಒತ್ತಿಹೇಳುವ ಈ ಮಾಧ್ಯಮಗಳ ವಿರುದ್ಧ ಕೇಂದ್ರ ಸರ್ಕಾರ ಕೇವಲ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.
ಇದೇ ವೇಳೆ, ಸ್ವತಂತ್ರ ಮಾಧ್ಯಮ ಸಂಸ್ಥೆಗಳಾದ ದಿ ವೈರ್ ಮತ್ತು ನ್ಯೂಸ್ಲಾಂಡ್ರಿಯಂತಹ ಪರ್ಯಾಯ ವೇದಿಕೆಗಳ ವಿರುದ್ಧ ಬಿಜೆಪಿ ಸರ್ಕಾರವು ಪ್ರಸ್ತುತ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಈ ಎರಡು ಸಂಸ್ಥೆಗಳ ವೆಬ್ಸೈಟ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು ಮತ್ತು ಕೆಲವು ಲೇಖನಗಳನ್ನು ತೆಗೆದುಹಾಕಲು ಆದೇಶಿಸಲಾಗಿತ್ತು. ಲೇಖನಗಳನ್ನು ತೆಗೆದ ನಂತರ ನಿಷೇಧವನ್ನು ತೆರವುಗೊಳಿಸಲಾಗಿದ್ದರೂ, ಅನಧಿಕೃತ ನಿರ್ಬಂಧ ಇನ್ನೂ ಮುಂದುವರಿದಿದೆ ಎಂಬ ಆರೋಪಗಳಿವೆ.
ಗೋದಿ ಮೀಡಿಯಾದ “ಆಪರೇಷನ್”
ಗೋದಿ ಮೀಡಿಯಾ ಎಂದು ಗುರುತಿಸಲ್ಪಟ್ಟ ಬಿಜೆಪಿ ಮತ್ತು ಸಂಘ ಪರಿವಾರ ಬೆಂಬಲಿತ ಚಾನೆಲ್ಗಳು ಮತ್ತು ಮಾಧ್ಯಮ ಸಂಸ್ಥೆಗಳು ಪ್ರಸ್ತುತ ಪರಿಸ್ಥಿತಿಗೆ ಧಾರ್ಮಿಕ ಬಣ್ಣ ಬಳಿಯುವ ಕತೆಗಳನ್ನು ಹೆಣೆಯುತ್ತಿವೆ. ಭಾವನಾತ್ಮಕ ಉದ್ವೇಗವನ್ನು ಹೆಚ್ಚಿಸುವ ಕಟ್ಟುಕತೆಗಳನ್ನು ರೂಪಿಸುತ್ತಿವೆ.
ಟಿವಿ ಚಾನೆಲ್ಗಳು ಒಂದು ಹೆಜ್ಜೆ ಮುಂದೆ ಹೋಗಿ ಸ್ವಂತ “ಆಪರೇಷನ್” ಆರಂಭಿಸಿವೆ. ಪಾಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದ ಕ್ಷಣದಿಂದಲೇ, ಟಿವಿ ವಾಹಿನಿಗಳ ಆಂಕರ್ಗಳು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಕರೆ ನೀಡಿದ್ದು, ಯುದ್ಧವನ್ನು ಹೇಗೆ ನಡೆಸಬೇಕೆಂದು ತಜ್ಞರಂತೆ ಸಲಹೆ ನೀಡುತ್ತಿವೆ.
ತಪ್ಪು ಮಾಹಿತಿಯನ್ನು ಹರಡುವುದರ ಜೊತೆಗೆ, ಸುದ್ದಿಗೆ ನಾಟಕೀಯತೆಯನ್ನು ಬೆರೆಸಿ, ಕಿವಿಗೆ ಕಿರಿಕಿರಿಯಾಗುವಂತೆ ಕಿರುಚಾಟದಿಂದ ವೀಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ.
ಸರ್ಕಾರವು ಮಾಧ್ಯಮ ಸಂಸ್ಥೆಗಳಿಗೆ ಸಲಹೆಗಳನ್ನು ನೀಡುವುದರೊಂದಿಗೆ ಸುಮ್ಮನಾಗುತ್ತಿದ್ದು, ತಪ್ಪು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಅಧಿಕೃತ ಬ್ರೀಫಿಂಗ್ಗೆ ವಿರುದ್ಧವಾದ ಸುದ್ದಿಗಳ ಮೇಲೆ ಗಮನ ಕೇಂದ್ರೀಕರಿಸುವುದು ತುರ್ತು ಅಗತ್ಯವಾಗಿದೆ.
ಗಡಿ ನಿಯಂತ್ರಣ ರೇಖೆಯ ಬಳಿಯ ಕಾಶ್ಮೀರಿಗಳು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಗೋದಿ ಮೀಡಿಯಾದ ಯಾವ ಸಂಸ್ಥೆಯೂ ವರದಿ ಮಾಡುತ್ತಿಲ್ಲ. ಗಡಿಯಲ್ಲಿ ನಡೆಯುವ ಗುಂಡಿನ ದಾಳಿಗಳಲ್ಲಿ ಮೃತಪಟ್ಟವರ ವಿವರಗಳನ್ನು ಕೇವಲ ದಿ ಇಂಡಿಯನ್ ಎಕ್ಸ್ಪ್ರೆಸ್, ಕಾಶ್ಮೀರ್ ಟೈಮ್ಸ್ನಂತಹ ಕೆಲವು ಮಾಧ್ಯಮಗಳು ಮಾತ್ರ ಪ್ರಕಟಿಸುತ್ತಿವೆ.
8,000 ಖಾತೆಗಳನ್ನು ನಿರ್ಬಂಧಿಸಿದ ಎಕ್ಸ್
ದೇಶದ 8,000 ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರದಿಂದ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ಗೆ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪಾಲಿಸಿದ ಎಕ್ಸ್, ಆ ಖಾತೆಗಳನ್ನು ಬ್ಲಾಕ್ ಮಾಡಿದೆ.
ಇವುಗಳಲ್ಲಿ ಮಕ್ತೂರ್ ಮೀಡಿಯಾ, ಬಿಬಿಸಿ ಉರ್ದು, ಫ್ರೀ ಪ್ರೆಸ್ ಕಾಶ್ಮೀರ್, ದಿ ಕಾಶ್ಮೀರಿಯತ್ ಹಾಗೂ ಪತ್ರಕರ್ತರಾದ ಮುಜಾಮಿಲ್ ಜಲೀಲ್ ಮತ್ತು ಅನುರಾಧಾ ಬಾಸಿನ್ರ ಖಾತೆಗಳು ಸೇರಿವೆ.
ಆದರೆ, ಎಕ್ಸ್ನ ಗ್ಲೋಬಲ್ ಗವರ್ನಮೆಂಟ್ ಅಫೇರ್ಸ್ ಖಾತೆಯು ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.