Home ವಿಶೇಷ ಪರ್ಯಾಯ ಕಟ್ಟಲು ಬೇಕಾದ ಮೂಲವನ್ನು ನಾವು ಭಾರತದ ಬಹುಜನರ ಸಂಸ್ಕೃತಿಯಲ್ಲಿ ಹುಡುಕ ಬೇಕಿದೆ – ದು...

ಪರ್ಯಾಯ ಕಟ್ಟಲು ಬೇಕಾದ ಮೂಲವನ್ನು ನಾವು ಭಾರತದ ಬಹುಜನರ ಸಂಸ್ಕೃತಿಯಲ್ಲಿ ಹುಡುಕ ಬೇಕಿದೆ – ದು ಸರಸ್ವತಿ

0

ತಂದೆ ಅಚಾನಕ್ಕಾಗಿ ಹಳ್ಳಿಯಿಂದ ತಪ್ಪಿಸಿಕೊಂಡು ಬಂದು ಪಟ್ಟಣಕ್ಕೆ ಬಂದು ಓದಲಿಲ್ಲ ಅಂದಿದ್ದರೆ ನಾನು ಇವತ್ತು ಎಲ್ಲಿರುತ್ತಿದ್ದೆನೋ ಗೊತ್ತಿಲ್ಲ. ಇದಕ್ಕೆಲ್ಲ ಕಾರಣ ಬಾಬಾ ಸಾಹೇಬರ ಸಂವಿಧಾನ.  ಕಾನೂನನ್ನು ಪರ್ಯಾಯವಾಗಿ ಬಳಸಿ ಕೊಳ್ಳುವುದರಲ್ಲಿ ಇಪ್ಪತ್ತೆರಡು ವರ್ಷಗಳನ್ನು ಪೂರೈಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು. ಹಲವಾರು ರೀತಿಯಲ್ಲಿ ನನ್ನ ಚಿಂತನೆಗಳಿಗೆ ಪೂರಕವಾಗಿರುವವರು ಇವತ್ತು ಇಲ್ಲಿದ್ದಾರೆ. ನಿಮ್ಮೆಲ್ಲರ ಪ್ರತಿನಿಧಿಯಾಗಿ ನಾನು ಇವತ್ತು ಇಲ್ಲಿದ್ದೀನಿ.

ನ್ಯಾಯಾಧೀಶರಲ್ಲಿ ಯುವರ್‌ ಆನರ್‌ ಎನ್ನುವುದು ಬೇಡ ಎಂದು ಹೇಳಿದ ನ್ಯಾಯಮೂರ್ತಿ ಮುರಳೀಧರ್, ಏರ್‌ ಇಂಡಿಯಾ ಪ್ರಕರಣದಲ್ಲಿ ಮಹಿಳೆಯರ ಪರವಾಗಿ ತೀರ್ಪು ಕೊಟ್ಟವರು. ಮುರಳೀಧರ್‌ ಅವರಿಗೆ ನನ್ನ ಸಲಾಮ್. ದಲಿತರ ಮಾರಣ ಹೋಮವನ್ನು ಮಾನವ ಹಿಂಸೆ ಎಂದು ಹೇಳಿ ಇದು ಹತ್ಯೆ ಎಂದು ಹೇಳಿದ ಅವರಿಗೆ ನಾನು ಶರಣು ಹೇಳುತ್ತೇನೆ. ಇಂತವರ ಜೊತೆ ಇವತ್ತು  ನಾನು ಕುಳಿತಿರುವುದು ನನಗೆ ಅವಿಸ್ಮರಣೀಯ ಕ್ಷಣವಾಗಿದೆ.

ನನಗೆ ನ್ಯಾಯ ಅಥವಾ ವಕೀಲರು ಎಂದು ಪರಿಚಯ ಇದ್ದದ್ದು ಸಿನಿಮಾದಲ್ಲಿ ಮಾತ್ರ, ಅದಷ್ಟೇ ಕಾನೂನಾಗಿತ್ತು ನನ್ನ ಬದುಕಿನಲ್ಲಿ. ಮಥುರಾ ಅತ್ಯಾಚಾರ ಪ್ರಕರಣ ನಡೆದಾಗ ಇಡೀ ದೇಶದಾದ್ಯಂತ ಮಹಿಳಾ ಆಂದೋಲನ ಶುರುವಾಯಿತು. ಮುಂದೆ ಭಾಂವ್ರಿಯಿಂದ ತೊಡಗಿ ಇತ್ತೀಚಿನ ಬಿಲ್ಕೀಸ್‌ ಬಾನುವರೆಗೆ ಅದು ಮುಂದುವರೆದಿದೆ.

ನಾನು ಸಿಟ್ಟಿನಲ್ಲಿ ಒಂದು ಕಾರ್ಯಾಗಾರದಲ್ಲಿ ಹೇಳಿದೆ “ನನಗೆ ಕಾನೂನಿನಲ್ಲಿ ಭರವಸೆ ಇಲ್ಲ. ನಾನಾಗ ಭ್ರಮನಿರಸನಕ್ಕೆ ಒಳಗಾಗಿದ್ದೆ. ನನ್ನ ಹಣ ದುರುಪಯೋಗದ ಕೇಸಿನಲ್ಲಿ ಮೂರನೇ ಆರೋಪಿಯಾಗಿದ್ದೆ. ಒಬ್ಬ ಪೊಲೀಸ್‌ ನನ್ನಿಡೀ ಜನ್ಮ ದೂಷಣೆ ಮಾಡುವ ಹಾಗೆ ಸಿಕ್ಕಿದರೆ ಇನ್ನೊಬ್ಬ ಪೊಲೀಸ್‌ ನನ್ನ ಜೀವಮಾನವಿಡಿ ಆತನನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೈರುಧ್ಯ ಮತ್ತು ಆಘಾತಗಳ ಕಪ್ಪು ಬಿಳುಪಿನ ಹಲವಾರು ಶೇಡ್‌ಗಳು ನನ್ನ ಬದುಕಿನ ಅನುಭವಗಳನ್ನು ವಿಸ್ತರಿಸಿದವು. ಕಾನೂನನ್ನು ಅದ್ಭುತವಾಗಿ ತಿಳಿದು ಕೊಂಡಿದ್ದ ನನ್ನ ಅಪ್ಪ ಇದಕ್ಕೆಲ್ಲ ಕಾರಣ. ಕಳೆದ ಇಪ್ಪತ್ತೆರಡು ವರ್ಷಗಳಿಂದ ನಾನು ಎಎಲ್‌ಎಫ್‌ ಜೊತೆ ನಡೆದಿದ್ದೇನೆ. ನನ್ನ ಬೌದ್ಧಿಕ ಬೆಳವಣಿಗೆಗೆ ಎಎಲ್‌ಎಫ್‌ ಸಂಸ್ಥೆ ಸಹಕಾರಿಯಾಗಿದೆ. ಅಲ್ಲಿ ಒಂದು ಸಲ ಹೋಗಿಬಂದ್ರೆ ಅಪ್‌ಡೇಟ್‌ ಆಗಿಬಿಡುತ್ತೇನೆ. ಇದಕ್ಕೆಲ್ಲಾ ಕಾರಣ ಪರ್ಯಾಯ ಕಾನೂನು ವೇದಿಕೆಯ ಸದಸ್ಯರು ಮತ್ತು ಗೆಳತಿಯರು. ಕೆಡವುತ್ತಲೇ ಕಟ್ಟುವ ಪ್ರಕ್ರಿಯೆಯೇ ಪರ್ಯಾಯ ಎಂದು ನಾನು ಹೇಳಲು ಬಯಸುತ್ತೇನೆ.

ಪರ್ಯಾಯ ಕಾನೂನು ವೇದಿಕೆಯು ಹೆಣ್ಣಿನ ನೋಟದಲ್ಲಿ ಕಾನೂನನ್ನು ನೋಡುತ್ತದೆ. ಆಧಾರ್‌ ಇಲ್ಲದವರಿಗೆ ಕೇರಾಫ್‌ ವಿಳಾಸಕ್ಕೆ ಪರ್ಯಾಯ ಕಾನೂನು ವೇದಿಕೆ ಇದೆ. ಈ ರೀತಿಯ ನೆಲೆಯನ್ನು ಒದಗಿಸಿ ಅಂಚಿಗೆ ತಳ್ಳಲ್ಪಟ್ಟವರಿಗೆ ಪರ್ಯಾಯವನ್ನು ಹುಡುಕಿ ಕೊಟ್ಟಿದೆ. ಪ್ರಕಾಶನ ಎನ್ನುವುದನ್ನು  ಭಿನ್ನವಾಗಿ ಕಟ್ಟಿಕೊಟ್ಟಿದೆ. ಇದೇ ಎಎಲ್‌ಎಫ್‌ ನ ಜೀವದ್ರವ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ. 

ನ್ಯಾಯವನ್ನು ಮನೆ ಮನೆಗೆ ಮನಸ್ಸು ಮನಸ್ಸುಗಳಿಗೆ ಅದಕ್ಕಿಂತ ಮಿಗಿಲಾಗಿ ದಮನಿತರಿಗೆ ವಂಚಿತರಿಗೆ ತಲುಪಿಸಬೇಕು ಅಂದರೆ ನಾವು ಪರ್ಯಾಯವನ್ನು ಹುಡುಕಲೇ ಬೇಕು. ಕಾನೂನು ಭಾಷೆ ಎನ್ನುವುದು ಕಬ್ಬಿಣದ ಕಡಲೆ. ಇದು ಬದಲಾಗಬೇಕು. ಹಾಗೆಯೇ ಶಿಕ್ಷೆಯ ಸ್ವರೂಪವನ್ನು ಕೂಡಾ ಬದಲಾಯಿಸಬೇಕು. ಒಳಗಡೆ ಇರುವ ಅಂತ:ಕರಣವನ್ನು ಬಡಿದೆಬ್ಬಿಸಿ ತಪ್ಪಿತಸ್ಥ ಬದಲಾಗುವಂತಹ ಶಿಕ್ಷೆಯ ಸ್ವರೂಪವನ್ನು ರೂಪಿಸ ಬೇಕಿದೆ. ಸಂವಿಧಾನದ ಮೌಲ್ಯಗಳನ್ನು ಮನೆಯ ಮೌಲ್ಯಗಳನ್ನಾಗಿಸಬೇಕು, ಸಮಾಜದ ಮೌಲ್ಯಗಳನ್ನಾಗಿಸಬೇಕು. ಇದು ಅತ್ಯಂತ ಜರೂರು ಎಂದು ನಾನು ಭಾವಿಸುತ್ತೇನೆ. ನನ್ನ ತಿಳಿವು ಮತ್ತು ಅನುಭವದ ಮಿತಿಯಲ್ಲಿ ಪರ್ಯಾಯ ಕಟ್ಟಲು ಬೇಕಾದ ಮೂಲವನ್ನು ನಾವು ಭಾರತದ ಬಹುಜನರ ಸಂಸ್ಕೃತಿಯಲ್ಲಿ ಹುಡುಕ ಬೇಕಿದೆ. ಅಲ್ಲಿಯ ಬಣ್ಣ, ರುಚಿ, ಘಮಲು, ಆಚರಣೆ ಎಲ್ಲವನ್ನೂ ಬಾಚಿಕೊಳ್ಳಬೇಕಿದೆ. ಧರ್ಮ ಮತ್ತು ಜಾತಿಯನ್ನು ಬೇರ್ಪಡಿಸಿ ನೋಡುವ ಅಗತ್ಯವಿದೆ. ಸಂಸ್ಕೃತಿ ಎನ್ನುವುದು ಪರಿಸರದೊಂದಿಗೆ ನಿಕಟವಾಗಿ ಹೆಣೆದು ಕೊಂಡಿದೆ ಎನ್ನುವುದನ್ನು ನಾವು ಮರೆಯಬಾರದು.

ನನ್ನ ಆರೋಗ್ಯಕರ ಬೆಳವಣಿಗೆಗೆ ಸಹಕಾರ ಕೊಟ್ಟ ಪರ್ಯಾಯ ಕಾನೂನು ವೇದಿಕೆಗೆ ಶರಣು ಹೇಳುತ್ತೇನೆ. ಸಂವಿಧಾನದ ಉಳಿವೇ ಬಹುತ್ವದ ಉಳಿವು ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

(ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯು ೧೭-೧೨-೨೦೨೨ ರಂದು ಸೈಂಟ್ ಜೋಸೆಫ್‌ ಕಾನೂನು ಕಾಲೇಜಿನಲ್ಲಿ ಮ್ಮಿಕೊಂಡಿದ್ದ ಸಾಮಾಜಿಕ ಸುಧಾರಣೆಯ ಕೈಪಿಡಿ-ಸಂವಿಧಾನದ ಮುಂದಿರುವ ಸವಾಲುಗಳು ಕಾರ್ಯಕ್ರಮದಲ್ಲಿ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ದು. ಸರಸ್ವತಿ ಮಾಡಿದ ಭಾಷಣದ ಸಾರಾಂಶ)  

You cannot copy content of this page

Exit mobile version