ಬೆಂಗಳೂರು: ದಸರಾ ಉದ್ಘಾಟನೆಗೆ ಬರಹಗಾರ್ತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಈ ಹತ್ತು ದಿನಗಳ ಉತ್ಸವ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಇದು ಸಂಸ್ಕೃತಿ ಮತ್ತು ಪರಂಪರೆಯ ಭವ್ಯ ಆಚರಣೆ ಎಂದಿದ್ದಾರೆ.
“ದಸರಾ ಕೇವಲ ಹಿಂದೂ ಹಬ್ಬವಲ್ಲ. ಇದು ರಾಜ್ಯದ ಸಾಂಸ್ಕೃತಿಕ ಹೆಮ್ಮೆ, ಎಲ್ಲಾ ಸಮುದಾಯದ ಜನರನ್ನು ಒಟ್ಟಿಗೆ ತರುವ ಒಂದು ಆಚರಣೆ. ಬುಕ್ಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸುವುದರಲ್ಲಿ ತಪ್ಪೇನೂ ಇಲ್ಲ” ಎಂದು ಶಿವಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಮುಷ್ತಾಕ್ ಅವರನ್ನು ಆಹ್ವಾನಿಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಚಾಮುಂಡಿ ಬೆಟ್ಟವು ಎಲ್ಲಾ ಧರ್ಮ ಮತ್ತು ಸಮುದಾಯದ ಜನರನ್ನು ಸ್ವಾಗತಿಸುತ್ತದೆ ಎಂದರು.
“ಚಾಮುಂಡಿ ಬೆಟ್ಟ ಎಲ್ಲರಿಗೂ ಮುಕ್ತವಾಗಿದೆ, ಧರ್ಮ ಭೇದವಿಲ್ಲದೆ ಎಲ್ಲರೂ ಅಲ್ಲಿಗೆ ಭೇಟಿ ನೀಡುತ್ತಾರೆ. ಸಮಾಜದ ಎಲ್ಲಾ ವರ್ಗದ ಜನರು ದೇವಿಗೆ ಪ್ರಾರ್ಥನೆ ಸಲ್ಲಿಸಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇದು ಕೇವಲ ಹಿಂದೂಗಳ ಸ್ವತ್ತಲ್ಲ” ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಪೂಜಾ ಪದ್ಧತಿಗಳ ಅಂತರ್ಗತ ಸ್ವರೂಪವನ್ನು ಒತ್ತಿ ಹೇಳಿದ ಶಿವಕುಮಾರ್, “ನಾವು ಮಸೀದಿಗಳು, ದರ್ಗಾಗಳು, ಜೈನ ಬಸದಿಗಳು, ಚರ್ಚುಗಳು ಮತ್ತು ಗುರುದ್ವಾರಗಳಿಗೆ ಭೇಟಿ ನೀಡುತ್ತೇವೆ. ಗುರುದ್ವಾರಕ್ಕೆ ಹೋಗುವುದನ್ನು ಯಾರಾದರೂ ಎಂದಾದರೂ ತಡೆದಿದ್ದಾರೆಯೇ? ಇತರರು ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದನ್ನು ನಾವು ಎಂದಾದರೂ ವಿರೋಧಿಸಿದ್ದೇವೆಯೇ? ಯಾರಾದರೂ ಯಾವುದೇ ಪೂಜಾ ಸ್ಥಳಕ್ಕೆ ಭೇಟಿ ನೀಡಬಹುದು.”
“ಇತರ ಧರ್ಮದ ಜನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿಲ್ಲವೇ? ಅನೇಕ ಹಿಂದೂಗಳು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡಿದ್ದಾರೆ, ಅದೇ ರೀತಿ, ಇತರ ಧರ್ಮದ ಜನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮುಸ್ಲಿಮರು ಹಿಂದೂ ಸಂಪ್ರದಾಯಗಳನ್ನು ಆಚರಿಸುವುದಿಲ್ಲವೇ? ಶ್ರೀರಾಮನ ದರ್ಶನ ಕೇವಲ ಹಿಂದೂಗಳಿಗೆ ಮಾತ್ರ ಎಂದು ಸೂಚಿಸುವ ನಾಮಫಲಕವನ್ನು ಅಯೋಧ್ಯೆಯಲ್ಲಿ ಇಡಬಹುದೇ?” ಎಂದು ಪ್ರಶ್ನಿಸಿದರು.
“ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಹಜ್ ಸಮಿತಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯನ್ನು ಏಕೆ ರದ್ದುಪಡಿಸಿಲ್ಲ? ಇದೆಲ್ಲವೂ ಕೇವಲ ರಾಜಕೀಯ” ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ, “ನಾವು ಜಾತ್ಯತೀತ ರಾಷ್ಟ್ರ. ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸ್ವಾತಂತ್ರ್ಯಗಳನ್ನು ನೀಡುತ್ತದೆ” ಎಂದು ಹೇಳಿದರು.