ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ 21 ಕಡೆಗಳಲ್ಲಿ ನಡೆಸಿದ ವ್ಯಾಪಕ ಶೋಧ ಕಾರ್ಯಾಚರಣೆಯ ವಿವರಗಳನ್ನು ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ವಲಯ ಕಚೇರಿ ಶನಿವಾರ ಬಿಡುಗಡೆ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾದಲ್ಲಿ ಈ ದಾಳಿಗಳನ್ನು ನಡೆಸಲಾಗಿತ್ತು. ಜಾರಕಿಹೊಳಿ ಕುಟುಂಬದ ಘೋಷಿಸದ ವಿದೇಶಿ ಹೂಡಿಕೆಗಳು, ವಿದೇಶಿ ವ್ಯವಹಾರ ಸಂಪರ್ಕಗಳು ಮತ್ತು ಹಣಕಾಸು ಅಕ್ರಮಗಳ ತನಿಖೆಯ ಭಾಗವಾಗಿ ಈ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಚಿವರ ಭಾವಮೈದುನ ವೈ.ಡಿ. ಮಂಜುನಾಥ್ ಹಾಗೂ ವಿಶೇಷ ಕರ್ತವ್ಯಾಧಿಕಾರಿ (ಒಎಸ್ಡಿ) ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪರಸಣ್ಣವರ, ಡಾ. ಗಿರೀಶ್ ಸೋನವಾಲ್ಕರ್ ಮೊದಲಾದವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಜತೆಗೆ, ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳನ್ನು ಪಡೆಯಲು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಮೆಸರ್ಸ್ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ (ಬಿವಿಇಪಿಎಲ್) ಅಧಿಕಾರಿಗಳ ಮೇಲೂ ದಾಳಿ ನಡೆದಿದೆ.
ದಾಳಿಯ ವೇಳೆ ಜಪ್ತಿ ಮಾಡಲಾದ ದಾಖಲೆಗಳ ಪ್ರಕಾರ, ಜಾರಕಿಹೊಳಿ ಕುಟುಂಬಸ್ಥರು ಕಾಂಗೋದ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ ಮತ್ತು ಜಾಂಬಿಯಾದ ನವ ಔರಂ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿರುವುದು ಬೆಳಕಿಗೆ ಬಂದಿದೆ. ಸತೀಶ್ ಜಾರಕಿಹೊಳಿ ಸ್ವತಃ ಕಾಂಗೋದ ಚಿನ್ನದ ಗಣಿಗಾರಿಕೆ ಕಂಪನಿಯಾದ ‘ಮ್ಯಾಗ್ನಿಟ್ಯೂಡ್ ಸ್ಟಾರ್ ಎಸ್ಎಆರ್ಎಲ್’ನಲ್ಲಿ ಸುಮಾರು ಶೇಕಡಾ 40 ರಷ್ಟು ಪಾಲು ಹೊಂದಿದ್ದಾರೆ ಎಂದು ಇಡಿ ತಿಳಿಸಿದೆ. ಆಫ್ರಿಕಾದಲ್ಲಿರುವ ಇತರ ಗಣಿಗಾರಿಕೆ ಉದ್ಯಮಗಳ ದಾಖಲೆಗಳೂ ಪತ್ತೆಯಾಗಿವೆ.
ಬೆಂಗಳೂರಿನ ಡಾಲರ್ಸ್ ಕಾಲೋನಿ, ಕ್ರೆಸೆಂಟ್ ರಸ್ತೆ ಮತ್ತು ಗೋಕಾಕ್ನಲ್ಲಿರುವ ಜಾರಕಿಹೊಳಿ ಅವರ ನಿವಾಸಗಳಿಂದ 3.3 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ನಗದು ಹಾಗೂ ಅಮೆರಿಕನ್ ಡಾಲರ್, ಯುರೋ ಒಳಗೊಂಡಂತೆ 15 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅನಧಿಕೃತ ಮಾರ್ಗಗಳ ಮೂಲಕ ಕಾಂಗೋದಲ್ಲಿ ಬೃಹತ್ ಪ್ರಮಾಣದ ನಗದು ಹೂಡಿಕೆ ಮಾಡಲಾಗಿರುವ ಕುರಿತ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಇಡಿ ಹೇಳಿದೆ.
ಬಿವಿಇಪಿಎಲ್ನಂತಹ ಗುತ್ತಿಗೆದಾರರಿಂದ ಸಂಗ್ರಹಿಸಿದ ಲಂಚದ ಮೊತ್ತವನ್ನು ಸಚಿವರ ಭಾವಮೈದುನ ವೈ.ಡಿ. ಮಂಜುನಾಥ್ ನಿರ್ವಹಿಸುತ್ತಿದ್ದ ಸಂಸ್ಥೆಗಳ ಮೂಲಕ ವಿದೇಶಿ ಆಸ್ತಿ ಖರೀದಿಗೆ ತಿರುಗಿಸಲಾಗಿದೆ ಎನ್ನಲಾದ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.
