Home ಅಂಕಣ ಬೊಗಸೆಗೆ ದಕ್ಕಿದ್ದು- 27 : ಚುನಾವಣಾ ಫಲಿತಾಂಶ ಮತ್ತು ಪಂಚತಂತ್ರದ ಪಾಠ

ಬೊಗಸೆಗೆ ದಕ್ಕಿದ್ದು- 27 : ಚುನಾವಣಾ ಫಲಿತಾಂಶ ಮತ್ತು ಪಂಚತಂತ್ರದ ಪಾಠ

0

ಲೋಕಸಭಾ ಚುನಾವಣೆಯ ಫಲಿತಾಂಶ ಅಂತಿಮವಾಗಿ ಹೊರಬಿದ್ದಿದೆ. 400+ 420+ ಸ್ಥಾನಗಳನ್ನು ಗೆಲ್ಲುವುದಾಗಿ ಬೊಗಳೆ ಬಿಡುತ್ತಿದ್ದ ಬಿಜೆಪಿ ಮತ್ತು ಎನ್‌ಡಿಎಯ ಬೆಲೂನು ಟುಸ್ಸೆಂದಿದೆ. ಬಿಜೆಪಿಯ ಮತಗಳ ಪ್ರಮಾಣವೂ ಕುಸಿದಿದೆ. ಈಗಾಗಲೇ ಅಂಕಿಅಂಶಗಳು ಎಲ್ಲರಿಗೆ ಗೊತ್ತಿರಬಹುದಾದುದರಿಂದ ಅವುಗಳನ್ನು ಇಲ್ಲಿ ನೀಡಲು ಹೋಗುವುದಿಲ್ಲ. ಯಾರೇ ಸರಕಾರ ರಚಿಸಲಿ, ಈ ಕೆಳಗಿನ ಅಂಶಗಳು ಸ್ಪಷ್ಟವಾಗಿವೆ:

  • ಮುಂದಿನ ಐದು ವರ್ಷಗಳ ವರೆಗೆ ಯಾರೂ ಸಂವಿಧಾನ ಬದಲಾವಣೆಯ ಬಗ್ಗೆ ಚಕಾರವೆತ್ತಲೂ ಸಾಧ್ಯವಿಲ್ಲ ಎಂದು ಆಶಿಸಬಹುದು.
  • ಮುಂದೆ ಅಷ್ಟು ಸುಲಭವಾಗಿ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ನೀಡದೆ, ಯದ್ವಾತದ್ವಾ ಆಧ್ಯಾದೇಶಗಳು ಮತ್ತು ಕಾನೂನುಗಳನ್ನು, ಸಂವಿಧಾನ ತಿದ್ದುಪಡಿಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದು.
  • ಅಹಂಕಾರಿ, ಶೋಕಿಲಾಲ, ಸರ್ವಾಧಿಕಾರಿ ಪ್ರವೃತ್ತಿಯ ನಾಯಕರಿಗೆ ಪಾಠ ಕಲಿಸುವ ಮತ್ತು ಅವರ ಮದ ಇಳಿಸುವ ಶಕ್ತಿ ಮತದಾರರಿಗೆ ಇದೆ ಎಂಬುದು. (ಇದನ್ನು ಬ್ರೆಜಿಲ್‌ನಲ್ಲಿ ಬೊಲ್ಸನಾರೋ ಮತ್ತು ಯುಎಸ್ಎಯಲ್ಲಿ ಡೊನಾಲ್ಡ್ ಟ್ರಂಪ್ ಮುಂತಾದವರು ಈಗಾಗಲೇ ಅನುಭವಿಸಿದ್ದಾರೆ. ನರೇಂದ್ರ ಮೋದಿಗೂ ಇದೀಗ ಮನವರಿಕೆ ಆಗಿರಬಹುದು)
  • ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು “ಇಂಡಿಯಾ” ಕೂಟ ತೋರಿಸಿರುವುದು.
  • ಒಂದು ಸಾಮೂಹಿಕ ಹೋರಾಟದಲ್ಲಿ ಸಾಮೂಹಿಕ ಪ್ರತಿರೋಧ ತೋರದೇ, ಅಹಂಕಾರದಿಂದಲೋ, ಮೂರ್ಖತನದಿಂದಲೋ ಏಕಾಂಗಿಯಾಗಿ ಸ್ಪರ್ಧಿಸಿದ ಬಹುತೇಕ “ಇತರರು” ಬಹುದೊಡ್ಡ ನಷ್ಟ ಅನುಭವಿಸಿದ್ದಾರೆ ಎಂಬುದು.

ದೀರ್ಘವಾದ ಏಳು ಹಂತಗಳ ಚುನಾವಣಾ ಪ್ರಕ್ರಿಯೆಯ ವೇಳೆ ಎಲ್ಲರೂ ಪ್ರತಿಪಕ್ಷಗಳನ್ನು ಬೆಂಬಲಿಸುವ ಆತಂಕ, ಒತ್ತಡದಲ್ಲಿಯೇ ಇದ್ದರು. ಇದೀಗ ಫಲಿತಾಂಶವು ಸಂಪೂರ್ಣ ತೃಪ್ತಿ ನೀಡುವಂತೆ, ಸಮಾಧಾನದ ನಿಟ್ಟುಸಿರು ಬಿಡುವಂತೆ ಇಲ್ಲವಾದರೂ ಕಳೆದ ಚುನಾವಣೆಗೆ ಹೋಲಿಸಿದರೆ ಸಾಕಷ್ಟು ಸಮಾಧಾನಕರವಾಗಿದೆ. ಆದರೆ, ಗೋದಿ ಮೀಡಿಯಾ ಗುಲಾಮರು ಚಿಂತಾಕ್ರಾಂತರಾಗಿರುವ ಈ ಹಿನ್ನೆಲೆಯಲ್ಲಿ ಸ್ವಲ್ಪ ಲೈಟ್ ಹಾರ್ಟೆಡ್ ಅಂದರೆ, ಹಗುರವಾದ ವಿಷಯಗಳನ್ನು ಓದಿ ಸುಧಾರಿಸಿಕೊಳ್ಳೋಣ.

ಬೊಗಸೆಗೆ ದಕ್ಕಿದ್ದು…25ರಲ್ಲಿ ನಾನು ಸರ್ವಾಧಿಕಾರಿಗಳ ವಂಚನೆಯನ್ನು ವಿವರಿಸುವ ಪಂಚತಂತ್ರದ ಕೆಲವು ಕತೆಗಳನ್ನು ಹೇಳಿದ್ದೆ. ಬೊಗಸೆಗೆ ದಕ್ಕಿದ್ದು…26ರಲ್ಲಿ ರಾಜನಿಂದ ಅನ್ಯಾಯಕ್ಕೆ ಒಳಗಾದ ನಿಷ್ಟಾವಂತ ಸೇವಕರೂ ಆತನ ಸರ್ವನಾಶಕ್ಕೆ ಹಂಬಲಿಸುತ್ತಾರೆ ಎಂಬ ಪಂಚತಂತ್ರದ ಮಾತುಗಳನ್ನು ಬರೆದಿದ್ದೆ. ಅದು ಈ ಫಲಿತಾಂಶಗಳಲ್ಲಿ ನಿಜವಾಗಿದೆ. ಈಗ ದಮನಕಾರಿ ಅರಸರ ಸರ್ವನಾಶ ಹೇಗೆ ಎಂದು ಸೂಚಿಸುವ ಪಂಚತಂತ್ರದ ಇನ್ನಷ್ಟು ಕತೆಗಳನ್ನು ಇಲ್ಲಿ ಚುಟುಕಾಗಿ ಸಾರಾಂಶ ರೂಪದಲ್ಲಿ ಹೇಳುತ್ತಿದ್ದೇನೆ.

ಜಾಣ ಕೊಕ್ಕರೆ

ಒಂದು ಎತ್ತರವಾದ ಮರದ ಮೇಲೆ ನೂರಾರು ಕೊಕ್ಕರೆಗಳು ವಾಸವಾಗಿದ್ದವು. ಅದರಲ್ಲೊಂದು ಜಾಣ ಕೊಕ್ಕರೆಯೂ ಇತ್ತು. ಆ ಮರದ ಕೆಳಗೆ ಒಂದು ಚಿಕ್ಕ ಬಳ್ಳಿ ಹುಟ್ಟಿಕೊಂಡಿತು. ಆಗ ಆ ಜಾಣ ಕೊಕ್ಕರೆಯು ಉಳಿದವರಿಗೆ ಹೇಳಿತು: ಗೆಳೆಯರೇ, ಈ ಬಳ್ಳಿಯನ್ನು ಈಗಲೇ ಕತ್ತರಿಸಿ ಬಿಡೋಣ. ಇಲ್ಲವಾದರೆ ಅದು ಬೆಳೆದುಬಿಟ್ಟರೆ ಮುಂದೆ ಯಾರಾದರೂ ಅದನ್ನು ಹಿಡಿದು ಮೇಲೆ ಬಂದರೆ ನಮಗೆ ಅಪಾಯ. ಆದರೆ, ಯಾರೂ ಅದರ ಮಾತುಗಳನ್ನು ಕೇಳಲಿಲ್ಲ.

ಮುಂದೊಂದು ದಿನ ಆ ಬಳ್ಳಿ ದೊಡ್ಡದಾಗಿ ಬೆಳೆಯಿತು. ಒಂದು ದಿನ ಕೊಕ್ಕರೆಗಳೆಲ್ಲಾ ಆಹಾರ ಅರಸಿ ಹೊರಗೆ ಹೋಗಿದ್ದಾಗ ಒಬ್ಬ ಬೇಟೆಗಾರ ಅದೇ ಬಳ್ಳಿಯ ಸಹಾಯದಿಂದ ಆ ಭಾರೀ ಮರವನ್ನು ಹತ್ತಿ ದೊಡ್ಡ ಬಲೆಯನ್ನು ಬೀಸಿ ಹೋದ. ಸಂಜೆ ಬಂದ ಕೊಕ್ಕರೆಗಳ ಹಿಂಡಿನ ಕಾಲುಗಳು ಅದರಲ್ಲಿ ಸಿಕ್ಕಿ ಬಿದ್ದವು.

ಮರುದಿನ ಬೇಟೆಗಾರ ಬಂದಾಗ ಜಾಣ ಕೊಕ್ಕರೆ ಹೇಳಿತು: ಗೆಳೆಯರೇ, ನಾವೆಲ್ಲಾ ಸತ್ತಂತೆ ಬಿದ್ದುಕೊಳ್ಳೋಣ. ಬೇಟೆಗಾರ ಬಲೆಯನ್ನು ಬಿಚ್ಚಿದಾಗ ಎಲ್ಲರೂ ಒಮ್ಮಲೇ ಒಂದೇ ಹೊತ್ತಿಗೆ ಹಾರಿ ಬಿಡೋಣ! ನಂತರ ನಡೆದದ್ದು ಹೀಗೆಯೇ! ಕೊಕ್ಕರೆಗಳೆಲ್ಲಾ ಬಲೆ ಸಹಿತ ಹಾರಿದವು.

ನೀವೀಗ ಆ ಮರ ಭಾರತ, ಆ ಬಳ್ಳಿ ಆರೆಸ್ಸೆಸ್, ಬಿಜೆಪಿಯೇ ಬೇಟೆಗಾರ, ಕೊಕ್ಕರೆಗಳೇ ಪ್ರಜೆಗಳು ಎಂದು ಕಲ್ಪಿಸಿಕೊಂಡರೆ ನಾನು ಜವಾಬ್ದಾರಿ ಅಲ್ಲ. ಈ ಕತೆಯ ನೀತಿ ಎಂದರೆ: ಸಮಸ್ಯೆಯನ್ನು ಆರಂಭದಲ್ಲೇ ಬೆಳೆಯಲು ಬಿಡಬಾರದು ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು.

ರೋಗಕ್ಕಿಂತ ಔಷಧಿ ಅಪಾಯಕಾರಿ

ಒಂದು ಮರದ ಮೇಲೆ ಹಲವಾರು ಕೊಕ್ಕರೆಗಳು ವಾಸವಾಗಿದ್ದವು. ಮರದ ಬುಡದ ಬಿಲದಲ್ಲಿ ಒಂದು ಕರಿನಾಗರ ಹಾವು ವಾಸವಾಗಿತ್ತು. ಅದು ಮರದ ಮೇಲೆ ಹತ್ತಿ ಮೊಟ್ಟೆ ಮರಿಗಳನ್ನೆಲ್ಲಾ ತಿನ್ನುತ್ತಿತ್ತು. ಆಗ ಕೊಕ್ಕರೆಯ ಕತ್ತನ್ನು ತನ್ನ ಕಾಲುಗಳ ಇಕ್ಕುಳದಿಂದ ಹಿಡಿದು ತಿನ್ನುವ ಒಂದು ಏಡಿಗೆ ಚಿಂತೆಯಾಯಿತು. ಕೊಕ್ಕರೆಗಳೆಲ್ಲಾ ಹಾವಿನ ಪಾಲಾದರೆ ಹೇಗೆ ಎಂದು! ಅದು ಸಲಹೆ ನೀಡಿತು: ನೀವು ಮೀನುಗಳನ್ನು ಹಿಡಿದು ಮುಂಗುಸಿಯ ಬಿಲದಿಂದ ಹಾವಿನ ಬಿಲದ ವರೆಗೆ ಹಾಕುತ್ತಾ ಬನ್ನಿ ಎಂದು. ಕೊಕ್ಕರೆಗಳು ಹಾಗೆಯೇ ಮಾಡಿದವು. ಮುಂಗುಸಿ ಮೀನುಗಳನ್ನು ತಿನ್ನುತ್ತಾ ಬಂದು ಹಾವಿನ ಬಿಲ ತಲಪಿ ಹಾವನ್ನು ಕೊಂದು ತಿಂದಿತು. ಕೊಕ್ಕರೆಗಳಿಗೆ ಸಮಾಧಾನವಾಗಿ ಮುಂಗುಸಿಯನ್ನು ಆರಾಧಿಸಿದವು. ಮುಂದೆ ಮುಂಗುಸಿ ಹತ್ತು ವರ್ಷಗಳಿಂದ ಈ ಕೊಕ್ಕರೆಗಳ ಮೊಟ್ಟೆ ಮರಿಗಳನ್ನು ತಿನ್ನುತ್ತಿದೆ!

ಇದನ್ನು ನಮ್ಮ ಈಗಿನ ರಾಜಕೀಯ ಪರಿಸ್ಥಿತಿಗೆ ಹೋಲಿಸಿ. ನಿಮಗೆ ಯಾರಾದರೂ, ಏನಾದರೂ ನೆನಪಾದರೆ ಕೂಡಾ ನಾನು ಜವಾಬ್ದಾರಿ ಅಲ್ಲ! ಈಗ ದುಷ್ಟ ಅರಸನನ್ನು ಬಗ್ಡುಬಡಿಯಲು ಹೆಚ್ಚು ಬುದ್ಧಿವಂತ ಉಪಾಯವನ್ನು ಹೇಳುವ ಇನ್ನೊಂದು ಕತೆ:

ಕಾಗೆ ಮತ್ತು ಕರಿನಾಗರ

ಒಂದು ಕಾಗೆ ಒಂದು ಮರದಲ್ಲಿ ಸಂಸಾರ ಮಾಡುತ್ತಿತ್ತು. ಆ ಮರದ ಕೆಳಗಿನ ಬಿಲದಲ್ಲಿದ್ದ ಗಡ್ಡದ ಹಾವು ಒಂದು ದಿನ ಅದರ ಮೊಟ್ಟೆ ಮರಿಗಳನ್ನೆಲ್ಲಾ ತಿಂದುಹಾಕಿತು. ದುಃಖದಿಂದ ಅತ್ತ ಕಾಗೆ, ಈ ಹಾವಿಗೆ ಬುದ್ಧಿ ಕಲಿಸಬೇಕೆಂದು ಒಂದು ಉಪಾಯ ಮಾಡಿತು.

ಅಲ್ಲಿನ ರಾಜಕುಮಾರಿ ಒಂದು ಕೊಳದಲ್ಲಿ ಮೀಯುತ್ತಿದ್ದಾಗ ತನ್ನ ಆಭರಣಗಳನ್ನು ಕಳಚಿ ದಡದಲ್ಲಿ ಇಟ್ಟಿದ್ದಳು. ಕಾಗೆ ಅದರಿಂದ ಒಂದು ಅಮೂಲ್ಯ ವಜ್ರದ ಹಾರವನ್ನು ಎತ್ತಿಕೊಂಡು ಎಲ್ಲರ ಕಣ್ಣೆದುರೇ ಹಾರಿತು. ರಾಜಭಟರು ಅದರ ಬೆನ್ನುಹತ್ತಿದರು. ಅದು ಹಾರವನ್ನು ಹಾವಿನ ಬಿಲದ ಒಳಗೆ ಹಾಕಿತು. ಇದನ್ನು ನೋಡಿದ ರಾಜಕುಮಾರಿಯ ಅಂಗರಕ್ಷಕರು ಬಿಲವನ್ನು ಅಗೆದಾಗ ಹಾವು ಹೊರಬಂತು. ಅವರದನ್ನು ಹೊಡೆದುಕೊಂದರು. ಇಂತಹಾ ಚತುರ ಉಪಾಯಗಳಿಗೆ ನನ್ನ ಸಹಮತವಿದೆ.

ಒಗ್ಗಟ್ಟಿನಲ್ಲಿ ಬಲವಿದೆ

ಒಂದು ಗುಬ್ಬಚ್ಚಿ ಕಾಡಿನ ಒಂದು ಮರದಲ್ಲಿ ವಾಸವಾಗಿತ್ತು. ಅಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟಿತ್ತು. ಒಂದು ದಿನ ಮದವೇರಿದ ಒಂದು ಮೊದ್ದ ಆನೆ ಸುಖಾಸುಮ್ಮನೆ ನಮ್ಮ ಸಿಎಎ ರೀತಿಯಲ್ಲಿ ಒಂದು ಕೊಂಬೆಯನ್ನು ಅಲ್ಲಾಡಿಸಿತು. ಮೊಟ್ಟೆಗಳೆಲ್ಲವೂ ನೆಲಕ್ಕೆ ಬಿದ್ದು ಒಡೆದು ಹೋದವು. ಪಾಪ, ಅಸಾಹಯಕ ಗುಬ್ಬಚ್ಚಿ ಅಳುತ್ತಾ ಕುಳಿತಿದ್ದಾಗ, ಒಂದು ಮರಕುಟಿಗ ಹಕ್ಕಿ ಬಂದು ಸಮಾಧಾನ ಹೇಳಿತು. ಆದರೇನು? ಈ ಹುಚ್ಚು ಆನೆಯನ್ನು ನಿರ್ನಾಮ ಮಾಡುವುದು ಹೇಗೆ? ಎರಡು ಹಕ್ಕಿಗಳು? ಅವು ಇನ್ನೊಂದು ಜೀರುಂಡೆ ಬಳಿ ಹೋದವು. ನಂತರ ಜೀರುಂಡೆಯ ಗೆಳೆಯನಾದ ಒಂದು ಕಪ್ಪೆಯ ಬಳಿಗೆ ಹೋದವು.

ಆ ಕಪ್ಪೆ ಸಲಹೆ ಹೇಳಿತು: ಜೀರುಂಡೆ, ನೀನು ಆನೆಯ ಕಿವಿಯ ಬಳಿ ಗುಂಯ್ಗುಡಬೇಕು. ಆಗ ಅದು ನಿನ್ನ ಸಂಗೀತ ಕೇಳಿ ಕಣ್ಣು ಮುಚ್ಚುತ್ತದೆ. ಆಗ ನೀನು- ಮರಕುಟಿಗ ಅದರ ಕಣ್ಣುಗಳಿಗೆ ಚುಚ್ಚಬೇಕು. ಆಗ ಅದು ನೋವಿನಿಂದ ಕಣ್ಣುಮುಚ್ಚಿ ನೀರಿಗಾಗಿ ಓಡುತ್ತದೆ. ಆಗ ನಾನು ಒಂದು ಪ್ರಪಾತದ ಅಂಚಿನಲ್ಲಿ ಕುಳಿತು ವಾಟರ್ ವಾಟರ್ ಎಂದು ವಟಗುಟ್ಟುತ್ತೇನೆ. ಕಪ್ಪೆ ಇರುವಲ್ಲಿ ನೀರಿದೆ ಎಂದು ಆನೆ ಅಲ್ಲಿಗೆ ಧಾವಿಸುತ್ತದೆ. ಪ್ರಪಾತಕ್ಕೆ ಬಿದ್ದು ಸಾಯುತ್ತದೆ. ಮುಂದೆ ಹಾಗೆಯೇ ಆಯಿತು. ಚಿಕ್ಕಪುಟ್ಟ ಪ್ರಾಣಿ ಪಕ್ಷಿ, ಕೀಟಗಳು ದೈತ್ಯ ಆನೆಯನ್ನು ಉರುಳಿಸಿದವು.

ಈಗ ನನಗೆ ಈ ಕತೆ ಬರೆಯುವಾಗ “ಇಂಡಿಯಾ” ನೆನಪಿಗೆ ಬರುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ. ಕೆಲವು ಕೈಕೊಟ್ಟದ್ದರಿಂದ ಇಲ್ಲಿ ಯೋಜನೆ ಸಂಪೂರ್ಣ ಯಶಸ್ವಿ ಆಗಲಿಲ್ಲ. ಈ ಕತೆಗಳು ನಿಮಗೆ ಇಷ್ಟವಾದರೆ, ಬಿಜೆಡಿ, ಬಿಎಸ್ಪಿಯಂತಹ ಕೆಲವು ಪಕ್ಷಗಳು ಈ ಕೂಟವನ್ನು ಸೇರದೇ, ಒಗ್ಗಟ್ಟನ್ನು ತೋರದೇ, ಶತ್ರುವನ್ನು ಗೆಲ್ಲಿಸಿ ನಿರ್ನಾಮವಾದ ಕುರಿತೂ ಕೆಲವು ಕತೆಗಳಿವೆ. ಇವುಗಳನ್ನು ನೀವು ಬಯಸಿದಲ್ಲಿ ಮುಂದೆ ನೋಡೋಣ.

You cannot copy content of this page

Exit mobile version