ಎರಡು ದಿನಗಳಿಂದ ಅತಿ ಹೆಚ್ಚು ಸುದ್ಧಿಯಾಗಿದ್ದ ಚುನಾವಣಾ ಬಾಂಡ್ ಮೂಲಕ ಸುಲಿಗೆ ಅಕ್ರಮ ಪ್ರಕರಣದ ಎಫ್ ಐಆರ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ಜೆಪಿ ನಡ್ಡಾ, ಇಡಿ ಅಧಿಕಾರಿಗಳು ಸೇರಿದಂತೆ ಈ ಹಗರಣದಲ್ಲಿ ಕೇಳಿಬಂದ ಬಿಜೆಪಿ ಮುಖಂಡರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಸಂಸದ ನಳೀನ್ ಕುಮಾರ್ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಎಫ್ಐಆರ್ ಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ದೇಶದ ವಿವಿಧ ಕಂಪನಿಗಳಿಗೆ ಬೆದರಿಕೆ ಹಾಕಿ ಚುನಾವಣಾ ಬಾಂಡ್ ಮೂಲಕ ಸುಮಾರು 8,000 ಕೋಟಿ ಸುಲಿಗೆ ಮಾಡಲಾಗಿದೆ ಎಂದು ಜನಾದೇಶ ಪರಿಷತ್ ನ ಆದರ್ಶ್ ಅಯ್ಯರ್ ಎಂಬುವವರು ಜನಪ್ರತಿನಿಧಿಗಳ ಕೋರ್ಟ್ ಮೂಲಕ ಎಫ್ಐಆರ್ ಗೆ ಮೊರೆ ಹೋಗಿದ್ದರು. ಆ ಮೂಲಕ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ದೂರಿನ ಆಧಾರದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆಗೆ ಮೇರೆಗೆ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು, ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.