Home ಬೆಂಗಳೂರು ಎನ್‌ಕೌಂಟರ್‌ | ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲಕರು ಅವರ ಮೇಲೆ ನಿಗಾ ಇಟ್ಟಿರಬೇಕು – ಸಂತೋಷ್‌...

ಎನ್‌ಕೌಂಟರ್‌ | ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲಕರು ಅವರ ಮೇಲೆ ನಿಗಾ ಇಟ್ಟಿರಬೇಕು – ಸಂತೋಷ್‌ ಲಾಡ್‌

0

ವಲಸೆ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲಿಕರು ಆ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದರ ಜೊತೆಗೆ ಅವರ ಮೇಲೆ ವಿಶೇಷ ನಿಗಾ ಕೂಡಾ ಇಡಬೇಕು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸೂಚಿಸಿದ್ದಾರೆ.

ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು, ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಹತ್ಯೆ ಪ್ರಕರಣ ಪ್ರಸ್ತಾಪ ಮಾಡಿದ ಅವರು, ‘ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರ ಮಾಹಿತಿ ಸಂಗ್ರಹಿಸುವುದು ತುಂಬಾ ಕಷ್ಟ. ಅದು ನಮಗೆ ಸವಾಲು ಆಗಿದ್ದರೂ, ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಹುಬ್ಬಳಿಯಲ್ಲಿ ನಡೆದ ಘಟನೆ ಅತ್ಯಂತ ನೋವಿನದು. ಇಂತಹ ಘಟನೆ ದೇಶದ ಯಾವುದೇ ಮೂಲೆಯಲ್ಲಿ ಯಾವಾಗ ಬೇಕಾದರೂ ನಡೆಯಬಹುದು. ಅಂತಹ ಸಂದರ್ಭದಲ್ಲಿ ಕಾರ್ಮಿಕರ ಮಾಹಿತಿ ಇದ್ದರೆ ಆರೋಪಿಗಳನ್ನು ಪತ್ತೆ ಮಾಡುವುದು ಸುಲಭವಾಗಲಿದೆ. ಈ ಬಗ್ಗೆ ಗುತ್ತಿಗೆದಾರರು ಮಾಹಿತಿ ನೀಡಬೇಕು. ಜನರಲ್ಲಿ ಅರಿವು ಮೂಡಿಸಬೇಕು. ಕಾರ್ಮಿಕರ ಮೇಲೆ ವಿಶೇಷ ನಿಗಾ ಇಡಬೇಕು’ ಎಂದು ಈ ಸಂದರ್ಭದಲ್ಲಿ ಹೇಳಿದರು.

‘ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರ ಎಲ್ಲಾ ಮಾಹಿತಿ ಸಿಗಲಿದೆ. ಆದರೆ, ಅಸಂಘಟಿತ ವಲಯದ ಕಾರ್ಮಿಕರ ವಿವರ ಸಿಗುವುದಿಲ್ಲ. ವಿಶೇಷವಾಗಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಯಾವುದಾದರೂ ಮಾರ್ಗೋಪಾಯಗಳಿದ್ದರೆ ತಿಳಿಸಿ’ ಎಂದು ಲಾಡ್‌ ಮನವಿ ಮಾಡಿದರು.

‘ಗುತ್ತಿಗೆದಾರರು ನೋಂದಣಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಮಾಡುವುದಿಲ್ಲ. ಯಾರು ಎಲ್ಲಿ ಏನು ಕೆಲಸ ಮಾಡುತ್ತಾ ಇದ್ದಾರೆ ಎಂಬುದರ ಮಾಹಿತಿ ತಿಳಿಯುವುದಿಲ್ಲ. ಕಾರ್ಮಿಕ ಇಲಾಖೆ ಮಾತ್ರವಲ್ಲ; ಎಲ್ಲಾ ಇಲಾಖೆಯ ಕಾರ್ಮಿಕರ ವಿವರ ಸಿಗುವಂತಾಗಬೇಕು’ ಎಂದರು.

You cannot copy content of this page

Exit mobile version