ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಸಂಸದ ಸ್ಥಾನದಿಂದ ಕೆಳಗಿಳಿಸಬೇಕು, ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಸಂಸದೀಯ ನೀತಿಶಾಸ್ತ್ರ ಸಮಿತಿಯು ಹೇಳಿದ್ದು ಅವರ ವಿರುದ್ಧದ ಹಣಕ್ಕಾಗಿ ಪ್ರಶ್ನೆ ಆರೋಪಗಳನ್ನು ಪರಿಶೀಲಿಸಲು ಶಿಫಾರಸು ಮಾಡಿದೆ.
ಸಮಿತಿಯು ಸಲ್ಲಿಸಿದ 500 ಪುಟಗಳ ವರದಿಯಲ್ಲಿ ಪ್ರಕರಣದ ಸಂಪೂರ್ಣ ವಿಷಯದ ಬಗ್ಗೆ ಕಾನೂನು, “ತೀವ್ರ, ಸಾಂಸ್ಥಿಕ ಮತ್ತು ಸಮಯ ಬದ್ಧ ತನಿಖೆ” ನಡೆಸಬೇಕೆಂದು ಶಿಫಾರಸು ಮಾಡಿದೆ. ಮಹುವಾ ಮೊಯಿತ್ರಾ ಅವರ ಕ್ರಮಗಳನ್ನು “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಅಪರಾಧ” ಎಂದು ಕರೆದಿರುವ ಸಮಿತಿಯು ಕಠಿಣ ಶಿಕ್ಷೆ ನೀಡುವಂತೆ ಕೋರಿದೆ.
ಮೊಹುವಾ ಮೋಯಿತ್ರಾ ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಹಣ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದರು. ಅಷ್ಟೆ ಅಲ್ಲದೆ ಮೊಯಿತ್ರಾ ಅವರು ತಮ್ಮ ಸಂಸದೀಯ ಲಾಗಿನ್ ಅನ್ನು ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾರೆ. ಅದೂ ಮೊಹುವಾ ಮೋಯಿತ್ರಾ ಭಾರತದಲ್ಲಿ ಇದ್ದ ಸಂದರ್ಭದಲ್ಲಿ ದುಬೈನಲ್ಲಿ ಅವರ ಐಡಿ ಲಾಗಿನ್ ಆಗಿದೆ. ಈ ಮೂಲಕ ಸಂಸದೆ ರಾಷ್ಟ್ರೀಯ ಭದ್ರತೆ ಜೊತೆ ರಾಜಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಪಕ್ಷ ಸಂಸತ್ತಿನಲ್ಲಿ ಆರೋಪಿಸಿತ್ತು.
ಮಹುವಾ ಮೊಯಿತ್ರಾ ಮತ್ತು ದರ್ಶನ್ ಹಿರಾನಂದಾನಿ ನಡುವಿನ ನಗದು ವಹಿವಾಟಿನ ಹಣದ ಜಾಡು ‘ಕ್ವಿಡ್ ಪ್ರೊ ಕ್ವೋ’ ಭಾಗವಾಗಿ ಭಾರತ ಸರ್ಕಾರವು ಕಾನೂನು, ಸಾಂಸ್ಥಿಕ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದು ವರದಿ ಹೇಳಿದೆ.
ಮೊಯಿತ್ರಾ ಅವರು ತನಿಖೆಗೆ ಸಹಕರಿಸಲು ವಿಫಲರಾಗಿದ್ದಾರೆ ಎಂದು ಸಮಿತಿಯು ಆರೋಪಿಸಿದೆ. ಮಹುವಾ ಮೊಯಿತ್ರಾ ಸಮಿತಿ ಮತ್ತು ತನಿಖೆಗೆ ಸಹಕರಿಸಲಿಲ್ಲ. ವಿರೋಧ ಪಕ್ಷದ ಸದಸ್ಯರು ಕೂಡ ಕೋಪದಿಂದ ಆರೋಪಗಳನ್ನು ಮಾಡಿದರು ಮತ್ತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಸಭೆಯಿಂದ ಇದ್ದಕ್ಕಿದ್ದಂತೆ ಹೊರನಡೆದರು ಎಂದು ಸಮಿತಿ ಮುಖ್ಯಸ್ಥ ಸೋಂಕರ್ ಹೇಳಿದರು.
ಸಧ್ಯ ವಿಚಾರಣೆ ಹಿನ್ನೆಲೆಯಲ್ಲಿ ಗುರುವಾರ ಸಂಸದೆ ಮೋಹುವಾ ಮೊಯಿತ್ರಾ ಸಮಿತಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ನಂತರ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಸಂಪೂರ್ಣ ವರದಿಯನ್ನು ಸ್ಪೀಕರ್ ಗೆ ಸಲ್ಲಿಸಲು ಸಮಿತಿ ನಿರ್ಧರಿಸಿದೆ.