ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,037 ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡುಬಂದಿದ್ದು, 154 ಜಾನುವಾರುಗಳು ಮರಣ ಹೊಂದಿವೆ. ಜಾನುವಾರುಗಳಿಗೆ ಹರಡುತ್ತಿರುವ ರೋಗದ ನಿಯಂತ್ರಣಕ್ಕಾಗಿ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.
ಭಾರತದಲ್ಲೇ ಪ್ರಸಿದ್ದಿ ಪಡೆದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಇದೇ ಡಿಸೆಂಬರ್ 20 ರಂದು ನಡೆಯಬೇಕಿತ್ತು. ಈ ಹಿನ್ನಲೆಯಲ್ಲಿ ಜಾತ್ರೆಗೆ ಸಿದ್ದತೆ ಪ್ರಾಂರಭವಾಗಿತ್ತು. ಈ ಜಾತ್ರೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಸಹ ಬರುತ್ತಿದ್ದು, ಜಾತ್ರೆಯಲ್ಲಿ ದನಗಳ ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಾರಿ ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡುಬಂದಿರುವ ಕಾರಣ, ದನಗಳು ಒಂದೆಡೆ ಸೇರುವುದರಿಂದ ಬೇರೆ ಜಾನುವಾರಗಳಿಗೂ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ, ಪಶು ಸಂಗೋಪನಾ ಇಲಾಖೆ ಸಚಿವ ಫ್ರಭು ಚವ್ಹಾಣರವರು, ರಾಜ್ಯದಲ್ಲಿ ಚರ್ಮಗಂಟು ರೋಗದ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಜಾನುವಾರಗಳ ಜಾತ್ರೆ ನಿಷೇಧ ಮಾಡುವುದಾಗಿ ಹೇಳಿದ್ದರು. ಸಚಿವರ ಆದೇಶದಂತೆ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯ ವಸ್ತುಸ್ಥಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಚರ್ಮಗಂಟು ರೋಗವನ್ನು ನಿಯಂತ್ರಣ ಮಾಡಲು ಕರ್ನಾಟಕ ಅನಿಮಲ್ ಡಿಸೀಸ್ 1961ರ ಕಾಯ್ದೆ ಪ್ರಕಾರ, 2023ರ ಜನವರಿ 30ವರೆಗೆ ಜಿಲ್ಲೆಯಲ್ಲಿ ಜಾನುವಾರಗಳು ಜಾತ್ರೆ ಮತ್ತು ಸಾಗಾಣಿಕೆ ಮಾಡದಂತೆ ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.