Home ಬ್ರೇಕಿಂಗ್ ಸುದ್ದಿ ಅಂಬೇಡ್ಕರ್ ವಾದಿ, ಜನಪರ ಹೋರಾಟಗಾರ, ಕ್ರಾಂತಿಕಾರಿ ಮೈಸೂರು ಮಂಟೆ ಲಿಂಗಯ್ಯ ನಿಧನ

ಅಂಬೇಡ್ಕರ್ ವಾದಿ, ಜನಪರ ಹೋರಾಟಗಾರ, ಕ್ರಾಂತಿಕಾರಿ ಮೈಸೂರು ಮಂಟೆ ಲಿಂಗಯ್ಯ ನಿಧನ

0

ಮೈಸೂರು :- ಜನಪರ ಹೋರಾಟಗಾರ, ಅಂಬೇಡ್ಕರ್ ವಾದಿ, ವೈಚಾರಿಕ ಚಿಂತಕ, ವಿಚಾರವಾದಿ, ಕ್ರಾಂತಿಕಾರಿ ಮಂಟೇ ಲಿಂಗಯ್ಯ ರವರು ಮೈಸೂರಿನ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾಗಿರುತ್ತಾರೆ.

ಹಠಾತ್ ಹೃದಯಾಘಾತಕ್ಕೊಳಗಾದ ಹಿನ್ನಲೆಯಲ್ಲಿ ಮಂಟೇ ಲಿಂಗಯ್ಯ ರವರು ಇಹಲೋಕ ತ್ಯಜಿಸಿದ್ದು, ಕೆಸರೆ ಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೃತರ ಅಂತ್ಯ ಕ್ರಿಯೆ ಮಂಗಳವಾರ ನಡೆಯಲಿದೆ.

ಬಡ ಜನರ ಪರ ಕಾಳಜಿ ಹೊಂದಿದ್ದ ಮಂಟೇ ಲಿಂಗಯ್ಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಿದವರಲ್ಲಿ ಮುಂಚೂಣಿಗರು. ಅಧಿಕಾರಸ್ತರು, ಜನಪ್ರತಿನಿಧಿಗಳು ಮತ್ತು ಆಳುವ ಸರ್ಕಾರಕ್ಕೆ ಸಿಂಹ ಸ್ವಪ್ನ ರಾಗಿದ್ದ ಅವರು ಹೋರಾಟದ ಮೂಲಕವೇ ಸಮಾಜವನ್ನು ಎಚ್ಚರಿಸಿದ್ದರು.

ಸದಾ ಕಾಲ ನೊಂದ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು ಎಜೆಎಂಎಸ್ ಸಂಘಟನೆ ಹುಟ್ಟು ಹಾಕಿ ಜನಪರ ಚಳವಳಿಯಲ್ಲಿ ಸಕ್ರಿಯರಾಗಿದ್ದರು.
ಬಡ ಜನರ ಬಗ್ಗೆ ಅವರಿಗಿದ್ದ ಕಾಳಜಿ ಎಷ್ಟಿತ್ತೆಂದರೆ ರಾಜ ವೈಭವವನ್ನು ಬಿಂಬಿಸುವ ಮೈಸೂರು ದಸರಾಕ್ಕೆ ಪ್ರತಿಯಾಗಿ ಬಡವರ ದಸರಾವನ್ನು ಅದ್ದೂರಿಯಾಗಿ ಆಚರಿಸಿ ರಾಜ್ಯದ ಗಮನ ಸೆಳೆದಿದ್ದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಸದಾ ಕಾಲ ತಲುಪಿಸುತ್ತಿದ್ದರು, ಅಂಬೇಡ್ಕರ್ ವಿಚಾರವಾಗಿ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದರು. ರಾಜ್ಯದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅಂಬೇಡ್ಕರ್ ವಿಚಾರಧಾರೆ ಜೊತೆಗೆ ಪ್ರಗತಿಪರ ಚಿಂತನೆಯ ಕಿಚ್ಚು ಹಚ್ಚಿದ್ದರು.

ವೈಜ್ಞಾನಿಕ ಮನೋಭಾವನೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು ಹಿಂದೂ ಧರ್ಮದಲ್ಲಿನ ಮೌಡ್ಯದ ವಿರುದ್ಧ ಸಮರವನ್ನೇ ಸಾರಿದ್ದರು, ಯಾವಾಗಲೂ ಮೌಢ್ಯದ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿದ್ದ ಅವರು ಮೌಡ್ಯ ತೊರೆದು ಅಂಬೇಡ್ಕರ್ ಚಿಂತನೆಯ ಹಾದಿಯಲ್ಲಿ ಮುನ್ನಡೆಯುವಂತೆ ಜನಸಮೂಹವನ್ನು ಪ್ರೇರಣೆ ಮಾಡುತ್ತಿದ್ದರು. ಬಹುಜನ ಚಳುವಳಿಯನ್ನು ಕನ್ನಡ ನಾಡಿಗೆ ಪರಿಚಯಿಸಿದ್ದ ಅವರು ಬಹುಜನ ಸಮಾಜ ಪಕ್ಷವನ್ನು ಕರ್ನಾಟಕಕ್ಕೆ ತಂದಿದ್ದರು, ರಾಜಕಾರಣ ಆಷಾಢ ಭೂತಿತನ ಅವರಿಗೆ ಇಷ್ಟವಿಲ್ಲದ ಹಿನ್ನೆಲೆಯಲ್ಲಿ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದರು.

ಪುಸ್ತಕ ಓದುವ ಪ್ರಿಯರಾಗಿದ್ದ ಅವರು ಜ್ಞಾನಕ್ಕೆ ಹಸಿವಿಲ್ಲ ಎಂಬುದು ಇವರಿಗೆ ಸಲ್ಲುತ್ತಿತ್ತು, ಇಳಿ ವಯಸ್ಸಿನಲ್ಲಿ ಅವರ ಹೋರಾಟದ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ. ಕ್ರಾಂತಿಕಾರಿ ಮನೋಭಾವದ ಹುಟ್ಟು ಹೋರಾಟಗಾರ ಮಂಟೇ ಲಿಂಗಯ್ಯರವರ ಅಗಲಿಕೆ ಕನ್ನಡ ನಾಡಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

You cannot copy content of this page

Exit mobile version