Home ದೇಶ ಸೋನಿಯಾ ಗಾಂಧಿ ವಿರುದ್ಧ ವಿಕೃತ ಹೇಳಿಕೆ: ಹಿಮಂತ ಬಿಸ್ವಸರ್ಮಾ ವಿರುದ್ಧ FIR

ಸೋನಿಯಾ ಗಾಂಧಿ ವಿರುದ್ಧ ವಿಕೃತ ಹೇಳಿಕೆ: ಹಿಮಂತ ಬಿಸ್ವಸರ್ಮಾ ವಿರುದ್ಧ FIR

0

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಸರ್ಮಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಪ್ರಸ್ತುತ ಹಿಮಂತ ಬಿಸ್ವಸರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಸ್ಸಾಂನ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ದೇಬ್ರತಾ ಸೈಕಿಯಾ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ವಿದಿಶಾದಲ್ಲಿ ಚುನಾವಣಾ ಪ್ರಚಾರದ ವೇಳೆ ‘ಜನ ಆಶೀರ್ವಾದ ಮೆರವಣಿಗೆ’ಯಲ್ಲಿ ಭಾಗವಹಿಸಿದ್ದ ಹಿಮಂತ ಬಿಸ್ವಸರ್ಮ ಸೋನಿಯಾ ಗಾಂಧಿ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ 10 ಜನಪಥ್‌ಗೆ ಬೆಂಕಿ ಹಚ್ಚಲು ಅಸ್ಸಾಂ ಸಿಎಂ ಕರೆ ನೀಡಿದ್ದಾರೆ ಎಂದು ಸೈಕಿಯಾ ಆರೋಪಿಸಿದ್ದಾರೆ. ವಿದಿಶಾ ರ‍್ಯಾಲಿಯಲ್ಲಿ ಹಿಮಂತ ಆಡಿದ ಮಾತುಗಳಿಂದಾಗಿ ತಾನು ಎಫ್‌ಐಆರ್ ದಾಖಲಿಸಬೇಕಾಯಿತು ಎಂದು ಸೈಕಿಯಾ ಹೇಳಿದ್ದಾರೆ. ಆ ರ‍್ಯಾಲಿಯಲ್ಲಿ ಹಿಮಂತ, ‘ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಕಮಲ್ ನಾಥ್ ಹನುಮಂತನ ಭಕ್ತನಾಗಿರುವುದು ಹೌದಾದರೆ ಹನುಮಂತ ಲಂಕೆಯನ್ನು ಸುಟ್ಟಂತೆ 10 ಜನಪಥವನ್ನು ಸುಡಬೇಕು’ ಎಂದು ಹೇಳಿದ್ದು ವಿವಾದಕ್ಕೀಡಾಗಿದೆ.

ಕಾನೂನು ಸುವ್ಯವಸ್ಥೆ ಇರುವ ದೇಶದಲ್ಲಿ ಇಂತಹ ಹೇಳಿಕೆಗಳು ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಾಯಕ ಸೈಕಿಯಾ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರು ಸಂಸತ್ತಿನ ಹಿರಿಯ ಸದಸ್ಯೆ, ಕಾಂಗ್ರೆಸ್ ಮತ್ತು ಯುಪಿಎ ಪ್ರತಿನಿಧಿಸಿದ್ದಾರೆ ಮತ್ತು ಅವರ ವಿರುದ್ಧ ಇಂತಹ ಹೇಳಿಕೆಗಳನ್ನು ಖಂಡನಾರ್ಹ ಮತ್ತು ಅಸ್ಸಾಂ ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಸೈಕಿಯಾ ಹೇಳಿದರು.

ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ರಾಜ್ಯದಲ್ಲಿ ಬಿಜೆಪಿ ಸತತ ನಾಲ್ಕನೇ ಬಾರಿ ಅಧಿಕಾರದಲ್ಲಿದೆ. ಈ ಬಾರಿ ಬಿಜೆಪಿ ಮತ್ತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೆಳಕ್ಕಿಳಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮಧ್ಯಪ್ರದೇಶ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ನಿರ್ಣಾಯಕವಾಗಲಿದೆ. ಮಧ್ಯಪ್ರದೇಶದ ಜೊತೆಗೆ ಛತ್ತೀಸ್‌ಗಢ, ಮಿಜೋರಾಂ, ತೆಲಂಗಾಣ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.

You cannot copy content of this page

Exit mobile version