ಕುವೈತ್ನ ಮಂಗಾಫ್ನಲ್ಲಿರುವ ಕಟ್ಟಡವೊಂದರಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ 41 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 40 ಭಾರತೀಯರು ಸೇರಿದ್ದಾರೆ. ಬೆಂಕಿ ಅವಘಡದಲ್ಲಿ 30ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಮಂಗಾಫ್ ನಗರದಲ್ಲಿ ಈ ಘಟನೆ ನಡೆದಿದೆ. “ಬೆಂಕಿ ಅವಘಡ ಸಂಭವಿಸಿದ ಕಟ್ಟಡವನ್ನು ಕಾರ್ಮಿಕರ ವಸತಿಗಾಗಿ ಬಳಸಲಾಗುತ್ತಿತ್ತು ಮತ್ತು ಅಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇದ್ದರು” ಎಂದು ಹಿರಿಯ ಪೊಲೀಸ್ ಕಮಾಂಡರ್ ಸರ್ಕಾರಿ ಟಿವಿ ವಾಹಿನಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ.
ಕುವೈತ್ನ ದಕ್ಷಿಣ ಅಹ್ಮದಿ ಪ್ರಾಂತ್ಯದ ಮಂಗಾಫ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮೊದಲಿಗೆ ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕಟ್ಟಡದಲ್ಲಿ ಸುಮಾರು 160 ಮಂದಿ ವಾಸವಿದ್ದರು, ಅವರು ಇದೇ ಕಂಪನಿಯ ಉದ್ಯೋಗಿಗಳಾಗಿದ್ದಾರೆ.
“ಘಟನೆಗೆ ಸಂಬಂಧಿಸಿದಂತೆ, ಭಾರತದ ರಾಯಭಾರ ಕಚೇರಿ ತುರ್ತು ಸಹಾಯವಾಣಿ ಸಂಖ್ಯೆ ಪ್ರಾರಂಭಿಸಿದೆ (+965-65505246)” ಎಂದು ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಅಪ್ಡೇಟ್ಗಳಿಗಾಗಿ ಈ ಸಹಾಯವಾಣಿಯನ್ನು ಸಂಪರ್ಕಿಸಲು ಸಂಬಂಧಪಟ್ಟ ಎಲ್ಲರಿಗೂ ವಿನಂತಿಸಲಾಗಿದೆ. ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ನೆರವು ನೀಡಲಿದೆ.
ಕುವೈತ್ನಲ್ಲಿರುವ ಭಾರತದ ರಾಯಭಾರಿ ಆದರ್ಶ್ ಸ್ವೈಕಾ ಅವರು ಅಲ್-ಅಡೆನ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಗ್ನಿ ಅವಘಡದಲ್ಲಿ ಗಾಯಗೊಂಡ 30ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ದಾಖಲಾಗಿದ್ದಾರೆ. ಅನೇಕ ಗಾಯಾಳುಗಳನ್ನು ಭೇಟಿಯಾಗಿ ಅವರಿಗೆ ರಾಯಭಾರ ಕಚೇರಿಯಿಂದ ಸಂಪೂರ್ಣ ಸಹಾಯದ ಭರವಸೆ ನೀಡಿದರು. ಬಹುತೇಕ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಮಾಲೀಕರನ್ನು ಬಂಧಿಸಲು ಆದೇಶ
ಕುವೈತ್ ಟೈಮ್ಸ್ ವರದಿಯ ಪ್ರಕಾರ, ಕುವೈತ್ನ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸೆಫ್ ಅಲ್-ಸಬಾಹ್ ಅವರು ಮಂಗಾಫ್ ಕಟ್ಟಡದ ಮಾಲೀಕರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳದಲ್ಲಿರುವ ಕ್ರಿಮಿನಲ್ ಸಾಕ್ಷರ ಸಿಬ್ಬಂದಿಯ ತನಿಖೆ ಪೂರ್ಣಗೊಳ್ಳುವವರೆಗೆ ಕಟ್ಟಡ ಕಾವಲುಗಾರ ಮತ್ತು ಕಾರ್ಮಿಕರ ಹೊಣೆಗಾರರಾಗಿರುವ ಕಂಪನಿಯ ಮಾಲೀಕರನ್ನು ಬಂಧಿಸುವಂತೆಯೂ ಆದೇಶ ನೀಡಲಾಗಿದೆ.
ಇಂದು ನಡೆದಿರುವುದು ಕಂಪನಿ ಹಾಗೂ ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ ಎಂದು ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಅವರು ಆದೇಶಿಸಿದ್ದಾರೆ.