ಗುವಾಹಟಿ: ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹದ ತೀವ್ರತೆ ಇಳಿಮುಖವಾಗಿದ್ದು, ಪರಿಸ್ಥಿತಿ ಈಗ ಸ್ಥಿರವಾಗಿದೆ ಎಂದು ಅರಣ್ಯಾಧಿಕಾರಿ ಅರುಣ್ ವಿಘ್ನೇಶ್ ತಿಳಿಸಿದ್ದಾರೆ. ಇತ್ತೀಚಿನ ಮಳೆಯಿಂದಾಗಿ ಉದ್ಯಾನದಲ್ಲಿ ನೀರು ಸಂಗ್ರಹವಾಗಿತ್ತು. ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.
ಪ್ರವಾಹದ ತೀವ್ರತೆ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅರಣ್ಯದಲ್ಲಿರುವ ಪ್ರಾಣಿಗಳು ಸದ್ಯಕ್ಕೆ ಸುರಕ್ಷಿತವಾಗಿವೆ ಎಂದು ವಿಘ್ನೇಶ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಋತುವಿನಲ್ಲಿ ಇದು ಮೊದಲ ಪ್ರವಾಹದ ಅಲೆಯಾಗಿದ್ದು, ಮುಂಗಾರು ದಿನಗಳಲ್ಲಿ ಎದುರಾಗಬಹುದಾದ ಪ್ರವಾಹಗಳನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕಾಜಿರಂಗಾ ರಾಷ್ಟ್ರೀಯ ಉದ್ಯಾನವು ಖಡ್ಗ ಮೃಗಗಳಿಗೆ ಹೆಸರಾಗಿದೆ. ಪ್ರತಿ ವರ್ಷ ಮುಂಗಾರು ಸಮಯದಲ್ಲಿ ಇಲ್ಲಿ ಪರಿಸ್ಥಿತಿ ಸಂಕೀರ್ಣವಾಗುತ್ತದೆ. 2024ರಲ್ಲಿ ಮಳೆ ಮತ್ತು ಪ್ರವಾಹದಿಂದ ಸುಮಾರು 174 ಪ್ರಾಣಿಗಳು ಮೃತಪಟ್ಟಿದ್ದವು, ಅದರಲ್ಲಿ 10 ಖಡ್ಗಮೃಗಗಳು ಸೇರಿವೆ. ಈ ಬಾರಿ ವಾರ್ಷಿಕ ಪ್ರವಾಹವನ್ನು ಎದುರಿಸಲು ವಿಶೇಷ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 37ರ ಮಾರ್ಗದಲ್ಲಿ ಕಾನ್ವಾಯ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ವನ್ಯ ಪ್ರಾಣಿಗಳು ಸುರಕ್ಷಿತವಾಗಿ ಕರ್ಬಿ ಅಂಗ್ಲಾಂಗ್ ಬೆಟ್ಟಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಬಿಶ್ವನಾಥ್ ಜಿಲ್ಲೆಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲಾಗುತ್ತಿದೆ. ಪ್ರವಾಹದ ಸಮಯದಲ್ಲಿ ಪ್ರಾಣಿಗಳು ರಸ್ತೆಗೆ ಬರುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 15ರ ಮಾರ್ಗದಲ್ಲಿ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ. ಕಾಜಿರಂಗಾ ಉದ್ಯಾನದಲ್ಲಿ ಪರಿಸ್ಥಿತಿ ಸದ್ಯಕ್ಕೆ ಅದುಪಿನಲ್ಲಿದ್ದರೂ, ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಶೇಕಡಾ 40ರಷ್ಟು ಪ್ರದೇಶ ಪ್ರವಾಹದ ನೀರಿನಿಂದ ತುಂಬಿದೆ. ಧನಶ್ರೀ ಮತ್ತು ಪಂಚ್ ನಾಡಿ ನದಿಗಳಿಂದ ನೀರು ತೀವ್ರವಾಗಿ ಹರಿಯುತ್ತಿದ್ದು, 12 ಅರಣ್ಯ ಶಿಬಿರಗಳ ಮೇಲೆ ಪರಿಣಾಮ ಬೀರಿದೆ. ಹಲವು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ.