ಲಂಡನ್: ನ್ಯಾಯ ಸೇವೆಗಳನ್ನು ಒದಗಿಸುವಲ್ಲಿ ತಂತ್ರಜ್ಞಾನಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವುದು ಅಪಾಯಕಾರಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟೀಸ್ ಬಿ.ಆರ್. ಗವಾಯ್ ಎಚ್ಚರಿಸಿದ್ದಾರೆ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಹಾಳು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಗುರುವಾರ (ಜೂನ್ 5, 2025) ಲಂಡನ್ನ ಬ್ರಿಟಿಷ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಅಂಡ್ ಕಂಪರೇಟಿವ್ ಲಾ ಸಂಸ್ಥೆ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೋರ್ಟುಗಳು, ವಾಣಿಜ್ಯ ಮತ್ತು ಕಾನೂನಿನ ಆಡಳಿತ’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದ ಅವರು, ನ್ಯಾಯಾಲಯಗಳು ಮಾನವೀಯತೆಯನ್ನು ಮರೆಯಬಾರದು ಎಂದು ಒತ್ತಿ ಹೇಳಿದರು.
ಡಿಜಿಟಲ್ ಯುಗದಲ್ಲಿ ವಾಣಿಜ್ಯ ಮತ್ತು ಕಾನೂನಿನ ಆಡಳಿತದ ನಡುವೆ ಸಮತೋಲನ ಸಾಧಿಸುವಲ್ಲಿ ನ್ಯಾಯವ್ಯವಸ್ಥೆಯ ಪಾತ್ರವನ್ನು ಅವರು ಎತ್ತಿ ತೋರಿಸಿದರು. ತಂತ್ರಜ್ಞಾನವು ಎಲ್ಲರಿಗೂ ನ್ಯಾಯ ಒದಗಿಸುವ ಸಾಧನವಾಗಬೇಕು ಎಂಬ ಮಾಜಿ ಸಿಜೆಐ ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅವರ ಹೇಳಿಕೆಯನ್ನು ಜಸ್ಟಿಸ್ ಗವಾಯ್ ಉಲ್ಲೇಖಿಸಿದರು.
ತಂತ್ರಜ್ಞಾನವು ನ್ಯಾಯವ್ಯವಸ್ಥೆಯ ಚಾಲಕ ಸ್ಥಾನದಲ್ಲಿ ಕುಳಿತ ಕ್ಷಣದಿಂದಲೇ ನ್ಯಾಯಾಲಯಗಳ ಮೇಲಿನ ಜನರ ವಿಶ್ವಾಸ ಕುಸಿಯಲು ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು. ಇದು ಕಾನೂನಿನ ಆಡಳಿತದ ಮೂಲಭೂತ ಅಡಿಪಾಯವನ್ನು ಹಾಳು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ತಂತ್ರಜ್ಞಾನದತ್ತ ಧಾವಿಸುವ ಆತುರದಲ್ಲಿ ಮಾನವೀಯ ದೃಷ್ಟಿಕೋನವನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.