Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಜಾತೀಯತೆ ಎಲ್ಲಿದೆ ಎನ್ನುವವರ ಗಮನಕ್ಕೆ; ಸುರಪುರದಲ್ಲಿ ದಲಿತ ಯುವಕನಿಗೆ ಜಾತಿ ನಿಂದನೆ ವಿಡಿಯೋ ವೈರಲ್

ಜಾತೀಯತೆ ಎಲ್ಲಿದೆ ಎನ್ನುವವರ ಗಮನಕ್ಕೆ; ಸುರಪುರದಲ್ಲಿ ದಲಿತ ಯುವಕನಿಗೆ ಜಾತಿ ನಿಂದನೆ ವಿಡಿಯೋ ವೈರಲ್

0

ಮಾತೆತ್ತಿದರೆ ಧರ್ಮ, ಧರ್ಮ ರಕ್ಷಣೆ, ಭಾರತ್ ಮಾತಾ ಕೀ ಜೈ, ಧರ್ಮೋ ರಕ್ಷತಿ ರಕ್ಷಿತ: ಎಂಬ ಘೋಷಣೆಗಳ ಮೂಲಕ ಹಿಂದುಳಿದ, ದಲಿತ ಸಮುದಾಯಗಳ ಯುವಕರನ್ನು ಬೀದಿಗಿಳಿಸಿ ಗಲಾಟೆ ದಾಂಧಲೆ ಎಬ್ಬಿಸುವವರು ಖುದ್ದು ಈ ವಿಡಿಯೋ ನೋಡಲೇಬೇಕು. ಧರ್ಮದ ಅಡಿಯಲ್ಲಿ ಜಾತಿ ಜಾತಿಗಳ ನಡುವೆ ಇರುವ ಕಂದಕ ಎಂತಹದು ಈ ಬಗ್ಗೆ ಎಂದಾದರೂ ದನಿ ಎತ್ತಿದ್ದು ಇದೆಯೇ ಎಂಬ ಪ್ರಶ್ನೆಗೆ ಧರ್ಮ ರಕ್ಷಕರು ತಮ್ಮ ಮೌನ ಮುರಿಯಲೇಬೇಕು.

ಅಂದಹಾಗೆ ಈ ದೃಶ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾಗರಾಳ ಗ್ರಾಮದ್ದು. ಗ್ರಾಮದ ದಲಿತ ಯುವಕ ಕಾನೂನು ಪದವಿ ಮುಗಿಸಿ ಊರಿಗೆ ಬಂದಾಗ ನೇರವಾಗಿ ಆತನಿಗೆ ಎದುರಾಗಿದ್ದೇ ಜಾತಿಯೆಂಬ ವಿಷಬೀಜ. ಗ್ರಾಮದಲ್ಲಿ ಮೇಲ್ಜಾತಿ ಎಂದು ಗುರುತಿಸಿಕೊಂಡವರು ದಲಿತ (ಮಾದಾರ) ಯುವಕನಿಗೆ ಜಾತಿ ನಿಂದನೆಯಂತಾ ಕೃತ್ಯಕ್ಕೆ ಮುಂದಾದ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನೊಬ್ಬ ನೇರವಾಗಿ “ನಿನ್ನ ಜಾತಿ ಯಾವುದು, ನಿನ್ನ ಜಾತಿ ಯಾವುದು” ಎಂದು ಕೇಳುತ್ತಿದ್ದರೆ, ಮತ್ತೊಬ್ಬ ಮಧ್ಯ ವಯಸ್ಕ ಕೂಡಾ ಅದನ್ನೇ ಕೇಳಿ ಯುವಕನನ್ನು ತಳ್ಳಲು ಶುರು ಮಾಡಿದ್ದು ವಿಡಿಯೋದಲ್ಲಿ ಸಿಕ್ಕಿದೆ. ಹಾಗೆಯೇ ವಿಡಿಯೋ ಮಾಡುತ್ತಿದ್ದವರ ಮೇಲೂ ಸಹ ಅವರು ತಿರುಗಿ ಬಿದ್ದಿದ್ದು ವಿಡಿಯೋದಲ್ಲಿ ಸೇರಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಲಿತ ಯುವಕನ ಪರವಾಗಿ ಹಲವು ನೆಟ್ಟಿಗರು ದನಿ ಎತ್ತಿದ್ದಾರೆ. ಜೊತೆಗೆ ಸಮಾಜದಲ್ಲಿ ಮೇಲ್ಜಾತಿ ಎಂದು ಕರೆಸಿಕೊಳ್ಳುವವರ ದಬ್ಬಾಳಿಕೆಯ ವಿರುದ್ಧವೂ ತೀವ್ರ ಆಕ್ರೋಶ ಹೊರಬಿದ್ದಿದೆ.

ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆಯೋ ಅಥವಾ ಧರ್ಮಾಂಧ ಬಿಜೆಪಿ ಅಥವಾ ಆರೆಸ್ಸೆಸ್ ರಾಜ್ಯದಲ್ಲಿ ಅಧಿಕಾರ ನಿರ್ವಹಿಸುತ್ತಿದೆಯೋ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಯಾವ ವಿಚಾರಕ್ಕೆ ಜಗಳ ಆಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ನೇರವಾಗಿ ಜಾತಿಯನ್ನು ಮಧ್ಯೆ ತಂದ ಬಗ್ಗೆ ದಲಿತ ಯುವಕನ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಜಾತಿ ಇಲ್ಲ, ಧರ್ಮವೇ ಎಲ್ಲಾ ಎಂಬುವವರು ಈ ಧರ್ಮದೊಳಗಿನ ಜಾತಿ ವ್ಯವಸ್ಥೆಯ ಬಗ್ಗೆ ಏನಂತಾರೆ ಎಂದು ಪ್ರಶ್ನೆ ಎತ್ತಿದ್ದಾರೆ.

You cannot copy content of this page

Exit mobile version