“ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವ ಜನರು ನಾಚಿಕೆಪಡುವ ಕಾಲ ದೂರವಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯು ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಮತ್ತು ಇತರ ಮಾಧ್ಯಮಗಳು ಆ ಭಾಷಣದ ಬಗ್ಗೆ ಮಾಡಿದ ತಮ್ಮ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್ಗಳನ್ನು ಅಳಿಸಿ ಹಾಕಿವೆ.
ಭಾರತೀಯ ರಾಜಕಾರಣದಲ್ಲಿ ಇಂತಹ ಹೇಳಿಕೆಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದರೂ, ಆಡಳಿತಾರೂಢ ಬಿಜೆಪಿಯಲ್ಲಿ ವಾಸ್ತವಿಕವಾಗಿ ‘ನಂಬರ್ ಟು’ ನಾಯಕರಾಗಿ ಮತ್ತು ಕೇಂದ್ರ ಗೃಹ ಸಚಿವರಾಗಿರುವ ಶಾ ಇಂತಹ ಮಾತುಗಳನ್ನು ಆಡುವುದು ಗಂಭೀರ ಸಂಗತಿ.
ಹಿಂದುತ್ವದ ದೀರ್ಘಕಾಲೀನ ಸಿದ್ದಾಂತವಾದ “ಹಿಂದಿ-ಹಿಂದೂ-ಹಿಂದೂಸ್ಥಾನ” ಘೋಷಣೆಯ ಕರಾಳತೆ ಅಡಿಯಲ್ಲಿ, ಶಾ ನೀಡಿದ ಈ ಹೇಳಿಕೆಯು ಕೇವಲ ಸಾಂಸ್ಕೃತಿಕ ಅಪಮೌಲೀಕರಣ ಮಾತ್ರ ಅಲ್ಲ, ಇದು ರಾಷ್ಟ್ರೀಯ ಗುರುತು, ಸಾಮಾಜಿಕ ಚಲನಶೀಲತೆ, ಬೌದ್ಧಿಕತೆ ಮತ್ತು ಭಾರತದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ತಿಳುವಳಿಕೆಯ ಮೇಲೆ ಆಳವಾದ ರಾಜಕೀಯ ಮತ್ತು ಜಾಗತಿಕ ಪರಿಣಾಮಗಳನ್ನು ಬೀರಬಲ್ಲ ಸಂಗತಿ.
ಅಮಿತ್ ಶಾ ಹೇಳಿಕೆಯನ್ನು ಯಾಕೆ ಗಂಭೀರವಾಗಿ ತೆಗೆದುಕೊಳ್ಳಬೇಕು?
- ಭಾಷಾಭಿಮಾನ ಮತ್ತು ವಿಭಜನೆಗೆ ತುಪ್ಪ ಸುರಿಯುತ್ತದೆ
ಭಾರತದ ಶಕ್ತಿಯೆಂದರೆ ಅದರ ಭಾಷಾ ವೈವಿಧ್ಯತೆ. ಭಾರತಕ್ಕೆ ಒಂದೇ ಒಂದು ರಾಷ್ಟ್ರೀಯ ಭಾಷೆ ಎಂಬುದು ಇಲ್ಲ, 22 ರಾಷ್ಟ್ರೀಯ ಅಧಿಕೃತ ಭಾಷೆಗಳಿವೆ. ಇಂಗ್ಲಿಷ್ ಅನ್ನು ವಿದೇಶಿ ಹೇರಿಕೆ ಎಂದು ಪ್ರಚಾರ ಮಾಡುವ ಮೂಲಕ ಮತ್ತು ಅದನ್ನು ಅವಮಾನ ಮಾಡುವ ಮೂಲಕ, ಶಾ ನೀಡಿದ ಈ ಹೇಳಿಕೆಯು ಭಾಷಾ ದುರಭಿಮಾನದ ಜ್ವಾಲೆಗಳನ್ನು ಹೆಚ್ಚಿಸುತ್ತಿದೆ. ಪ್ರಾದೇಶಿಕ ಮತ್ತು ಕೋಮು ಉದ್ವಿಗ್ನತೆಗಳಿಗೆ ಭಾಷೆಯೂ ಒಂದು ಪ್ರಚೋದನಕಾರಿ ಅಂಶವಾಗಿರುವ ಈ ದೇಶದಲ್ಲಿ ಇದು ಅಪಾಯಕಾರಿ.
ಭಾರತದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ, ವ್ಯವಹಾರ ಮತ್ತು ಅಂತರ-ರಾಜ್ಯ ಸಂವಹನದಲ್ಲಿ ಇಂಗ್ಲಿಷ್ ಹೆಚ್ಚಾಗಿ ತಟಸ್ಥ ಸೇತುವೆ ಭಾಷೆಯಾಗಿ ಕೆಲಸ ಮಾಡುತ್ತದೆ. ಹಿಂದಿ ಮಾತನಾಡದ ರಾಜ್ಯಗಳು, ವಿಶೇಷವಾಗಿ ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳು, ಶಾ ಅವರ ಹೇಳಿಕೆಯನ್ನು ಇಡೀ ದೇಶದ ಮೇಲೆ ಹಿಂದಿ ಕೇಂದ್ರಿತ ಐಡೆಂಟಿಟಿಯನ್ನು ಹೇರಲು ಹಿಂದುತ್ವ ಆಡಳಿತವು ಮಾಡುತ್ತಿರುವ ಮತ್ತೊಂದು ಪ್ರಯತ್ನವೆಂದು ಪರಿಗಣಿಸುವ ಸಾಧ್ಯತೆಯಿದೆ. ಇದು ಪ್ರಾದೇಶಿಕ ವಿಭಜನೆಗಳು ಮತ್ತು ಭಾಷಿಕರ ನಡುವೆ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ.
- ಹಿಂದುತ್ವವನ್ನು ಉತ್ತೇಜಿಸಲು ವಸಾಹತುಶಾಹಿ ಪರಂಪರೆ ಒಂದು ನೆಪವಷ್ಟೇ!
ಹಿಂದಿ ಭಾಷೆಯನ್ನು ಭಾರತದ ಏಕಮಾತ್ರ ಅಸ್ಮಿತೆಯಾಗಿ ಪ್ರಚಾರ ಮಾಡುವ ಬಿಜೆಪಿಯ ದೀರ್ಘಕಾಲೀನ ಕಾರ್ಯಸೂಚಿಗೆ ಶಾ ಅವರ ಹೇಳಿಕೆ ಹೊಂದಿಕೆಯಾಗುತ್ತದೆ. ಇಂಗ್ಲಿಷ್ ಅನ್ನು ವಸಾಹತುಶಾಹಿ ಪರಂಪರೆ ಮತ್ತು “ಅವಮಾನ”ದ ಸಂಕೇತವಾಗಿ ರೂಪಿಸುವ ಮೂಲಕ, ಅವರು ಅಲ್ಟ್ರಾ ರಾಷ್ಟ್ರೀಯತಾವಾದಿಗಳನ್ನು ಉನ್ಮತ್ತರನ್ನಾಗಿಸುತ್ತಾರೆ ಮತ್ತು ತಮ್ಮ ಪಕ್ಷದ ಮೂಲ ಸೈದ್ದಾಂತಿಕ ನೆಲೆಯನ್ನು ಬಲಪಡಿಸುತ್ತಾರೆ. ನಿಜವಾದ ದೇಶಭಕ್ತಿಯೆಂದರೆ ಭಾರತೀಯ ಭಾಷೆಗಳನ್ನು ಅಳವಡಿಸಿಕೊಳ್ಳುವುದು ಎಂಬಂತೆ ಅವರ ಹೇಳಿಕೆ ಕಂಡು ಬಂದರೂ, ಅದರ ಹಿಂದೆ ಇರುವುದು ಹಿಂದಿಯ ಹೇರಿಕೆಯೇ ಆಗಿದೆ.
ವಸಾಹತುಶಾಹಿಯ ಹ್ಯಾಂಗೊವರ್ನಿಂದ ಹೊರ ಬರುವುದನ್ನು ಯೋಚಿಸುವ ಹೊತ್ತಿನಲ್ಲೇ, ಇಂಗ್ಲೀಷ್ ಜಾಗತಿಕ ಸಂಪರ್ಕ ಭಾಷೆಯಾಗಿ ಮತ್ತು ಅಂತರರಾಷ್ಟ್ರೀಯ ಸಂವಹನದ ಪ್ರಮುಖ ಸಾಧನವಾಗಿ ಬೆಳೆದಿದೆ. ಶಾ ಅವರು ಇಂಗ್ಲಿಷ್ ಅನ್ನು “ಅವಮಾನ” ಎಂದು ಕರೆಯುವ ಮೂಲಕ ಇದನ್ನು ಸೈದ್ಧಾಂತಿಕ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಅಪಾಯವಿದೆ. ಇದು ಸಾರ್ವಜನಿಕ ಅಭಿಪ್ರಾಯವನ್ನು ಧ್ರುವೀಕರಿಸಬಹುದು ಮತ್ತು ಸಾರ್ವಜನಿಕ ಶಿಕ್ಷಣದ ಗುಣಮಟ್ಟದ ಬಗ್ಗೆ ಹೆಚ್ಚು ಅಗತ್ಯವಿರುವ ಚರ್ಚೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು. ಇದು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಪಠ್ಯಪುಸ್ತಕಗಳನ್ನು ತಮಗೆ ಬೇಕಾದಂತೆ ಬರೆಯುವ ತಂತ್ರವನ್ನು ಸುಲಭ ಮಾಡಬಹುದು. ಈ ದೃಷ್ಟಿಕೋನದಿಂದಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಡವರು ಜೀವನದಲ್ಲಿ ಮುಂದೆ ಬರಬಾರದು ಅಥವಾ ಪ್ರಶ್ನೆಗಳನ್ನು ಕೇಳಬಾರದು ಎಂಬ ಕಾರಣಕ್ಕಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಇಂಗ್ಲಿಷ್ ಅನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
- ಇಂಗ್ಲೀಷ್ ಕಲಿಯದಿದ್ದರೆ ಭಾರತ ಜಾಗತಿಕ ಸ್ಪರ್ಧಾತ್ಮಕತೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಹೇಗೆ?
ಮಾಹಿತಿ ತಂತ್ರಜ್ಞಾನ ಮತ್ತು ಸೇವೆಗಳ ಶಕ್ತಿ ಕೇಂದ್ರವಾಗಿ ಭಾರತ ಬೆಳೆಯಲು ಇಂಗ್ಲಿಷ್ ಮಾತನಾಡುವ ಪ್ರತಿಭೆಗಳ ದೊಡ್ಡ ಗುಂಪು ಕೆಲಸ ಮಾಡಿದೆ. ಈ ಭಾಷಾ ಪ್ರಯೋಜನವು ಚೀನಾದಂತಹ ದೇಶಕ್ಕೆ ಅಸೂಯೆ ಹುಟ್ಟಿಸಿದೆ. ಇಂಗ್ಲಿಷ್ ಅನ್ನು ನಕಾರಾತ್ಮಕವಾಗಿ ಭಾರತವು ನೋಡಿದರೆ ಜಗತ್ತಿಗೆ ತಾನು ಹಿಂದುಳಿಯುತ್ತಿರುವ ಸಂದೇಶವನ್ನು ನೀಡಿದಂತಾಗುತ್ತದೆ. ಇದರಿಂದ ಜಾಗತಿಕ ಹೂಡಿಕೆದಾರರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಶೈಕ್ಷಣಿಕ ಸಹಯೋಗಗಳಿಗೆ ಭಾರತದ ಕಡೆಗೆ ಆಕರ್ಷಣೆ ಕಡಿಮೆಯಾಗುವ ಅಪಾಯವಿದೆ.
ಇದು ಯುವ ಭಾರತೀಯರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಕೌಶಲ್ಯಗಳನ್ನು ಪಡೆಯುವುದನ್ನು ನಿರುತ್ಸಾಹಗೊಳಿಸುತ್ತದೆ. ದೇಶದ ಭವಿಷ್ಯದ ಆರ್ಥಿಕ ನಿರೀಕ್ಷೆಗಳಿಗೆ ಹಾನಿಯುಂಟು ಮಾಡುತ್ತದೆ. ಶಾ ಅವರ ಹೇಳಿಕೆಯನ್ನು ಹಿಂದುತ್ವ ಆಡಳಿತದ ಅಧಿಕೃತ ನೀತಿಯೆಂದು ಪರಿಗಣಿಸಿದರೆ, ಭಾರತದ ರೂಡಿಸಿಕೊಳ್ಳುತ್ತಿರುವ ಮುಕ್ತತೆ ಮತ್ತು ಆಧುನಿಕತೆಯ ಮೇಲೆ ಪೆಟ್ಟು ಬೀಳುತ್ತದೆ. ವಿಶ್ವಮಾನವ, ಜಾಗತಿಕವಾಗಿ ಸಂಪರ್ಕ ಹೊಂದಿದ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತದ ಇಮೇಜ್ಗೆ ದಕ್ಕೆಯಾಗುತ್ತದೆ.
- ಸಾಮಾಜಿಕ ಚಲನಶೀಲತೆ ಮತ್ತು ಶಿಕ್ಷಣದ ಮೇಲೆ ಪರಿಣಾಮ
ಭಾರತದಲ್ಲಿ ಇಂಗ್ಲಿಷ್ ಭಾಷೆಯನ್ನು ಉತ್ತಮ ಶಿಕ್ಷಣ, ಉದ್ಯೋಗಗಳು ಮತ್ತು ಏಳಿಗೆಯ ಕಡೆಗಿನ ಹೆಬ್ಬಾಗಿಲು ಎಂದು ನೋಡಲಾಗುತ್ತದೆ. ಇಂಗ್ಲಿಷ್ ಅನ್ನು ಅವಮಾನಿಸುವ ಮೂಲಕ, ಶಾ ನೀಡಿದ ಹೇಳಿಕೆಯು ಆ ಭಾಷೆಯನ್ನು ಕಲಿಯಲು ಮುಂದೆ ಬರುವ ಲಕ್ಷಾಂತರ ಜನರನ್ನು ದೂರವಿಡುವ ಅಪಾಯವನ್ನುಂಟುಮಾಡುತ್ತದೆ.
ಇದು ಶಿಕ್ಷಣದಲ್ಲಿನ ಭಾಷೆಯ ಕುರಿತಾದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಸಿರಿವಂತರಲ್ಲದ ಬಡ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳ ಸಿಗದಂತಾಗುವ ಸಾಧ್ಯತೆಯಿದೆ. ಇದು ನಗರ ಮತ್ತು ಗ್ರಾಮೀಣ ಜನ ಸಮುದಾಯಗಳ ನಡುವೆ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಹೊಂದಿರುವ ಹಾಗೂ ಇಂಗ್ಲೀಷ್ ಮಾಧ್ಯಮದವರಲ್ಲದ ವಿದ್ಯಾರ್ಥಿಗಳ ನಡುವಿನ ಸಾಮಾಜಿಕ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸಬಹುದು.
- ಬೌದ್ಧಿಕ ಮತ್ತು ಸಾಂಸ್ಕೃತಿಕ ಪತನಕ್ಕೆ ದಾರಿ
ಇಂಗ್ಲಿಷ್ ಮಾತನಾಡುವುದನ್ನು ಸಾಂಸ್ಕೃತಿಕವಾಗಿ ಅವಮಾನವೆಂದು ಕರೆಯುವುದು ಶಾ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂಗ್ಲಿಷ್ನಲ್ಲಿ ಬಲ್ಲ, ಹೆಚ್ಚಾಗಿ ಅತ್ಯುತ್ತಮ ಶಿಕ್ಷಣ ಪಡೆದ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ ಭಾರತೀಯರಿಗೆ ಮಾಡಿದ ಅವಮಾನ ಇದು. ಭಾರತ ವಿಶ್ವಮಾನವತೆಯ ದೇಶವಲ್ಲ ಎಂಬ ತಪ್ಪು ಸಂದೇಶವನ್ನು ಇದು ಜಾಗತಿಕವಾಗಿ ನೀಡುತ್ತದೆ. ಇದರಿಂದ ಸ್ವಚ್ಚಂದ ಮನಸ್ಸುಗಳು ಮುಕ್ತತೆಯನ್ನು ಕಳೆದುಕೊಳ್ಳುತ್ತವೆ. ಜಾಗತಿಕ ಜ್ಞಾನವನ್ನು ಸಂಪಾದಿಸಲು ಭಾರತದ ಯುವಜನರಿಗೆ ಅವಕಾಶ ತಪ್ಪಿ ಹೋಗುತ್ತದೆ. ಓದು ಕಡಿಮೆಯಾಗುತ್ತದೆ. ಭಾರತವು ಪ್ರಪಂಚದೊಂದಿಗೆ ತೊಡಗಿಸಿಕೊಳ್ಳಬೇಕಾದ ಸಮಯದಲ್ಲಿ ದೇಶದ ಜನರಲ್ಲಿ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶಾ ಅವರ ಹೇಳಿಕೆಯಿಂದ ಇರುವ ಲಾಭವೆಂದರೆ ಭಾರತೀಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ವಿಭಜನೆಯನ್ನುಂಟುಮಾಡುವುದು. ಉಳಿದಂತೆ ಎಲ್ಲವೂ ನಷ್ಟವೇ, ಅಪಾಯಕಾರಿಯೇ!. ಇದು ಸಾಮಾಜಿಕ ಚಲನಶೀಲತೆಗೆ ಬೀಳುವ ಹೊಡೆತ, ಭಾಷಾ ವೈಷಮ್ಯವನ್ನು ಬಿತ್ತುವ ತಂತ್ರ, ಭಾರತದ ಜಾಗತಿಕ ಸ್ಥಾನಮಾನಕ್ಕೆ ಅಪಾಯವನ್ನುಂಟು ಮಾಡಬಲ್ಲ ಅವಿವೇಕದ ಹೇಳಿಕೆ. ಬೌದ್ಧಿಕತೆಯ ಬಗ್ಗೆ, ಜ್ಞಾನದ ಬೇರೆ ಬೇರೆ ಶಿಸ್ತುಗಳ ಬಗ್ಗೆ ವಿರೋಧಿ ಮನೋಭಾವವನ್ನು ಬೆಳೆಸುತ್ತದೆ. ದೇಶ ಎದುರಿಸುತ್ತಿರುವ ನೈಜ ಸವಾಲುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಶಾ ಅವರ ‘ನಾಚಿಕೆಗೇಡು – ಅಪಮಾನ’ ಎಂಬ ಯಾವುದೇ ಒಳ್ಳೆಯ ಉದ್ದೇಶ ಇಲ್ಲದ ಹೇಳಿಕೆಯಿಂದ ದೇಶಕ್ಕೇ ಹಾನಿ!