ಬೆಂಗಳೂರು: ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರಿನ ಪದಕ ಧರಿಸಿದ್ದಕ್ಕಾಗಿ ಅರಣ್ಯ ಇಲಾಖೆ ಬಂಧಿಸಿದ ಕೆಲವೇ ದಿನಗಳಲ್ಲಿ, ಹಲವಾರು ಸೆಲೆಬ್ರಿಟಿಗಳು ಇದೇ ರೀತಿಯ ಪದಕಗಳನ್ನು ಧರಿಸಿರುವ ಚಿತ್ರಗಳು ವೈರಲ್ ಆಗಿವೆ. ನಟರಾದ ದರ್ಶನ್ ಮತ್ತು ಜಗ್ಗೇಶ್ ಸೇರಿದಂತೆ ಇತರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಲವಾರು ಸಂಘಟನೆಗಳು ಈಗಾಗಲೇ ದೂರು ದಾಖಲಿಸಿವೆ.
ಭಾನುವಾರದಂದು ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ಬಾಸ್ ಕಾರ್ಯಕ್ರಮದ ಸೆಟ್ನಿಂದ ಸಂತೋಷ್ ಅವರನ್ನು ಬಂಧಿಸಿದ ಅರಣ್ಯ ಇಲಾಖೆ, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಘಟನೆಯ ನಂತರ ದರ್ಶನ್, ನಟ ಕಮ್ ರಾಜಕಾರಣಿ ಜಗ್ಗೇಶ್ ಮತ್ತು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹುಲಿಯುಗುರಿನ ಪದಕ ಧರಿಸಿರುವ ಹಲವಾರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ಆದ ಚಿತ್ರಗಳ ಆಧಾರದ ಮೇಲೆ ದರ್ಶನ್ ಮತ್ತು ಜಗ್ಗೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಸಂಘಟನೆಗಳು ಅರಣ್ಯ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದಿವೆ.
ದೂರುಗಳ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ ರವೀಂದ್ರಕುಮಾರ್, ಸತ್ಯಾಸತ್ಯತೆ ತಿಳಿದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
“ನಮಗೆ ದೂರುಗಳು ಬಂದಿವೆ, ಆದರೆ ಸದರಿ ಚಿತ್ರಗಳ ಸತ್ಯಾಸತ್ಯತೆ ತಿಳಿದ ನಂತರವೇ ನಾವು ಕ್ರಮ ಕೈಗೊಳ್ಳಲು ಸಾಧ್ಯ” ಎಂದು ಅರಣ್ಯಾಧಿಕಾರಿ ಹೇಳಿದರು.
ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
“ವನ್ಯಜೀವಿ ಕಾಯ್ದೆಯ ಪ್ರಕಾರ, ವನ್ಯಜೀವಿ ಚರ್ಮ, ದಂತ, ಜಿಂಕೆ ಚರ್ಮ ಮತ್ತು ಕೊಂಬುಗಳನ್ನು ಬಳಸುವಂತಿಲ್ಲ ಅಥವಾ ಸಂಗ್ರಹಿಸುವಂತಿಲ್ಲ. ನಮಗೆ ಕೆಲವು ದೂರುಗಳು ಬಂದಿದ್ದು, ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ. ಯಾರೊಂದಿಗೂ ಮೃದುವಾಗಿ ವರ್ತಿಸುವ ಪ್ರಶ್ನೆಯೇ ಇಲ್ಲ. ಎಲ್ಲ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದರು.

ಈ ನಡುವೆ, ಅಧಿಕಾರಿಗಳು ಸಂತೋಷ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದೇ ರೀತಿಯ ಪದಕ ಧರಿಸಿರುವ ಹಲವಾರು ಸೆಲೆಬ್ರಿಟಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿ ಸಂತೋಷ್ ಬೆಂಬಲಿಗರು ವರ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.