ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠ ಮೀಸಲಾತಿ ಆಂದೋಲನ ದಿನದಿಂದ ದಿನಕ್ಕೆ ಪರಾಕಾಷ್ಠೆ ತಲುಪುತ್ತಿದೆ. ಈಗಾಗಲೇ ಚಳವಳಿಯಲ್ಲಿ ಪಾಲ್ಗೊಂಡಿದ್ದ ಹಲವು ಕಾರ್ಯಕರ್ತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮತ್ತೆ ನಾಲ್ವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಚಳವಳಿ ನಡೆಸುತ್ತಿದ್ದ ಮನೋಜ್ ಜಾರಂಗೆ ಅವರನ್ನು ಬೆಂಬಲಿಸಿ 26 ವರ್ಷದ ರಂಜಿತ್ ಮಾಂಜ್ರೆ ಎಂಬ ಯುವಕ ವಿಷ ಸೇವಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರಂಜಿತ್ ಮಾಂಜ್ರೆಯನ್ನು ಬೆಂಬಲಿಸಿ ದೀಪಕ್ ಪಾಟೀಲ್, ಯೋಗೀಶ್ ಮಾಂಜ್ರೆ, ಪ್ರಶಾಂತ್ ಮಾಂಜ್ರೆ ಆಸ್ಪತ್ರೆ ಆವರಣದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಲ್ವರು ದೇವಗಾಂವ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ 32 ವರ್ಷಗಳ ಹಿಂದೆ ಮೊದಲ ಬಾರಿಗೆ ಆರಂಭವಾದ ಈ ಚಳವಳಿ ದಶಕಗಳಿಂದ ನಡೆಯುತ್ತಿದೆ. ಆದರೆ ಕೆಲ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಆಂದೋಲನ ಮನೋಜ್ ಜಾರಂಗೆ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಜೀವ ತುಂಬಿಕೊಂಡಿದೆ. ಚಳವಳಿಯ ನೇತೃತ್ವ ವಹಿಸಿರುವ ಮನೋಜ್ ಜಾರಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅವರನ್ನು ಬೆಂಬಲಿಸಿ ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಕಳೆದೊಂದು ವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮನೋಜ್ ಜಾರಂಗೆ ಸೋಮವಾರ ಅಸ್ವಸ್ಥಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಮನೋಜ್ ಕುರಿತು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿ ರಾಜಕಾರಣಿಗಳ ಮನೆ, ಕಚೇರಿ, ಅಂಗಡಿಗಳಿಗೆ ಬೆಂಕಿ ಹಚ್ಚಿ ಮಹಾರಾಷ್ಟ್ರದಲ್ಲಿ ಹಿಂಸಾತ್ಮಕ ವಾತಾವರಣ ಸೃಷ್ಟಿಸುತ್ತಿದ್ದಾರೆ.