Home ವಿಶೇಷ ಪಶ್ಚಿಮ ಘಟ್ಟದ ಸೂಪರ್ ಮ್ಯಾನ್ : ಚಾರ್ಮಾಡಿ ಹಸನಬ್ಬ

ಪಶ್ಚಿಮ ಘಟ್ಟದ ಸೂಪರ್ ಮ್ಯಾನ್ : ಚಾರ್ಮಾಡಿ ಹಸನಬ್ಬ

0

ಹಸನಬ್ಬರಿಗೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಇದೀಗ ಅವರ ಎಪ್ಪತ್ತೆರಡನೇ ವಯಸ್ಸಿನಲ್ಲಾದರೂ ಅವರಿಗೆ ಆ ಪ್ರಶಸ್ತಿ ಬಂದಿದ್ದಕ್ಕೆ ಅವರ ಸಾಹಸಗಳನ್ನು, ಅವರ ಸೇವೆಯನ್ನು ಕಂಡು, ಕೇಳಿ ಅರಿತ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಕನ್ನಡ ನಾಡಿಗೊಬ್ಬನೇ ಹಸನಬ್ಬ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರೆಲ್ಲರದ್ದೂ ಒಂದು ತೂಕವಾದರೆ, ಹಸನಬ್ಬರದ್ದೊಂದು ಪ್ರತ್ಯೇಕ ತೂಕ. -ಇಸ್ಮತ್‌ ಪಜೀರ್‌, ಲೇಖಕರು,

“ಒಂದು ಕೊಲೆಗೆ ಬದಲಾಗಿಯಲ್ಲದೇ ಮತ್ತು ಭೂಮುಖದಲ್ಲಿ ಕ್ಷೋಭೆಯುಂಟು ಮಾಡಿದ ಕಾರಣಕ್ಕಾಗಿಯಲ್ಲದೇ ಒಬ್ಬ ವ್ಯಕ್ತಿಯನ್ನು ಕೊಂದರೆ ಸಂಪೂರ್ಣ ಮನುಷ್ಯಕುಲವನ್ನು ಕೊಂದಂತೆ. ಒಬ್ಬ ಮನುಷ್ಯನ ಪ್ರಾಣ ಉಳಿಸಿದರೆ ಸಂಪೂರ್ಣ ಮನುಷ್ಯ ಕುಲದ ಪ್ರಾಣ ಉಳಿಸಿದಂತೆ.

-ಪವಿತ್ರ ಖುರ್‌ಆನ್, ಅಧ್ಯಾಯ -5, ಸೂಕ್ತ – 32

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ವಿಜೇತರಲ್ಲಿ ಚಾರ್ಮಾಡಿ ಹಸನಬ್ಬರದು ಒಂದು ವಿಶಿಷ್ಟ ಸಾಧನೆ. ಚಾರ್ಮಾಡಿ ಹಸನಬ್ಬರು ವಿಶ್ವಾಸವಿಡುವ ಧರ್ಮದ ಪ್ರಕಾರ ಹಸನಬ್ಬ ಒಂದಲ್ಲ, ಎರಡಲ್ಲ, ಹತ್ತಲ್ಲ, ನೂರಾರು ಬಾರಿ ಮನುಷ್ಯ ಕುಲದ ಪ್ರಾಣ ಉಳಿಸಿದ ಪುಣ್ಯಕ್ಕೆ ಭಾಜನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿ ಪವಡಿಸಿರುವ ಊರು ಚಾರ್ಮಾಡಿ. ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಕಡೆಗೆ ಹೋಗುವಾಗ ಸಿಗುವ ದಕ್ಷಿಣ ಕನ್ನಡದ ಕೊನೆಯ ಊರು ಚಾರ್ಮಾಡಿ. ದಕ್ಷಿಣ ಕನ್ನಡದಿಂದ  ಚಾರ್ಮಾಡಿ ಮೂಲಕ ಘಟ್ಟ ಏರುವವರು ಹಸನಬ್ಬರ ಹೋಟೆಲ್ ಬಳಿ ನಿಲ್ಲಿಸಿ, ಚಹಾ ಸೇವಿಸಿ, ತಮ್ಮ ಬಾಟಲಿಗಳಿಗೆ ನೀರು ತುಂಬಿಸಿ, ದೇಹ ಬಾಧೆ ತೀರಿಸಿ ಹೋಗಲು ಪ್ರವೇಶಿಸುವುದು ಹಸನಬ್ಬರ ಹೋಟೆಲಿಗೆ. ಹಸನಬ್ಬರ ಹೋಟೆಲಿನ ಕಲ್ತಪ್ಪ, ಮಸಾಲೆ ಉಂಡೆಯ ರುಚಿಯೂ ಲಾ ಜವಾಬ್.

ಹಸನಬ್ಬ ಎಂಬ ಆಪತ್ಬಾಂಧವನ ಸಾಹಸದ ಕತೆಗಳನ್ನು ಅರಿಯಬೇಕಾದರೆ ಚಾರ್ಮಾಡಿ ಘಾಟಿಯ ಕುರಿತು ಅರಿಯಲೇಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಿಂದ ಹನ್ನೊಂದು ಕಿಲೋಮೀಟರ್ ದೂರದಲ್ಲಿ ಈ ಚಾರ್ಮಾಡಿ ಎಂಬ ಹಳ್ಳಿಯಿದೆ. ಚಾರ್ಮಾಡಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿ ಪವಡಿಸಿರುವ ಹಳ್ಳಿ. ಹಸನಬ್ಬರ ಹೋಟೆಲ್ ದಾಟಿ ಅರ್ಧ ಕಿಲೋ ಮೀಟರ್ ಮುಂದೆ ಸಾಗುತ್ತಿದ್ದಂತೆಯೇ ಚಾರ್ಮಾಡಿ ಘಾಟಿ ಆರಂಭವಾಗುತ್ತದೆ. ಹಾಗೆ ಆರಂಭವಾಗುವ ಘಾಟಿ ರಸ್ತೆ ಮುಗಿಯ ಬೇಕೆಂದರೆ 27 ಕಿಲೋ ಮೀಟರ್ ಕ್ರಮಿಸಿ ಕೊಟ್ಟಿಗೆಹಾರ ತಲುಪಬೇಕು.ಘಾಟಿ ರಸ್ತೆಯಲ್ಲಿ ಚಲಿಸುವುದೆಂದರೆ ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬ. ರಸ್ತೆಯ ಒಂದು ಬದಿಗೆ ಸಾಲು ಸಾಲಾಗಿ ಮೈದಳೆದು ನಿಂತ ಕಣ್ಣೆಟುಕದಷ್ಟು ಎತ್ತರದ ಗಿರಿಶ್ರೇಣಿಗಳು..ರಸ್ತೆಯ ಇನ್ನೊಂದು ಬದಿಗೆ ಪಾತಾಳದಂತಹ ಕಂದರಗಳು. ಹಚ್ಚ ಹಸುರಿನ ಆ ಪ್ರಕೃತಿಗೆ ಎಂತವನೂ ಫಿದಾ ಆಗಲೇಬೇಕು. ಈ ಘಾಟಿ ರಸ್ತೆಯೆಂದರೆ ಸಮತಟ್ಟಾದ ರಸ್ತೆಯಲ್ಲ. ಪ್ರತೀ ನೂರು ಮೀಟರ್‌ಗೊಂದು‌ ಕಡಿದಾದ ತಿರುವು. ಚಾರ್ಮಾಡಿಯಿಂದ ಆರಂಭವಾದರೆ ಕೊಟ್ಟಿಗೆಹಾರದವರೆಗೂ ಏರು ರಸ್ತೆ.. ಎಲ್ಲೋ ಅಲ್ಲೊಂದು ಇಲ್ಲೊಂದು ಒಂಟಿ ಮನೆಗಳು ದಟ್ಟ ಕಾನನದ ಮಧ್ಯೆ ಕಾಣಸಿಗುತ್ತವೆ. ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿ ಓದಿದ್ದರೆ ಚಾರ್ಮಾಡಿ ನೋಡದವರಿಗೂ ಚಾರ್ಮಾಡಿ ಘಾಟಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. ಇಂತಹ ಚಾರ್ಮಾಡಿಯ ಬೆಟ್ಟ ಮತ್ತು ಕಾಡಿನ ಮಧ್ಯೆ ಹಾದು ಹೋಗುವ ನಿರ್ಜನ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಚಾಲಕ ಒಂದಿನಿತೂ ಎಚ್ಚರ ತಪ್ಪಿದರೂ ವಾಹನ ಕಂದರದಲ್ಲಿರುತ್ತೆ. ಹಾಗೆ ಬಿದ್ದು ಬಿಟ್ಟರೆ ಅಲ್ಲಿ ಸಹಾಯಕ್ಕೆಂದು ಕರೆಯಲು ಯಾರೂ ಇರುವುದಿಲ್ಲ. ಅರಣ್ಯರೋಧನ ಎಂಬ ಮಾತಿನ ಅಕ್ಷರಶಃ ಅರ್ಥ ಚಾರ್ಮಾಡಿಯ ಕಣಿವೆಯಲ್ಲಿ ಬಿದ್ದವರಿಗೆ ಅರ್ಥವಾಗುತ್ತೆ. ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವವರಿಗೆ ಅಪಾಯಕ್ಕೆ ಸಿಲುಕಿದವರ ಕೂಗು ಕೇಳಿಸಿದರೂ ನೆರವಿಗೆ ಧಾವಿಸುವ ಧೈರ್ಯ ಬರುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲಾ ವಾಹನಿಗರಿಗೆ ನೆನಪಾಗುವ ಹೆಸರು ಚಾರ್ಮಾಡಿ ಹಸನಬ್ಬರದ್ದು.

ಹಸನಬ್ಬರಿಗೆ ಯಾರಾದರೂ ಹೋಗಿ ಸುದ್ದಿ ತಲುಪಿಸಿದರೆ ಹಿಂದೆ ಮುಂದೆ ನೋಡುವ ಪ್ರಮೇಯವೇ ಬರುವುದಿಲ್ಲ. ಕೂಡಲೇ ತನ್ನ ಮಾರುತಿ 800 ಕಾರನ್ನೇರಿ ಹೊರಟೇ ಬಿಡುತ್ತಾರೆ. ಹಸನಬ್ಬರ ಕಾರಿನ ಡಿಕ್ಕಿಯಲ್ಲಿ ಉದ್ದದ ಹಗ್ಗ, ಕೊಡಲಿ, ಕತ್ತಿ ಸದಾ ರೆಡಿಯಿರುತ್ತೆ. ಪ್ರಥಮ ಚಿಕಿತ್ಸೆಯ ಕಿಟ್ಟೂ ರೆಡಿ ಇರುತ್ತೆ. ಅವರಿಗೆ ಚಾರ್ಮಾಡಿಯಿಂದ ಕೊಟ್ಟಿಗೆ ಹಾರದವರೆಗಿನ ಘಾಟಿಯ ಇಂಚಿಂಚೂ ಪರಿಚಯವಿದೆ. ಹಸನಬ್ಬ ಹೊರಡುವಾಗ ಒಂದೋ ತನ್ನ ಹೋಟೆಲಿನ ಕೆಲಸದ ಒಂದಿಬ್ಬರು ಹುಡುಗರನ್ನು, ಇಲ್ಲವೇ ಅಕ್ಕ ಪಕ್ಕದ ಒಂದಿಬ್ಬರು ಯುವಕರನ್ನು ಕಾರಿನಲ್ಲಿ ಸೇರಿಸಿಕೊಂಡೇ ಹೊರಡುತ್ತಾರೆ. ಅವರ ಕಾರು ಒಂದರ್ಥದಲ್ಲಿ ಆಂಬುಲೆನ್ಸೂ ಹೌದು. ಅಪಘಾತದ ಗಾಯಾಳುಗಳು ಎಂತಹದ್ದೇ ಪಾತಾಳಕ್ಕೆ ಬಿದ್ದಿದ್ದರೂ ಅವರನ್ನು ಮೇಲೆತ್ತಿ ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆಗೈದು ಆಸ್ಪತ್ರೆಗೆ ತಲುಪಿಸುವವರೆಗೆ ಹಸನಬ್ಬ ವಿರಮಿಸುವುದಿಲ್ಲ. ಅವರ ಕಾರಿನ ಡಿಕ್ಕಿಯಲ್ಲಿ ಹಗ್ಗ, ಕೊಡಲಿ ಮತ್ತು ಕತ್ತಿ ಸದಾ ಇರುತ್ತೆ ಎಂದೆನಲ್ಲಾ..‌ ಹಸನಬ್ಬರ ಪ್ರಾಣ ರಕ್ಷಣೆಯ ಕೆಲಸದಲ್ಲಿ ಕೆಲವೊಮ್ಮೆ ಮರಗಳ ಗೆಲ್ಲುಗಳನ್ನು ಕಡಿಯ ಬೇಕಾಗುತ್ತದೆ. ಕೆಲವೊಮ್ಮೆ  ಪಾತಾಳಕ್ಕೆ ಬಿದ್ದವರನ್ನು ರಕ್ಷಿಸಲು ಕೆಳಕ್ಕಿಳಿಯಬೇಕೆಂದರೆ ಸೊಂಟಕ್ಕೆ ಹಗ್ಗ ಕಟ್ಟಿ ಇಳಿಯ ಬೇಕಾಗುತ್ತೆ. ಕೆಲವೊಮ್ಮೆ ವಾಹನಗಳನ್ನು ಕಣಿವೆಯಿಂದ ಮೇಲಕ್ಕೆಳೆಯ ಬೇಕಾಗುತ್ತೆ..ಇವಕ್ಕೆಲ್ಲಾ ಸಿದ್ಧರಾಗಿಯೇ ಅವರು ಒಂದಷ್ಟು ಆಯುಧಗಳ ಜೊತೆಗೇ ತೆರಳುತ್ತಾರೆ. ಹಸನಬ್ಬ ಇಂತಹ ಸಾಹಸದ ಕೆಲಸಕ್ಕಿಳಿದು ಮೂವತ್ತೆಂಟು ವರ್ಷಗಳೇ ಸಂದವು.ಈ ಜೀವ ರಕ್ಷಣೆಯ ಪಯಣದಲ್ಲಿ ಅವರು  ಮತ್ತವರ ತಂಡ ರಕ್ಷಿಸಿದ ಜೀವಿಗಳು ಸಹಸ್ರ ಸಂಖ್ಯೆಯಲ್ಲಿರಬಹುದು. ಈ ವರೆಗೆ ಹಸನಬ್ಬ ಅದಕ್ಕಾಗಿ ಯಾರಿಂದಲೂ ನಯಾ ಪೈಸೆಯ ಪ್ರತಿಫಲ ಪಡೆದದ್ದಿಲ್ಲ. ಸ್ವತಃ ತನ್ನ  ಜೇಬಿನಿಂದಲೇ ಖರ್ಚು ಮಾಡುತ್ತಾರೆ. ಅವರಿಗೆ ಇದೊಂದು ಹವ್ಯಾಸವಾಗಿ ಬಿಟ್ಟಿದೆ.

ಹಸನಬ್ಬ ಹುಟ್ಟಿದ್ದು ಬೆಳ್ತಂಗಡಿ ಬಳಿಯ ಲಾಯಿಲ ಎಂಬ ಹಳ್ಳಿಯಲ್ಲಿ. ಓದಿದ್ದು ಬರೇ ಒಂದನೇ ಕ್ಲಾಸು. ತನ್ನ ಎಂಟನೇ ವಯಸ್ಸಿಗೆ ಬಾಳೆಹೊನ್ನೂರಿನ ಹೋಟೆಲೊಂದಕ್ಕೆ ತಟ್ಟೆ ಲೋಟ ತೊಳೆಯಲು ಹೋದ ಹಸನಬ್ಬ ಕೆಲವರ್ಷಗಳ ಬಳಿಕ ಚಾರ್ಮಾಡಿ ಘಾಟಿಯ ತಪ್ಪಲಲ್ಲೊಂದು ಪುಟ್ಟ ತಟ್ಟಿ ಹೋಟೆಲ್ ಆರಂಭಿಸಿದರು. ವ್ಯಾಪಾರ ಕೈ ಹಿಡಿಯಿತು. ಹೋಟೆಲನ್ನೂ ಬೆಳೆಸುತ್ತಾ ಹೋದರು. ಹೋಟೆಲ್‌ಗೆ ತಾಗಿಯೇ ಮನೆಯನ್ನೂ ಕಟ್ಟಿದರು. ಹೀಗೆ, ಹೋಟೆಲಿನಲ್ಲಿ ದುಡಿಯುತ್ತಾ ಈ ಜೀವರಕ್ಷಣೆಯ ಪ್ರವೃತ್ತಿಯಲ್ಲೂ ತೊಡಗಿಸಿಕೊಂಡರು. ಇಂತಹ ಪ್ರಾಣರಕ್ಷಣೆಯ ಕೆಲಸಗಳನ್ನು ಮುಂದುವರಿಸಲು ಅವರ ಅಮ್ಮನೇ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದರಂತೆ. 

ಹಸನಬ್ಬರದ್ದು ಗಂಭೀರ ಮುಖಭಾವ. ಒಮ್ಮೆ ನಾವಾಗಿ ಮಾತನಾಡಿಸಿದರೆ ಅವರು ಆತ್ಮೀಯರಾಗಿ ಬಿಡುತ್ತಾರೆ. ಮತ್ತೆ ಮತ್ತೆ ಕೆದಕಿ ಕೇಳಿದರೆ ತನ್ನ ಬದುಕಿನ ಕತೆಯನ್ನು ಹೇಳುತ್ತಾರೆ. ತನ್ನ ಜೀವರಕ್ಷಣೆಯ ಪಯಣದ ಬಿಡಿ ಬಿಡಿ ಕತೆಗಳನ್ನು ಬಿಚ್ಚಿಡುತ್ತಾರೆ.

ಇಂತಹ ಅಪೂರ್ವ ಜೀವ ಪ್ರೇಮಿ ಹಸನಬ್ಬರಿಗೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಇದೀಗ ಅವರ ಎಪ್ಪತ್ತೆರಡನೇ ವಯಸ್ಸಿನಲ್ಲಾದರೂ ಅವರಿಗೆ ಆ ಪ್ರಶಸ್ತಿ ಬಂದಿದ್ದಕ್ಕೆ ಅವರ ಸಾಹಸಗಳನ್ನು, ಅವರ ಸೇವೆಯನ್ನು ಕಂಡು, ಕೇಳಿ ಅರಿತ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಕನ್ನಡ ನಾಡಿಗೊಬ್ಬನೇ ಹಸನಬ್ಬ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರೆಲ್ಲರದ್ದೂ ಒಂದು ತೂಕವಾದರೆ, ಹಸನಬ್ಬರದ್ದೊಂದು ಪ್ರತ್ಯೇಕ ತೂಕ.‌ಸಹಸ್ರಾರು ಮಂದಿಯ ಹೃದಯದಲ್ಲಿ ಗಟ್ಟಿ ಸ್ಥಾನ ಪಡೆದ ಹಸನಬ್ಬರು ಸದಾ ನಗು‌ನಗುತ್ತಾ ಇರಲಿ.

ಇಸ್ಮತ್‌ ಪಜೀರ್‌, ಮಂಗಳೂರು

ಲೇಖಕರು

ಇದನ್ನೂ ಓದಿ-ಚಳುವಳಿಗಳು ಮತ್ತು ಆಧುನಿಕ ಕನ್ನಡ ಸಾಹಿತ್ಯ- ಒಂದು ಹಿನ್ನೋಟ

You cannot copy content of this page

Exit mobile version