Home ವಿಶೇಷ ಅಧಿಕಾರಿಗಳ ಅವಕೃಪೆಗೊಳಗಾಗಿ ಜಾರಿಯಾಗದ ಸಾಂಸ್ಕೃತಿಕ ನೀತಿ

ಅಧಿಕಾರಿಗಳ ಅವಕೃಪೆಗೊಳಗಾಗಿ ಜಾರಿಯಾಗದ ಸಾಂಸ್ಕೃತಿಕ ನೀತಿ

0

ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುವ ಸಾಂಸ್ಕೃತಿಕ ನೀತಿಯ ಆದೇಶ ಜಾರಿಯಾಗಲೇ ಬೇಕಿದೆ. ಇಲ್ಲದೇ ಹೋದರೆ ರಾಜ್ಯೋತ್ಸವ ಎನ್ನುವುದು ಕೇವಲ ಯಾಂತ್ರಿಕ ಆಚರಣೆಯಾಗುತ್ತದೆ. ಜನಪರ ಸಾಂಸ್ಕೃತಿಕ ನೀತಿಯೊಂದು ಈ ನಾಡಿಗೆ ಇಲ್ಲದೇ ಹೋದರೆ, ಇದ್ದರೂ ಜಾರಿಯಾಗದೇ ಇದ್ದರೆ ಸಾಂಸ್ಕೃತಿಕ ಸಬಲೀಕರಣ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವೇ ಇಲ್ಲ- ಶಶಿಕಾಂತ ಯಡಹಳ್ಳಿ.

ನವೆಂಬರ್ 1 ರಂದು 68 ನೇ ಕನ್ನಡ ರಾಜ್ಯೋತ್ಸವದಂದು ಕರುನಾಡು ಸಂಭ್ರಮಿಸುತ್ತಿದೆ. ಕರ್ನಾಟಕ ಸರಕಾರ 68 ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸುತ್ತಿದೆ. ಮುಂದಿನ ಒಂದೆರಡು ತಿಂಗಳುಗಳ ಕಾಲ ಕರ್ನಾಟಕದಾದ್ಯಂತ ಅನೇಕಾನೇಕ ಸಂಘ ಸಂಸ್ಥೆ ಗೆಳೆಯರ ಬಳಗಗಳು ಕನ್ನಡ ರಾಜ್ಯೋತ್ವವವನ್ನು ಅದ್ದೂರಿಯಾಗಿ ಆಚರಿಸುತ್ತವೆ. ಕನ್ನಡದ ಅಸ್ಮಿತೆಯನ್ನು ಉಳಿಸಲು, ಕರ್ನಾಟಕದ ಏಕೀಕರಣವನ್ನು ಸಂಭ್ರಮಿಸಲು, ನಾಡು ನುಡಿಯ ಬಗ್ಗೆ ಕರ್ನಾಟಕದ ವಾಸಿಗಳಲ್ಲಿ ಅಭಿಮಾನವನ್ನು ಹೆಚ್ಚಿಸಲು ಎಲ್ಲಾ ರೀತಿಯ ಆಚರಣೆಗಳೂ ಸ್ವಾಗತಾರ್ಹ. 

ಆದರೆ ಕೇವಲ ಸಂಭ್ರಮಾಚರಣೆಗಳು ಮಾತ್ರ ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಲದಾಗಿವೆ. ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸುವುದರಲ್ಲಿ, ಸಬಲೀಕರಣಗೊಳಿಸುವುದರಲ್ಲಿ ಕನ್ನಡದ ಅಸ್ಮಿತೆ ಇದೆ. ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸಿ ಅನುಷ್ಠಾನಕ್ಕೆ ತರುವುದರಲ್ಲಿ ಈ ನಾಡು ನುಡಿಯ ಭವ್ಯ ಭವಿಷ್ಯ ಅಡಗಿದೆ. 

ಯಾವುದೇ ಸಮಾಜದ ಅಸ್ತಿತ್ವ ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಅವಲಂಬಿಸಿರುತ್ತದೆ.  ಜಗತ್ತಿನ ಎಲ್ಲಾ ಜನಸಮುದಾಯಗಳೂ ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುತ್ತವೆ. ಆದರೆ ಯಾವಾಗ ಜಾಗತೀಕರಣದ ಅಲೆ ಇಡೀ ವಿಶ್ವದಾದ್ಯಂತ ಆವರಿಸಿಕೊಂಡಿತೋ ಆಗ ಪ್ರಾದೇಶಿಕ ಸಾಂಸ್ಕೃತಿಕತೆಗೆ ಹಿನ್ನಡೆಯಾಗತೊಡಗಿತು. ಆಗ ಆತಂಕಕ್ಕೊಳಗಾದ ಸಂಸ್ಕೃತಿ ಚಿಂತಕರು ನಾಡು ನುಡಿ ಭಾಷೆ ಕಲೆ ಸಾಹಿತ್ಯವನ್ನು ಉಳಿಸಿಕೊಳ್ಳಲು ಪ್ರಾಮುಖ್ಯತೆ ಕೊಡಲಾರಂಭಿಸಿದರು. ಜನ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸರಕಾರಗಳ ಮೇಲೆ ಒತ್ತಡ ಹೇರತೊಡಗಿದರು. ಕರ್ನಾಟಕದಲ್ಲೂ ಸಾಂಸ್ಕೃತಿಕ ನೀತಿಯೊಂದನ್ನು ಜಾರಿಗೆ ತರಬೇಕೆನ್ನುವ ಆಗ್ರಹಕ್ಕೆ ಸರಕಾರ ಒತ್ತು ಕೊಡಲೇಬೇಕಾಯ್ತು. ಕಳೆದ ಸಲ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಸಮಗ್ರ ಸಾಂಸ್ಕೃತಿಕ ನೀತಿಯ ನಿಯಮಾವಳಿಗಳನ್ನು ರಚಿಸಲು ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ 8-8-2013 ರಂದು ಸಮಿತಿಯೊಂದನ್ನು ರಚಿಸಲಾಯ್ತು.

ಸರಕಾರದ ನಿರ್ದೇಶನದಂತೆ ಈ ಸಮಿತಿಯು ಹತ್ತು ತಿಂಗಳುಗಳ ಕಾಲ ರಾಜ್ಯದಾದ್ಯಂತ ಸಂಚರಿಸಿ ಕ್ಷೇತ್ರ ತಜ್ಞರು, ಸಾಹಿತಿ ಕಲಾವಿದರುಗಳ ಜೊತೆ ಅನೇಕ ಸಭೆಗಳನ್ನು ನಡೆಸಿ 44 ಶಿಪಾರಸ್ಸುಗಳನ್ನು ಒಳಗೊಂಡ ವರದಿಯನ್ನು 25-06-2014 ರಂದು ಸರಕಾರಕ್ಕೆ ಸಲ್ಲಿಸಿತು.

ಆ ವರದಿಯಲ್ಲಿದ್ದ ಕೆಲವು ಅಂಶಗಳ ಕುರಿತು ಚರ್ಚಿಸಲು ಕರೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರಿಂದಲೇ ಅಪಸ್ವರ ಕೇಳಿಬಂದಿತು. ಮರುಪರಿಷ್ಕರಣೆಗಾಗಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಮಾನ್ಯ ಕೆ.ಹೆಚ್.ಪಾಟೀಲರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಉಪ ಸಮಿತಿಯು 5-5-2017 ರಂದು ಸರಕಾರಕ್ಕೆ 27 ಅಂಶಗಳ ಅಂತಿಮ ಶಿಪಾರಸ್ಸುಗಳನ್ನು ಸಲ್ಲಿಸಿತು.

ಈ ಸಚಿವರುಗಳ ತಕರಾರಿಗೆ ಮೊದಲ ಕಾರಣವೇ ಪ್ರೋಟೋಕಾಲ್. ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಕಡ್ಡಾಯವಾಗಿ ಆಹ್ವಾನಿಸಬೇಕು ಎಂಬ ಶಿಷ್ಟಾಚಾರದ ಅಂಶವನ್ನೇ ಬರಗೂರರ ಸಮಿತಿ ಬೇಡವೆಂದಿತ್ತು. ಇದನ್ನು ಜನಪ್ರತಿನಿಧಿಗಳು ಒಪ್ಪಲು ಸಾಧ್ಯವೇ? ಅವರುಗಳು ಕಾರ್ಯಕ್ರಮಕ್ಕೆ ಬರಲಿ ಬಿಡಲಿ ಸಂಬಂಧಿಸಿದ ಶಾಸಕ ಸಚಿವರುಗಳ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಬೇಕೆಂಬುದು ಪ್ರಚಾರ ಪ್ರಿಯ ರಾಜಕಾರಣಿಗಳ ಸಾರ್ವಕಾಲಿಕ ಬಯಕೆ. ಜೊತೆಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕಾದರೂ ಈ ಸೋಕಾಲ್ಡ್ ಜನಪ್ರತಿನಿಧಿಗಳ ದುಂಬಾಲು ಬಿದ್ದು ಅವರ ಬಿಡುವಿನ ದಿನಾಂಕದಂದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅನಿವಾರ್ಯತೆಯನ್ನು ಖಾಯಂ ಗೊಳಿಸಲು ಸಚಿವರು ಬಯಸಿದ್ದರು. ಅದರಿಂದಾಗಿ ಬರಗೂರು ಸಮಿತಿಯ ಈ ಪ್ರಸ್ತಾವನೆಯನ್ನು ಉಪಸಮಿತಿಯು ತೆಗೆದು ಹಾಕಿತು. 

ಎರಡನೆಯದಾಗಿ, ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳ ನೇಮಕಾತಿ ಮಾಡಲು ಶೋಧನಾ ಸಮಿತಿ ರಚಿಸಬೇಕು ಎಂಬುದು ಬರಗೂರರ ಸಮಿತಿಯ ಶಿಪಾರಸ್ಸು. ತಮ್ಮ ಮೂಗಿನ ನೇರಕ್ಕೆ ಆಯ್ಕೆ ನಡೆಯಬೇಕು ಎಂದುಕೊಳ್ಳುವ ಆಳುವವರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೆ? ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ತಮ್ಮ ಪಕ್ಷ ಸಿದ್ಧಾಂತದ ಪರವಾಗಿರುವವರನ್ನು, ಶಾಸಕ ಸಚಿವರುಗಳ ಹಿಂಬಾಲಕರನ್ನು, ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ಮೂಲಕ ಎಲ್ಲಾ ಸಂಸ್ಥೆಗಳನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಅವಕಾಶವನ್ನು ಸರಕಾರ ಬಿಟ್ಟು ಕೊಟ್ಟೀತೆ? ಈ ಶಿಪಾರಸ್ಸನ್ನೂ ತೆಗೆದುಹಾಕಿದ ಉಪಸಮಿತಿಯು ತಮ್ಮ ಶಿಪಾರಸ್ಸು ಆಯ್ಕೆಯ ಅವಕಾಶವನ್ನು ಉಳಿಸಿಕೊಂಡಿತು. ಇದರಿಂದಾಗುವ ಅನಾಹುತವನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ಅಕಾಡೆಮಿ, ರಂಗಾಯಣಗಳಿಗೆ ಆಯ್ಕೆಯಾದ ಹಿಂದುತ್ವವಾದಿ ಹಾಗೂ ಕೋಮುವಾದಿ ಸಮರ್ಥಕರ ಹೆಸರುಗಳಲ್ಲಿ ಕಾಣಬಹುದಾಗಿದೆ. ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಅಡ್ಡಂಡ ಕಾರ್ಯಪ್ಪನವರು ಮಾಡಿದ ಕೋಮುವ್ಯಾಧೀಕರಣದ ದುರಂತವನ್ನೂ ಗಮನಿಸಬೇಕಿದೆ. ಕಾಂಗ್ರೆಸ್ ಸರಕಾರ ಬರಗೂರರ ಈ ಪ್ರಸ್ತಾಪವನ್ನು ತೆಗೆದು ಹಾಕಿದ್ದು ಬಿಜೆಪಿಯಂತಹ ಕೋಮುಪಕ್ಷಕ್ಕೆ ವರದಾನವಾಗುತ್ತದೆ. ಸಾಂಸ್ಕೃತಿಕ ಲೋಕವೇ ಕೇಸರಿಮಯವಾಗುವ ಅಪಾಯ ಸೃಷ್ಟಿ ಆಗುವುದಂತೂ ಸತ್ಯ.

ಎಲ್ಲಿ ಈ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಕೊಟ್ಟರೆ ತಮ್ಮ ನಿಯಂತ್ರಣ ತಪ್ಪಿಹೋಗುತ್ತದೋ ಎನ್ನುವ ಆತಂಕದಿಂದ ಈ ಮೇಲಿನ ಎರಡೂ ಪ್ರಮುಖ ಶಿಪಾರಸ್ಸುಗಳನ್ನು ಉಪಸಮಿತಿ ತೆಗೆದು ಹಾಕಿತು. ಇದರ ಜೊತೆಗೆ ಜನಪ್ರತಿನಿಧಿಗಳ ಹಿತಾಸಕ್ತಿಗೆ ಪೂರಕವಲ್ಲದ ಕೆಲವಾರು ಶಿಪಾರಸ್ಸುಗಳು ರದ್ದಾದವು. ಬರಗೂರರ ಸಮಿತಿ ಮಾಡಿದ 44 ಶಿಪಾರಸ್ಸುಗಳಲ್ಲಿ ಕೇವಲ 27 ಶಿಪಾರಸ್ಸುಗಳಿಗೆ ಮಾತ್ರ ಅನುಮತಿ ದೊರೆಯಿತು. ಇದರ ದುಷ್ಪರಿಣಾಮವನ್ನು ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು, ಸಾಂಸ್ಕೃತಿಕ ಲೋಕದ ಕಲಾವಿದರು ಸಾಹಿತಿಗಳು ಅನುಭವಿಸ ಬೇಕಾಯ್ತು. 

ಜನಪ್ರತಿನಿಧಿಗಳ ಹಿತಾಸಕ್ತಿಗೆ ಪೂರಕವಾಗಿ ಹಾಗೂ ಅಕಾಡೆಮಿ ಪ್ರಾಧಿಕಾರಗಳ ಸ್ವಾಯತ್ತತೆಯನ್ನು ಬಲಿಕೊಟ್ಟು ಉಪಸಮಿತಿ ಅಂತಿಮಗೊಳಿಸಿದ 27 ಅಂಶಗಳ ಸಾಂಸ್ಕೃತಿಕ ನೀತಿಯ ಅನುಷ್ಠಾನಕ್ಕೆ ಸರಕಾರ 10-10-2017 ರಲ್ಲಿ ಆದೇಶ ಹೊರಡಿಸಿತು.

ಸಧ್ಯ ಈಗಲಾದರೂ ಸಾಂಸ್ಕೃತಿಕ ನೀತಿಯೊಂದು ಜಾರಿಗೆ ಬಂತಲ್ಲಾ ಎಂದು ಸಾಂಸ್ಕೃತಿಕ ಲೋಕ ಸಮಾಧಾನ ಪಟ್ಟಿತಾದರೂ ಅಧಿಕಾರಿಗಳ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೂ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲೇ ಇಲ್ಲ. ಸರಕಾರದ ಆದೇಶದ ಪ್ರತಿ ಸಹ ಯಾರಿಗೂ ದೊರೆಯದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬಚ್ಚಿಟ್ಟಿದ್ದರು. ಆದರೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರ ಅವಿರತ ಪ್ರಯತ್ನದಿಂದಾಗಿ ಈ ಆದೇಶದ ಪ್ರತಿ ಹೊರಗೆ ಬಂದಿತು. ಅಕಾಡೆಮಿಗಳಿಗೆ ಸ್ವಾಯತ್ತತೆ ಸಿಗಬೇಕು ಹಾಗೂ ಸಾಂಸ್ಕೃತಿಕ ನೀತಿಯ ಆದೇಶ ಜಾರಿಗೆ ಬರಬೇಕು ಎಂದು ಲೋಕೇಶರವರು ತುಂಬಾ ಪ್ರಯತ್ನಿಸಿದರು. ಅವರ ಪ್ರಯತ್ನಕ್ಕೆ ಎಲ್ಲಾ ಅಕಾಡೆಮಿಗಳ ಅಧ್ಯಕ್ಷರುಗಳೂ ಜೊತೆಯಾಗಿ ಧ್ವನಿಗೂಡಿಸಿದ್ದರೆ ಈ ಆದೇಶ ಜಾರಿಯೂ ಆಗುತ್ತಿತ್ತು, ಹಾಗೂ ಅಕಾಡೆಮಿಗಳಿಗೆ ಒಂದಿಷ್ಟಾದರೂ ಸ್ವಾಯತ್ತತೆ ಸಿಗಬಹುದಾದ ಸಾಧ್ಯತೆಯೂ ಇತ್ತು. ಆದರೆ ಇಲಾಖೆಯ ಅಧಿಕಾರಿಗಳೇ ಕೆಲವು ಅಕಾಡೆಮಿ ಅಧ್ಯಕ್ಷರಿಗೆ ತಪ್ಪು ಮಾಹಿತಿ ಕೊಟ್ಟರು. ಚರ್ಚೆಗೆ ಕರೆದ ಸಭೆಯಲ್ಲಿ ಅಪಸ್ವರ ಎತ್ತಿಸಿ ಸಭೆಯನ್ನು ಮುಂದೂಡಿಸಿದರು. ಅಷ್ಟರಲ್ಲಿ ಕಾಂಗ್ರೆಸ್ ಸರಕಾರವೇ ಬಿದ್ದು ಹೋಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳ ಅವಧಿ ಇನ್ನೂ ಒಂದು ವರ್ಷ ಇದ್ದರೂ ಅವರನ್ನೆಲ್ಲಾ ಮನೆಗೆ ಕಳುಹಿಸಲಾಯ್ತು. ಜೆ.ಲೋಕೇಶರವರ ಸ್ವಾಯತ್ತದ ಪರ ಹೋರಾಟ ಅರ್ಧದಲ್ಲೇ ಅಸ್ತಂಗತವಾಯಿತು. 

ಈಗ ಮತ್ತೆ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸಭೆಯೊಂದರಲ್ಲಿ ಮಾನ್ಯ ಸಿದ್ದರಾಮಯ್ಯನವರಿಗೆ ಸಾಂಸ್ಕೃತಿಕ ನೀತಿಯ ಆದೇಶದ ಜಾರಿಗೆ ನಾನೇ ಆಗ್ರಹಿಸಿದೆ. ಈಗ ಈ ಎಲ್ಲಾ ಸರಕಾರಿ ಸಂಸ್ಥೆಗಳಾದ 13 ಅಕಾಡೆಮಿಗಳು, 4 ಪ್ರಾಧಿಕಾರಗಳು ಹಾಗೂ 6 ರಂಗಾಯಣಗಳಿಗೆ  ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲು ಕ್ಷಣಗಣನೆ ಶುರುವಾಗಿದೆ. ಆದರೆ ಅದಕ್ಕಿಂತಲೂ ಮೊದಲು ಸಾಂಸ್ಕೃತಿಕ ನೀತಿಯ ಆದೇಶ ಅಧಿಕೃತವಾಗಿ ಅನುಷ್ಟಾನಕ್ಕೆ ಬರಬೇಕಿದೆ. 

ಯಾಕೆಂದರೆ.. ಆದೇಶಗೊಂಡ  ಸಾಂಸ್ಕೃತಿಕ ನೀತಿಯಲ್ಲಿ ಅಕಾಡೆಮಿ ಪ್ರಾಧಿಕಾರಗಳಿಗೆ ಒಂದಿಷ್ಟು ಸ್ವಾಯತ್ತತೆ ಘೋಷಣೆಯಾಗಿದೆ. ಅದರಲ್ಲಿ ಪ್ರಮುಖವಾದದ್ದು ಏನೆಂದರೆ. ಈ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರ ಕಾಲಾವಧಿಯನ್ನು ಮೂರು ವರ್ಷಕ್ಕೆ ಖಡ್ಡಾಯಗೊಳಿಸಲಾಗಿದೆ. ಅಷ್ಟರಲ್ಲಿ ಆಳುವ ಸರಕಾರ ಬದಲಾದರೆ ಈ ಪದಾಧಿಕಾರಿಗಳನ್ನೂ ಬದಲಾಯಿಸುವ ಕೆಟ್ಟ ಮಾದರಿಯನ್ನು ಕೈಬಿಡಲಾಗಿದೆ. ಯಾಕೆಂದರೆ ಅವಧಿಪೂರ್ವ ಅಮಾನತ್ತು ಮಾಡಿದರೆ ಮೂರು ವರ್ಷಕ್ಕೆ ಹಾಕಿಕೊಂಡ ಯೋಜನೆಗಳು ಮೊಟಕುಗೊಂಡು ಅದಕ್ಕೆ ಮಾಡಲಾದ ಖರ್ಚುಗಳು ವ್ಯರ್ಥವಾಗುತ್ತವೆ. ಅವಧಿಪೂರ್ವ ನಿರ್ಗಮಿಸಬೇಕಾದ ಪದಾಧಿಕಾರಿಗಳಿಗೂ ಇದರಿಂದ ಅವಮಾನವಾದಂತಾಗುತ್ತದೆ. ಸಾಂಸ್ಕೃತಿಕ ನೀತಿ ಜಾರಿಯಾಗಿದ್ದೇ ಆದರೆ ಇದನ್ನು ನಿರ್ಬಂಧಿಸಬಹುದಾಗಿದೆ. “ಅಕಾಡೆಮಿಗಳು ಯೋಜಿತವಾಗಿ ರೂಪಿಸಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲು ನಿಗದಿತ ಅವಧಿಯವರೆಗೂ ನಿಯೋಜಿತರಾದ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಅವಧಿ ಮುಗಿದ ನಂತರವೂ ಹೊಸ ನೇಮಕಾತಿ ಆಗುವವರೆಗೂ ಮುಂದುವರೆಸಬೇಕು” ಎಂಬುದು ಆದೇಶದ ಪ್ರತಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಇದರಿಂದಾಗಿ ಯಾವುದೇ ಸರಕಾರ ಬರಲಿ ಇರಲಿ ಹೋಗಲಿ ಅವಧಿ ಮುಗಿಯುವವರೆಗೂ ಅಧ್ಯಕ್ಷರು ಹಾಗೂ ಸದಸ್ಯರನ್ನು ಸರಕಾರ ಬದಲಾಯಿಸುವಂತಿಲ್ಲ ಹಾಗೂ ಅವಧಿ ಮುಗಿದಿದೆಯೆಂದು ಹೊಸ ನೇಮಕಾತಿ ಆಗುವವರೆಗೂ ಅವರನ್ನು ತೆಗೆದು ಹಾಕುವಂತಿಲ್ಲ. ಈ ಹಿಂದೆ ಇದ್ದ ಅಕಾಡೆಮಿಗಳ ಅವಧಿ ಮುಗಿದು ಈಗಾಗಲೇ ಒಂದು ವರ್ಷವಾಗುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ನೇಮಕಾತಿ ಆಗದೇ ಎಲ್ಲಾ ಅಕಾಡೆಮಿ ಪ್ರಾಧಿಕಾರ ರಂಗಾಯಣಗಳು ನಿಷ್ಕ್ರಿಯವಾಗಿವೆ. ಕಚೇರಿಯ ಖರ್ಚು ವೆಚ್ಚ ಹಾಗೂ ಸಿಬ್ಬಂದಿಯ ಸಂಬಳ ಮಾತ್ರ ಇಲಾಖೆಯಿಂದ ಪಾವತಿಯಾಗುತ್ತಲೇ ಇದೆ. ಇದನ್ನು ತಪ್ಪಿಸಬೇಕೆಂದರೆ ಸಾಂಸ್ಕೃತಿಕ ನೀತಿಯ ಆದೇಶ ಜಾರಿಯಾಗಲೇ ಬೇಕಿದೆ.

ಯಾಕೆ ಈ ಅಧಿಕಾರಿ ವರ್ಗ ಸರಕಾರಿ ಆದೇಶವನ್ನು ಜಾರಿಮಾಡದೇ ನಿರ್ಲಕ್ಷಿಸಿ ಮುಚ್ಚಿಟ್ಟಿತು? ಯಾಕೆಂದರೆ ಅವರ ಹಿತಾಸಕ್ತಿಗೆ ಹಿನ್ನಡೆಯಾಗುವ ಅಂಶಗಳು ಈ ಸಾಂಸ್ಕೃತಿಕ ನೀತಿಯಲ್ಲಿದ್ದವು.

ಮೊದಲನೆಯದಾಗಿ, ಅಕಾಡೆಮಿಗಳ ಅಂಗರಚನೆ/ನಿಯಮಾವಳಿ ಹಾಗೂ ಹಣಕಾಸಿನ ನಿರ್ವಹಣೆಯಲ್ಲಿ ನಿಯಮಾನುಸಾರ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನ ಮಾಡುವ ಸ್ವಾಯತ್ತತೆಯನ್ನು ಅಕಾಡೆಮಿಗೆ ಒದಗಿಸುವುದು ಎನ್ನುವ ಅಂಶದ ಬಗ್ಗೆ ಅಧಿಕಾರಿಗಳಿಗೆ ಆಕ್ಷೇಪಣೆ ಇದೆ. ಕ್ರಿಯಾಯೋಜನೆ ಮತ್ತೆ ಹಣಕಾಸಿನ ನಿರ್ವಹಣೆಯನ್ನು ಅಕಾಡೆಮಿಗಳ ಅಧ್ಯಕ್ಷರಿಗೆ ಕೊಟ್ಟರೆ ಅಧಿಕಾರಿಗಳ ಅಧಿಕಾರಕ್ಕೆ ಧಕ್ಕೆಯಾಗುತ್ತದೆ. ಅಕಾಡೆಮಿಗೆ ಸ್ವಾಯತ್ತತೆ ಕೊಟ್ಟರೆ ಈ ಅಧಿಕಾರಿಗಳ ಮಾತನ್ನು ಕೇಳುವವರು ಯಾರು? ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಮೇಲಿನ ಅಧಿಕಾರಿಗಳ ನಿಯಂತ್ರಣ ಕಡಿತಗೊಳ್ಳುವುದನ್ನು ಯಾವ ಅಧಿಕಾರಿ ಒಪ್ಪಿಕೊಳ್ಳಲು ಸಾಧ್ಯ. ಹೀಗಾಗಿ ಅಕಾಡೆಮಿಗಳ ಮೇಲಿನ ನಿಯಂತ್ರಣಕ್ಕಾಗಿ ಸ್ವಾಯತ್ತತೆ ಕೊಡದೇ ಇರುವ ತಂತ್ರವಾಗಿ ಸರಕಾರಿ ಆದೇಶವನ್ನು ಜಾರಿಗೆ ತರದೇ ಮರೆಮಾಚುವ ಕೆಲಸವನ್ನು ಅಧಿಕಾರಿ ವರ್ಗ ಮಾಡಿದೆ.

ಎರಡನೆಯದಾಗಿ, ಈ ಆದೇಶದಲ್ಲಿ ಸಂಸ್ಕೃತಿ ಇಲಾಖೆಯು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಲು ಕರ್ನಾಟಕದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಬೇಕು ಹಾಗೂ ಈ ಕಚೇರಿಗಳಿಗೆ ಪ್ರಸಕ್ತ  ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಂಟಿ ನಿರ್ದೇಶಕರನ್ನು ಪ್ರಾದೇಶಿಕ ನಿರ್ದೇಶಕರಾಗಿ ನೇಮಿಸಬೇಕು ಎನ್ನುವ ಅಂಶವಿದೆ. ಹೆಚ್ಚು ಆದಾಯದ ಕೇಂದ್ರವಾಗಿರುವ ಕೇಂದ್ರ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿರುವ ಅಧಿಕಾರಿಗಳಿಗೆ ಇದು ಅಪಥ್ಯವೆನಿಸಿತು. ಈ ಆದೇಶ ಜಾರಿಯಾದರೆ ಎಲ್ಲಿ ನಮ್ಮನ್ನು ಪ್ರಾದೇಶಿಕ ಕಚೇರಿಗಳಿಗೆ ವರ್ಗಾಯಿಸುತ್ತಾರೋ ಎನ್ನುವ ಆತಂಕವೂ ಕಾಡಿತು. ಅದರಿಂದಾಗಿ ಈ ಆದೇಶವನ್ನೇ ಜಾರಿಮಾಡದೇ ಮುಚ್ಚಿಡುವಲ್ಲಿ ಅಧಿಕಾರಿವರ್ಗ ಯಶಸ್ವಿಯಾಯಿತು. ಸಾಂಸ್ಕೃತಿಕ ನೀತಿ ಆದೇಶವಾದರೂ ನೆನಗುದಿಗೆ ಬೀಳುವಂತಾಯಿತು. 

ಮೂರನೆಯದಾಗಿ, ಸಾಂಸ್ಕೃತಿಕ ಸಂಘಟನೆಗಳನ್ನು ಬಲಪಡಿಸಲು ಅರ್ಜಿಗಳನ್ನು ಆಹ್ವಾನಿಸಿ, ಕಾಲಬದ್ಧವಾಗಿ ಅವುಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದಲ್ಲಿ ಅನುದಾನ ಮಂಜೂರಾತಿ ಸಮಿತಿಯ ಮೂಲಕ ಮಾತ್ರ ಅನುದಾನ ಮಂಜೂರು ಮಾಡಬೇಕು. ಪ್ರಾತಿನಿಧಿಕ ತಜ್ಞರ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ತನ್ನ ಶಿಪಾರಸ್ಸನ್ನು ಅನುದಾನ ಮಂಜೂರಾತಿ ಸಮಿತಿಗೆ ಶಿಪಾರಸ್ಸು ಮಾಡಬೇಕು ಎನ್ನುವ ನಿಬಂಧನೆ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿತ್ತು. ಯಾಕೆಂದರೆ ಅಧಿಕಾರಿಗಳಿಗೆ ಈ ಅನುದಾನ ಹಂಚಿಕೆಯಲ್ಲೇ ಹೆಚ್ಚು ಅನಧಿಕೃತ ಆದಾಯವಿರುವುದು. ಹೆಚ್ಚು ಕಮಿಷನ್ ಕೊಡುವ ಸಂಸ್ಥೆಗಳಿಗೆ ಹೆಚ್ಚು ಅನುದಾನ ಮಂಜೂರು ಮಾಡಲಾಗುತ್ತದೆ. ಆದರೆ ತಜ್ಞರ ಸಮಿತಿಯ ಶಿಪಾರಸ್ಸಿನ ಮೇಲೆ ಮಂಜೂರಾತಿ ಮಾಡುವುದು ಎಂದರೆ ಈ ಅಧಿಕಾರಿಗಳ ಅಧಿಕಾರ ಮತ್ತು ಆದಾಯಕ್ಕೆ ಕಲ್ಲು ಬಿದ್ದಂತೆ. ಆದ್ದರಿಂದ ಈ ಆದೇಶವನ್ನೇ ಅನುಷ್ಠಾನವಾಗದಂತೆ ಅಧಿಕಾರಿಗಳು ನೋಡಿಕೊಂಡರು ಎಂಬುದರಲ್ಲೂ ಸುಳ್ಳಿಲ್ಲ.  ಈ ಮೇಲೆ ತಿಳಿಸಿದ ಮೂರು ಪ್ರಮುಖ ಕಾರಣಗಳಿಗಾಗಿ ಹಾಗೂ ಅಧಿಕಾರಿ ವರ್ಗದ ಹಿತಾಸಕ್ತಿಗಾಗಿ ಸರಕಾರದ ಆದೇಶ ಮೂಲೆಗುಂಪಾಯಿತು. ಅಕಾಡೆಮಿಗಳ ಸ್ವಾಯತ್ತತೆ ಕನಸಾಗಿಯೇ ಉಳಿಯಿತು.

ಸಾಂಸ್ಕೃತಿಕ ನೀತಿಯ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೆ

* ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಒಂದಿಷ್ಟು ಸ್ವಾಯತ್ತತೆ ದೊರಕುತ್ತಿತ್ತು.

* ಸ್ವಾಯತ್ತ ಸಂಸ್ಥೆಗಳು ಅಂತಾದ ಮೇಲೆ ಅಧಿಕಾರಿಗಳ ದರ್ಪದಾಟಕ್ಕೆ ಕಡಿವಾಣ ಬೀಳುತ್ತಿತ್ತು.

* ಸಾಂಸ್ಕೃತಿಕ ಸಂಸ್ಥೆಗಳ ಅಕಾಲಿಕ ಅಮಾನತ್ತು ನಿಲ್ಲುತ್ತಿತ್ತು. ಅವಧಿಯ ನಂತರವೂ ಹೊಸ ಆಯ್ಕೆ ಆಗುವವರೆಗೆ ಕಾರ್ಯಯೋಜನೆಗಳು ಮುನ್ನಡೆಯುತ್ತಿದ್ದವು. 

* ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರುಗಳು ತಮ್ಮ ಕಾಲಾವಧಿಯಲ್ಲಿ ಹಾಕಿಕೊಂಡ ಕಾರ್ಯಯೋಜನೆಗಳು ಪೂರ್ಣಗೊಳ್ಳುತ್ತಿದ್ದವು. ಸರಕಾರದ ಅನುದಾನ ಹಾಗೂ ಸವಲತ್ತುಗಳು ಸದುಪಯೋಗವಾಗುತ್ತಿದ್ದವು.

* ಪ್ರಾತಿನಿಧಿಕ ತಜ್ಞರ ಸಮಿತಿಯ ಶಿಪಾರಸ್ಸಿನಂತೆ ಸಾಂಸ್ಕೃತಿಕ ಸಂಸ್ಥೆಗಳಿಗೆ ಧನಸಹಾಯ ಹಂಚಿಕೆಯಾಗುತ್ತಿತ್ತು. 

* ನಾಡಿನಾದ್ಯಂತ ಇರುವ ಸರಕಾರಿ ರಂಗಮಂದಿರಗಳು ಸಂಸ್ಕೃತಿ ಇಲಾಖೆಯ ನಿಯಂತ್ರಣಕ್ಕೊಳಪಡುತ್ತಿದ್ದವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಏಕರೂಪದ ರಿಯಾಯತಿ ಬೆಲೆಯ ಬಾಡಿಗೆ ವಿಧಿಸಲಾಗುತ್ತಿತ್ತು. 

* ಸರಕಾರಿ ಪ್ರಾಯೋಜಿತ ಉತ್ಸವಗಳಲ್ಲಿ ಸ್ಥಳೀಯ ಕಲಾಪ್ರತಿಭೆಗಳಿಗೆ ಹಾಗೂ ಕಲಾ ವೈಶಿಷ್ಟ್ಯಗಳಿಗೆ ಪ್ರಮುಖ ಆದ್ಯತೆ ದೊರಕುತ್ತಿತ್ತು.

* ನಾಡಿನ ಮೌಖಿಕ ಪರಂಪರೆಯ ಜಾನಪದ ಕಲೆ ಮತ್ತು ಕಲಾವಿದರಿಗಾಗಿ ಜಾನಪದ ರೆಪರ್ಟರಿ ಸ್ಥಾಪನೆಯಾಗುತ್ತಿತ್ತು.

* ಆರ್ಥಿಕ ಸಂಕಷ್ಟದಲ್ಲಿರುವ ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಲು ‘ಸಾಂಸ್ಕೃತಿಕ ಆಪತ್ ನಿಧಿ’ ಸ್ಥಾಪನೆಯಾಗುತ್ತಿತ್ತು.

* ನಾಲ್ಕು ಕಂದಾಯ ಇಲಾಖೆಗಳಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸುವುದರಿಂದ ಕೇಂದ್ರ ಕಚೇರಿಯ ಮೇಲೆ ಒತ್ತಡ ಕಡಿಮೆಯಾಗಿ ವಿಕೇಂದ್ರೀಕರಣಗೊಳ್ಳುತ್ತಿತ್ತು. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳ ಆಯೋಜನೆ ಮತ್ತು ಅನುದಾನ ಹಂಚಿಕೆಗಳು ಪ್ರಾದೇಶಿಕ ಕಚೇರಿಯಲ್ಲೇ ವ್ಯವಸ್ಥೆಯಾದರೆ ಆಯಾ ಪ್ರದೇಶದ ಜನರು ಬೆಂಗಳೂರಿನ ಕೇಂದ್ರ ಕಚೇರಿಗೆ ಅಲೆದಾಡುವುದು ತಪ್ಪುತ್ತಿತ್ತು.

* ಪ್ರಶಸ್ತಿಗಳ ವಿತರಣೆಯಲ್ಲಿ ಕಾಲಬದ್ಧತೆ ಹಾಗೂ ಏಕರೂಪತೆ ಇರುತ್ತಿತ್ತು.

ಆದರೆ.. ಅಧಿಕಾರಿಗಳ ಅವಕೃಪೆಯಿಂದಾಗಿ ಈ ಎಲ್ಲಾ ಅನುಕೂಲಗಳು ಆರು ವರ್ಷದಿಂದ ಆಗದೇ ಉಳಿದಿವೆ. ಸಾಂಸ್ಕೃತಿಕ ಲೋಕಕ್ಕೆ ಎಷ್ಟೊಂದು ನಷ್ಟವಾಗಿದೆ! ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಸಾಂಸ್ಕೃತಿಕ ಲೋಕ ತತ್ತರಿಸಿ ಹೋಗಿದೆ. ಹಣ, ಪ್ರಭಾವ, ಶಿಪಾರಸ್ಸು ಇದ್ದವರಿಗೆ ಮಾತ್ರ ಅನುದಾನ, ಧನಸಹಾಯ, ಪ್ರಾಯೋಜನೆ ಹಾಗೂ ಕಾರ್ಯಕ್ರಮಗಳು ದೊರೆಯುವ ಅನಧಿಕೃತ ವ್ಯವಸ್ಥೆಯೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರೂಪುಗೊಂಡಿದೆ. ಅದನ್ನು ಸಚಿವಾಲಯವೂ ಪೋಷಿಸುತ್ತಿದೆ. 

ಇಂತಹ ಸಂಸ್ಕೃತಿ ದ್ರೋಹದ ವಿರುದ್ಧ ಸಾಂಸ್ಕೃತಿಕ ಕ್ಷೇತ್ರದವರು ತೀವ್ರವಾಗಿ ಪ್ರತಿರೋಧ ತೋರಬಹುದಾಗಿತ್ತು ತೋರಲಿಲ್ಲ. ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ಎಲ್ಲಿ ಮಂಜೂರಾಗುವ ಧನಸಹಾಯವೂ ಬರುವುದಿಲ್ಲ, ಸಿಗಬಹುದಾದ ಸರಕಾರಿ ಕಾರ್ಯಕ್ರಮಗಳೂ ಸಿಗುವುದಿಲ್ಲ ಎಂದು ಆತಂಕಕ್ಕೊಳಗಾದ ಬಹುತೇಕ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಅಧಿಕಾರಿ ವರ್ಗದ ವಿರುದ್ದ ಧ್ವನಿ ಎತ್ತದೇ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಎಷ್ಟೋ ಸಂಸ್ಥೆಗಳ ನೇತಾರರಿಗೆ ಹೀಗೊಂದು ಸಾಂಸ್ಕೃತಿಕ ನೀತಿಯ ಸರಕಾರಿ ಆದೇಶ ಆರು ವರ್ಷದ ಹಿಂದೆಯೇ ಆಗಿದೆ ಎಂಬುದರ ಕುರಿತು ಮಾಹಿತಿಯೇ ಇಲ್ಲ. 

ಈಗ ಮತ್ತೆ ಸಾಂಸ್ಕೃತಿಕ ನೀತಿಯ ಜಾರಿಗೆ ಆದೇಶ ಮಾಡಿದ ಕಾಂಗ್ರೆಸ್ ಸರಕಾರವೇ ಬಂದಿದೆ. ಎಲ್ಲಾ ಅಕಾಡೆಮಿ, ಪ್ರಾಧಿಕಾರ, ರಂಗಾಯಣಗಳಿಗೆ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅದಕ್ಕಿಂತಲೂ ಮೊದಲು ಸಾಂಸ್ಕೃತಿಕ ನೀತಿಯ ಆದೇಶವನ್ನು  ಅನುಷ್ಠಾನಗೊಳಿಸಿ ಎಂದು ಸಂಸ್ಕೃತಿ ಇಲಾಖೆಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಾಂಸ್ಕೃತಿಕ ಕ್ಷೇತ್ರದ ಹಿರಿಯರು ಆಗ್ರಹಿಸಬೇಕಿದೆ. ಮಾಧ್ಯಮಗಳು ಈ ಕುರಿತು ವರದಿಗಳನ್ನು ಪ್ರಕಟಿಸಿ ಸರಕಾರವನ್ನು ಎಚ್ಚರಿಸಬೇಕಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುವ ಸಾಂಸ್ಕೃತಿಕ ನೀತಿಯ ಆದೇಶ ಜಾರಿಯಾಗಲೇ ಬೇಕಿದೆ. ಇಲ್ಲದೇ ಹೋದರೆ ರಾಜ್ಯೋತ್ಸವ ಎನ್ನುವುದು ಕೇವಲ ಯಾಂತ್ರಿಕ ಆಚರಣೆಯಾಗುತ್ತದೆ. ಜನಪರ ಸಾಂಸ್ಕೃತಿಕ ನೀತಿಯೊಂದು ಈ ನಾಡಿಗೆ ಇಲ್ಲದೇ ಹೋದರೆ, ಇದ್ದರೂ ಜಾರಿಯಾಗದೇ ಇದ್ದರೆ ಸಾಂಸ್ಕೃತಿಕ ಸಬಲೀಕರಣ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವೇ ಇಲ್ಲ. 

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

ಇದನ್ನೂ ಓದಿ- ಚಳುವಳಿಗಳು ಮತ್ತು ಆಧುನಿಕ ಕನ್ನಡ ಸಾಹಿತ್ಯ- ಒಂದು ಹಿನ್ನೋಟ

You cannot copy content of this page

Exit mobile version