Home ಬ್ರೇಕಿಂಗ್ ಸುದ್ದಿ ಉಚಿತ ಯೋಜನೆ- ಆರ್ಥಿಕತೆಗೆ ಹಾನಿಕಾರಕ – ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಉಚಿತ ಯೋಜನೆ- ಆರ್ಥಿಕತೆಗೆ ಹಾನಿಕಾರಕ – ಉಪ ರಾಷ್ಟ್ರಪತಿ ಜಗದೀಪ್ ಧನಕರ್

0

“ಉಚಿತ”ಗಳು ಆರ್ಥಿಕತೆಯ ಮೇಲೆ ಹಾನಿಯನ್ನುಂಟು ಮಾಡುತ್ತವೆ, ರಾಜಕೀಯ ಪಕ್ಷಗಳು ಇದರ ಬಗ್ಗೆ ಗಂಭೀರವಾಗಿ ಚರ್ಚಿಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದ್ದಾರೆ.

ಉದಯಪುರದಲ್ಲಿ ನಡೆದ 9ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್, ಇಂಡಿಯಾ ರೀಜನ್ ಕಾನ್ಫರೆನ್ಸ್‌ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಉಪ ರಾಷ್ಟ್ರಪತಿ ಈ ಹೇಳಿಕೆ ನೀಡಿದ್ದಾರೆ.

“ದೊಡ್ಡ ಮೊತ್ತದ ಉಚಿತ ಯೋಜನೆಯಗಳು ಜನರಿಗೆ ರಾಜಕೀಯ ಅಮಲನ್ನು ನೀಡಿದಂತೆ, ಇದರ ಬಗ್ಗೆ ಗಂಭೀರ ಚರ್ಚೆಯಾಗಬೇಕು. ಇದರ ಪರಿಣಾಮವಾಗಿ ಆರ್ಥಿಕತೆ ಕುಸಿದಿದೆ. ಜನರು ತಮ್ಮ ಸಾಮರ್ಥ್ಯವನ್ನು ತೋರಿಸುವ ವಾತಾವರಣವನ್ನು ಅಧಿಕಾರ ವ್ಯವಸ್ಥೆ ನೀಡಬೇಕು. ನೇರವಾಗಿ ಅವರ ಜೇಬು ತುಂಬಿಸುವುದು ಆಯ್ಕೆಯಾಗಿರಬಾರದು. ದೇಶದಲ್ಲಿ ಬಂಡವಾಳ ವೆಚ್ಚವು ಇಳಿಮುಖವಾಗುತ್ತಿದೆ. ಇದು ನಿಜವಾದ ಅರ್ಥದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ,” ಎಂದು ಧನಕರ್ ಹೇಳಿದ್ದಾರೆ.

ಕರ್ನಾಟಕದಂತಹ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ʼಉಚಿತ ಭಾಗ್ಯʼ ಯೋಜನೆಗಳನ್ನು ಘೋಸಿಸಿರುವ ಸರ್ಕಾರದ ಕ್ರಮಗಳನ್ನು ಬಿಜೆಪಿ ಟೀಕಿಸುತ್ತಿರುವ ಹಿನ್ನಲೆಯಲ್ಲಿ ಉಪ ರಾಷ್ಟ್ರಪತಿ ಈ ಹೇಳಿಕೆ ನೀಡಿದ್ದಾರೆ.

ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಉಚಿತ ಜನಪರ ಯೋಜನೆಗಳನ್ನು ʼರೇವಡಿʼ (ಮತಗಳಿಗಾಗಿ ಹಂಚುವ ಸಿಹಿತಿಂಡಿ). ಇಂತಹ ಘೋಷಣೆಗಳು ತೆರಿಗೆದಾರರ ಮೇಲೆ ಹೊರೆಯನ್ನು ಹೆಚ್ಚಿಸುತ್ತವೆ ಮತ್ತು ದೇಶವು ಸ್ವಾವಲಂಬಿಯಾಗುವುದನ್ನು ನಿಲ್ಲಿಸುತ್ತದೆ ಎಂದು ಟೀಕಿಸಿದ್ದರು.

ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಗೆ ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯಲು ಪ್ರಚಾರದ ಸಂದರ್ಭದಲ್ಲಿ ಪಕ್ಷಗಳು ನೀಡಿರುವ ʼತರ್ಕಬದ್ಧವಲ್ಲದ ಉಚಿತಗಳ ಭರವಸೆʼಗಳನ್ನು ಕಾನೂನುಬಾಹಿರಗೊಳಿಸುವಂತೆ ಕೇಳಲಾಗಿತ್ತು, ಹಲವಾರು ಸುತ್ತಿನ ವಾದಗಳ ನಂತರ ಸೆಪ್ಟೆಂಬರ್‌ನಲ್ಲಿ, ಸುಪ್ರೀಂ ಕೋರ್ಟ್ ಉಪಾಧ್ಯಾಯ ಅವರ ಈ ಅರ್ಜಿಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದು ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇದೆ.

ಕರ್ನಾಟಕದಲ್ಲಿ ಕಾಂಗ್ರೇಸ್‌ ನೀಡಿದ್ದ ಉಚಿತ ಯೋಜನೆಗಳ ಬಗ್ಗೆ ಬಿಜೆಪಿ ಅನೇಕ ರೀತಿಯಲ್ಲಿ ಟೀಕೆ ಮಾಡಿತ್ತು. ಅವುಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡಿತ್ತು. ಆದರೆ ಕಾಂಗ್ರೇಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಯೋಜನೆಗಳನ್ನು ಜಾರಿಗೊಳಿಸಿದ್ದು ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

You cannot copy content of this page

Exit mobile version