Home ಜನ-ಗಣ-ಮನ ಹೆಣ್ಣೋಟ ಗಂಗೂ ಮದುವೆ ಆಗೋಯ್ತು…

ಗಂಗೂ ಮದುವೆ ಆಗೋಯ್ತು…

0

ಗಂಗೆಯ ಕಿತಾಪತಿಗಳು ಮುಗಿಯುವುದೇ ಇಲ್ಲ. ಗಿರಿಧರ ತಂದ ಸ್ಟೀಲ್‌ ತಣಿಗೆ ಕಾಣೆಯಾಗುತ್ತದೆ. ಕದ್ದವರು ಯಾರೆಂದು ತಿಳಿಯಲು ದೇವರ ಹೆಸರಿನಲ್ಲಿ ಕಳಸ ಹಿಡಿದು ತಳಿಗೆ ತೆಗೆದಿಲ್ಲವೆಂದು ಆಣೆ ಪ್ರಮಾಣ ಮಾಡಿಸಲು ಊರು ಬೀದಿ ಸುತ್ತುತ್ತಾಳೆ. ಕೊನೆಗೂ ತಣಿಗೆ ಕಳ್ಳರನ್ನು ಹಿಡಿಯುತ್ತಾಳೆ. ಇಂತಿಪ್ಪ ಗಂಗೆಯ ಮದುವೆಗೆ ದಿನ  ನಿಗದಿಯಾಗಿರುತ್ತದೆ. ಮದುವೆ ನಡೆಯಿತೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮುವತ್ತಾರನೆಯ ಕಂತು.

ರಿಜಿಸ್ಟರ್ ಆಫೀಸಿನ ಧ್ವಜದ ಕಟ್ಟೆಯ ಮೇಲೆ, ಪರಪರನೆ ತಲೆಪರಚಿಕೊಳ್ಳುತ್ತಾ ಕುಳಿತಿದ್ದ ಗಂಗೆ “ನನ್ ತಲೆ ಯಾಕೋ ಬಿಕ್ಕನ್ ಬಿರಿಯ ಕಡ್ದು ಎಳಿತೈತೆ ವಸಿ ಹೇನ್ ಕುಕ್ಕವವೌ”ಎಂದು ಹೇಳುತ್ತಾ ಎಣ್ಣೆ ನೀವಿ ನಯವಾಗಿ ಬಾಚಿ ಹೂವು ಮುಡಿಸಿದ್ದ ತಲೆ ಕೂದಲನ್ನು ಬಿಚ್ಚ ತೊಡಗಿದ್ದಳು. ಗಂಗೆ ಕುಳಿತಿದ್ದ ಹಿಂದಿನ ಮೆಟ್ಟಿಲ ಮೇಲೆ ಕುಳಿತಿದ್ದ ಅವ್ವ ಪಟೀರನೆ ಅವಳ ತಲೆಗೊಂದು ಬಿಟ್ಟು ” ನಿನ್ ಔಸ್ ಹಾಳಾಗ ಮದ್ವೆ ಹೆಣ್ಣಿನ್ ಹುಟ್ಟಣೆ ಇದು. ನೋಡ್ದೋರು ಏನ್ ಅನ್ಕೊಳಕಿಲ. ಇನ್ನು ಚೊಲ್ ಚೊಲ್ಲಂಗಾಡ್ತಿಯಲ್ಲ ಯಾವಾಗ ಬುದ್ದಿ ಕಲಿತಿಯೋ ಕಾಣೆ” ಎಂದು ಜಡೆ ಬಿಚ್ಚುತ್ತಿದ್ದ ಅವಳ ಕೈ ತಿರುಚಿದಳು. 

ನೋವಾದ ಕೈ ಕೊಡವಿಕೊಳ್ಳುತ್ತಾ ಮುನಿಸಿನಿಂದ ಮಾರು ದೂರ ಸರಿದು ಕೂತ ಗಂಗೆ “ಯಾರೇನಾರ ಅನ್ಕೊಳ್ಳಿ ನನ್ಗೇನಾಗ್ಬೇಕು…. ನನ್ನ ತಲೆ ನಾನ್ ಕೆರ್ಕೊತಿನಿಪ… ನಿನಗೆ ಆದ್ರೆ  ತಲೆಕುಕ್ಕೊಡು ಇಲ್ದಿದ್ರೆ ಆಚೆ ಮನೆ ಅತ್ತ್ಯವ್ವುನ್ಂತವ್ಲೆ ಕುಕ್ಕುಸ್ಕೊತಿನಿ ಬುಡು ಅದುಕ್ಯಾಕೆ ಹಂಗಾಡ್ತಿ” ಎಂದು ಪಕ್ಕದಲ್ಲಿಯೇ ಕುಳಿತಿದ್ದ ಸೋದರತ್ತೆಯತ್ತ ತಿರುಗಿ “ತುಂಗತ್ತೆ ನೀನಾರ ಒಂದೀಟ್ ಹೇನ್ ನೋಡ್ಕೊಡು ” ಎಂದು ಗೋಗರೆದಳು. ಗಂಗೆಯನ್ನು ಮೃದುವಾದ ಮಾತಿನಿಂದ ಓಲೈಸಿದ ತುಂಗವ್ವ, “ಈಗ ವಳಿಕ್ಕರಿತರೆ ಕನ್ ಗಂಗೂ ಅವರು ಕರ್ದಾಗ ತಲೆ ಬುಟ್ಕೊಂಡು ಒಳ್ಳೆ ಹೆಮ್ಮಾರಿಹಂಗ್ ಹೋದ್ಯಾ ಒಂದೀಸೊತ್ತು ಇರು. ಹೋಗಿ ಹಾರ ಬದ್ಲಾಯಿಸ್ಕೊಂಡು ಬಂದುಬುಡನ ಆಮೇಲೆ ಹೇನ್ ನೋಡ್ಕೊಟ್ಟೇನು” ಎಂದು ಗಂಗೆಯನ್ನು ಸಮಾಧಾನಿಸಿದಳು.

 ಅಷ್ಟರಲ್ಲಿ ರಿಜಿಸ್ಟರ್ ಆಫೀಸಿನ ಒಳಗಿನಿಂದ ಈಚೆ ತಲೆ ಹಾಕಿದ  ಚಂದ್ರಹಾಸ “ವಳಿಕ್ಬಂದು ನಿನ್ ಮಗ್ಳುಗೆ ಸೈನ್ ಹಾಕಕೇಳವ್ವ…” ಎಂದು ಕೂಗಿದ. “ಊದ್ಲು ನನ್ ಮಗ, ಹೆಂಡ್ ಗುಡುಕ್ ನನ್ಮಗ, ಮೈಗಳ್ ನನ್ಮಗ, ಊರ್ತುಂಬಾ ಚಪ್ರಹಾಕ್ಸಿ  ಬಾಜ ಭಜಂತ್ರಿ ಬಾರ್ಸಿ ಇರೊಬ್ಳು ತಂಗಿನ ನೂರಾರು  ಜನುದ್ಮುಂದೆ ಧಾರೆ ಎರ್ಕೊಡ್ತಿರೋನಂಗಾಡ್ತನೆ. ಅಲ್ಲ ಅತ್ಯವ್ವ, ಮನ್ತುಂಬಾ ಇರೋ ಗಂಡ್ಮಕ್ಳು ಅಂಡ್ಬಗ್ಸಿ ಅಪ್ಪುನ್ಜೊತೆ ಹೆಗ್ಲುಕೊಟ್ಟು ದುಡ್ದು ಸಂಪಾದ್ನೆ ಮಾಡಿದಿದ್ರೆ ಇವತ್ತು  ಲಕ್ಷ್ಮಕ್ಕನ ಹೆಸ್ರಲ್ಲಿ ಬುಟ್ಕೊಂಡಿದ್ದ ಮುತ್ತಿನಂತ ಹಸ ಮಾರಿ ನನ್ನ್ ಮದ್ವೆ ಮಾಡ ಪ್ರಸಂಗ ಬತ್ತಿತ ಹೇಳು. 

“ಸ್ವಾರ್ಥ್ ನನ್ನ್ಮಕ್ಳು ಆಸ್ತಿ ಎಲ್ಲಿ ಕೈ ಬುಟ್ಟೋಯ್ತದೋ ಅಂತ ಯಾವನ್ನೊ ಹಿಡ್ಕೊಬಂದು ನಿಂಗೆ ಗಂಟಾಕಿ  ಕೈ ತೊಳ್ಕತವ್ರಲವ್ವ…. ಅಂತ ಓಣಿ ಮನೆ ಕೊಪ್ಲಮ್ಮ ನನ್ನೋಡಿ ಎಷ್ಟು ಹೊಟ್ಟೆ ಉರ್ಕೊತಿತ್ತು ಗೊತ್ತ” ಎಂದು ಹನಿಗಣ್ಣಾದಳು.

ಗಂಗೆಯ ಮಾತು ಕೇಳಿ ತುಂಗತ್ತೆಯ ಕರುಳು ಕೂಡ ಚುರ್ ಎಂದಿತಾದರೂ ಅದನ್ನು ತೋರಗೊಡದೆ “ಹಂಗೇನಿಲ್ಲಕಂತೆ ಬಾ ಗಂಗು ತಡ ಆಯ್ತದೆ” ಎಂದು ಹೇಳಿ ರಿಜಿಸ್ಟರ್ ಆಫೀಸಿನ  ಒಳಗೆ ಕರೆದುಕೊಂಡು ಹೋದಳು. 

ಮುಖಕ್ಕೆ ಮುಖ ಕೊಟ್ಟು ಎಂದೂ ಮೋಹನನನ್ನು ನೋಡಲಿಚ್ಚಿಸದ ಗಂಗೆ ಅಂದು ಕೂಡ ದುಮುಗುಡುತ್ತಲೇ ಅವನೆದುರು ಬಂದು ತಲೆತಗ್ಗಿಸಿ ನಿಂತಳು. ಹಳೇ ನಾರಿಪುರದ ಎಂಟತ್ತು ಹಿರಿಯರ ಸಮ್ಮುಖದಲ್ಲಿ  ಮೋಹನ, ಗಂಗೆಯ ಕೊರಳಿಗೆ ಹಾರ ಹಾಕಿ, ಚಂದ್ರಹಾಸನ ಹೆಂಡತಿ ಯಶೋಧೆಯ ಜಡೆಕುಪ್ಪಿಗೆ ಮುರಿಸಿ ಮಾಡಿಸಿದ್ದ ತಾಳಿಯನ್ನು ಅವಳ ಕುತ್ತಿಗೆಗೆ ಕಟ್ಟಿ ಗಂಗೆಯತ್ತ ಮಂದಹಾಸ ಬೀರಿದ.

ಕಿರುಗಣ್ಣಿನಲ್ಲಿಯೇ ಅವನ ನಗುವನ್ನು ಗಮನಿಸಿದ ಗಂಗೆ “ಬಡ್ಡಿ ಮಗ ಬಿಟ್ಟಿ ಮದ್ವೆ ಮಾಡ್ಕೊಂಡು ಸಾದ್ನೆ ಮಾಡ್ದವ್ನಂಗೆ ನೆಗಾಡ್ತನೆ” ಎಂದು ಪಕ್ಕದಲ್ಲಿ ನಿಂತಿದ್ದ ತುಂಗತ್ತೆಯ ಮಗಳು ಶೋಭಿಯ ಕಿವಿಯಲ್ಲಿ ಗೊಣಗಿದಳು. ಗಂಗೆಯ ಮಾತು ಕೇಳಿಸಿಕೊಂಡ ಶೋಭಿ “ಅವ್ರೀಗ ನಿನ್ ಗಂಡ ಗಂಗೂ ಮರ್ಯಾದೆ ಕೊಟ್ಟು ಮಾತಾಡು. ವತ್ತಿಲೇ ಅವ್ರೆ ಕೇಳ್ ಗಿಳುಸ್ಕೊಬುಟ್ಟಾರು. ಈಗ್ಲು ಗಂಡ್ಬೀರಿ ಹಂಗಾಡ್ಬೇಡ” ಎಂದು ತಿವಿದು ಸುಮ್ಮನಾಗಿಸಿದಳು. ಹೀಗೆ ಒಂದತ್ತು ಹದಿನೈದು ನಿಮಿಷದೊಳಗೆ ನಡೆದು ಹೋದ ಊರ ಮೊತ್ತಮೊದಲ ರಿಜಿಸ್ಟರ್ ಮದುವೆಗೆ ಸಾಕ್ಷಿಯಾದ ಹಳೇ ನಾರೀಪುರದ ಜನ,  ಸಾಕವ್ವ ಕೊಟ್ಟ ಮೈಸೂರುಪಾಕು ತಿಂದು ಬಾಯಿ ಸಿಹಿ ಮಾಡಿಕೊಂಡು ಗಂಗೆಯ ಹಣೆಬರಹ ಕಂಡು ಲೊಚಗುಟ್ಟುತ್ತಾ ಊರತ್ತ ಹೆಜ್ಜೆಹಾಕಿದರು.

ದಿನ, ಗಂಟೆ, ಘಳಿಗೆ ಯಾವುದನ್ನು  ನೋಡಲು ಸಮಯ ಕೊಡದೆ, ನಿಂತ ಕಾಲಿನ ಮೇಲೆ ಹಠ ಹಿಡಿದು ಮದುವೆ ಮಾಡಿ ಮುಗಿಸಿದ ಗಂಡು ಮಕ್ಕಳ ಬಗ್ಗೆ ಒಳಗೊಳಗೆ  ಅಸಮಧಾನಗೊಂಡಿದ್ದ ಅವ್ವ, ಅಪ್ಪನನ್ನು ಒಂದು ಬದಿಗೆ ಕರೆದು “ಈಗ್ಲಾದ್ರು ಹೋಗಿ ಪ್ರಸ್ತುಕ್ಕೆ ದಿನ ಗುರ್ತಾಕುಸ್ಕೊಂಡು ಬನ್ನಿ. ಬಾಳಿ ಬದ್ಕೊ ಮಕ್ಕಳು ಚನ್ನಾಗ್ ಹೊಂದ್ಕೊಂಡು ಬಾಳ್ವೆ ಮಾಡ್ಲಿ” ಎಂದು ಹೇಳಿ ಮಾದಲಾಪುರದ ಸಂತೆ ಮಾಳದ ಆಚೆತುದಿಗೆ ಇದ್ದ  ಜಾಗ್ರಯ್ಯನ ಪಂಚಾಂಗದ ಮನೆಗೆ ಕಳುಹಿಸಿದಳು.

ಪಂಚಾಂಗ ನೋಡಿ ದಿನ ಗುರುತು ಹಾಕಿಕೊಟ್ಟ ಜಾಗ್ರಯ್ಯ, ಹುಡುಗನ ಏಕಾಮುಖಿಯನ್ನು ವಿಚಾರಿಸಿ “ಅವನ ಜಾತಕನಾದ್ರು ನೋಡಿಸಿದ್ರ ಬೋಪಯ್ಯನೋರೆ” ಎಂದು ಕೇಳಿದ. ಜಾಗ್ರಯ್ಯನ ಮಾತಿಗೆ ತಲೆಕೆಳಗೆ ಹಾಕಿದ ಅಪ್ಪ “ಎಲ್ಲಾ ನನ್ನ ಕೈ ಮೀರಿ ನಡಿತೈತೆ ಜಾಗ್ರಯ್ಯನೋರೆ. ನಾಲಿಗೆ ಸೇದೋದೊನಂಗೆ ಬಾಯ್ಮುಚ್ಕೊಂಡ್ ನೋಡ್ತಾ ಕೂತಿದ್ದೀನಿ. ಆ ಪರಮಾತ್ಮ ಆ ಹುಡ್ಗಿ  ಹಣೆಲಿ  ಏನ್ ಬರ್ದೌನೋ ಕಾಣೆ”  ಎಂದು ಹೇಳಿ ಒಂದು ದೀರ್ಘವಾದ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟನು. 

 ತನಗೆ ಯಾರು ಇಲ್ಲವೆಂದು ಹೇಳಿಕೊಂಡಿದ್ದ ಮೋಹನ, ಒಂದು ವಾರದ ಮಟ್ಟಿಗೆ  ಇಲ್ಲಿಯೇ ಇದ್ದು,  ಸೀದಾ ಪೂನಕ್ಕೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವುದು, ಎಂಬ ತನ್ನ ನಿರ್ಧಾರವನ್ನು ಆಗಲೇ ಚಂದ್ರಹಾಸನ ಕಿವಿಗೆ ಹಾಕಿದ್ದ. ಹಾಗಾಗಿ ಮನೆಯವರು ಕೂಡ ಯಾವ ಧಾವಂತವೂ ಇಲ್ಲದೆ ಜಾಗ್ರಯ್ಯ ಗುರುತು ಹಾಕಿಕೊಟ್ಟಂತೆ ಒಂದೆರಡು ದಿನ ಬಿಟ್ಟು ಶುಭ ಶುಕ್ರವಾರದಂದೇ ಪ್ರಸ್ತದ ಶಾಸ್ತ್ರ ಮಾಡುವುದೆಂದು ನಿರ್ಧರಿಸಿ, ಹೊಸ ಅಳಿಯನ ಆರೈಕೆಗೆ ಟೊಂಕಕಟ್ಟಿ ನಿಂತರು.

ಮದುವೆ ಮಾಡಿಕೊಂಡು ಬಂದ ಮರುದಿನ ಮೋಹನ, ಗಂಗೆ ಒಬ್ಬಳೆ ಇದ್ದ ಘಳಿಗೆ ನೋಡಿಕೊಂಡು “ಇವತ್ತು ಮಧ್ಯಾಹ್ನ ಸೋಪನ್ ಪೇಟೆಗೆ ಹೋಗಿ ಪಿಕ್ಚರ್ ನೋಡ್ಕೊಂಡ್ ಬರೋಣ ಬನ್ನಿ ಗಂಗೂ” ಎಂದು ನಯವಾಗಿ ಪಿಸುಗುಟ್ಟಿದ. ಚಿಕ್ಕಂದಿನಿಂದಲೂ ಸಿನಿಮಾ ಎಂದರೆ ಹುಚ್ಚೆದ್ದು ಕುಣಿಯುತ್ತಿದ್ದ ಗಂಗೆಗೆ ಒಂದು ಘಳಿಗೆ ಮನಸ್ಸು ಅರಳಿ ನಿಂತಿತಾದರೂ, ಕೂಡಲೇ ಎಚ್ಚೆತ್ತು ಕೊಂಡವಳಂತೆ “ಹಾ… ಒಂಟಿ ಹೆಣ್ಣುನ್ನ  ಹಂಗ್ ಕರ್ಯಕೆ ನಾಚ್ಕೆ ಆಗಕಿಲ್ವ ನಿಮಗೆ.  ಹೋಗ್ ಹೋಗಿ ಕ್ಯಾಮೆ ನೋಡಿ” ಎಂದು ಮುಖದ ಮೇಲೆ ಹೊಡೆದಂತೆ ಹೇಳಿ ಬಿರ್ರನೇ ಅಡುಗೆ ಕೋಣೆಗೆ ಬಂದಳು. ಅವಳು ಬಂದ ಬಿರುಸು ಕಂಡ ಯಶೋಧೆ ” ಯಾಕವ್ವ ಗಂಗೂ ಏನಾಯ್ತು ಯಾಕ್ ಹಂಗ್ ದುಮ್ಗುಡ್ತಿದ್ದಿ” ಎಂದು ಕೇಳಿದಳು. ನೋಡ್ರತ್ಗೆ ನಾನೊಬ್ಳೆ ಅವಯ್ಯುನ್ ಕುಟ್ಟೆ ಪಿಚ್ಚರ್ಗೋಗ್ಬೇಕಂತೆ  ಥೂ.. ಹಂಗ್ ಕರಿಯಕ್ಕೆ ನಾಚ್ಕೆ ಆಗಕಿಲ್ವಾ ಅವನಿಗೆ” ಎಂದು ಮುಖ ಸಿಂಡರಿಸಿ ಕೊಂಡಳು. 

ಗಂಗೆಯ ಮಾತು ಕೇಳಿ ಅಡುಗೆ ಮನೆಯ ತುಂಬ ಉರುಳಾಡಿಕೊಂಡು ನಕ್ಕ ಯಶೋಧೆ “ಅಲ್ಲಕನ್ ಗಂಗೂ ದಡ್ ದಡ್ಡಿಯಂಗಾಡ್ತಿಯಲ್ಲ ಯಾವಾಗ್ ಬುದ್ದಿ ಕಲಿತಿ. ಹೆಡ್ತಿನ ಪಿಚ್ಚಾರ್ಗ್ ಕರಿದೆ ಬ್ಯಾರೆ ಮನೆ ಹೆಣ್ಣುಮಕ್ಕಳುನ್ನ್ ಕರ್ದಾರೆನೆ. ತಾಲಿ ಕಟ್ಟುದ್ ಮ್ಯಾಲೆ ಗಂಡ ಹೆಂಗ್ ಹೇಳ್ತನೋ ಹಂಗ್ ಕೇಳ್ ಬೇಕು.  ಗಂಡ ಹೆಡ್ತಿ ಅಂದ್ಮೇಲೆ ಸುಖ-ದುಃಖನೆಲ್ಲ ಒಟ್ಟಿಗೆ ಅಂಚ್ಕೊಂಡು ನಡೀಬೇಕು ಕನವ. ಒಳ್ಳೆ ಗಂಡ ಸಿಕ್ಕವ್ನೆ ಖುಸಿಯಾಗಿರು. ನೋಡು ಮದ್ವೆಯಾಗಿ ಈಸ್ ವರ್ಸ ಕಳುದ್ರು ಒಂದಪ್ಪನಾದ್ರು ನಿಮ್ಮಣ್ಣ ನನ್ನ ಎಲ್ಲಾರೂ ಕರ್ಕೊಂಡು ಹೋಗವ್ರ ಹೇಳು.  ನಿನ್ನ್ ಅದೃಷ್ಟ ನೋಡು, ಸಿನಿಮಾ, ಪೂನ ಅಂತ ಎಲ್ಲಾ ಕಡೆ ಸುತ್ತಾಡೋ ಭಾಗ್ಯವು ಬಂದೈತೆ. ಸುಮ್ನೆ ಅವರ್ಜೊತೆ ಹೋಗ್ಬಾ  ಎಂದು ಬುದ್ದಿವಾದ ಹೇಳಿ  ಒಪ್ಪಿಸಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನು ಓದಿದ್ದೀರಾ?- ಅರಸಿಕಟ್ಟೆ ಅಮ್ಮುನ್ ಪಾದುಕ್ಕೆ ಶರಣೋ ಶರಣು…

You cannot copy content of this page

Exit mobile version