ನವದೆಹಲಿ: ಆಮ್ ಆದ್ಮಿ ಪಕ್ಷದ ಕಚೇರಿಗೆ ರಾಷ್ಟ್ರ ರಾಜಧಾನಿಯಲ್ಲಿ ಸ್ಥಳ ಮಂಜೂರು ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರವು ಜುಲೈ 25ರೊಳಗೆ ತನ್ನ ನಿರ್ಧಾರ ಪ್ರಕಟಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
ಎಎಪಿ ಪಕ್ಷವು ಸದ್ಯ ರೋಸ್ ಅವೆನ್ಯೂನಲ್ಲಿ ತನ್ನ ಕಚೇರಿಯನ್ನು ಹೊಂದಿದೆ. ಈ ಜಾಗದಲ್ಲಿ ದೆಹಲಿ ಹೈಕೋರ್ಟ್ ವತಿಯಿಂದ ನ್ಯಾಯಾಂಗ ಇಲಾಖೆಯ ಕಟ್ಟಡಗಳ ನಿರ್ಮಾಣ ನಡೆಯುವುದರಿಂದ ಈ ಸ್ಥಳವನ್ನು ಆ. 10ರೊಳಗೆ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇದೇ ವಿಷಯವಾಗಿ ಜೂನ್ 5ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೇಂದ್ರದ ಪ್ರತಿಕ್ರಿಯೆಗೆ ಆರು ವಾರಗಳ ಗಡುವು ನೀಡಿತ್ತು. ಆದರೆ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಪರ ವಕೀಲರು ಇನ್ನೂ ನಾಲ್ಕು ವಾರಗಳ ಕಾಲಾವಕಾಶ ಕೋರಿದರು. ಸಂಸದರಿಗೆ ವಸತಿ ಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿರುವುದರಿಂದ, ಹೆಚ್ಚಿನ ಸಮಯ ಬೇಕು ಎಂದು ಕೇಳಿಕೊಂಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಎಎಪಿ ಪರ ಹಿರಿಯ ವಕೀಲ, ‘ಪಕ್ಷ ಸದ್ಯ ಇರುವ ಕಚೇರಿಯನ್ನು ತೆರವುಗೊಳಿಸಲು ನ್ಯಾಯಾಲಯ ಕಾಲಾವಕಾಶ ನಿಗದಿಪಡಿಸಿದೆ. ಆದರೆ ಅದಕ್ಕೆ ಯಾವುದೇ ಪರಿಹಾರೋಪಾಯವನ್ನು ನೀಡಿಲ್ಲ. ದೆಹಲಿ ಹೈಕೋರ್ಟ್ನ ನಿರ್ದೇಶನಕ್ಕೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಸ್ಥಳ ಹುಡುಕಲು ಮಾರ್ಗೋಪಾಯ ಕಂಡುಕೊಂಡಿಲ್ಲ’ ಎಂದರು.
‘ಹಿಂದಿನ ಆದೇಶದಲ್ಲಿ ನೀಡಿದ ಗಡುವು ಬುಧವಾರ ಕೊನೆಗೊಳ್ಳಲಿದೆ. ಅಧಿಕಾರಿಗಳಿಗೆ ಜಾಗ ಮಂಜೂರು ಮಾಡಲು ತಡೆಯುತ್ತಿರುವ ಶಕ್ತಿಯಾದರೂ ಯಾವುದು ಎಂದು ಎಎಪಿ ಪರ ವಕೀಲರು ಪ್ರಶ್ನಿಸಿದರು.
ವಾದ ಆಲಿಸಿದ ನ್ಯಾ. ಸಂಜೀವ್ ನರುಲಾ ಮಾತನಾಡಿ, ‘ಪಕ್ಷಕ್ಕೆ ಜಾಗ ಮಂಜೂರು ಮಾಡಲು ವಸತಿ ಇಲಾಖೆಯು ಸದ್ಯ ಕೇಳಿರುವ ನಾಲ್ಕು ವಾರಗಳಿಗಿಂತ ಹೆಚ್ಚಿನ ಕಾಲಾವಕಾಶವನ್ನು ನೀಡಲು ಸಾಧ್ಯವಿಲ್ಲ. ಅಷ್ಟರೊಳಗೆ ಜಾಗ ಮಂಜೂರು ಮಾಡಬೇಕು’ ಎಂದು ನಿರ್ದೇಶಿಸಿದರು.
‘ಒಂದು ರಾಷ್ಟ್ರೀಯ ಪಕ್ಷವು ತನ್ನ ಕಾರ್ಯಾಚರಣೆಗೆ ಅಗತ್ಯವಿರುವ ಜಾಗವನ್ನು ದೆಹಲಿಯಲ್ಲಿ ಪಡೆಯಲು ಅರ್ಹ. ಯಾವುದೇ ಒತ್ತಡ ಅಥವಾ ಜಾಗ ಇಲ್ಲ ಎನ್ನುವುದು ತಿರಸ್ಕರಿಸಲು ಕಾರಣವಲ್ಲ. ಒಂದೊಮ್ಮೆ ಎಎಪಿಗೆ ಜಾಗ ಮಂಜೂರು ಮಾಡಲು ಕೇಂದ್ರ ತಿರಸ್ಕರಿಸಿದರೆ, ಎಎಪಿ ಪಕ್ಷವು ಕಾನೂನಿನ್ವಯ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅರ್ಹ’ ಎಂದು ನ್ಯಾಯಾಲಯ ಈ ಹಿಂದಿನ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.