ಜೂನ್ 19 ರ ಗುರುವಾರ ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನಲ್ಲೇ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಮುಂದಿನ ದಿನಗಳಲ್ಲಿ ರಾಜಕೀಯ ತಿರುವು ಪಡೆಯುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರ ಒತ್ತಾಯದ ಮೇರೆಗೆ ನಂದಿಬೆಟ್ಟದ ಸಂಪುಟ ಸಭೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಛೇರಿಯಿಂದ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸುಮಾರು 6000 ಕೋಟಿ ರೂ.ಗಳ ವಿವಿಧ ಯೋಜನೆಗಳ ವಿಶೇಷ ಪ್ಯಾಕೇಜ್ನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲು ನಿರ್ಣಯಿಸಲಾಗಿತ್ತು. ಕ್ಷೇತ್ರವಾರು ತಯಾರಿಸಿದ ಈ ಪ್ಯಾಕೇಜ್ಗಳಿಗೆ ಹಣಕಾಸು ಇಲಾಖೆಯಿಂದ ಇನ್ನೂ ಪೂರ್ವಾನುಮತಿ ಲಭಿಸಿರಲಿಲ್ಲ.
ಹೀಗಾಗಿ ಯೋಜನೆಯನ್ನು ಘೋಷಣೆ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನೂ ಒಳಗೊಂಡಂತೆ ಎರಡು ಪ್ರತ್ಯೇಕ ನಿಯೋಗಗಳು ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದಿದ್ದರು. ಜತೆಗೆ ಬೇರೆ ಜಿಲ್ಲೆಗೆ ಸಂಬಂಧಪಟ್ಟ ಯೋಜನೆಗಳೂ ಸೇರಿದ್ದವು. ಇವೆಲ್ಲವೂ ಹಣಕಾಸು ಇಲಾಖೆಯ ಅನುಮತಿ ಸಿಗದೇ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣದಿಂದ ನಂದಿ ಬೆಟ್ಟದ ಸಂಪುಟ ಸಭೆ ಮುಂದೂಡಲಾಗಿದೆ.