ಬೆಂಗಳೂರು : ರಾಜ್ಯದಲ್ಲಿ ಮತೀಯ ಸಂಘರ್ಷ ತಡೆಗಟ್ಟಲು ದ್ವೇಷ ಭಾಷಣಕ್ಕೆ (Hate Speech) ಕಡಿವಾಣ ಹಾಕಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ. ಸಿಎಂ ನೇತೃತ್ವದ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ವಿಧೇಯಕವೊಂದಕ್ಕೆ ಅನುಮೋದನೆ ಸಿಕ್ಕಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವ ಹೆಚ್.ಕೆ ಪಾಟೀಲ್ ದ್ವೇಷಭಾಷಣ ತಡೆಗಟ್ಟುವ ಮಸೂದೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು ಮಸೂದೆಯ ಅಂಶಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇದೆ ಎಂದರು.
ವಿಧೇಯಕದಲ್ಲಿ ಏನಿರಬಹದು
ದ್ವೇಷ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮ ಜಾರಿ ಕೈಗೊಳ್ಳಲಾಗುತ್ತದೆ. ದ್ವೇಷ ಭಾಷಣವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಜಾತಿ, ಧರ್ಮ, ಜನಾಂಗ, ಭಾಷೆ ಆಧರಿಸಿ ದ್ವೇಷ ಹರಡದಂತೆ ತಡೆಯಲು ಈ ವಿಧೇಯಕ ತರಲಾಗುತ್ತಿದೆ.
ಒಂದು ವೇಳೆ ದ್ವೇಷ ಭಾಷಣ ಮಾಡಿದ ಆರೋಪ ಸಾಬೀತಾದರೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ₹5,000 ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ.
‘ದ್ವೇಷ ಭಾಷಣ’ ಅರ್ಥವೇನು ಯಾರು ಹೇಗೆ ಎಲ್ಲಿ ?
ಧರ್ಮ, ಜನಾಂಗ, ಜಾತಿಗೆ ಹಾನಿ ಮಾಡುವಂಥಾ ಮಾತು, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ಮಾತಿನಿಂದಲೇ ಹಾನಿ ಮಾಡುವುದು, ದ್ವೇಷಕ್ಕೆ ಪ್ರೇರೇಪಣೆ ನೀಡುವಂಥಾ ಮಾತಾಡುವುದು ಅಪರಾಧ ಎನಿಸಿಕೊಳ್ಳುತ್ತದೆ. ಆಕ್ರಮಣಕಾರಿ ಭಾಷೆ ಬಳಕೆ ಮಾಡಿ, ದ್ವೇಷವನ್ನು ಪ್ರಚಾರ ಮಾಡುವುದು ಕೂಡ ದ್ವೇಷ ಭಾಷಣದ ಪ್ರಮುಖ ಆಯಾಮವಾಗಿದೆ.
