ವಿಪಕ್ಷ ಶಾಸಕರ ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗುವುದು. ಅಮಾನತು ಪ್ರಕ್ರಿಯೆಯ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ರಾಜ್ಯಪಾಲರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಖಾದರ್ ಅವರಿಗೆ ಪತ್ರ ಬರೆ ದಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಪ್ರಜಾಪ್ರಭುತ್ವದ ಮೂಲ ಮೌಲ್ಯಗಳನ್ನು ರಾಜ್ಯದಲ್ಲಿ ಎತ್ತಿ ಹಿಡಿಯುವ ಸಲುವಾಗಿ ಹಾಗೂ ಜನರ ಪ್ರತಿನಿಧಿಗಳ ಅವರ ಜವಾ ಬ್ದಾರಿ ನಿರ್ವಹಿಸಲು ಅನುಕೂಲ ಆಗುವಂತೆ ಅಮಾನತು ಆದೇಶ ಹಿಂಪಡೆಯಬೇಕೆಂದು ಬಿಜೆಪಿ ನಿಯೋಗ ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದು, ಅವರ ಮನವಿಯನ್ನು ಪರಿಶೀಲಿಸುವಂತೆ ಸಲಹೆ ನೀಡಿತ್ತು. ಅಲ್ಲದೆ, ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ತಮ್ಮ ಗಮನಕ್ಕೆ ತರುವಂತೆಯೂ ಸೂಚಿಸಿದ್ದರು.
ಇದಕ್ಕೆ ಉತ್ತರಿಸಲು ಸ್ಪೀಕರ್ ಯುಟಿ ಖಾದರ್ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ಕರಡು ಪ್ರತಿಯಲ್ಲಿ ಮಾ.21ರಂದು ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳನ್ನು ಪ್ರತಿಯೊಂದನ್ನೂ ಉಲ್ಲೇಖಿಸಿದ್ದಾರೆ. ಅಲ್ಲದೆ ಶಾಸಕರ ಅಮಾನತು ಆದೇಶ ಹಿಂಪಡೆಯುವ ಅಧಿಕಾರ ನನಗಿಲ್ಲ. ಅಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಸದನದ ನಿಯಮ 348ರ ಮೇರೆಗೆ ಪ್ರಸ್ತಾವನೆಯನ್ನು ಮಂಡಿಸಿದ್ದು, ಅದು ಸದನದ ನಿರ್ಣಯವಾಗಿದೆ ಎಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಆದೇಶ ಹಿಂಪಡೆಯುವ ಅಧಿಕಾರ ನನಗಿಲ್ಲ. ಸದನವೇ ಅದನ್ನು ನಿರ್ಣಯಿಸಬೇಕಾಗುತ್ತದೆ. ಆದರೂ ತಾವು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕಾನೂನಾತ್ಮಕ ಅಂಶಗಳನ್ನು ಮತ್ತೂಮ್ಮೆ ಪರಿಶೀಲಿಸಲಾಗುವುದು ಎಂಬ ಉತ್ತರವನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಮೇ 8 ರಂದು ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರ ಕಂಡು ನಡೆದ ಘಟನಾವಳಿಗಳನ್ನು ವಿವರಿಸಿದ್ದಾರೆ. ಹಾಗೆಯೇ ಸ್ಪೀಕರ್ರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದರು. ಆದರೆ ಸ್ಪೀಕರ್ ಯಾವುದೇ ನಿರ್ಣಯ ಕೈಗೊಂಡಿರದ ಕಾರಣ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ, ಅಮಾನತು ಆದೇಶ ಹಿಂಪಡೆ ಯುವಂತೆ ಸರಕಾರ ಹಾಗೂ ಸ್ಪೀಕರ್ಗೆ ನಿರ್ದೇಶಿಸಲು ಮನವಿ ಮಾಡಿದ್ದರು.