ದೆಹಲಿ: ಪ್ರಧಾನಿ ಮೋದಿಯವರ ಸ್ವಂತ ರಾಜ್ಯ ಹಾಗೂ ದಶಕಗಳಿಂದ ಬಿಜೆಪಿ ಆಳ್ವಿಕೆಯಲ್ಲಿರುವ ಗುಜರಾತ್ನಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿದೆ ಎಂಬುದನ್ನು ಸಾಬೀತುಪಡಿಸುವ ಘಟನೆಯಿದು.
21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್, ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ. ಸೂರತ್ ಜಿಲ್ಲೆಯ 33 ಗ್ರಾಮಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಈ ಟ್ಯಾಂಕ್, ಆಳುವವರ ಭ್ರಷ್ಟಾಚಾರದ ಕಾರಣದಿಂದ ನೆಲಸಮವಾಗಿದೆ. ಟ್ಯಾಂಕ್ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಗಾಯ್ಪಗ್ಲಾ ಸಮೂಹ ನೀರು ಸರಬರಾಜು ಯೋಜನೆಯಡಿ ಮಾಂಡ್ವಿ ತಾಲೂಕಿನ ತಾಡ್ಕೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 11 ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯ ಹಾಗೂ 15 ಮೀಟರ್ ಎತ್ತರದೊಂದಿಗೆ ಈ ಟ್ಯಾಂಕ್ ನಿರ್ಮಿಸಲಾಗಿತ್ತು. ಸೋಮವಾರ ಪ್ರಾಯೋಗಿಕ ಪರೀಕ್ಷೆ (ಟ್ರಯಲ್ ರನ್) ನಡೆಸುತ್ತಿದ್ದಾಗ, ಭಾರಿ ಶಬ್ದದೊಂದಿಗೆ ನೀರಿನ ಟ್ಯಾಂಕ್ ಕುಸಿದು ಬಿದ್ದಿದ್ದು, ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾದರು.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನೀರಿನ ಶೇಖರಣಾ ಸಾಮರ್ಥ್ಯವನ್ನು ಪರೀಕ್ಷಿಸಲು, ಟ್ಯಾಂಕ್ನಲ್ಲಿ ಸುಮಾರು 9 ಲಕ್ಷ ಲೀಟರ್ ನೀರನ್ನು ತುಂಬಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಹಠಾತ್ತನೆ ಇಡೀ ಕಟ್ಟಡವು ಇಸ್ಪೀಟ್ ಎಲೆಗಳ ಮನೆಯಂತೆ ಕುಸಿದು ಬಿದ್ದಿತು. ಈ ಅವಘಡದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ನೀರಿನ ಟ್ಯಾಂಕ್ ಇನ್ನೂ ಉದ್ಘಾಟನೆಗೊಂಡಿರಲಿಲ್ಲ ಮತ್ತು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಿರಲಿಲ್ಲ; ಹೀಗಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
