Saturday, May 4, 2024

ಸತ್ಯ | ನ್ಯಾಯ |ಧರ್ಮ

ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಕುಷ್ಟಗಿ: ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗಡಚಿಂತಿ ಮೊದಲಾದ ಗ್ರಾಮಗಳ‌ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಗಂಡು ಚಿರತೆ, ಮಾಲಗಿತ್ತಿ ಅರಣ್ಯ ಪ್ರದೇಶದ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಈ ಚಿರತೆ ಊರಿನ ನಾಯಿ, ಹಸು ತಿಂದು ಹಾಕಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿತ್ತು. ಇದರ ಹಾವಳಿಗೆ ಮಾಲಗಿತ್ತಿ, ಗಡಚಿಂತಿ, ನಾಗೇಂದ್ರಗಡ ಸುತ್ತಮುತ್ತಲಿನ ಗ್ರಾಮಸ್ಥರು ಕಂಗೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ದನಗಾಯಿ, ಕುರಿಗಾಯಿಗಳು ಅರಣ್ಯ ಪ್ರದೇಶದಲ್ಲಿ ಕುರಿ, ದನ ಮೇಯಿಸುವುದಕ್ಕೆ, ರೈತರು ಒಬ್ಬಂಟಿಯಾಗಿ ಜಮೀನುಗಳಿಗೆ ಹೋಗುವುದಕ್ಕೂ ಜೀವ ಭಯ ಸೃಷ್ಟಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ನಾಗೇಂದ್ರಗಡ, ಗಡಚಿಂತಿ, ಮಾಲಗಿತ್ತಿ ಗುಡ್ಡದಲ್ಲಿ ಚಿರತೆಗೆ ಬೋನಿನ ವ್ಯವಸ್ಥೆ ಮಾಡಿದ್ದರು. ಬೋನು ಇಟ್ಟು ಮೂರು ದಿನಗಳಲ್ಲಿ ಚಿರತೆ ಸೆರೆಯಾಗಿದ್ದು, ಬಹು ದಿನಗಳ ಆತಂಕ ನಿವಾರಣೆಯಾಗಿದೆ.

ಈ ಚಿರತೆ ಸೆರೆಯಾಗಿಸಲು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ಲಾಲ್ ಸಾಬ್ ಸೂಳಿಬಾವಿ, ಅರಣ್ಯ ರಕ್ಷಕ ಕಳಕಪ್ಪ ಬ್ಯಾಳಿ ಇವರ ಕಾರ್ಯಕ್ಕೆ‌ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ ಪ್ರತಿಕ್ರಿಯಿಸಿ, ಮಾಲಗಿತ್ತಿ ಗುಡ್ಡದಲ್ಲಿ ಸೆರೆ ಸಿಕ್ಕ ಚಿರತೆ ವಯಸ್ಕ ಚಿರತೆಯಾಗಿದ್ದು, ಅಂದಾಜು ಐದಾರು ವರ್ಷಗಳ‌ ಚಿರತೆಯಾಗಿದೆ. ಈ ಚಿರತೆಯನ್ನು ಮೇಲಾಧಿಕಾರಿಗಳ‌ ನಿರ್ದೇಶನದ ಮೇರೆಗೆ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗುವುದು ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು