ಹಾವೇರಿ: ಇಲ್ಲಿನ ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹಾವೇರಿ ಶಹರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಹಿತಿ ಪ್ರಕಾರ, ಗಿರೀಶ್ ಸ್ವಾದಿಯವರು, ಅವರ ಪತ್ನಿಗೆ ಅಕ್ಟೋಬರ್ 31 ರಂದು ರಾತ್ರಿ ಪರಿಚಿತರ ಮೊಬೈಲ್ನಿಂದ ಕರೆ ಮಾಡಿ, ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ಶಿವಾ ರೆಸಿಡೆಸ್ಸಿಯಲ್ಲಿ ಉಳಿದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು 2 ದಿನಗಳವರೆಗೆ ಮನೆಗೆ ಹೋಗದ ಕಾರಣ, ಅವರ ಪತ್ನಿ ಭಾಗ್ಯಶ್ರೀಯವರು, ಗಿರೀಶ್ ಸ್ವಾದಿ ಅವರ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ಆಫ್ ಆದ ಕಾರಣ, ಗಾಬರಿಗೊಂಡ ಅವರು ಕುಟುಂಬ ಸಮೇತ ಶಿವಾ ರೆಸಿಡೆಸ್ಸಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಹೋಟೆಲ್ ಸಿಬ್ಬಂದಿಯೊಬ್ಬರು, ಗಿರೀಶ್ ಸ್ವಾದಿಯವರು ನವೆಂಬರ್ 1ರಂದು ಮುಂಜಾನೆ 5 ಗಂಟೆಗೆ ತಾವು ಉಳಿದುಕೊಂಡಿದ್ದ ರೂಮ್ 112 ಅನ್ನು ಖಾಲಿ ಮಾಡಿ. ಏನೂ ಹೇಳದೇ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಕುಟುಂಬಸ್ಥರು ತಕ್ಷಣವೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.