ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿರುವ ಸಿನಿಮಾ ಹೆಬ್ಬುಲಿ ಕಟ್. ಜುಲೈ 4ರಂದು ತೆರೆಗೆ ಬರ್ತಿರುವ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳ ಈ ಚಿತ್ರಕ್ಕೆ ಸತೀಶ್ ನೀನಾಸಂ ಸಾಥ್ ಕೊಟ್ಟಿದ್ದಾರೆ. ತಮ್ಮದೇ ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ನಡಿ ಹೆಬ್ಬುಲಿ ಕಟ್ ಚಿತ್ರ ಅರ್ಪಿಸುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಲ್ಲೇಶ್ವರಂ ಎಸ್ ಆರ್ ವಿ ಚಿತ್ರಮಂದಿರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟ ನವೀಶ್ ಶಂಕರ್, ಸತೀಶ್ ನೀನಾಸಂ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿದ್ದರು.
ಟ್ರೇಲರ್ ಬಿಡುಗಡೆ ಬಳಿಕ ಸತೀಶ್ ನೀನಾಸಂ ಮಾತನಾಡಿ, ನನಗೆ ಸಿನಿಮಾ ಜಾಸ್ತಿ ಕನೆಕ್ಟ್ ಆಗುತ್ತದೆ. ನಾನು ಚಿತ್ರ ನೋಡಿದ್ದೇನೆ. ಮೊದಲ ಬಾರಿಗೆ ಪೂರ್ಣಚಂದ್ರ ತೇಜಸ್ವಿ ಫೋನ್ ಮಾಡಿ ಹೆಬ್ಬುಲಿ ಕಟ್ ಸಿನಿಮಾ ಇದೆ ನೋಡಬೇಕು. ಸಾಧ್ಯವಾದರೆ ಜೊತೆಯಲಿ ನಿತ್ತುಕೊಳ್ಳಿ ಎಂದರು. ಸಿನಿಮಾ ನೋಡ್ತಾ ನೋಡ್ತಾ ಸೆಳೆಯಿತು. ಮೊದಲ ಭಾಗ ಮುಗಿಸುವಷ್ಟರಲ್ಲಿ ಎದೆ ಭಾರವಾಯ್ತು. ಸೆಕೆಂಡ್ ಆಫ್ ಮುಗಿಸಿದಾಗ ಕಡೆ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಸಿನಿಮಾ ಅಲ್ಲಿಗೆ ತೆಗೆದುಕೊಂಡು ಹೋಯಿತು. ಭಯ, ತಳಮಳ ಶುರುವಾಯ್ತು. ಜನ ಈ ರೀತಿ ಸಿನಿಮಾ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ತು. ರೀಲ್ಸ್, ಗಲಾಟೆ, ಯುದ್ಧ ಮಧ್ಯೆ ಬ್ಯೂಟಿಫುಲ್ ಸಿನಿಮಾ ಬರುವುದು ಕಷ್ಟ. ರೀಲ್ಸ್, ನ್ಯೂಸ್ ಮಧ್ಯೆ ಪ್ರೇಕ್ಷಕ ಥಿಯೇಟರ್ ಗೆ ಬರಬೇಕು ಅಂದ್ರೆ ಒಳ್ಳೆ ಕಥೆ ಬರಬೇಕು. ಸೋಷಿಯಲ್ ಮೀಡಿಯಾದಲ್ಲಿ ಕಳೆದು ಹೋಗುತ್ತಿದ್ದೇವೆ. ಒಂದು ಹೆಬ್ಬುಲಿ ಕಟ್ ನಮ್ಮನ್ನ ಎಚ್ಚರ ಮಾಡುತ್ತೆ. ಎದೆ ಭಾರ ಮಾಡುತ್ತೇ, ಸತ್ಯ ಹೇಳುತ್ತದೆ. ಈ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಎಂದರು.
ನವೀಶ್ ಶಂಕರ್ ಮಾತನಾಡಿ, ಈ ತರ ಸಿನಿಮಾಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಅವಶ್ಯಕತೆ ಇದೆ. ನಾನು ಚಿತ್ರ ನೋಡಿದ್ದೇನೆ. ಒಳ್ಳೆ ಸಿನಿಮಾ. ಆ ನಂಬಿಕೆಯಿಂದ ಬಂದು ಇಲ್ಲಿ ಮಾತನಾಡುತ್ತಿದ್ದೇನೆ. ಭೀಮ್ ರಾವ್ ಅವರು ತೂಕದ ವಿಷಯವನ್ನು ಬಹಳ ಸರಳವಾಗಿ ಹೇಳಿದ್ದಾರೆ. ಎಂಟರ್ ಟೈನರ್ ಆಗಿ ಹೇಳಿದ್ದಾರೆ. ನಿಮ್ಮ ಸಹಕಾರ ಇಡೀ ಸಿನಿಮಾ ಮೇಲೆ ಇರಲಿ ಎಂದು ಹೇಳಿದರು.
ನಿರ್ದೇಶಕ ಭೀಮರಾವ್ ಪೈದೊಡ್ಡಿ ಮಾತನಾಡಿ, ಸತೀಶ್ ಸರ್ ಜೊತೆಗೆ ಒಂದಷ್ಟು ನೂರು ಜನ ನೋಡಿ ಚಿತ್ರ ಮೆಚ್ಚಿಕೊಂಡಿದ್ದಾರೆ. ಆಫ್ ಬೀಟ್ ಸಿನಿಮಾವಲ್ಲ. ನೋಡಿದ ಮೇಲೆ ಕಣ್ಣೀರು ಬರಬಹುದು. ಇದು ನೈಜ ಘಟನೆಯಾಧಾರಿತ ಸಿನಿಮಾ. ಸುದೀಪ್ ಸರ್ ನ ಚಿತ್ರದಲ್ಲಿ ಐಕಾನ್ ಆಗಿ ತೋರಿಸಿದ್ದೇವೆ. ಸತೀಶ್ ಸರ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆ ನಿಂತಿದ್ದಾರೆ ಎಂದರು.
ರಾಯಚೂರು ಮೂಲದ ಯುವ ನಿರ್ದೇಶಕ ಭೀಮರಾವ್ ಪೈದೊಡ್ಡಿ ನಿರ್ದೇಶನ ಹೆಬ್ಬುಲಿ ಕಟ್ ಸೂತ್ರಧಾರರು. 2017ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಿಂದ ಸ್ಫೂರ್ತಿಗೊಂಡಿರುವ ಈ ಚಿತ್ರ, ಅದರ ಜನಪ್ರಿಯ ‘ಹೆಬ್ಬುಲಿ ಕಟ್’ ಕೇಶವಿನ್ಯಾಸದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಕಿಚ್ಚ ಸುದೀಪ್ರ ಸ್ಟಾರ್ಡಮ್ನಿಂದ ಪ್ರೇರಿತವಾದ ಒಬ್ಬ ವ್ಯಕ್ತಿಯ ಜೀವನದ ಸವಾಲುಗಳನ್ನು ಈ ಚಿತ್ರ ಭಾವನಾತ್ಮಕವಾಗಿ ಚಿತ್ರಿಸುತ್ತದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ‘ಡೇರ್ಡೆವಿಲ್ ಮುಸ್ತಾಫಾ’ ಖ್ಯಾತಿಯ ಅನಂತ ಶಾಂದ್ರೇಯ ಬರೆದಿದ್ದಾರೆ. ದೀಪಕ್ ಯರಗೇರಾ ಅವರ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ರ ಸಂಗೀತ ಚಿತ್ರಕ್ಕೆ ವಿಶಿಷ್ಟ ಮೆರಗು ತಂದಿದೆ.
ನಟ ಸತೀಶ್ ನೀನಾಸಂ ಈ ಚಿತ್ರದ ಸೃಜನಶೀಲತೆಗೆ ಮನಸೋತು, ತಮ್ಮ ‘ಸತೀಶ್ ಪಿಕ್ಚರ್ ಹೌಸ್’ ಬ್ಯಾನರ್ನಡಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.