Home ಜನ-ಗಣ-ಮನ ಹೆಣ್ಣೋಟ “ಹೆಂಗ್ ಬುಟ್ಟೋಗಕ್ಕಿಲ್ಲ ನಾನು ನೋಡ್ತಿನಿ”

“ಹೆಂಗ್ ಬುಟ್ಟೋಗಕ್ಕಿಲ್ಲ ನಾನು ನೋಡ್ತಿನಿ”

0

(ಈ ವರೆಗೆ…)

ಲಕ್ಷ್ಮಿಯ ಚಲನವಲನಗಳಿಂದ ನೊಂದು ಮನೆಯವರು ಪಾತಾಳಕ್ಕೆ ಕುಸಿದರು. ಕೊನೆಯ ಪ್ರಯತ್ನ ಎಂಬಂತೆ ಅಮ್ಮ  ಪರಿ ಪರಿಯಾಗಿ ದಯನೀಯವಾಗಿ ಅಕೆಯನ್ನು ಬೇಡಿಕೊಂಡಾಗ ʼಬಿಟ್ಟುಹೋಗುವುದಾಗಿʼ ಹೇಳುತ್ತಾಳೆ.. ಆದರೆ ಹೋಗಬೇಕಾದರೆ ತನಗೆ ಬೇಕಾದ ವಸ್ತುಗಳನ್ನು ಒಪ್ಪಿಸಬೇಕೆಂದು ಹೇಳುತ್ತಾಳೆ. ಅಪ್ಪ ಪಂಚೆ ತರಲು ಹೋದರೆ ಅಮ್ಮ  ಮೊಸರನ್ನ ಮಾಡಲು ಒಳಗೆ ಹೋದಳು. ಮುಂದಿನದನ್ನು ಓದಿ ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಹತ್ತೊಂಬತ್ತನೆಯ  ಕಂತಿನಲ್ಲಿ.

ಕಣ್ಣು ಮುಚ್ಚಿ ಅಸಹನೆಯಿಂದ ಮುಖ ಉಜ್ಜಿ ಕೊಳ್ಳುತ್ತಾ ಕುಳಿತ ಲಕ್ಷ್ಮಿಗೆ ತನ್ನ ಸುತ್ತ ನೆರೆದ ಜನರ ಒಂದೊಂದು ಬೈಗುಳಗಳು ಬಾಣದಂತೆ ನಾಟ ತೊಡಗಿತ್ತು. ಅವಳ ಸಹನೆಯ ಕಟ್ಟೆ ಒಡೆದು ಮೈ ಕೊಡವಿ ನಿಂತು “ಎಲ್ಲ್ ಹಾಳಾಗೋದೆ ಸಾಕಮ್ಮ” ಎಂದು ಇಡೀ ಮನೆಯೇ ನಡುಗುವಂತೆ ಕೂಗಿದಳು. ಅಡಿಗೆ ಕೋಣೆಯಲ್ಲಿ ಅನ್ನಬಸಿಯುತ್ತಿದ್ದ ಅವ್ವ ಆ ಕರ್ಕಶ ದನಿಗೆ ಬೆಚ್ಚಿ ಅನ್ನ ಬಸಿಯುತ್ತಿದ್ದ ಪಾತ್ರೆಯನ್ನು ಗಂಗೆಯ ಕೈಗೆ ಹಸ್ತಾಂತರಿಸಿ ಎದ್ದೆನೋ ಬಿದ್ದೆನೋ ಎಂಬಂತೆ ಹೊರಗೋಡಿ ಬಂದಳು. 

ಗಾಬರಿಯಿಂದ “ಏನಾಯ್ತಪ್ಪ ಯಾಕಂಗ್ ಕೂಕೊಂಡೆ” ಎಂದು ಒಂದೇ ಉಸಿರಿಗೆ ಕೇಳಿದಳು. ಲಕ್ಷ್ಮಿ ತನ್ನ ಸುತ್ತ ಸುತ್ತಿಕೊಂಡಿದ್ದ ಜನರನ್ನು ದುರುಗುಟ್ಟಿ ನೋಡಿ, ಕ್ಯಾಕರಿಸಿ ಅವರತ್ತ ಉಗಿದಳು. “ಈ ದರ್ಬೇಸಿಗಳುನೆಲ್ಲ ಮೊದ್ಲು ಆಚೆಗಟ್ಟು. ಇವರ್ ಮನೆ ತೂತ್ವೆ ಊರ್ ಅಗಲ ಐತೆ. ಬಂದವ್ರಿಲ್ಲಿ ನನಗೆ ಬುದ್ಧಿ ಹೇಳಕ್ಕೆ ಬಿಕ್ನಾಸಿಗಳು” ಎಂದು ಬಯ್ಯುತ್ತಾ ಮೊದಲಿದ್ದ ಜಾಗದಲ್ಲಿಯೇ ಕುಕ್ಕರಗಾಲಿನಲ್ಲಿ ಕೂತು ತುಟಿಯ ಮೇಲೆ ಮೀಸೆ ತಿರುಗಿಸುವಂತೆ ಕೈಯಾಡಿಸ ತೊಡಗಿದಳು. ಅವ್ವನಿಗೋ ಒಳಗೊಳಗೆ ದಿಗಿಲು. ಬಿಟ್ಟು ಹೋಗುತ್ತೇನೆಂದು  ಹೇಳಿರುವ ಈ ಪೀಡೆ ಮತ್ತೆಲ್ಲಿ ಹಠ ಹಿಡಿದು ಮಗಳ ಮೇಲೆಯೇ ವಕ್ಕರಿಸಿಕೊಂಡು ಕುಳಿತು ಬಿಡುವುದೋ ಎಂದು. ಆತಂಕದಲ್ಲಿಯೇ ಕಂಪಿಸುತ್ತ “ನಿಮ್ಮ ದಮ್ಮಯ್ಯ ಮೊದ್ಲು ಎಲ್ರು ಆಚೆಗೋಗಿ” ಎಂದು ಗೋಗರೆದಳು. ಕೆಲವು ಹಿರಿಯರನ್ನು ಮಾತ್ರ ತಾನೇ ಕಣ್ಸನ್ನೆ ಮಾಡಿ ಹೋಗದಿರುವಂತೆ ತಡೆದಳು.

ಮನೋಬಣ್ಣನ ಅಂಗಡಿಯಿಂದ ಪಂಚೆ ಟವಲ್ ಬೀಡಿ ಬೆಂಕಿ ಪೊಟ್ಟಣಗಳನ್ನು ಹೊತ್ತು ತಂದ ಅಪ್ಪ “ತಗಳಪ್ಪ ನೀನು ಹೇಳಿದ್ದೆಲ್ಲಾ  ತಂದಿದ್ದೀನಿ” ಎಂದು ಮಗಳ ಮುಂದೆ ಹಿಡಿದ.  ಅಪ್ಪನ ಕೈಯಿಂದ  ಗಬಕ್ಕನೆ  ಕಸಿದುಕೊಂಡ ಲಕ್ಷ್ಮಿ, ಆಸೆಗಣ್ಣಿನಿಂದ ಅವನ್ನೆಲ್ಲ ತಿರುಗಿಸಿ ಮುರುಗಿಸಿ ನೋಡಿದಳು. ಟವಲ್ ತೆಗೆದು ಹೆಗಲಿಗೇರಿಸಿದಳು. ನಾಜೂಕಾಗಿ ಮಡಚಿದ್ದ ಗರಿ ಗರಿ ಪಂಚೆಯನ್ನು ರಪ್ ಎಂದು ಜೋರಾಗಿ ಕೊಡವಿ ಸೊಂಟಕ್ಕೆ ಸುತ್ತಿ ಕೊಂಡು ಸಂಭ್ರಮಿಸುತ್ತಾ ” ಚೆನ್ನಾಗಿ ಕಾಣ್ತೈತ  ಯಜಮಾನ್ರೆ” ಎಂದು ಅಪ್ಪನನ್ನು ಕೇಳಿದಳು. ಅಪ್ಪ ಈ ಪೀಡೆ ಮೊದಲು ತೊಲಗಿದರೆ ಸಾಕೆಂಬಂತೆ “ಹೂಂ ಕನಪ್ಪ ಬಲ್ ಪಸಂದಾಗ್ ಕಾಣ್ತಿದ್ದಿ” ಎಂದು ಹಲ್ಲು ಗಿಂಜಿ, ಅವ್ವನಿಗೆ “ಇನ್ನೂ ಕೂತೇ ಇದ್ಯಲ್ಲ  ಬಿರ್ನೋಗಿ ಮೊಸ್ರನ್ನ ಕಲುಸ್ ಕೊಂಡ್ಬಾ” ಎಂದ.  ಅವ್ವ ಕೂತ ಜಾಗದಿಂದಲೇ ಕೂಗಿ “ಗಂಗೂ ಕಂಚಿನ್ ಗಂಗ್ಳುಕ್ಕೆ  ಮೊಸ್ರನ್ನ ಹಾಕೊಂಡ್ ಬಾ ಮಗ” ಎಂದಳು.

ಲಕ್ಷ್ಮಿ ಬೀಡಿಯ ಕಟ್ಟಿನಿಂದ ಒಂದು ಬೀಡಿ ತೆಗೆದು ತುಟಿಯ ಮೇಲಿಟ್ಟು “ಏನ್ ನೋಡ್ತಿದ್ದಿ ಯಜಮಾನ ಒಂದೀಟ್  ಕಡ್ಡಿ ಗೀರು” ಎಂದಳು  ಅಪ್ಪ ಪಟ್ಟನೆ ಬೆಂಕಿಕಡ್ಡಿ ಗಿರಿ ಮಗಳ ತುಟಿ ಮೇಲಿದ್ದ ಬೀಡಿಗೆ ತಾಗಿಸಿದ. ಯಾವ ಕಾಲದ ಹಸಿವೋ ಎಂಬಂತೆ ಬುಸಬುಸನೆ ದಮ್ ಎಳೆದು ಸುಳಿ ಸುಳಿಯಾಗಿ ಹೊಗೆ ಬೀಡುತ್ತಾ  ಕಣ್ಣು ಮುಚ್ಚಿ ಆನಂದವನ್ನು ಅನುಭವಿಸುತ್ತಿದ್ದ ಲಕ್ಷ್ಮಿ, ಇದ್ದಕ್ಕಿದ್ದಂತೆ ಸೆಟೆದು ಕೂತಳು. ಮೊಸರನ್ನ ಹಿಡಿದು ನಡುಮನೆಯ ಬಾಗಿಲಿಗೆ ಬಂದ ಗಂಗೆಯನ್ನು ನುಂಗುವವಳಂತೆ ಕೆಕ್ಕರಿಸಿ ನೋಡಿದಳು. ಅಕ್ಕನ ಆ ನೋಟಕ್ಕೆ ಹೆದರಿದ ಗಂಗೆ ಅವ್ವನ ಕಡೆಗೆ ಬಿರುಸಾಗಿ ತಟ್ಟೆ ತಳ್ಳಿ ಅಷ್ಟು ದೂರ ಓಡಿ ನಿಂತಳು.

 ಅವ್ವ ಲಕ್ಷ್ಮಿಯ ಮುಂದೆ ಅನ್ನದ ತಟ್ಟೆ ಇಟ್ಟು “ತಗಳಪ್ಪ ಬಿರ್ನುಣ್ಣು” ಎಂದಳು. ಸಿಟ್ಟಿನಿಂದ ಕುದಿಯುತ್ತಿದ್ದ ಲಕ್ಷ್ಮಿ  ಗಂಗೆಯನ್ನೇ ನೋಡುತ್ತಾ  ” ಏನೇ ಮಾಯಾಂಗ್ಣಿ ಈ ಮುಂಡೆದ್ಕೆ ಬಿಸಿ ಅನ್ನ ಬೇರೆ ಕೇಡು ಅಂತಿಯೇನೆ  ತಗ ನೀನೇ ಉಣ್ಣು ಬೇವರ್ಸಿ ಮುಂಡೆ” ಎಂದು ಹೇಳಿ ಗಂಗೆಯತ್ತ ಬಿರುಸಾಗಿ ಅನ್ನದ ತಟ್ಟೆ ಎಸೆದಳು. ಸ್ವಲ್ಪದರಲ್ಲೆ ಆ ಬಿರುಸಿನ ಏಟಿನಿಂದ ತಪ್ಪಿಸಿ ಕೊಂಡ ಗಂಗೆ ನಡುಗುತ್ತಾ ಪಕ್ಕದಲ್ಲಿದ್ದ ಆಚೆ ಮನೆ ಪುಟ್ಟಮ್ಮತ್ತೆಯನ್ನು ಗಟ್ಟಿ ತಬ್ಬಿ ಕಣ್ಣು ಮುಚ್ಚಿ ನಿಂತಳು. ಅವ್ವ ” ನಿಜ್ವ ಮಗ ” ಎಂದು ಗಂಗೆಯನ್ನು ಕೇಳಿದಳು.” “ಆ ಲೌಡಿನ ಏನ್ ಕೇಳ್ತಿ  ಅನ್ನ ಮುಟ್ಟ್ ನೋಡು ನಿಂಗೆ ಗೊತ್ತಾಯ್ತದೆ” ಎಂದು ಹಲ್ಲು ಕಡಿದಳು ಲಕ್ಷ್ಮಿ. ಅವ್ವ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದ ಅನ್ನವನ್ನು ಮುಟ್ಟಿ ನೋಡಿದಳು. ಅನ್ನ ತಣ್ಣಗೆ ಕೊರೆಯುತ್ತಿತ್ತು. ಪುಟ್ಟಮ್ಮತ್ತೆಯ ಹಿಂದೆ ನಿಂತಿದ್ದ ಗಂಗೆಯನ್ನು ಈಚೆ ಎಳೆದು  ಅವಳ ಬೆನ್ನ ಮೇಲೆ ಗುದ್ದಿ ಅವ್ವ “ಯಾಕೆ ಹಿಂಗ್ ಮಾಡ್ದೆ ಮನೆ ಹಾಳಿ” ಎಂದು ಬಯ್ದು ಲಕ್ಷ್ಮಿಯ ಕಾಲಿಡಿದು “ನಿನ್ನ ದಮ್ಮಯ್ಯ ಕನಪ್ಪ ಏನು ಅರಿದೋಳು ಅವಳ್ ತಪ್ಪುನ್ನ ಹೊಟ್ಟೆಗಾಕೊ ಬುಡು” ಎಂದು ಹೇಳಿ ಅಡಿಗೆ ಕೋಣೆಗೆ ಹೋಗಿ ಬಿಸಿ ಅನ್ನಕ್ಕೆ ಕೆನೆ ಮೊಸರಾಕಿ ತೆಳ್ಳಗೆ ಕಲಸಿ  ತಂದು ಮಗಳ ಮುಂದಿಟ್ಟಳು. ಲಕ್ಷ್ಮಿ ” ಮನುಸ್ರು ಕಣ್ಣ್ಗೆ ಮರ ಮುರಿತಂತೆ ಈ ಜನುದ್ದೇನು ಕಣ್ಗೊಳ ನೋಡು, ಹೆಂಗೆ ರಣ ರಣ್ಹೋಡಿತಾವೆ” ಎಂದು ಹೇಳಿ  ಗೋಡೆಯ ಕಡೆ ತಿರುಗಿ ಅವ್ವ ಮಾಡಿದ ಸೇರಕ್ಕಿ ಅನ್ನ ಖಾಲಿಯಾಗುವವರೆಗೂ ಉಂಡು ತೇಗಿದಳು.

ಸುಮಾರು ಹತ್ತು ದಿನಗಳಿಂದ ಸರಿಯಾಗಿ ಅನ್ನ ನೀರು ತೆಗೆದುಕೊಳ್ಳದ ಮಗಳ ದೇಹಕ್ಕೆ ಇವತ್ತಾದರೂ ಒಂದಷ್ಟು ಅನ್ನ ಸೇರಿತಲ್ಲ ಎಂದು ಅವ್ವ ನಿಟ್ಟುಸಿರು ಬಿಟ್ಟು “ನೀನ್ ಹೇಳಿದ್ದೆಲ್ಲ ಮಾಡಿದ್ದೀವಿ ಈಗ ನಮಗೆ ಕೊಟ್ಮಾತ ನಡುಸ್ಕೊಡಪ್ಪ ಎಂದು ಕೇಳಿದಳು. ಅವ್ವನ ಈ‌ ಮಾತು ಕೇಳುತ್ತಿದ್ದಂತೆ ಗಂಭೀರವಾದ ಲಕ್ಷ್ಮಿ,  ತುಸು ಹೊತ್ತಿನ ಮೌನದ ನಂತರ “ನಿನ್ ದಮ್ಮಯ್ಯ ಇದೊಂದು ಬುಟ್ಟು ಬ್ಯಾರೆ ಏನಾರ ಕೇಳಮ್ಮ”  ಎಂದು ಹೇಳಿ ನೆಲಕ್ಕೆ ಕಣ್ಣು ಕೀಲಿಸಿ ಕೂತು ಬಿಟ್ಟಳು. ಅವ್ವ ಎಷ್ಟೇ ಕೈ ಕಾಲು ಹಿಡಿದು ಬೇಡಿದರು ಪ್ರಯೋಜನವಾಗಲಿಲ್ಲ. ಮಗಳೊಳಗಿನ ಮೊಂಡುತನ ಅರಿತ ಅಪ್ಪ,  ತಡ ಮಾಡಿದರೆ ಕೆಟ್ಟೆವು ಅನ್ನಿಸಿ ಕೂಡಲೇ ಮಾದಲಪುರದ ಮಂತ್ರವಾದಿ  ಕೆಂಜೆಡೆ ಜಾಗರಯ್ಯನನ್ನು ಕರೆದು ಕೊಂಡು ಬರಲು ನಿರ್ಧರಿಸಿದ. ಅಲ್ಲೇ ಇದ್ದ ತನ್ನ ದಯಾದಿ ಅಳಿಯ ನಂಜಪ್ಪನನ್ನು ಹೊರ ಕರೆದು, “ಒಂದ್ ತಾಸು  ಹೆಂಗಾರು ಆ ಪೀಡೆನ  ಸಂಭಾಳುಸ್ತಿರು ನಂಜಪ್ಪ ಹಿಂಗೋಗಿ ಹಿಂಗ್ ಬಂದ್ಬುಡ್ತಿನಿ” ಎಂದು ಹೇಳಿ ಸೈಕಲ್ ಏರಿ ಹೊರಟ.

 ಅಪ್ಪ ಅತ್ತ ಹೊರಟದ್ದೇ ತಡ, ಇತ್ತ ನಂಜಪ್ಪ ತನಗೆ ವಿಶೇಷ ಅಧಿಕಾರ ಸಿಕ್ಕಂತೆ ಉಬ್ಬಿ ಹೋದ. ಲಕ್ಷ್ಮಿಯ ಸುತ್ತ ನೆರೆದ ಎಲ್ಲರನ್ನೂ ಕಣ್ಣ ಸನ್ನೆಯಲ್ಲಿಯೇ  ದೂರ ಕಳುಹಿಸಿದ. ಬಂಡೆಯಂತೆ ಮೌನ ಧರಿಸಿ ಕೂತಿದ್ದ ಲಕ್ಷ್ಮಿಯ ಬಳಿ ಬಂದು ಅವಳ ಮನ ಒಲಿಸಲು ತನಗೆ ಗೊತ್ತಿದ್ದ ಎಲ್ಲಾ ವಿದ್ಯೆಯನ್ನು ಒಂದರ ಮೇಲೆ ಒಂದರಂತೆ ಪ್ರಯೋಗಿಸಿದ. ಲಕ್ಷ್ಮಿ ಅವನ ಯಾವ ಪ್ರಯೋಗಕ್ಕೂ  ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ರೊಚ್ಚಿಗೆದ್ದವನಂತೆ ” ಸಾಕತ್ತೆ ಈ ಮುಂಡೆದು ನಾವು ಹಿಂಗ್ ಕೇಳುದ್ರೆ ಬಾಯ್ ಬುಡಕಿಲ. ಎಲ ಬಾಂಡ್ಲಿಗೊಂದಿಷ್ಟು ಕೆಂಡ ಹಾಕ್ಕೊಂಡು, ಒಣ ಮೆಣಸಿನ್ ಕಾಯಿ ತಗೊಂಬಾ. ಅದು  ಹೆಂಗ್ ಬುಟ್ಟೋಗಕ್ಕಿಲ ನಾನು ನೋಡೆ ಬುಡ್ತಿನಿ” ಎಂದು ಸವಾಲು ಹಾಕಿ  ಅಲ್ಲೇ ಇದ್ದ ಕುರ್ಚಿ ಎಳೆದು ಕೊಂಡು  ಲಕ್ಷ್ಮಿಯ ಮುಂದೆ ಪಟ್ಟಾಗಿ ಕುಳಿತ .

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

You cannot copy content of this page

Exit mobile version