ರಾಜ್ಯಪಾಲರ ಅನಗತ್ಯ ಎಂಟ್ರಿಯಿಂದಾಗಿ ಮುಡಾ ವಿವಾದ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರೋದ್ರಿಂದ, ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಅಂತ ಊಹಾಪೋಹಗಳು ಹರಿದಾಡ್ತಿವೆ. ಜನರಲ್ಲಿ ಗೊಂದಲವೂ ಉಂಟಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದು ನಿಜ. ಸಿದ್ದರಾಮಯ್ಯನವರ ಮೇಲೆ ಅದೆಷ್ಟೆ ವಿಶ್ವಾಸವಿದ್ದರೂ, ಅವರು ಎಲ್ಲಾದರು ಒಂದುಕಡೆ ಕುಟುಂಬದವರ ಯಡವಟ್ಟಿನಿಂದಾಗಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡಿರಬಹುದೇ? ಎಂಬ ಅನುಮಾನ ರಾಹುಲ್ ಗಾಂಧಿಯವರಿಗೂ ಇದ್ದಿದ್ದು ನಿಜ. ಸಿದ್ದರಾಮಯ್ಯನವರನ್ನು ರಾಹುಲ್ ಗಾಂಧಿ ದಿಲ್ಲಿಗೆ ಕರೆಸಿಕೊಂಡಿದ್ದು ಕೂಡಾ ಅದೇ ಕಾರಣಕ್ಕೆ.
ಆದರೆ ಯಾವಾಗ, ಸಿದ್ದರಾಮಯ್ಯನವರು ಮುಡಾ ಜಮೀನು ವಿವಾದ ಮಾತ್ರವಲ್ಲ, ವಾಲ್ಮೀಕಿ ನಿಗಮದ ಅವ್ಯವಹಾರದಲ್ಲೂ ತಮ್ಮ ಪ್ರಭಾವವಾಗಲಿ, ಅಧಿಕಾರವಾಗಲಿ ದುರ್ಬಳಕೆಯಾಗಿಲ್ಲ ಅನ್ನೋದನ್ನು ದಾಖಲೆ ಸಹಿತ ವಿವರಿಸಿದರೋ, ಆಗ ಹೈಕಮಾಂಡ್ಗೆ ಈ ಪ್ರಕರಣಗಳಲ್ಲಿ ಬಿಜೆಪಿ ಕೇವಲ ರಾಜಕೀಯ ಗಾಸಿಪ್ ಮೂಲಕ ವ್ಯೂಹ ಹೆಣೆದಿದೆ ಎನ್ನುವುದು ದೃಢವಾಗಿದೆ. ಅದಕ್ಕೆಂದೇ, ಸಿದ್ದರಾಮಯ್ಯನವರು ಈ ವಿವಾದಗಳಿಗೆ ಸಂಬಂಧಿಸಿದ ಅಷ್ಟೂ ದಾಖಲೆಗಳನ್ನು ಇಂಗ್ಲಿಷಿಗೆ ಅನುವಾದಿಸಿ ದಿಲ್ಲಿಗೆ ಕೊಂಡೊಯ್ದಿದ್ದರು. ಮೂಲ ದಾಖಲೆಗಳೊಂದಿಗೆ ಅವುಗಳನ್ನೆಲ್ಲ ಸಂಗ್ರಹಿಸಿದ್ದ ರಾಹುಲ್ ಗಾಂಧಿ, ಪರಿಶೀಲಿಸಿ ತಮ್ಮ ಜೊತೆ ಮಾತಾಡುವುದಾಗಿ ಹೇಳಿದ್ದರು.
ಸಿದ್ದರಾಮಯ್ಯನವರು ಇತ್ತ ಬೆಂಗಳೂರಿಗೆ ಬಂದ ನಂತರ, ಮನುಸಿಂಘ್ವಿ, ಪಿ ಚಿದಂಬರಂ ಮೊದಲಾದವರ ನೇತೃತ್ವದ ಕಾನೂನು ಸಲಹೆಗಾರರ ತಂಡದ ಕೈಗೆ ಆ ದಾಖಲೆಗಳನ್ನು ಕೊಟ್ಟ ರಾಹುಲ್ ಗಾಂಧಿಯವರು, ಇದರಲ್ಲೇನಾದರೂ ಸಿದ್ದರಾಮಯ್ಯನವರನ್ನು ಸಿಲುಕಿಸಬಹುದಾದ ಲೋಪಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಹೇಳಿದ್ದರು. ದಾಖಲೆಗಳನ್ನು ಪರಿಶೀಲಿಸಿ, ಸಿದ್ದರಾಮಯ್ಯನವರನ್ನು ಈ ಪ್ರಕರಣಗಳಲ್ಲಿ ನ್ಯಾಯಯುತವಾಗಿ ಸಿಲುಕಿಸಲು ಸಾಧ್ಯವೇ ಇಲ್ಲ ಎಂದು ಕಾನೂನು ತಜ್ಞರು ಸಲಹೆ ನೀಡಿದ ನಂತರ, ಕೆ ಸಿ ವೇಣುಗೋಪಾಲ್ ಅವರ ಜೊತೆ ಸಮಾಲೋಚನೆ ನಡೆಸಿದ ರಾಹುಲ್, “ಸಿದ್ದರಾಮಯ್ಯನವರ ಮೇಲಿದ್ದ ತಮ್ಮ ನಂಬಿಕೆ ಇನ್ನಷ್ಟು ಬಲವಾಗಿದೆ. ಕಾನೂನಾತ್ಮಕವಾಗಿ ಅವರು ಈ ಎಲ್ಲಾ ವಿವಾದಗಳಲ್ಲಿ ಶುದ್ಧವಾಗಿದ್ದಾರೆ. ಹಾಗಂತ ನಾವು ಬಿಜೆಪಿಯನ್ನು ಅಲಕ್ಷಿಸಲಾಗದು. ಅದು ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಖಂಡಿತ ಮಾಡುತ್ತೆ. ಈಗ ನಾವು ಬಿಜೆಪಿಯವರ ಹುನ್ನಾರಗಳ ಮುಂದೆ ತಲೆಬಾಗಿದರೆ, ನಾಳೆ ನಮ್ಮ ಯಾವ ಸರ್ಕಾರಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾವು ರಾಜಕೀಯ ಪ್ರತಿರೋಧಕ್ಕೆ ಸಿದ್ದರಾಗೋಣ. ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ರೀತಿಯಲ್ಲೆ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರಿಗೆ ಇರುವ ಪ್ರಾಮಾಣಿಕತೆಯ ಇಮೇಜನ್ನು ಬಳಸಿಕೊಂಡು, ಬಿಜೆಪಿಯವರ ಎಲ್ಲಾ ಹುನ್ನಾರಗಳಿಗೆ ಎದುರುತ್ತರ ಕೊಡೋಣ. ಈ ಮಾತನ್ನು ಸಿದ್ದರಾಮಯ್ಯನವರಿಗೂ ತಿಳಿಸಿಬಿಡಿ. ಅವರು ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಗಮನಕೊಡಲಿ. ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಈ ಸಲ ಕಾಂಗ್ರೆಸ್ ಹೈಕಮಾಂಡ್ ಅವರ ಜೊತೆಗಿರಲಿದೆ” ಎಂಬ ಗಟ್ಟಿ ತೀರ್ಮಾನ ಹೊರಹಾಕಿದ್ದರು.
ಅದರ ಬೆನ್ನಿಗೇ, ಸಿದ್ದರಾಮಯ್ಯನವರಿಗೆ ಫೋನ್ ಮಾಡಿದ ವೇಣುಗೋಪಾಲ್ ಈ ನಿರ್ಧಾರವನ್ನು ತಿಳಿಸಿದ್ದಾರೆ. ರಾಹುಲ್ ಗಾಂಧಿಯವರ ಸಲಹೆಯಂತೆ, ಬಿಜೆಪಿಯವರ ಹುನ್ನಾರಗಳಿಗೆ ಪ್ರತಿಕ್ರಿಯೆ ನೀಡುವ ಹೊಣೆಯನ್ನು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಬಿಟ್ಟು, ಸಿದ್ದರಾಮಯ್ಯನವರು ರಾಜ್ಯದ ಪ್ರವಾಸ ಕೈಗೊಂಡಿದ್ದಾರೆ. ಮಳೆಯಿಂದ ಹಾನಿಯಾದ ಜನರ ಕಷ್ಟಗಳನ್ನು ಆಲಿಸಲು ಮುಂದಾಗಿದ್ದಾರೆ. ಸಿಎಂ ಕುರ್ಚಿಯ ಆತಂಕ ಅವರಿಗೆ ಇದ್ದಿದ್ದರೆ, ಅವರು ಹೀಗೆ ರಾಜ್ಯ ಪ್ರವಾಸ ಮಾಡಲು ಸಾಧ್ಯವಿರಲಿಲ್ಲ. ಅದೂ ಅಲ್ಲದೇ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಬೆನ್ನಿಗೆ ಬಲವಾಗಿ ನಿಂತಿದೆ ಅನ್ನೋದನ್ನು ಬಿಜೆಪಿಯವರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿಯೇ, ಕೇರಳದ ವಯನಾಡಿನ ಗುಡ್ಡಕುಸಿತದಲ್ಲಿ ಸಂತ್ರಸ್ತರಾದ ನೂರು ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಮಾನವೀಯ ನೆಲೆಗಟ್ಟಿನಲ್ಲಿ ಮನೆಗಳನ್ನು ನಿರ್ಮಿಸುವ ನಿರ್ಧಾರವನ್ನು ಸಿದ್ದರಾಮಯ್ಯನವರು ತಮ್ಮ ಖಾಸಗಿ ಖಾತೆಯಲ್ಲಿ ಪ್ರಕಟಿಸಿದ್ದನ್ನು, ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ‘ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ಉತ್ತಮ ಕೆಲಸ’ ಎಂದು ಶಹಬ್ಬಾಶ್ಗಿರಿ ಕೊಟ್ಟಿದ್ದಾರೆ. ಇಂಟರೆಸ್ಟಿಂಗ್ಲಿ, ಕರ್ನಾಟಕ ಸಿಎಂ ಅಧಿಕೃತ ಎಕ್ಸ್ ಅಕೌಂಟ್ನಿಂದಲೂ ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಆದರೆ ಅದನ್ನು ಬಿಟ್ಟು ಸಿದ್ದರಾಮಯ್ಯನವರ ಖಾಸಗಿ ಅಕೌಂಟ್ನ ಪೋಸ್ಟ್ ಅನ್ನೇ ರಾಹುಲ್ ಶೇರ್ ಮಾಡಿರುವುದು, ಅವರ ಜೊತೆಗೆ ಹೈಕಮಾಂಡ್ ಇದೆ ಎನ್ನುವ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಎನ್ನಲಾಗುತ್ತಿದೆ. ಒಂದುವೇಳೆ, ಆರೋಪಗಳು ದಟ್ಟವಾಗಿದ್ದು ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಸಾಧ್ಯತೆ ಇದ್ದಿದ್ದರೆ, ಅಂತವರ ಎಕ್ಸ್ ಪೋಸ್ಟ್ ಟ್ವೀಟ್ ಮಾಡಿ ಮುಜುಗರ ಅನುಭವಿಸುವ ಕೆಲಸಕ್ಕೆ ರಾಹುಲ್ ಗಾಂಧಿಯವರು ಖಂಡಿತ ಮುಂದಾಗುತ್ತಿರಲಿಲ್ಲ. ಅದೂ ಅಲ್ಲದೆ, ಪ್ರಿಯಾಂಕ ಗಾಂಧಿಯವರು ಕೂಡಾ ಸಿದ್ದರಾಮಯ್ಯನವರ ಖಾಸಗಿ ಎಕ್ಸ್ ಖಾತೆಯ ಆ ಪೋಸ್ಟ್ ಶೇರ್ ಮಾಡಿ, “ಥ್ಯಾಂಕ್ಸ್ ಸಿದ್ದರಾಮಯ್ಯಾಜೀ” ಎಂದು ಹೇಳುವ ಮೂಲಕ ಹೈಕಮಾಂಡ್ ಅಭಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಹೈಕಮಾಂಡ್ನಿಂದ ಸಿದ್ದರಾಮಯ್ಯನವರಿಗೆ ಈ ಪರಿಯ ಅಭಯ ಸಿಕ್ಕಿರುವುದರಿಂದಲೇ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಆದಿಯಾಗಿ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು ದಿಟ್ಟವಾಗಿ ಸಿದ್ದರಾಮಯ್ಯನವರ ಪರ ಮಾತನಾಡಲು ಶುರು ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ಸಂಘಟಿಸಲಾಗುತ್ತಿರುವ ಕಾಂಗ್ರೆಸ್ ಜನಾಂದೋಲನ ಕೂಡಾ ರಂಗೇರಲು ಶುರುವಾಗಿದೆ. ಮತ್ತೊಂದು ಮುಖ್ಯವಾದ ಸಂಗತಿಯೇನೆಂದರೆ, ಕೇಂದ್ರ ಮಂತ್ರಿಯೂ ಆಗಿರುವ ಕುಮಾರಸ್ವಾಮಿಯವರ ಹಗರಣಗಳು ಸಾಕಷ್ಟಿದ್ದು, ಅವರ ಹಗರಣಗಳನ್ನು ಮುನ್ನೆಲೆಗೆ ತರುವಂತೆ ಹೈಕಮಾಂಡ್ನಿಂದ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ನಿರ್ದೇಶನ ಸಿಕ್ಕಿದೆ. ಹಾಗಾಗಿಯೇ, ಜನಾಂದೋಲನ ಯಾತ್ರೆಯಲ್ಲಿ ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರ ವಿರುದ್ಧ ನೇರ ದಾಳಿಗಿಳಿದಿರುವುದು. ಅವರ ಹಗರಣಗಳು ಬಯಲಿಗೆ ಬರುವ ಸನ್ನಿವೇಶಗಳು ಸೃಷ್ಟಿಯಾದಾಗ, ಕುಮಾರಸ್ವಾಮಿ ಬಿಜೆಪಿಯವರ ಈ ಹೋರಾಟದಿಂದ ಹಿಂದೆ ಸರಿಯಬಹುದು, ಆಗ ಬಿಜೆಪಿಯವರು ಏಕಾಂಗಿಯಾಗುತ್ತಾರೆ ಮತ್ತು ಅವರ ಹೋರಾಟವೂ ಸವಕಲಾಗುತ್ತದೆ ಎನ್ನುವ ಆಲೋಚನೆ ಕಾಂಗ್ರೆಸ್ ಹೈಕಮಾಂಡ್ನದ್ದಾಗಿರಬಹುದು.
ಬಿಜೆಪಿಯ ದುರುದ್ದೇಶಪೂರಿತ ತಂತ್ರಗಾರಿಕೆ ಪ್ರತ್ಯತ್ತರ ನೀಡಲೇಬೇಕು ಎಂದು ನಿರ್ಧರಿಸುವ ರಾಹುಲ್ ಗಾಂಧಿಯವರು, ರಾಜ್ಯ ಕಾಂಗ್ರೆಸ್ ಘಟಕದ ಮೂಲಕ ಬಿಜೆಪಿಯವರ ಆಡಳಿತದಲ್ಲಿ ನಡೆದ ಎಲ್ಲಾ ಅವ್ಯವಹಾರಗಳ ದಾಖಲೆಗಳನ್ನೂ ಸಂಗ್ರಹಿಸಿದ್ದಾರೆ. ಅವುಗಳನ್ನು ಸಂಸತ್ತಿನ ಮುಂದೆ ಇಟ್ಟು ಬಿಜೆಪಿಗೆ ತಿರುಮಂತ್ರ ಪ್ರಯೋಗಿಸುವುದು ಅವರ ಉದ್ದೇಶ ಎನ್ನಲಾಗುತ್ತಿದೆ. ಸಿದ್ದರಾಮಯ್ಯನವರು, 2013 ಹಾಗೂ 2023ರಲ್ಲಿ, ಎರಡು ಬಾರಿ ಸಿಎಂ ಆಗಿ ಆಯ್ಕೆಯಾಗುವ ಚರ್ಚೆ ಬಂದಾಗಲೂ ಅವರ ಬೆನ್ನಿಗೆ ಬಲವಾಗಿ ನಿಂತದ್ದು ರಾಹುಲ್ ಗಾಂಧಿಯವರು. ಅದಕ್ಕೆ ಕಾರಣ, ಸಿದ್ದರಾಮಯ್ಯನವರ ಸೈದ್ಧಾಂತಿಕ ಬದ್ಧತೆ ಮತ್ತು ಶೋಷಿತ ಜಾತಿಗಳ ಬಗ್ಗೆ ಅವರಿಗಿರುವ ಕಾಳಜಿ. ಈ ವಿಚಾರದಲ್ಲಿ ರಾಹುಲ್ ಮತ್ತು ಸಿದ್ದರಾಮಯ್ಯ ಪರಸ್ಪರ ಪೂರಕ ವ್ಯಕ್ತಿತ್ವ ಹೊಂದಿದಂತವರು. ಸಿದ್ದರಾಮಯ್ಯನವರ ಬಗ್ಗೆ ರಾಹುಲ್ ಗಾಂಧಿಗೆ ಈ ಮೆಚ್ಚುಗೆ ಇದ್ದೇ ಇತ್ತು. ಬಿಜೆಪಿಯವರು ಹಬ್ಬಿಸಿದ ಈ ಸುಳ್ಳಿನ ಆರೋಪಗಳ ಸ್ಪಷ್ಟಣೆಯ ರೂಪದಲ್ಲಿ ಆ ಅಭಿಮಾನ ಇನ್ನಷ್ಟು ಹೆಚ್ಚಿದೆ ಎನ್ನಲಾಗುತ್ತಿದ್ದು, ಅದೇ ಸಿದ್ದರಾಮಯ್ಯನವರ ಸಿಎಂ ಕುರ್ಚಿಗೆ ಅಭಯ ಎಂದೂ ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ ಕಾಂಗ್ರೆಸ್ ಪಾಲಿಗೆ ಸಿದ್ದರಾಮಯ್ಯನವರೇ ದೊಡ್ಡ ಶಕ್ತಿ. ಅವರನ್ನೇ ಅಧೀರಗೊಳಿಸಿದರೆ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದು ಸುಲಭ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದ್ದು ತಂತ್ರಗಾರಿಕೆಯ ದೃಷ್ಟಿಯಿಂದ ಸರಿಯಿರಬಹುದು. ಆದರೆ ತಂತ್ರಗಾರಿಕೆಗಳು ಎಲ್ಲಾ ಕಾಲಕ್ಕೂ ಕೈಹಿಡಿಯೋದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಯಾಕೆಂದರೆ ಕಾಮನ್ಸೆನ್ಸ್ ಇಲ್ಲದ ತಂತ್ರಗಾರಿಕೆಗಳು ನಮಗೇ ತಿರುಗುಬಾಣವಾಗುವ ಸಾಧ್ಯತೆ ಹೆಚ್ಚು. ಬಿಜೆಪಿಯ ಈ ತಂತ್ರಗಾರಿಕೆಯಲ್ಲೂ ಅಂತಹ ಕಾಮನ್ಸೆನ್ಸ್ ಕಾಣುತ್ತಿಲ್ಲ. ಇದನ್ನೇ ಎನ್ಕ್ಯಾಶ್ ಮಾಡಿಕೊಂಡು, ಬಿಜೆಪಿ ರಾಜಕೀಯ ಆಟಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರುವುದರಿಂದ ಸಿದ್ದರಾಮಯ್ಯನವರು ನಿರಾಳರಾಗಿದ್ದಾರೆ. 2023ರಲ್ಲಿ ಸೋಲಿನ ಮೊದಲ ರುಚಿ ತೋರಿಸುವ ಮೂಲಕ ಬಿಜೆಪಿಯ ಕುಸಿತಕ್ಕೆ ಮುನ್ನುಡಿ ಬರೆದಿದ್ದ ಕರ್ನಾಟಕ, ಇದೀಗ ಸರ್ಕಾರಗಳನ್ನು ಅಸ್ಥಿರಗೊಳಿಸುವ ಬಿಜೆಪಿಯ ರಾಜಕೀಯ ಹುನ್ನಾರಗಳಿಗೂ ತಕ್ಕ ಉತ್ತರ ಕೊಡಲು ಅಣಿಯಾಗಿದೆ. ರೋಚಕವಾಗಿರಲಿವೆ ಮುಂದಿನ ಬೆಳವಣಿಗೆಗಳು….
- ಮಾಚಯ್ಯ ಎಂ ಹಿಪ್ಪರಗಿ