ಬೆಂಗಳೂರು : ಹಿಂದೂ ಮುಖಂಡ, ಸೌಜನ್ಯ ಪರ ಹೋರಾಟಗಾರ, ಧರ್ಮಸ್ಥಳದ ವಿರುದ್ಧ ನಿರಂತವಾಗಿ ಹೋರಾಟ ಮಾಡಿಕೊಂಡು ಬಂದ ಮಹೇಶ್ ಶೆಟ್ಟಿ ತಿಮರೋಡಿ (Mahesh shetty thimarody) ಅವರನ್ನು ಕಳೆದ ಕೆಲ ದಿನಗಳ ಹಿಂದೆ 9 ತಿಂಗಳು ಗಡಿಪಾರು (Exile) ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ಆದ್ರೆ ಈ ಆದೇಶಕ್ಕೆ ಹೈಕೋರ್ಟ್ (Highcourt) ತಡೆಯೊಡ್ಡಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪದ ಪ್ರಕರಣದ ತನಿಖೆ ಸಂದರ್ಭದಲ್ಲಿ ಬುರುಡೆ ಗ್ಯಾಂಗ್ ರಹಸ್ಯ ಬಯಲಾಗಿದ್ದು, ಈ ವೇಳೆ ಪುತ್ತೂರು ಉಪ ವಿಭಾಗಾಧಿಕಾರಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 9 ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿದ್ದರು. 2025ರ ಡಿಸೆಂಬರ್ 16 ರಿಂದ 2026ರ ಸೆಪ್ಟೆಂಬರ್ 16ರವರೆಗೆ ಗಡೀಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಈಗಾಗಲೇ ಖುಲಾಸೆಯಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿ, ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು , ಆ ಬಳಿಕ ನಾವು ಸಲ್ಲಿಸಿರುವ ಆಕ್ಷೇಪಣೆಯನ್ನೂ ಪರಿಗಣಿಸದೆ ಗಡಿಪಾರು ಆದೇಶ ನೀಡಿದ್ದಾರೆ ಎಂದು ಆರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ನ್ಯಾಯಾಲಯದ ಆದೇಶದ ಪ್ರತಿ ಉಪವಿಭಾಗಾಧಿಕಾರಿಗೆ ಸಿಕ್ಕ ಮೂರು ವಾರಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆಯನ್ನು ಪರಿಗಣಿಸಬೇಕು. ಆ ನಂತರ ಕಾನೂನಿನ ಪ್ರಕಾರ ಆದೇಶ ಹೊರಡಿಸಬೇಕು ಎಂದು ಆದೇಶಿಸಿದ್ದಾರೆ.
