ಹಾಸನ: ಖ್ಯಾತ ಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ವಾಸಿಸುವ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಮನೆ ಸಮೀಪದ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೊಮ್ಮೆ ತೀವ್ರ ಜಟಾಪಟಿ ನಡೆದಿದೆ. ವಿದ್ಯಾನಗರ ಬಡಾವಣೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ನಿವೇಶನದ ಬಳಿ ಪುಷ್ಪಾ ಅವರು ಆಗಮಿಸಿದ ವೇಳೆ, ಆ ನಿವೇಶನದ ಜಿಪಿಎ (GPA) ಹೋಲ್ಡರ್ ದೇವರಾಜು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವಂತೆ ಪುಷ್ಪಾ ಅವರು ದೇವರಾಜು ಅವರನ್ನು ಪ್ರಶ್ನಿಸಿದರು. ಮೊದಲು ದಾಖಲೆಗಳನ್ನು ತೋರಿಸುವಂತೆ ಪುಷ್ಪಾ ಅವರು ಒತ್ತಾಯಿಸಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು. “ನಾನು ಸೆಲೆಬ್ರಿಟಿ ತಾಯಿ ಅಂತ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು” ಎಂದು ಹೇಳಿದ ಪುಷ್ಪಾ, ಇನ್ನು ಮುಂದೆ ನಿವೇಶನದೊಳಗೆ ಕಾಲಿಡಬಾರದು ಎಂದು ದೇವರಾಜು ಅವರಿಗೆ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು, “ಈ ರೀತಿ ಮಾತನಾಡುವುದು ಸರಿಯಲ್ಲ” ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಪುಷ್ಪಾ ಅವರು ಕಠಿಣವಾಗಿ ಪ್ರತಿಕ್ರಿಯಿಸಿ, “ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತಿಯಾ? ಇದರ ಬಗ್ಗೆ ನಾನು ಎಸ್ಪಿ ಅವರಿಗೆ ದೂರು ನೀಡುತ್ತೇನೆ. ಇನ್ನು ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ” ಎಂದು ಎಚ್ಚರಿಕೆ ನೀಡಿದರು. ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪ್ರಕರಣ ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ.
