ಇದರಲ್ಲಿ ಬ್ರಿಟಿಷ್ ವಿರೋಧದ ಜೊತೆ ಜೊತೆಗೇ ನಮ್ಮ ಗಮನ ಸೆಳೆಯುವ ಒಂದು ಸಂಗತಿ, ಈ ಬ್ರಿಟಿಷ್ ವಿರೋಧ ನೆಲೆ ನಿಂತಿರುವುದೇ ಆರ್ಯರಾಷ್ಟ್ರ ಸ್ಥಾಪನೆಯ ಗುರಿಯ ಮೇಲೆ ಎಂಬುದು. ಯುದ್ಧ, ಆಕ್ರಮಣ, ಧಾರ್ಮಿಕ ಸಿದ್ಧಾಂತಕ್ಕಾಗಿ ಜೀವತ್ಯಾಗ ಮಾಡಲು ಆಹ್ವಾನ ಎಲ್ಲವೂ ಈ ಲೇಖನದಲ್ಲಿ ತುಂಬಿ ತುಳುಕುತ್ತಿದೆ. ಬ್ರಾಹ್ಮಣರ ಒಳಗಿನ ಪ್ರಗತಿಪರರೇ ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದ ಸತಿಪದ್ಧತಿಯಂತಹ ಅನಾಚಾರಗಳನ್ನು ಆದರ್ಶವಾಗಿಸುವ ನವಸಂಪ್ರದಾಯವಾದಿ ಬ್ರಾಹ್ಮಣ್ಯದ ಗಂಡು ನಿಲುವುಗಳು ಪ್ರತಿ ಶಬ್ದದಲ್ಲೂ ತುಂಬಿಕೊಂಡಿರುವುದನ್ನು ಗುರುತಿಸಲು ದೊಡ್ಡ ಸಂಶೋಧಕನ ಬುದ್ಧಿಯೇನೂ ಇಲ್ಲಿ ಅಗತ್ಯವಿಲ್ಲ.
ನವಸಂಪ್ರದಾಯವಾದಿ ಬ್ರಾಹ್ಮಣ ರಾಜಕಾರಣವನ್ನು ಮುನ್ನಡೆಸುತ್ತಿದ್ದ ವಿಚಾರಧಾರೆಗಳು ಯಾವುವೆಲ್ಲ ಎಂದು ಮತ್ತೊಮ್ಮೆ ಕ್ರೋಢೀಕರಿಸಿ ನೋಡೋಣ. ಮೊದಲನೆಯದಾಗಿ, ಬ್ರಿಟಿಷ್ ವಿರೋಧಕ್ಕೆ ಅದು ವೀರತ್ವದ ಮುಖವಾಡ ನೀಡಿತು. ವೇದಭಾರತದ, ಅಂದರೆ ಬ್ರಾಹ್ಮಣ ಪ್ರಾಬಲ್ಯಕ್ಕೆದುರಾಗಿ ಪ್ರಶ್ನೆಗಳೇ ಏಳದ ಭಾರತದ ಸುವರ್ಣ ಸ್ಮರಣೆಗಳನ್ನು ಎತ್ತಿಹಿಡಿದುಕೊಂಡು ಬ್ರಿಟಿಷ್ ವಿರೋಧವನ್ನು ಸ್ಥಾಪಿಸಲು ಅವರು ಶ್ರಮಿಸಿದರು. ಬ್ರಿಟಿಷರ ಮೊದಲ ಯುದ್ಧ ಮುಸ್ಲಿಂ ರಾಜರುಗಳೊಂದಿಗಾಗಿತ್ತು ಎಂಬುದನ್ನು ಅವರು ಉದ್ದೇಶಪೂರ್ವಕವಾಗಿ ಮರೆ ಮಾಚಿದರು. ಮರಾಠ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯವಾಗಿ ಹಲವು ಸಂವಾದ ಸರಣಿಗಳ ಮೂಲಕವೂ ಗಣಪತಿ ಉತ್ಸವದ ಮುಂದುವರಿಕೆಯಾಗಿ ಬಂದ ಶಿವಾಜಿ ಉತ್ಸವಗಳ ಮೂಲಕವೂ ಚಿತ್ರಿಸಿದರು. ಇಂಡಿಯಾದ ಮುಸ್ಲಿಂ ಸಾಮ್ರಾಜ್ಯಗಳನ್ನು, ಅವರು ಮೊಘಲರಾಗಿದ್ದರೂ ಸರಿ, ಡೆಕ್ಕನ್ ಸುಲ್ತಾನರಾಗಿದ್ದರೂ ಸರಿ ಅಥವಾ ಹೈದರಾಬಾದಿನ ನಿಜಾಮರಾಗಿದ್ದರೂ ಸರಿ ಅವರೆಲ್ಲರನ್ನು ಹಿಂದೂ ವಿರೋಧಿ ಮ್ಲೇಚ್ಛರಾಗಿಯೇ ಚಿತ್ರಿಸಿದರು. ಆಂಗ್ಲರ ಆಡಳಿತವನ್ನು ಈ ಮ್ಲೇಚ್ಛರ ಮುಂದುವರಿಕೆಯಾಗಿಯೇ ಅವರು ಕಂಡರು.
ಸೂಕ್ಷ್ಮವಾಗಿ ಗಮನಿಸಿದರೆ ಈ ಚಿತ್ಪಾವನ ನಿಯಂತ್ರಿತ ನವಸಂಪ್ರದಾಯವಾದಿ ಬ್ರಾಹ್ಮಣ ಸಂಘವು ರಾಜಾಡಳಿತ ಕಾಲದ ಸಂಘರ್ಷಗಳ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಯುದ್ಧಗಳ, ಮುಂದುವರಿಕೆಯಾಗಿ ಬ್ರಿಟಿಷರ ವಿರುದ್ಧದ ರಾಜಕೀಯ ಸಂಘರ್ಷವನ್ನು ಕಂಡಿತು. ಅದರ ಪ್ರಯೋಗಗಳು ಹಿಂಸಾತ್ಮಕವೂ, ವಿಚಾರಹೀನವೂ ಆಗಿದ್ದವು. ಅದರ ಆಧುನಿಕತೆ ಹಿಂದೂ ಧರ್ಮದ ಗಡಿರೇಖೆಗಳ ತನಕವಷ್ಟೇ ಚಾಚಿಕೊಂಡಿತ್ತು. ಅವರು ಬ್ರಾಹ್ಮಣ ಸಮುದಾಯದ ಒಳಗಡೆಯೇ ರೂಪುಗೊಂಡ ಪ್ರಗತಿಪರ ಆಧುನಿಕತೆಯನ್ನೂ, ಅವರ ಜಾತಿಪ್ರಜ್ಞೆಯ ಹೊರಗೆ ರೂಪುಗೊಂಡ ಕೆಳಜಾತಿ ಆಧುನಿಕತೆಯನ್ನೂ ಬ್ರಿಟಿಷರನ್ನು ಎದುರಿಸಿದ ಹಾಗೆಯೇ ಎದುರಿಸಿದ್ದರು. ದಂಡಪಾನಿಗಳಾಗಿದ್ದ ಚಾಪೇಕರ್ ಸಹೋದರರ ಸಂಘ ತಮ್ಮ ದಂಡದ ಮೂಲಕ ಮೇಲೆ ಹೇಳಿದ ಎದುರಾಳಿಗಳನ್ನೆಲ್ಲ ಹೊಡೆದು ಹಾಕಿದ್ದನ್ನು ನಾವು ಚರ್ಚಿಸಿದೆವು. ಈಗಲೂ ಹಿಂದೂ ಸಂಘಟನೆಗಳ, ವಿಶೇಷವಾಗಿ ಆರ್ಎಸ್ಎಸ್ನ ಒಂದು ಅತಿ ಮುಖ್ಯ ಗುರುತು ದಂಡ ಅಥವಾ ಲಾಠಿಯೇ ಆಗಿದೆ.
ತಿಲಕ್ ಈ ಬ್ರಾಹ್ಮಣಿಸಮ್ಮಿಗೆ ಆಧುನಿಕತೆಯ ಮುಖವಾಡ ತೊಡಿಸಲು ಪ್ರಯತ್ನಿಸಿದರು ಎಂದು ನಾವು ಗಮನಿಸಿದೆವು. ಬ್ರಿಟಿಷರು ಎಂದಾದರು ಒಂದು ದಿನ ಗಂಟುಮೂಟೆ ಕಟ್ಟಿಕೊಂಡು ಹೊರಡುವಾಗ ತಮ್ಮ ಪ್ರಾಬಲ್ಯದ ಆಡಳಿತ ರೀತಿಯನ್ನು ಜಾರಿಗೊಳಿಸಲು ಮುಸ್ಲಿಮರ ಮತ್ತು ಕೆಳಜಾತಿಗಳ ಬೆಂಬಲ ಅನಿವಾರ್ಯವೆಂದು ತಿಲಕ್ ಕಾಲಕ್ರಮೇಣ ಅರ್ಥಮಾಡಿಕೊಂಡರು. ಮುಸ್ಲಿಂ ದ್ವೇಷವನ್ನೂ ಕೆಳಜಾತಿ ತಾರತಮ್ಯವನ್ನೂ ಹೆಗಲಿಗೇರಿಸಿಕೊಂಡು ನಡೆಯುತ್ತಿದ್ದ ಸಂಪ್ರದಾಯವಾದಿಗಳಿಗೆ ಈ ತಂತ್ರ ಗೊಂದಲ ಸೃಷ್ಟಿಸಿದ್ದನ್ನೂ ನಾವು ನೋಡಿದೆವು.
ತಿಲಕ್ ಬ್ರಾಹ್ಮಣಿಸಮ್ಮಿಗೆ ನೀಡಿದ ಆಧುನಿಕ ರೂಪದಲ್ಲಿ ಅತ್ಯಂತ ಪ್ರಮುಖವಾದುದು ಅದನ್ನು ಗುಟನ್ಬರ್ಗ್ ಯುಗಕ್ಕೂ ದೇಶವೆಂಬ ಪರಿಕಲ್ಪನೆಯ ಕಡೆಗೂ ತಲುಪಿಸಿತು ಎಂಬುದು. ಅಂದರೆ, ವಿದ್ಯಾಭ್ಯಾಸದ ಆಧುನಿಕ ರೀತಿನೀತಿಗಳು ಬಾಂಬೆ ಪ್ರಸೆಡೆನ್ಸಿಯಲ್ಲಿ ವ್ಯಾಪಕವಾಗತೊಡಗಿದಾಗ ಸಹಜವಾಗಿಯೇ ಶತಮಾನಗಳಿಂದ ಪ್ರಶ್ನಾತೀತವಾಗಿ ಮುಂದುವರಿಯುತ್ತಿದ್ದ ಬ್ರಾಹ್ಮಣ್ಯದ ಮೌಲ್ಯಗಳು ಪ್ರಶ್ನಿಸಲ್ಪಟ್ಟವು. ಕೆಳಜಾತಿ ಚಳುವಳಿಗಳು ಇದನ್ನು ಮುಂದಿಟ್ಟುಕೊಂಡು ವಿದ್ಯಾಭ್ಯಾಸದ ಪ್ರಚಾರವನ್ನು ಶುರು ಮಾಡಿತು. ವಿದ್ಯೆಯನ್ನು ಪ್ರಭುತ್ವ ಮತ್ತು ಸ್ವಾತಂತ್ರ್ಯದ ಕೇಂದ್ರವಾಗಿ ಘೋಷಿಸಿಕೊಂಡರು. ಆದ್ದರಿಂದ ಬ್ರಾಹ್ಮಣ್ಯದ ಮುಂದುವರಿಕೆಗೆ ಒಂದು ಆಧುನಿಕತೆ ಅತ್ಯಗತ್ಯವಾಗಿತ್ತು. ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಚಿರಪರಿಚಿತವಾದ ಪೌರಾಣಿಕ ಕತೆಗಳನ್ನು ತಿಲಕರ ಪೌರೋಹಿತ್ಯದಲ್ಲಿ ಬ್ರಿಟಿಷ್ ವಿರೋಧೀ ಹಿನ್ನೆಲೆಯ ನಾಟಕಗಳಾಗಿ ರಂಗಕ್ಕೇರಿಸುವುದನ್ನು ನಾವು ನೋಡಿದೆವು. ಅದರ ಜೊತೆಗೆ ಹೊಸದಾಗಿ ಹುಟ್ಟಿಕೊಂಡಿದ್ದ ಸಿನಿಮಾ ಎಂಬ ಕಲಾರೂಪದ ಮೇಲೂ ತಿಲಕರ ನವಸಂಪ್ರದಾಯವಾದಿ ಬ್ರಾಹ್ಮಣ್ಯ ಪ್ರಭಾವ ಬೀರಿತು. ತಿಲಕರ ಪ್ರಭಾವಕ್ಕೆ ಬಿದ್ದು ಸರ್ವೇ ಡಿಪಾರ್ಟ್ಮೆಂಟಿನ ಕೆಲಸಕ್ಕೆ ರಾಜಿನಾಮೆ ನೀಡಿದ್ದ ಚಿತ್ಪಾವನ ಬ್ರಾಹ್ಮಣ ದಾದಾಸಾಹೇಬ್ ಫಾಲ್ಕೆ ನವಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ರಂಗವನ್ನು ರಾಜಾ ಹರಿಶ್ಚಂದ್ರ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಗೆ ತಂದರು. ತಿಲಕರ ಕೇಸರಿ ಅದನ್ನು ಪ್ರೋತ್ಸಾಹಿಸಿತು. ಸ್ವದೇಶೀ ಘೋಷಣೆಯನ್ನು ಪ್ರೋತ್ಸಾಹಿಸಲು ತಿಲಕ್ ಆರಂಭಿಸಿದ್ದ ಬಂಡವಾಳ ಸಂಸ್ಥೆ ಪೈಸಾನಿಧಿ, ಫಾಲ್ಕೆ ಸಹಾಯಕ್ಕಾಗಿ ಮುಂದೆ ಬಂದಿತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ಆಧುನಿಕ ಮಾಧ್ಯಮಗಳನ್ನು ಬ್ರಾಹ್ಮಣ ಮೇಲುಗೈಯ ಪ್ರಚಾರಕ್ಕೆ ಅಣಿಗೊಳಿಸುವ ಗುರಿಯೊಂದಿಗೆ ಸ್ಥಾಪಿಸಲ್ಪಟ್ಟ ಸಾಂಸ್ಕೃತಿಕ ರೂಪಗಳಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯಾಚರಿಸಿದ್ದು ಮಾತ್ರ ಬೆನ್ನು ಬೆನ್ನಿಗೆ ಹುಟ್ಟಿಕೊಂಡ ಪತ್ರಿಕೆಗಳಾಗಿದ್ದವು. ತಿಲಕ್ ಆರಂಭಿಸಿದ್ದ ಕೇಸರಿ ಮತ್ತು ಮರಾಠಗಳ ಮಾದರಿಯಲ್ಲಿ ಹಲವಾರು ಪತ್ರಿಕೆಗಳು ಹುಟ್ಟಿಕೊಂಡವು. ನಾವು ಈ ಮೊದಲೇ ಚರ್ಚಿಸಿದ ಪರಾಂಜಪೆಯ ಕಾಲ್ ಅವುಗಳಲ್ಲಿ ಮುಖ್ಯವಾದ ಒಂದಾಗಿತ್ತು. ʼಕಾಲ್ʼನ ಪತ್ರಿಕೋದ್ಯಮದ ಶೈಲಿಯನ್ನು ಉದಾಹರಿಸಲು ಅದರಲ್ಲಿ ಪ್ರಕಟವಾಗಿದ್ದ ಒಂದು ಲೇಖನವನ್ನು ನೀಡುತ್ತಿದ್ದೇನೆ.
ʼನಾವು ಆರ್ಯರು ಕುರಿಮಂದೆಗಳಲ್ಲ. ನಮಗೆ ನಮ್ಮ ಸ್ವಂತ ದೇಶವಿದೆ. ಸ್ವಂತ ಧರ್ಮ, ಸ್ವಂತ ನಾಯಕರು, ಸ್ವಂತ ಆಡಳಿತಾಧಿಕಾರಿಗಳು, ಸ್ವಂತ ಯೋಧರು ಇದ್ದಾರೆ. ಇಂಗ್ಲೀಷರೊಂದಿಗೆ ಸಂಬಂಧ ಸಾಧಿಸುವಾಗ ನಾವು ಅವರನ್ನೆಲ್ಲ ಉಪೇಕ್ಷಿಸಬೇಕಾಗಿಲ್ಲ. ಇವೆಲ್ಲ ನಮಗೆ ಹೊಸ ಸಂಗತಿಗಳಲ್ಲ. ಇಂದು ಅವರ ಆಡಳಿತ ಕೇಂದ್ರಗಳ ಮತ್ತು ನಾಗರಿಕತೆಯ ಬಗ್ಗೆ ಬುರುಡೆ ಬಿಡುವ ಜನರ ಪೂರ್ವಿಕರು ಅರಣ್ಯವಾಸಿಗಳಾಗಿ ನೀಚರಾಗಿ ಬದುಕುತ್ತಿದ್ದಾಗಲೂ, ಅದಕ್ಕಿಂತ ಶತಮಾನಗಳ ಹಿಂದೆಯೂ, ಹೃದಯ ಮತ್ತು ಮೆದಳಿನ ಸಕಲ ಗುಣಸಂಪತ್ತನ್ನು ನಾವು ಗಳಿಸಿಕೊಂಡಿದ್ದೆವು. ಈ ಪುಣ್ಯವೂ ಪುರಾತನವೂ ಆದ ನಮ್ಮ ಭೂಮಿ, ಅವಳ ನೆಲವನ್ನು ಖಂಡಿತವಾಗಿ ಮರಳಿ ಪಡೆಯುತ್ತೇವೆ. ಪುನಹ ಆರ್ಥಿಕ, ಕಲಾ, ಶಾಂತಿಯ ಕ್ಷೇತ್ರಗಳಲ್ಲಿ ಅವಳ ಆಂತರಿಕ ಶೋಭೆಯನ್ನು ಹೊರತರುತ್ತೇವೆ. ತಮ್ಮ ಗುರಿಯನ್ನು ತಲುಪಲು ಜನರು ಜೀವತ್ಯಾಗ ಮಾಡಬೇಕು ಎಂಬುದು ಖಂಡಿತವಾದ ಒಂದು ಜವಾಬ್ದಾರಿಯೆಂಬ ಪುಣ್ಯಪ್ರಚೋದನೆ ಹರಡಿಕೊಳ್ಳುತ್ತಿದೆ. ಕಠಿಣವಾದ ಜೈಲುಶಿಕ್ಷೆ ಅವರನ್ನು ಅಸ್ಥಿಪಂಜರದ ಗೂಡು ಮಾತ್ರವಾಗಿಸಿದರೂ, ನಮ್ಮ ನಡುವಿನಿಂದ ನಾಯಕರುಗಳು ನಿರಂತರವಾಗಿ ಹುಟ್ಟುತ್ತಲೇ ಇರುತ್ತಾರೆ. ತಾಯಿಯ ಸೇವೆಗಾಗಿ ನಾವು ನಮ್ಮನ್ನೇ ಸಮರ್ಪಿಸಿಕೊಳ್ಳೋಣ. ಭಕ್ತಿಯ/ಸಮರ್ಪಣೆಯ ಹುಚ್ಚು ಹಿಡಿದ ಮನುಷ್ಯ ತನ್ನ ಸಿದ್ದಾಂತಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾನೆ. ಅವನ ಶಕ್ತಿ ಅದೃಶ್ಯ ವಾಗಿರುತ್ತದೆ. ವಿಧವೆಯೊಬ್ಬಳು ತನ್ನ ಪತಿಯ ಚಿತೆಯಲ್ಲಿ ತನ್ನನ್ನು ತಾನು ಅಗ್ನಿಗಾಹುತಿಕೊಟ್ಟುಕೊಳ್ಳುವ ಹಾಗೆ ತಾಯಿಗಾಗಿ ನಾವೂ ಸಾಯೋಣ.ʼ
ಇದರಲ್ಲಿ ಬ್ರಿಟಿಷ್ ವಿರೋಧದ ಜೊತೆ ಜೊತೆಗೇ ನಮ್ಮ ಗಮನ ಸೆಳೆಯುವ ಒಂದು ಸಂಗತಿ, ಈ ಬ್ರಿಟಿಷ್ ವಿರೋಧ ನೆಲೆ ನಿಂತಿರುವುದೇ ಆರ್ಯರಾಷ್ಟ್ರ ಸ್ಥಾಪನೆಯ ಗುರಿಯ ಮೇಲೆ ಎಂಬುದು. ಯುದ್ಧ, ಆಕ್ರಮಣ, ಧಾರ್ಮಿಕ ಸಿದ್ಧಾಂತಕ್ಕಾಗಿ ಜೀವತ್ಯಾಗ ಮಾಡಲು ಆಹ್ವಾನ ಎಲ್ಲವೂ ಈ ಲೇಖನದಲ್ಲಿ ತುಂಬಿ ತುಳುಕುತ್ತಿದೆ. ಬ್ರಾಹ್ಮಣರ ಒಳಗಿನ ಪ್ರಗತಿಪರರೇ ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದ ಸತಿಪದ್ಧತಿಯಂತಹ ಅನಾಚಾರಗಳನ್ನು ಆದರ್ಶವಾಗಿಸುವ ನವಸಂಪ್ರದಾಯವಾದಿ ಬ್ರಾಹ್ಮಣ್ಯದ ಗಂಡು ನಿಲುವುಗಳು ಪ್ರತಿ ಶಬ್ದದಲ್ಲೂ ತುಂಬಿಕೊಂಡಿರುವುದನ್ನು ಗುರುತಿಸಲು ದೊಡ್ಡ ಸಂಶೋಧಕನ ಬುದ್ಧಿಯೇನೂ ಇಲ್ಲಿ ಅಗತ್ಯವಿಲ್ಲ.
ಈ ಕಾಲ್ ಪತ್ರಿಕೆ ಮತ್ತು ಅದರ ಸಂಪಾದಕ ಪರಾಂಜಪೆ ಸಾವರ್ಕರನ ವ್ಯಕ್ತಿತ್ವ ರೂಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದವರು. ಅದರ ಕುರಿತು ಸ್ವತಹ ಸಾವರ್ಕರ್ ಹೀಗೆ ಹೇಳುತ್ತಾನೆ.
ʼಎಲ್ಲಿ ಹೋದರೂ ಕಾಲ್ ಓದುವುದರಲ್ಲಿ ಮತ್ತು ಅದನ್ನು ಇತರರಿಗೆ ಓದಿಸಿ ಕೊಡುವುದರಲ್ಲಿ ನಾವು ಅಗತ್ಯವಾಗಿ ಗಮನ ಹರಿಸುತ್ತಿದ್ದೆ. ಯಾಕೆಂದರೆ ಉಳಿದ ಯಾವ ಪತ್ರಿಕೆಯೂ ಸಶಸ್ತ್ರ ಹೋರಾಟವನ್ನು ಬೆಂಬಲಿಸಿರಲಿಲ್ಲ. ನನ್ನ ಅಭಿಪ್ರಾಯ ರೂಪುಗೊಳಿಸುವಲ್ಲಿ ನೇರವಾಗಿ ಸಹಾಯ ಮಾಡಿಲ್ಲದಿದ್ದರೂ ಕೂಡ ಅದು (ಕಾಲ್) ನನ್ನ ಜ್ಞಾನ ಮತ್ತು ಅರ್ಥೈಸುವಿಕೆಯನ್ನು, ಭಾಷಾ ಶೈಲಿಯನ್ನು, ಉತ್ಸಾಹವನ್ನು ಖಂಡಿತವಾಗಿ ಪ್ರಭಾವಿಸಿದೆ. ನನ್ನ ಕ್ರಾಂತಿಯ ಪ್ರಚೋದನೆಗೆ ಯಾರನ್ನಾದರು ಗುರುವಾಗಿ ಸ್ವೀಕರಿಸುವುದಿದ್ದರೆ ಅದು ಖಂಡಿತವಾಗಿಕಾಲ್ ಆಗಿರತ್ತದೆ.ʼ
೧೮೯೯ ರಲ್ಲಿ ಪ್ಲೇಗ್ ನಾಸಿಕ್ ತಲುಪಿತು. ವಿನಾಯಕ್ ಮತ್ತು ಬಾಬುರಾವ್ ಎಂಬ ಗಣೇಶ್ ಓದು ನಿಲ್ಲಿಸಿ ಭಾಗೂರಿಗೆ ಮರಳಿದರು. ಅಲ್ಲಿಯೂ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಪ್ಲೇಗ್ ಭಾಗೂರನ್ನು ಹರಿದು ಮುಕ್ಕತೊಡಗಿತ್ತು. ಒಂದು ದಿನ ಅದು ದಾಮೋದರ್ ಪಂತ್ನನ್ನೂ ಹಿಡಿದು ಬಿಟ್ಟಿತು. ಅಂದು ಬಹುತೇಕ ಬ್ರಾಹ್ಮಣರು ಮಾಡುವ ಹಾಗೆ ಸ್ಪೆಷಲ್ ಪ್ಲೇಗ್ ಕಮಿಟಿಗೆ ಮಾಹಿತಿ ನೀಡಲಾಗಲೀ ರೋಗಿಗೆ ಆಧುನಿಕ ಚಿಕಿತ್ಸೆ ನೀಡಲಾಗಲೀ ಯಾರೂ ಮುಂದಾಗಲಿಲ್ಲ. ಬದಲಿಗೆ ಅದನ್ನು ಗೌಪ್ಯವಾಗಿಟ್ಟು ಮನೆಯಲ್ಲಿಯೇ ನಾಟಿ ಚಿಕಿತ್ಸೆ ನೀಡಲು ಸಾವರ್ಕರ್ ಕುಟುಂಬ ತೀರ್ಮಾನಿಸಿತು. ವಿನಾಯಕನ ಕಿರಿಯ ಸಹೋದರ ನಾರಾಯಣ್ ದಾಮೋದರ್ ಸಾವರ್ಕರ್ ಎಂಬ ಬಾಲ್ಗೂ ಪ್ಲೇಗ್ ಬಾಧಿಸಿತು. ೧೮೯೯ ಸೆಪ್ಟೆಂಬರ್ ೫ರಂದು ರೋಗ ಉಲ್ಬಣಗೊಂಡು ದಾಮೋದರ್ ತೀರಿದರು. ಬಾಲ್ ಪರಿಸ್ಥಿತಿಯೂ ಬಿಗಡಾಯಿಸಿತ್ತು. ಇನ್ನು ಮುಚ್ಚಿಡಲಾಗದಂತ ಪರಿಸ್ಥಿತಿ ಬಂದಾಗ ಅವರು ಮನೆ ಬಿಟ್ಟು ನಗರದ ಹೊರಭಾಗದಲ್ಲಿ ಕಟ್ಟಿದ್ದ ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸತೊಡಗಿದರು.
ಬಾಲ್ನ ರೋಗ ಮತ್ತಷ್ಟು ಉಲ್ಬಣಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲು ಸಾವರ್ಕರ್ ಸಹೋದರರು ನಿರ್ಬಂಧಿತರಾದರು. ಆದರೂ, ಯೂರೋಪಿಯನ್ ನರ್ಸ್ಗಳ ಕೈಯಲ್ಲಿ ಶುಶ್ರೂಷೆ ಮಾಡಿಸಲು ಬ್ರಾಹ್ಮಣ ಪ್ರಜ್ಞೆ ಬಾಬುರಾವ್ನನ್ನು ತಡೆಯಿತು ಎಂದೇ ಇಲ್ಲಿ ಭಾವಿಸಬೇಕಾಗುತ್ತದೆ. ರೋಗದ ಸಾಂಕ್ರಾಮಿಕತೆಗಿಂತ ಬ್ರಾಹ್ಮಣ ಪ್ರಜ್ಞೆಯ ಶಕ್ತಿ ದೊಡ್ಡದಾಗಿ ಕಂಡ ಕಾರಣ ಆತನೇ ತನ್ನ ತಮ್ಮನ ಶುಶ್ರೂಷೆಗೆ ಆಸ್ಪತ್ರೆಯಲ್ಲಿ ನಿಲ್ಲುತ್ತಾನೆ. ಅದರ ಫಲವಾಗಿ ಆತನೂ ರೋಗಬಾಧಿತನಾಗುತ್ತಾನೆ. ಆದರೂ, ಬಾಲ್ ಮತ್ತು ಬಾಬುರಾವ್ ಕ್ರಮೇಣ ರೋಗದಿಂದ ಮುಕ್ತಿ ಹೊಂದುತ್ತಾರೆ. ನಾಸಿಕ್ನಲ್ಲಿ ರೋಗದ ಪ್ರಭಾವ ಇಳಿಯತೊಡಗಿದೆ ಎಂದು ಅರಿತ ಸಾವರ್ಕರ್ ಕುಟುಂಬ ತಮ್ಮ ಬದುಕಿನ ಉಳಿದ ಭಾಗವನ್ನು ನಾಸಿಕ್ನಲ್ಲಿ ಕಳೆಯಲು ತೀರ್ಮಾನಿಸುತ್ತಾರೆ.
ಒಂಭತ್ತನೇ ವಯಸ್ಸಿಗೆ ತಾಯಿಯನ್ನೂ ಹದಿನಾರನೇ ವಯಸ್ಸಿಗೆ ತಂದೆಯನ್ನೂ ಕಳೆದುಕೊಂಡ ವಿನಾಯಕ್ ಮತ್ತು ಉಳಿದ ಇಬ್ಬರು ಒಡಹುಟ್ಟಿದವರ ಪಾಲನೆಯ ಜವಾಬ್ದಾರಿ ಬಾಬುರಾವ್ ಎಂಬ ಗಣೇಶ್ ದಾಮೋದರ್ ಸಾವರ್ಕರ್ ಹೆಗಲ ಮೇಲೆ ಬಿದ್ದಿತ್ತು. ಆತ ಈ ನಡುವೆ ಮದುವೆಯೂ ಆಗಿದ್ದ. ವಿನಾಯಕ್ ದಾಮೋದರ್ ಸಾವರ್ಕರ್ ತನ್ನ ಬದುಕಿನಲ್ಲಿ ಯಾವುದಾದರು ಹೆಣ್ಣನ್ನು ಮುಕ್ತವಾಗಿ ಪ್ರಶಂಸಿಸಿದ್ದರೆ ಅದು ಬಾಬುರಾವನ ಹೆಂಡತಿ ಯಶುವಾಹಿನಿ ಎಂಬ ಯಶೋಧರೆಯನ್ನು ಮಾತ್ರ. ಆತನ ಬದುಕಿನಲ್ಲಿ ಆಳವಾಗಿ ಪ್ರಭಾವ ಬೀರಿದ ಮೊದಲ ಮಹಿಳೆ ಯಶುವಾಹಿನಿಯೆಂದು ಧೈರ್ಯವಾಗಿ ಹೇಳಬಹುದು. ಆಕೆ ವಿನಾಯಕನಿಗಿಂತ ಎರಡು ವರ್ಷ ಕಿರಿಯಳಾಗಿದ್ದಳು. ಮೊದಲ ಭೇಟಿಯಲ್ಲಿಯೇ ತಮ್ಮ ನಡುವೆ ಉಂಟಾದ ಮಮತಾಬಾಂಧವ್ಯದ ಕುರಿತು ವಿ.ಡಿ. ಸಾವರ್ಕರ್ ವಿವರವಾಗಿ ದಾಖಲಿಸಿದ್ದಾನೆ. ಬಾಬುರಾವ್ ಮದುವೆಯಾಗಿ ಕರೆತರುವಾಗ ‘ಅತ್ತಿಗೆ’ಗೆ ಕಣ್ಣಿನ ನೋವಿತ್ತು. ಅದನ್ನು ಶುಶ್ರೂಷೆ ಮಾಡಿದ್ದು, ಆಕೆಗೆ ಓದು ಬರಹ ಕಲಿಸಿದ್ದು, ತನ್ನ ಕವಿತೆಯನ್ನು ಓದಿ ಹೇಳಿದ್ದು ಇತ್ಯಾದಿ. ಯೆಶು ಗಜಗೌರಿಹಾಡು ಸಹಿತ ಹಲವು ಕೀರ್ತನೆಗಳನ್ನು ವಿನಾಯಕನಿಗೆ ಕಲಿಸಿದಳು. ತನ್ನ ಆತ್ಮಕತೆಯಲ್ಲಿ ಹೇಳಿಕೊಳ್ಳದಿದ್ದರೂ ನಂತರದ ಕಾಲದಲ್ಲಿ ವಿನಾಯಕನ ಮೇಲೆ ಪ್ರಭಾವ ಬೀರಿದ ಲಾರೆನ್ಸ್ ಮಾರ್ಗರೇಟ್ ಎಂಬ ಆಂಗ್ಲ ಪ್ರೇಯಸಿಯ ಬಗ್ಗೆ ಇತರ ಆತ್ಮಕತೆಗಾರರು ಬೆಳಕು ಚೆಲ್ಲುತ್ತಾರೆ.ಯೆಶುವಾಹಿನಿಯ ನಂತರ ಇನ್ನೊಂದು ಬಗೆಯಲ್ಲಿ ವಿನಾಯಕ್ ಮೇಲೆ ಗಾಢ ಪ್ರಭಾವ ಬೀರಿದ ಹೆಣ್ಣು ಎಂಬ ನೆಲೆಯಲ್ಲಿ.
ಸಾವರ್ಕರ್ ತನ್ನ ಭೂಗತ ಸಂಘವನ್ನು ನಾಸಿಕ್ನಲ್ಲಿಯೇ ಶುರು ಮಾಡುತ್ತಾನೆ. ಆಸ್ಪತ್ರೆಯಲ್ಲಿದ್ದಾಗ ಬಾಬುರಾವ್ಗೆ ಪರಿಚಯವಾಗಿದ್ದ ತ್ರಯಂಬಕ್ ರಾವ್ ಮಸ್ಕರ್, ಆತನ ಗೆಳೆಯ ರಾವುಜಿ ಕೃಷ್ಣ ಪಾಗೇ ಅವರುಗಳೊಂದಿಗೆ ಸೇರಿಕೊಂಡು ೧೮೯೯ರ ನವೆಂಬರ್ ತಿಂಗಳಲ್ಲಿ ಸಾವರ್ಕರ್ ರಾಷ್ಟ್ರಭಕ್ತಸಮೂಹ ಎಂಬ ಭೂಗತ ಸಂಘವನ್ನು ಹುಟ್ಟು ಹಾಕುತ್ತಾನೆ. ಮೂವತ್ತರ ವಯಸ್ಸಿನ ಮಸ್ಕರ್ ಮತ್ತು ಪಾಗೇ ಅವರಿಗೆ ಹದಿನಾರರ ಹುಡುಗ ಸಾವರ್ಕರ್ ನಾಯಕನಾಗಿದ್ದ. ಮೂವರು ಸೇರಿಕೊಂಡು ಭಾರತವನ್ನು ಸಶಸ್ತ್ರ ಹೋರಾಟದ ಮೂಲಕ ವಿಮೋಚನೆಗೊಳಿಸುತ್ತೇವೆಂದೂ ಅದಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈಯ್ಯುತ್ತೇವೆಂದೂ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಅವರು ತಮ್ಮ ಭೂಗತ ಸಂಘಕ್ಕೆ ಚಾಲನೆ ನೀಡುತ್ತಾರೆ. ಕಾಲ್ ಸಂಪಾದಕ ಎಸ್.ಎಂ. ಪರಾಂಜಪೆಯನ್ನು ತಮ್ಮ ಸಂಘದ ಉಪದೇಶಕರನ್ನಾಗಿ ನೇಮಿಸಲು ತೀರ್ಮಾನಿಸುತ್ತಾರೆ. ಅತ್ಯಂತ ತೀವ್ರ ತಿಲಕ್ವಾದಿಗಳಾಗಿದ್ದ ಇವರು ತಿಲಕರನ್ನು ತಮ್ಮ ಸಂಘದ ರಕ್ಷಾಧಿಕಾರಿಯಾಗಿ ಆಹ್ವಾನಿಸಲು ತಕ್ಷಣ ತಯಾರಾಗಲಿಲ್ಲ. ಏನಾದರು ಮೌಲ್ಯಯುತವಾದ ಕೆಲಸ ಮಾಡಿ ತೋರಿಸಿದ ನಂತರವೇ ತಿಲಕರನ್ನು ಭೇಟಿಯಾಗುವುದೆಂದು ತೀರ್ಮಾನ ಮಾಡಿದರು. ರಾಂ ಹರಿ ಎಂಬ ಕಳ್ಳ ಹೆಸರಿನಡಿಯಲ್ಲಿ ಈ ಭೂಗತ ಸಂಘವನ್ನು ಅವರು ಮುಚ್ಚಿಟ್ಟರು.
ದ್ವಿಮುಖ ಸಂಘಟನೆಯ ರೂಪವೊಂದು ಸಾವರ್ಕರ್ ಮನಸ್ಸಿನಲ್ಲಿತ್ತು. ಒಂದು ಹೊರಗಡೆ ಕೆಲಸ ಮಾಡುವ ಚಳುವಳಿ ರೂಪದಲ್ಲಿ. ಅದು ಮೇಳ ಮತ್ತು ಉತ್ಸವಗಳನ್ನು ಸಂಘಟಿಸಿ ಆ ಮೂಲಕ ಯುವಜನರನ್ನು ಸೆಳೆಯುವ ಕೆಲಸ ಮಾಡಬೇಕು. ಇನ್ನೊಂದು ಸಶಸ್ತ್ರ ಚಳುವಳಿ. ಇದುವೇ ಪ್ರಧಾನವಾದದ್ದು. ಆ ಸಂಘ ಆಡಳಿತ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಭಯೋತ್ಪಾದಕ ಕೃತ್ಯಗಳನ್ನು ಸಂಘಟಿಸಬೇಕು. ರಾಷ್ಟ್ರಭಕ್ತ ಸಮೂಹ ಅಂತಹದ್ದೊಂದು ಒಳಸಂಘಟನೆಯಾಗಿತ್ತು. ಆದ್ದರಿಂದಲೇ ಅದಕ್ಕೆ ಸಾರ್ವಜನಿಕ ಮುಖವಾಡ ಒದಗಿಸುವ ಚಳುವಳಿಯೊಂದನ್ನು ಕಟ್ಟಿಕೊಳ್ಳಲೇಬೇಕಾಗಿತ್ತು.
ಸಾವರ್ಕರ್ ಕುಟುಂಬ ವಾಸವಿದ್ದ ನಾಸಿಕ್ನ ನಗರ್ಕರ್ ಲೇನಿನ ನೆರೆಹೊರೆಯ ಯುವಕರನ್ನು ಸೇರಿಸಿಕೊಂಡು ಈ ಸಂಘಟನೆಯನ್ನು ಕಟ್ಟಲು ತೀರ್ಮಾನಿಸಲಾಗಿತ್ತು. ರಾಮ್ ದತ್ತರ್ ಮತ್ತು ವಾಮನ್ ದತ್ತರ್ ಎಂಬ ಸಹೋದರರು, ನಾನಾ ವರ್ತಕ್ ಮತ್ತು ತ್ರಯಂಬಕ್ ವರ್ತಕ್ ಎಂಬ ಸಹೋದರರು ಹಾಗೂ ಚಿತ್ಪಾವನ ಯುವಕರಾದ ಮಸ್ಕರ್ ಮತ್ತು ಪಾಗೇ ಅವರುಗಳನ್ನು ಸೇರಿಸಿಕೊಂಡು ಸಾರ್ವಜನಿಕ ಸಂಘಟನೆಯ ಸ್ಥೂಲ ರೂಪವನ್ನು ಕಟ್ಟುತ್ತಾರೆ. ನಾಸಿಕ್ನ ನೃತ್ಯಶಾಲೆಯೊಂದರಲ್ಲಿ ಅವರು ಒಟ್ಟುಗೂಡುತ್ತಿದ್ದರು. ನಾಟಕವೊಂದರ ನಡುವೆ ಚಾಪೇಕರ್ ಸಹೋದರರ ಕೇಸಿನ ಸಂಬಂಧದಲ್ಲಿ ಬಂಧಿತನಾಗಿದ್ದ ‘ನಟ್ಟು’ ಸಹೋದರರನ್ನು ಬಿಡುಗಡೆಗೊಳಿಸಿದ ಸುದ್ದಿ ತಲುಪುತ್ತದೆ. ಸಾವರ್ಕರ್ ಮತ್ತು ಸಹಚರರು ನಾಟಕ ನಿಲ್ಲಿಸಿ ‘ನಟ್ಟು’ ಸಹೋದರರ ಕುರಿತು ಚರ್ಚಿಸಲು ಸಭೆ ಕರೆಯಬೇಕೆಂದು ಆಗ್ರಹಿಸಿದರಾದರೂ ಅದನ್ನು ನಿರಾಕರಿಸಲಾಗುತ್ತದೆ. ಸಾವರ್ಕರ್ ಮತ್ತು ಸಹಚರರು ನಾಟಕವನ್ನು ಬಹಿಷ್ಕರಿಸುತ್ತಾರೆ. ಆ ಸಂಜೆ ಸಾರ್ವಜನಿಕ ಸಂಘಟನೆಯಾದ ‘ಮಿತ್ರಮೇಳ’ ಹುಟ್ಚಿಕೊಳ್ಳುತ್ತದೆ.
ನಂತರದ ಕಾಲದಲ್ಲಿ ಹಿಂದೂ ಸಂಘಟನೆಗಳ ಇತಿಹಾಸದಲ್ಲಿ ಈ ದ್ವಿಮುಖತೆ ದೊಡ್ಡ ಪಾತ್ರ ವಹಿಸಿತು. ಒಂದು ಪ್ರಧಾನ ಸಂಘಟನೆ ಮತ್ತು ಒಂದು ಅಥವಾ ಹೆಚ್ಚಿನ ಸಾರ್ವಜನಿಕ ಸಂಘಟನೆಗಳು ಎಂಬ ನೀತಿಯನ್ನು ಅತ್ಯಗತ್ಯವೆಂಬಂತೆ ಅವರು ಕಾಯ್ದುಕೊಂಡರು. ಆರ್ಎಸ್ಎಸ್ ಜೊತೆಗೆ ಬಿಜೆಪಿ ಮತ್ತು ಇತರ ಪರಿವಾರ ಸಂಘಟನೆಗಳು ಎಂಬ ರೀತಿಯಲ್ಲಿ ಇಂದಿನ ಹಿಂದೂ ಸಂಘಟನೆಗಳ ರೂಪವೂ ಅದೇ ರೀತಿಯಲ್ಲಿದೆ.
ಮೂಲ ಮಲಯಾಳಂ: ಪಿ. ಎನ್. ಗೋಪಿಕೃಷ್ಣನ್
ಕನ್ನಡಕ್ಕೆ: ಸುನೈಫ್