Home ಜನ-ಗಣ-ಮನ ಹೆಣ್ಣೋಟ ಹೋರಾಟವನ್ನೇ ಬದುಕಾಗಿಸಿಕೊಂಡ ಸುರೇಖಾ ರಾಜಪೂತ್

ಹೋರಾಟವನ್ನೇ ಬದುಕಾಗಿಸಿಕೊಂಡ ಸುರೇಖಾ ರಾಜಪೂತ್

0

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಆರನೇ ಸರಣಿಯಲ್ಲಿ ಹೋರಾಟವನ್ನೇ ಬದುಕಾಗಿಸಿಕೊಂಡ ವಿಜಯಪುರದ ಸುರೇಖಾ ರಾಜಪೂತ್ ಅವರನ್ನು ಪರಿಚಯಿಸಿದ್ದಾರೆ ಮಹಿಳಾಪರ ಚಿಂತಕಿ ಡಾ.ಆರ್‌ ಸುನಂದಮ್ಮ

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆಯೇ ಇರಲಿ; ಪಡಿತರ ಚೀಟಿ, ಆಹಾರ ಧಾನ್ಯ, ಕುಡಿಯುವ ನೀರು, ಮಹಿಳಾ ಶೌಚಾಲಯಗಳ ಸಮಸ್ಯೆಯೇ ಇರಲಿ; ರೈತ ಹೋರಾಟವೇ ಇರಲಿ; ಕೋಮು ವೈಷಮ್ಯದ ಬೆಂಕಿ ಉರಿಯುವಲ್ಲೇ ಇರಲಿ – ವಿಜಯಪುರದ ಆಸುಪಾಸು ಇಂತಹ ಯಾವುದೇ ಬಿಕ್ಕಟ್ಟು ಎದುರಾಗಿ ಹೋರಾಟ ನಡೆಯುತ್ತಿದ್ದರೆ ಅಲ್ಲಿ ಸುರೇಖಾ ರಾಜಪೂತ್ ಎಂಬ ಮಹಿಳೆ ಇದ್ದೇ ಇರುವರು. ಸ್ಥಳಿಯ ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರೆಂದರೆ ಸಮಸ್ಯೆಗೊಂದು ಪರಿಹಾರ ದೊರಕಿದಂತೆಯೇ. ಅಂತಹ ದಿಟ್ಟ ಹೋರಾಟಗಾರ್ತಿ ಅವರು.

3-5-1957ರಲ್ಲಿ ವಿಜಯಪುರದಲ್ಲಿ ಹುಟ್ಟಿದ ಸುರೇಖಾ ಹೋರಾಟವನ್ನೇ ಜೀವನವನ್ನಾಗಿಸಿಕೊಂಡಿರುವವರು. ಭಾರತ್ ಸಿಂಗ್ ಮತ್ತು ಗೌರಾಬಾಯಿಯವರ ನಾಲ್ಕು ಮಕ್ಕಳಲ್ಲಿ ಇವರೇ ಹಿರಿಯವರು. ತಾಯಿಯ ತವರಾದ ಮಹಾರಾಷ್ಟ್ರದ ಸೋಲಾಪುರದ ಸೇವಾಸದನ ಮರಾಠಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಸುರೇಖಾ ಏಳನೇ ಇಯತ್ತೆಯ ಬೋರ್ಡ್ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು. ಪ್ರೌಢಶಿಕ್ಷಣವನ್ನು ವಿಜಯಪುರದ ಮರಾಠಿ ವಿದ್ಯಾಲಯದಲ್ಲಿ ನಡೆಸಿ ಪದವಿಯನ್ನು ಶಿಕ್ಯಾಬ ವುಮೆನ್ಸ್ ಕಾಲೇಜಿನಲ್ಲಿ ಪಡೆದರು. ಬಳಿಕ ನರಸಿಂಗರಾವ್ ಸೆಂಗಾರ್ ಅವರನ್ನು ಪ್ರೀತಿಸಿ, ತಾಯ್ತಂದೆಯರನ್ನು ಒಪ್ಪಿಸಿ ಮದುವೆಯಾದರು.

ಸಾರಿಗೆ ಇಲಾಖೆ, ಕೆಇಬಿ ಮುಂತಾದೆಡೆ ನೌಕರಿಯ ಅವಕಾಶವಿದ್ದಾಗಲೂ ಹೋಗದ ಸುರೇಖಾ ಸಮಾಜಕ್ಕಾಗಿ ಕೆಲಸ ಮಾಡುವ ನಿರ್ಧಾರ ತಳೆದದ್ದು ದಾರುಣ ಘಳಿಗೆಯೊಂದರಲ್ಲಿ. ಮರಾಠಿ ವಿದ್ಯಾಲಯದ ತನ್ನ ಪ್ರಾಣಸ್ನೇಹಿತೆ, ಎರಡು ಮಕ್ಕಳ ತಾಯಿಯಾಗಿದ್ದ ನಿರ್ಮಲಾ ತಾಪಾಡಿಯಾ ಗಂಡ, ಅತ್ತೆಯ ಮನೆಯವರ ಕಿರುಕುಳ ಸಹಿಸಲಾರದೇ ಚಿಮಣಿ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಆಳವಾಗಿ ಅವರ ಮನ ಕಲಕಿತು. ಆಗಲೇ, ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯುವ ಕೆಲಸ ಮಾಡಬೇಕೆಂದು ಅವರ ಮನದಲ್ಲಿ ಧೃಢ ನಿರ್ಧಾರ ಮೂಡಿತು.

1992ರಲ್ಲಿ ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ಮುಳವಾಡ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ನೀಲಗುಂದ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ಹೋರಾಟವನ್ನು ಸುರೇಖಾ ಗಮನಿಸಿದರು. ಅದೇ ವೇಳೆಗೆ ವಿಜಯಪುರ ನಗರದಲ್ಲಿ ನಡೆದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದಾಗ ಇವರ ವಿಚಾರಗಳನ್ನು ಕೇಳಿದ ಜಿಲ್ಲಾ ಮತ್ತು ರಾಜ್ಯ ಸಮಿತಿಯವರು ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಮುಂದೆ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.

1995ರಲ್ಲಿ ಬಸವನ ಬಾಗೇವಾಡಿ ತಾಲೂಕಿನ ಮಟ್ಟಿಹಾಳ ಕ್ರಾಸಿನಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಮಾಳವಾಡ ಏತ ನೀರಾವರಿಗಾಗಿ ಒಂದು ತಿಂಗಳು ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾದರು. ಪ್ರತಿದಿನ ಪಾದಯಾತ್ರೆ ಮಾಡಿ ಹಳ್ಳಿಹಳ್ಳಿ ಸುತ್ತಾಡಿ ರೈತರನ್ನು ಸಂಘಟಿಸಿ ಕರೆತಂದರು. ನೀರಾವರಿ ಮಂತ್ರಿಗಳೂ, ಯುಕೆಪಿ ವ್ಯವಸ್ಥಾಪಕ ನಿರ್ದೇಶಕರೂ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ 17 ಕೋಟಿ ರೂಪಾಯಿ ಮಂಜೂರು ಮಾಡಿಸಿದರು. ಮುಳವಾಡ ಏತ ನೀರಾವರಿಗೆ ಚಾಲನೆ ದೊರೆತು ರೈತರ ಜಮೀನಿಗೆ ನೀರು ಹರಿಯುವಂತೆ ಆಯಿತು. ಒಂದು ತಿಂಗಳು ಮನೆ, ಮಕ್ಕಳು, ಸಂಸಾರವನ್ನು ಬಿಟ್ಟು ರೈತರನ್ನು ಸಂಘಟಿಸಿ ಧೈರ್ಯ ತುಂಬಿದ ಸುರೇಖಾರ ನಾಯಕತ್ವದ ಗುಣ ಆಗ ಮುನ್ನೆಲೆಗೆ ಬಂತು.

ಮಹಿಳಾ ದೌರ್ಜನ್ಯದ ವಿರುದ್ಧವಂತೂ ಅವರು ಅಸಂಖ್ಯ ಹೋರಾಟಗಳನ್ನು ಸಂಘಟಿಸಿದ್ದಾರೆ. ಬೋವಿ ಸಮಾಜದ ಶಾಂತಾಬಾಯಿ ಪಡಿತರ ಅವರು ಮಹಿಳಾ ಗುಂಪುಗಳನ್ನು ಮಾಡಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸುವ ಪ್ರಯತ್ನ ಮಾಡುವಾಗ ಆ ಸಮಾಜದ ಪುರುಷರೇ ಅದಕ್ಕೆ ಅಡ್ಡಗಾಲಾದರು. ಶಾಂತಾಬಾಯಿಗೆ ಬೆಂಬಲವಾಗಿ ಸುರೇಖಾ ನಿಂತು ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ಸತ್ಯಾಗ್ರಹ ನಡೆಸಿ ನ್ಯಾಯ ಪಡೆಯಲು ಬೆಂಬಲವಾಗಿ ನಿಂತರು. ಭಾಗೀರಥಿ ಹುನಗುಂದ ಎಂಬ ಶಿಕ್ಷಕಿಯನ್ನು ವಂಚಿಸಿದ ವಕೀಲ ಪಿ. ಎಸ್. ವಸ್ತ್ರದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಂಧಿ ವೃತ್ತದಲ್ಲಿ ಧರಣಿ ಸಂಘಟಿಸಿದರು. ನಡುರಾತ್ರಿ ಪೆಂಡಾಲಿಗೆ ಪೆಟ್ರೋಲ್ ಸುರುವಿ ಬೆಂಕಿ ಹಚ್ಚಿದಾಗ ಸುರೇಖಾ ಸ್ವಲ್ಪದರಲ್ಲಿ ಪಾರಾದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ, ದುಷ್ಕರ್ಮಿಗಳು ಯಾರೆಂದು ತಿಳಿದರೂ ಬಂಧಿಸದೇ ಸತ್ಯಾಗ್ರಹವನ್ನು ಹುಸಿ ಭರವಸೆ ನೀಡಿ ಪೊಲೀಸರು ಕೊನೆಗೊಳಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯೆದುರು ಧರಣಿ ನಡೆಸಿದಾಗ ಲಾಠಿ ಚಾರ್ಜ್ ಮಾಡಿದರು. ಸುರೇಖಾ, ಭಾಗೀರಥಿ, ಶಕೀಲಾ ಜಮಾದಾರ, ಸೋಮುಬಾಯಿ ರಾಠೋಡ, ಅಣ್ಣಾರಾಯ ಈಳಗೇರ ಮೊದಲಾದವರನ್ನು ಬಂಧಿಸಿ 12 ದಿನಗಳವರೆಗೆ ಜೈಲಿನಲ್ಲಿಟ್ಟರು. ಈ ಪ್ರಕರಣ 2 ವರ್ಷ ನ್ಯಾಯಾಲಯದಲ್ಲಿ ನಡೆದು ಗಲಭೆಕೋರರೆಂಬ ಪೊಲೀಸರ ಆರೋಪ ಸುಳ್ಳು ಎಂದು ಸಾಬೀತಾಯಿತು. ಹೋರಾಟಗಾರರು ನಿರ್ದೋಷಿಗಳೆಂದು ಬಿಡುಗಡೆ ಮಾಡಿದರು. ಮಹಿಳೆಯರಿಗೆ ನ್ಯಾಯ ಸಿಗುವುದು ಎಷ್ಟು ಕಠಿಣವೆಂದು ಸುರೇಖಾಗೆ ಇಂತಹ ಪ್ರಕರಣಗಳೇ ತಿಳಿಸಿಕೊಟ್ಟವು. ಈ ರೀತಿ ಮಹಿಳೆಯರ ಮೇಲೆ, ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ ನಡೆವ ದೌರ್ಜನ್ಯಗಳನ್ನು ವಿರೋಧಿಸಿದ, ತಡೆದ, ಪ್ರಕರಣಗಳಲ್ಲಿ ಸಿಲುಕಿಕೊಂಡ ಹಲವಾರು ನಿದರ್ಶನಗಳಿವೆ. ಅವರ ಕೆಲಸ ಕಾರ್ಯಗಳಿಗೆ ಪತಿ ನರಸಿಂಗರಾವ ಸೆಂಗಾರ ಮತ್ತು ಮಕ್ಕಳು ಬೆಂಬಲ ನೀಡುವುದು ಅವರ ಸ್ಥೈರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ವಿಜಯಪುರ ನಗರದ ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸಲು ನಗರಾಡಳಿತ ಮುಂದಾದಾಗ ಅವರ ಬೆಂಬಲಕ್ಕೆ ಸುರೇಖಾ ನಿಂತರು. ಗುಡಿಸಲುಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರ ಬಂದಾಗ ಅದರ ದಾರಿಗಡ್ಡವಾಗಿ ಮಲಗಿ ತಡೆದರು. ಹಾಗೆಯೇ ಮನೆ, ನಿವೇಶನ ಏನೊಂದೂ ಇಲ್ಲದವರಿಗೆ ಒಂದು ಸೂರೊದಗಿಸಲು ನಿರಂತರ ಹೋರಾಟ, ಜಾಥಾ ಸಂಘಟನೆ ಮಾಡಿ ಅವರಿಗೆ ಮನೆ ಸಿಗಲು ಕಾರಣರಾದರು. ಮಹಿಳಾ ಮೀಸಲಾತಿ, ರೈತರ ಬೇಡಿಕೆ ಈಡೇರಿಕೆಯೇ ಮೊದಲಾದ ಹಕ್ಕೊತ್ತಾಯಗಳಿಗೆ ಬೆಂಗಳೂರು ಚಲೋ, ದೆಹಲಿ ಚಲೋಗಳನ್ನು ಸಂಘಟಿಸಿದರು. ಬೆಲೆಯೇರಿಕೆ, ಭ್ರಷ್ಟಾಚಾರ, ಕೋಮುವೈಷಮ್ಯ, ವರದಕ್ಷಿಣೆ, ಅಸ್ಪೃಶ್ಯತೆ ಮೊದಲಾದವುಗಳ ವಿರುದ್ಧ ಈಗಲೂ ನಿರಂತರ ಸಂಘಟನೆ, ಹೋರಾಟದಲ್ಲಿ ತೊಡಗಿದ್ದಾರೆ.

ದಿಟ್ಟ, ಪ್ರಾಮಾಣಿಕ ಬದುಕು ನಡೆಸುವ, ತಮಗಾಗಿ ಸಂಪತ್ತು ಶೇಖರಿಸಿಕೊಳ್ಳದೇ ಸರಳ ಬದುಕು ನಡೆಸುತ್ತಿರುವ ಸುರೇಖಾ ರಾಜಪೂತ್ `ನಮ್ಮ ಅಕ್ಕ, ನಮ್ಮ ಹೆಮ್ಮೆ’ಯಾಗಿದ್ದಾರೆ.

ಡಾ. ಆರ್‌ ಸುನಂದಮ್ಮ

ಲೇಖಕರು, ಮಹಿಳಾಪರ ಚಿಂತಕರು

You cannot copy content of this page

Exit mobile version