ಧಾರ್ಮಿಕ ವಿಚಾರದಲ್ಲಿ ಬರೀ ಪುರೋಹಿತಶಾಹಿಗಳೇ ಹೋರಾಟಕ್ಕೆ ನಿಂತರೆ ಅದಕ್ಕೇನೂ ಬಲವಿರದು. ಹೀಗಾಗಿ ಶೂದ್ರ ಶಕ್ತಿಯ ಒಳಗೊಳ್ಳುವಿಕೆಯ ಅನಿವಾರ್ಯತೆ ಅವರದ್ದು. ಒಂದು ವೇಳೆ ವೈದಿಕರು ಬಹುಸಂಖ್ಯಾತರಾಗಿದ್ದಿದ್ದರೆ ಅವರಿಗೆ ಯಾವ ಶೂದ್ರ ಶಕ್ತಿಯ ಹಂಗೂ ಇರುತ್ತಿರಲಿಲ್ಲ…..ಓದಿ ಲೇಖಕ ಶಂಕರ್ ಸೂರ್ನಳ್ಳಿ ಲೇಖನ.
ಒಂದು ಸಮಯವಿತ್ತು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಮಹಾನುಭಾವರ ಬಗ್ಗೆ ಸುಳ್ಳು ಮಾತನಾಡುವುದಕ್ಕೆ ಜನ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸೋಲನ್ನೇ ಗೆಲುವು, ವೈಫಲ್ಯವನ್ನೇ ಸಾಧನೆ ಎಂದು ಬಿಂಬಿಸುವಂತಹ ನೆಟ್ ವರ್ಕ್ ಯುಗದಲ್ಲಿ ನಾವಿದ್ದೇವೆ ಅಥವ ಬಿದ್ದಿದ್ದೇವೆ. ಇಲ್ಲಿ ವಿಷಯ ವಿಚಾರಗಳ ಗಟ್ಟಿತನಕ್ಕಿಂತ ನಿಮ್ಮ ನೆಟ್ ವರ್ಕ್ ಜಾಲ ಅಥವಾ ಬೀಸಲ್ಪಟ್ಟ ಈ ಬಲೆಯ ತಾಕತ್ತು ಮತ್ತು ವ್ಯಾಪ್ತಿಯ ಮೇಲೆ ಸಿದ್ಧಾಂತಗಳು ಚಲಾವಣೆಗೊಳ್ಳುತ್ತವೆ. ಆದರೂ ಸಮಾಧಾನದ ಸಂಗತಿಯೆಂದರೆ, ಭಾರತ ಹಿಂದಿನಿಂದಲೂ ಕೂಡ ವಿಚಾರವಂತರ ನಾಡು. ಈ ವಿಚಾರವಂತರ ಸಂಖ್ಯೆ ಸಣ್ಣದಿದ್ದಿರಬಹುದು ಅಥವಾ ಅವರಿಗೆ ಯಾವುದೇ ದೊಡ್ಡ ಬೆಂಬಲಗಳಾಗಲೀ ಹಿನ್ನೆಲೆಗಳಾಗಲೀ ಇಲ್ಲದೇ ಇದ್ದಿರಬಹುದು ಆದರೆ “ಭಾರತೀಯತೆ’ಯನ್ನು ಅನಾದಿ ಕಾಲದಿಂದಲೂ ಜೀವಂತ ಕಾಪಿಟ್ಟುಕೊಂಡು ಬಂದಿರುವುದೇ ಈ ಸಣ್ಣಗುಂಪು.
ಮಹಾಭಾರತ ಯುದ್ಧ ಮುಗಿದು ಧರ್ಮರಾಯನ ಪಟ್ಟಾಭಿಷೇಕದ ಸಂಭ್ರಮದ ಗಳಿಗೆಯಲ್ಲಿ ಚಾರ್ವಾಕನೊಬ್ಬ ಬಂದು ನಿನ್ನ ಯುದ್ಧ ದಾಹಕ್ಕಾಗಿ ಲಕ್ಷಾಂತರ ಜನರನ್ನು ಬಲಿ ಪಡೆದೆಯಲ್ಲ ಎಂದು ಧರ್ಮರಾಯನನ್ನೇ ತುಂಬಿದ ಸಭೆಯಲ್ಲಿ ಪ್ರಶ್ನಿಸುತ್ತಾನೆ. ಆ ಲಕ್ಷಾಂತರ ಮಂದಿಯ ಜೊತೆಗೆ ನೀನೂ ಒಬ್ಬ ಎಂದು ಸಭೆಯಲ್ಲಿದ್ದವರೇ ಸೇರಿಕೊಂಡು ಆತನನ್ನು ಕೊಲ್ಲುತ್ತಾರಾದರೂ ಆತ ಎತ್ತಿದ ಪ್ರಶ್ನೆಯನ್ನು ಮಾತ್ರ ಸಾಯಿಸಲಾಗಲಿಲ್ಲ. ಇಂದಿಗೂ ಕೂಡ ಬೇರೆ ಬೇರೆ ದಾರಿ-ಒಳದಾರಿಗಳ ಮೂಲಕ ಪ್ರಶ್ನಿಸುವವರನ್ನು ಬಗ್ಗು ಬಡಿಯಲಾಗುತ್ತಿದೆಯಾದರೂ ಅಥವಾ ಬಾಯಿ ಮುಚ್ಚಿಸಲಾಗುತ್ತಿದೆಯಾದರೂ ವೈಚಾರಿಕತೆಯನ್ನು ನಾಮಾವಶೇಷ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಒಂದುವೇಳೆ ಇದು ಸಾಧ್ಯವೇ ಆಗಿದ್ದಿದ್ದರೆ ಇವತ್ತಿಗೆ ಗಾಂಧೀಜಿಯ ಗುರುತುಗಳು ಯಾವತ್ತೋ ಕಣ್ಮರೆಯಾಗಿ ಮೂಲೆ ಸೇರಿ ಕೊಳ್ಳುತ್ತಿದ್ದವು. ಅಂತಹ ಪ್ರಯತ್ನಗಳು ನಡೆದವಾದರೂ ಅದು ಸುಲಭದ್ದಲ್ಲ ಎನ್ನುವ ಸತ್ಯದ ಅರಿವಾದ ಕಾರಣ ಸದ್ಯಕ್ಕದನ್ನು ಹಾಗೆಯೇ ಬಿಡಲಾಗಿದೆ.
ಕುವೆಂಪುರವರು ವರ್ಣಾಶ್ರಮ ತತ್ವದ ಬೆಂಬಲಿಗರಾಗಿದ್ದರು ಎಂದು ಯಾರೋ ಹೇಳಿದ್ದು ಇತ್ತೀಚಿಗಿನ ಸುದ್ದಿ. ರಾಷ್ಟ್ರಕವಿ ಕುವೆಂಪುರವರು ಆಧ್ಯಾತ್ಮಿಕತೆಯ ಬಗ್ಗೆ ಒಲವುಳ್ಳವರಾಗಿದ್ದರು. ಆದರೆ ಸನಾತನವಾದಿಯಾಗಿರಲಿಲ್ಲ. ಆಧ್ಯಾತ್ಮಿಕತೆಗೆ ಧರ್ಮ ಸಿದ್ಧಾಂತಗಳ ಹಂಗಿಲ್ಲ. ಸನ್ಯಾಸವೆಂದರೆ ಅದೊಂದು ಮನೋಸ್ಥಿತಿ ಎನ್ನುತ್ತಾರೆ ಓಶೋ ರಜನೀಶ್. ಇದೇ ರೀತಿ ಆಧ್ಯಾತ್ಮಿಕತೆಯೂ ಕೂಡ ಮನಸ್ಸಿನ ಸ್ಥಿತಿಯೇ ಆಗಿದೆ. ಸೋಗಲಾಡಿತನದ ಧಾರ್ಮಿಕ ನಂಬಿಕೆಗಳನ್ನು ಆಚಾರಗಳನ್ನು ಕುವೆಂಪು ತೀವ್ರವಾಗಿ ವಿರೋಧಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ರಸಋಷಿಯೋ ಇನ್ಯಾವುದೋ ಹೆಸರಿನ ಧಾರಾವಾಹಿ ಕಂತುಗಳ ಟಿವಿ ಕಾರ್ಯಕ್ರಮ ಬರುತ್ತಿತ್ತು. ಅದರ ಒಂದು ಕಂತಿನಲ್ಲಿ ಕುವೆಂಪುರವರ ಮಗ ತೇಜಸ್ವಿಯವರನ್ನು ಕಾಯ್ಕಿಣಿಯವರು ಸಂದರ್ಶಿಸುತ್ತಾ, ಅವರ ತಂದೆಯ ಕುರಿತಂತೆ, ಕುವೆಂಪುರವರು ವ್ಯಗ್ರವಾಗಿರುವುದು ಯಾವ ಸಂದರ್ಭದಲ್ಲಿ ಎಂದು ಪ್ರಶ್ನಿಸಿದ್ದರು. ಅದಕ್ಕುತ್ತರವಾಗಿ ತೇಜಸ್ವಿಯವರು ಒಂದು ಸಂದರ್ಭವನ್ನು ಜ್ಞಾಪಿಸಿಕೊಂಡಿದ್ದರು. ಅವರು ಒಂದು ದಿನ ಬೆಳಿಗ್ಗೆ ಪೇಪರ್ ತಂದ ಹುಡುಗನಿಗೆ ಬೈತಿದ್ದರಂತೆ “ಆ ಸ್ವಾಮಿ ಅದಕ್ಕೆ ಕರೆ ಕೊಟ್ಟ… ಮತ್ತೊಬ್ಬನ ಆ ಪೂಜೆ.. ಅದೂ ಇದೂ ಅಂತ ಬರೀ ಇವುಗಳದ್ದೇ ಆಯ್ತಲ್ಲ.. ನಾಳೆಯಿಂದ ಬೇರೆ ಪೇಪರ್ ಹಾಕು” (ಬೇರೆ ಪೇಪರ್ ಕತೆಯೂ ಅದೇ) ಅಂತ ಪೇಪರ್ ಸಂಪಾದಕನ ಮೇಲಿನ ಸಿಟ್ಟನ್ನ ಬಡಪಾಯಿ ಪೇಪರ್ ಹುಡುಗನ ಮೇಲೆ ಆವತ್ತು ತೋರಿಸಿದ್ರಂತೆ.
ಅಂಬೇಡ್ಕರ್ ಆರೆಸ್ಸೆಸ್ ಪರವಿದ್ದರು ಅದನ್ನು ಹೊಗಳಿದ್ದರು ಎಂಬುದರಿಂದ ಹಿಡಿದು ಸ್ವತ: ಅಂಬೇಡ್ಕರ್ ಯಾವತ್ತೂ ಕನಸಲ್ಲೂ ಭ್ರಮಿಸದಿದ್ದ, ಅವರು ಹಿಂದುತ್ವದ ಗುರುತು ಕೇಸರಿ ಹೊದ್ದಂತಹ ಮೂರ್ತಿಯನ್ನೂ ಅನಿವಾರ್ಯತೆಯಿಂದಾಗಿ (ಬಹು ಸಂಖ್ಯಾತ ದಲಿತರನ್ನು ಸೆಳೆಯಲೇ ವಿನ: ಪ್ರೀತಿಯಿಂದಲ್ಲ) ಕೂಡ ಪ್ರತಿಷ್ಠಾಪಿಸಲಾಗಿದೆ. ಹಳದಿ ಅಥವಾ ಶುಭ್ರ ಬಿಳಿ ಬಟ್ಟೆಯ ನಾರಾಯಣ ಗುರುಗಳಿಗೆ ಕೇಸರಿ ಹೊದಿಸಿ ಯಾವುದೋ ಕಾಲವಾಗಿದೆ, ವಿವೇಕಾನಂದರ ಜೀವಿತಾವಧಿಯಲ್ಲಿ ಇನ್ನಿಲ್ಲದ ಕಾಟ ಕೊಟ್ಟಿದ್ದರೂ, ಜೊತೆಗೆ ಅವರ ವೈಚಾರಿಕ ಜನಪರ ಸಿದ್ಧಾಂತಗಳು ಹಿಂದುತ್ವವಾದಿಗಳಿಗೆ ತೀರಾ ಅಪಥ್ಯವೆನಿಸಿದ್ದರೂ ಕೂಡ ಅದನ್ನೆಲ್ಲ ಮರೆ ಮಾಚಿ ವಿವೇಕಾನಂದರೇ ನಮ್ಮ ಆದರ್ಶವೆಂದು ಮೆರೆಸಲಾಗುತ್ತಿದೆ! ಇಂಥಾದ್ದರಲ್ಲಿ ವಿಶ್ವ ಮಾನವ, ವಿಶ್ವ ಭ್ರಾತೃತ್ವದ ಸಂದೇಶ ಸಾರಿದ ಕುವೆಂಪುರವರನ್ನು ಪುರೋಹಿತಶಾಹಿಗಳ ಮುದ್ದಿನ ಕೂಸನ್ನಾಗಿಸುವ ಹುನ್ನಾರಕ್ಕೆ ಅಚ್ಚರಿ ಪಡುವಂಥದ್ದೇನಿಲ್ಲ.
ಮಧ್ಯ ಏಶ್ಯಾದಿಂದ ವಲಸೆ ಬಂದ ಪುರೋಹಿತಶಾಹಿಗಳ ಪ್ರಮುಖ ದೌರ್ಬಲ್ಯವೆಂದರೆ ಅವರು ಇದೇ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರೆನ್ನುವುದು. ಧಾರ್ಮಿಕ ವಿಚಾರದಲ್ಲಿ ಬರೀ ಅವರುಗಳೇ ಹೋರಾಟಕ್ಕೆ ನಿಂತರೆ ಅದಕ್ಕೇನೂ ಬಲವಿರದು. ಹೀಗಾಗಿ ಶೂದ್ರ ಶಕ್ತಿಯ ಒಳಗೊಳ್ಳುವಿಕೆಯ ಅನಿವಾರ್ಯತೆ ಅವರದ್ದು. ಕರಾವಳಿಯ ಶೂದ್ರ ಸಮುದಾಯವನ್ನು ಬ್ರಾಹ್ಮಣರನ್ನಾಗಿಸಿದ ಸಂಗತಿಯನ್ನು ಇತಿಹಾಸಕಾರ ಪಿ ಗುರುರಾಜ ಭಟ್ಟರು ತಮ್ಮ ’ತುಳುನಾಡು’ ಕೃತಿಯಲ್ಲೇ ಉಲ್ಲೇಖಿಸಿದ್ದಾರೆ. ಒಂದು ವೇಳೆ ವೈದಿಕರು ಬಹುಸಂಖ್ಯಾತರಾಗಿದ್ದಿದ್ದರೆ ಅವರಿಗೆ ಯಾವ ಶೂದ್ರ ಶಕ್ತಿಯ ಹಂಗೂ ಇರುತ್ತಿದ್ದಿರಲಿಲ್ಲ.
ಚಾರಿತ್ರಿಕ ಕಾರಣಗಳಿಗಾಗಿ ಕರಾವಳಿಯಲ್ಲಿ ಕೊರಗ ಸಮುದಾಯವನ್ನು ದ್ವೇಷಿಸುವ ಕರಾವಳಿಯ ವೈದಿಕರು (ಅವರ ’ಗ್ರಾಮ ಪದ್ಧತಿ” ಗ್ರಂಥದಲ್ಲಿ ಇಲ್ಲಿನ ಹೊಲೆಯರ ರಾಜ ಹುಬಾಷಿಕನಿಂದ ತೊಂದರೆಗೊಳಗಾದ ವಿಚಾರವಿದೆ) ಇದೇ ಕೊರಗ ಸಮುದಾಯದ ಹಿನ್ನೆಲೆಯ ಕೊರಗಜ್ಜ ದೈವದ (ಈ ಕೊರಗ ತನಿಯ ವೈದಿಕ ದೇಗುಲದ ಬಳಿ ಹಣ್ಣು ಕೀಳುವ ದುಸ್ಸಾಹಸಕ್ಕಿಳಿದ ಕಾರಣಕ್ಕೆ ಆತ “ಮಾಯ”ವಾಗುತ್ತಾನೆ. ಇಲ್ಲಿ ಮಾಯ ಎನ್ನುವ ಪದಕ್ಕೆ ಈ ಪರಿಸರದಲ್ಲಿ ಮತ್ತೂ ಒಂದು ಅರ್ಥವಿದೆ. ಉಡುಪಿಯ ಅನಂತೇಶ್ವರ ದೇಗುಲದ ದಕ್ಷಿಣ ಭಾಗದಲ್ಲಿ ಮಧ್ವಾಚಾರ್ಯರು ಮಾಯವಾದ ಜಾಗವೆಂದು ಸ್ಥಳವನ್ನು ಗುರುತಿಸಲಾಗಿದೆ. ತಾಂತ್ರಿಕ ವಿದ್ಯೆಯ ಮೂಲಕ ಅಲ್ಲಿನ ಸಂಪತ್ತು ಹೊರತೆಗೆಯಲು ಹೊರಟಾಗ ನಡೆದಂತಹ ಅನಾಹುತ ಅದೆಂದು ಕೆಲವರು ಅದನ್ನು ಹೇಳುವುದುಂಟು) ಅವೈದಿಕ ಆಚರಣೆ ಹಿಂದೂ ಧರ್ಮದ ತೆಕ್ಕೆಯಲ್ಲಿ ಬರುತ್ತಿರುವುದನ್ನು ನೋಡಿಯೂ ಸುಮ್ಮನಿರಲು ಕಾರಣ ಕೊರಗಜ್ಜನ ಜನಪ್ರಿಯತೆ.
ಅಂಬೇಡ್ಕರರಾದರೇನು, ಕುವೆಂಪು ಆದರೇನು ಅಥವಾ ಕೊರಗಜ್ಜನೇ ಆದರೇನು ಫಾಯಿದೆ ಇರೋದಾದ್ರೆ ಯಾವ ವಿಚಾರವೂ ನಮ್ಗೆ ಓಕೆ! ವೇದಗಳನ್ನು ಧಿಕ್ಕರಿಸಿ ವೈದಿಕ ಧರ್ಮ ದೇಶದಲ್ಲಿ ಇನ್ನೇನು ನಾಮಾವೇಷವಾಗುತ್ತದೆ ಎನ್ನುವಂತಹ ಸ್ಥಿತಿಯನ್ನು ತಂದಿಟ್ಟಂತಹ ಬುದ್ಧನನ್ನೇ ಲಾಭಕ್ಕಾಗಿ ಕಬ್ಜಾ ಮಾಡಿಕೊಳ್ಳಲಿಲ್ಲವೇ ಅಂತಾದ್ದರಲ್ಲಿ ಈ ಕುವೆಂಪು ಏನ್ ಮಹಾ!
ಶಂಕರ್ ಸೂರ್ನಳ್ಳಿ.
ಲೇಖಕರು