ಕರ್ನಾಟದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ ಎಸ್ ಆರ್ ಪಿ) ವನ್ನು ಅಳವಡಿಸಲು ಸೆಪ್ಟಂಬರ್ 15ಕ್ಕೆ ಕೊನೆಯ ಗಡುವು ನೀಡಿತ್ತು. ವಾಹನ ಮಾಲಿಕರಿಗೆ ಹಲವು ಬಾರಿ ನೀಡಿದ ಸೂಚನೆ ಹೊರತಾಗಿಯೂ ಹೆಚ್ಚಿನವರ ಈವರೆಗೆ ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದುವರೆಗೂ ಎಚ್ ಎಸ್ ಆರ್ ಪಿ ನೋಂದಣಿ ಫಲಕಕ್ಕೆ ನೋಂದಣಿ ಮಾಡಿಕೊಳ್ಳದ ವಾಹನಗಳ ಮಾಲೀಕರು ಈಗಲೇ ನೋಂದಣಿ ಮಾಡಿಕೊಂಡು ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ. ದಂಡದ ಮೊತ್ತ 500 ರೂ. ಈ ದಂಡದ ಮೊತ್ತದಲ್ಲೇ ನೋಂದಣಿ ಫಲಕ ಲಭ್ಯವಾಗಲಿರುವ ಕಾರಣ ವಾಹನ ಮಾಲಿಕರು ಇನ್ನೇನು ಮೂರು ದಿನಗಳೊಳಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೂಚಿಸಿದೆ.
ಇನ್ನು ಮೂರು ದಿನಗಳ ಅವಕಾಶವಿದ್ದು, ಸೆಪ್ಟಂಬರ್ 15ರೊಳಗೆ ಎಚ್ ಎಸ್ ಆರ್ ಪಿ ಗೆ ನೋಂದಣಿ ಮಾಡಿಕೊಂಡು ಅದರ ರಸೀತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ದಂಡದಿಂದ ಪಾರಾಗಬಹುದು.
ನಂಬರ್ ಪ್ಲೇಟ್ ಅಳವಡಿಕೆಗೆ ಆನ್ಲೈನ್ನಲ್ಲಿ ಅವಕಾಶವಿದೆ. http// transport.karnataka.gov.in ಅಥವಾ www.siam.in ಮೂಲಕವೂ ಎಚ್ಎಸ್ಆರ್ಪಿ ಅಳವಡಿಸಲು ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿ ಮಾಡಿಕೊಂಡ ಕೂಡಲೇ ಹೊಸ ನಂಬರ್ ಪ್ಲೇಟ್ ಬರುವುದಿಲ್ಲ. ಯಾರೆಲ್ಲಾ ಸೆಪ್ಟೆಂಬರ್ 15 ರ ಒಳಗೆ ಎಚ್ಎಸ್ಆರ್ಪಿಗೆ ನೋಂದಣಿ ಮಾಡಿಕೊಳ್ಳುತ್ತಾರೋ ಅವರು ಅದರ ರಶೀದಿಯನ್ನು ವಾಹನ ಚಲಾಯಿಸುವಾಗ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳಬೇಕು. ಈ ಮೂಲಕ ಸಾರಿಗೆ ಅಧಿಕಾರಿಗಳು ಅಥವಾ ಪೊಲೀಸರು ತಪಾಸಣೆ ನಡೆಸುವಾಗ ನಂಬರ್ ಪ್ಲೇಟ್ ಇಲ್ಲ ಎಂದು ಪ್ರಶ್ನಿಸಿದರೆ ರಶೀದಿ ತೋರಿಸಿ ದಂಡದಿಂದ ತಪ್ಪಿಸಿಕೊಳ್ಳಬಹುದು.
ಮುಂದಿನ 3 ದಿನಗಳ ಒಳಗೆ ಎಚ್ಎಸ್ಆರ್ಪಿ ಬಾಕಿ ಉಳಿಸಿಕೊಂಡ ವಾಹನ ಮಾಲೀಕರು ನೋಂದಣಿ ಮಾಡಿಕೊಳ್ಳಿ. ಇಲ್ಲದಿದ್ದರೆ ದಂಡ ಪಾವತಿಗೆ ಸಿದ್ಧರಾಗಿ ಎಂದು ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಅಧಿಕಾರಿಗಳು ತಿಳಿಸಿದ್ದಾರೆ.