ದಿ ಕಾಶ್ಮೀರಿ ಫೈಲ್ಸ್ ಸಿನೆಮಾದಿಂದ ಬಲಪಂಥೀಯರ ಕಣ್ಮಣಿಯಾಗಿದ್ದ ಒಂದು ಕಾಲದ ಬಿ ಗ್ರೇಡ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಬಲಪಂಥೀಯರ ಕಡೆಯಿಂದ ಎನ್ನುವುದು ಇನ್ನೊಂದು ವಿಶೇಷ.
ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆ ಹಳೆಯ ವಿಡಿಯೋ ಉತ್ಕನನದಿಂದ ಮತ್ತೆ ಪ್ರಚಾರಕ್ಕೆ ಬಂದಿದೆ. ಅಷ್ಟಕ್ಕೂ ಈ ವಿಡಿಯೋ ಏನು, ಇದು ಯಾಕೆ ಈಗ ಪ್ರಚಾರಕ್ಕೆ ಬಂದಿದೆ ಎಂದು ನೋಡುವುದಾದರೆ..
ಇದೇ ಸೆಪ್ಟೆಂಬರ್ 9 ಕ್ಕೆ ತೆರೆ ಕಾಣಲಿರುವ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಎಂಬ ಫ್ಯಾಂಟಸಿ ಸಿನಿಮಾದ ಪ್ರಚಾರಕ್ಕೆಂದು ಚಿತ್ರತಂಡ ಪ್ರವಾಸದಲ್ಲಿದೆ. ಪ್ರವಾಸ ಸಂದರ್ಭದಲ್ಲಿ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರತಂಡದಲ್ಲಿ ರಣಬೀರ್ ಕಪೂರ್ ಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರವೇಶ ನೀಡಲಿಲ್ಲ. ಅದಕ್ಕೆ ಕಾರಣ ಏನೆಂದರೆ ರಣಬೀರ್ ಕಪೂರ್ ಗೋಮಾಂಸ ತಿನ್ನುತ್ತಾರೆ ಎಂಬ ಅಂಶವನ್ನು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಇದೇ ವಿಚಾರ ಮುಂದಿಟ್ಟುಕೊಂಡಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿವೇಕ್ ಅಗ್ನಿಹೋತ್ರಿ ಮಾತನಾಡಿದ ವಿಡಿಯೋ ಒಂದನ್ನು ಟ್ರೋಲ್ ಮಾಡಲಾಗುತ್ತಿದೆ. ಆ ವಿಡಿಯೋದಲ್ಲಿ ಸ್ವತಃ ವಿವೇಕ್ ಅಗ್ನಿಹೋತ್ರಿ ‘ನಾನೂ ಗೋಮಾಂಸ ತಿನ್ನುತ್ತೇನೆ, ಈಗಲೂ ತಿನ್ನುತ್ತೇನೆ, ಮುಂದೆಯೂ ತಿನ್ನುತ್ತೇನೆ. ಇದು ನನ್ನ ಆಹಾರದ ಹಕ್ಕು’ ಎಂದು ಹೇಳುತ್ತಾರೆ.
ಸಧ್ಯ ಈ ವಿಡಿಯೋದ ಜೊತೆಗೆ ವಿವೇಕ್ ಅಗ್ನಿಹೋತ್ರಿ ಕೂಡಾ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರಿಗೆ ಪ್ರವೇಶ ನಿರಾಕರಿಸದ ದೇವಸ್ಥಾನದ ಆಡಳಿತ ಮಂಡಳಿ ರಣಬೀರ್ ಕಪೂರ್ ಗೆ ನಿರಾಕರಿಸಿದ್ದು ಯಾಕೆ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇನ್ನು ಬೇರೆ ಬೇರೆ ಕಾರಣಕ್ಕೆ ‘ಬ್ರಹ್ಮಾಸ್ತ್ರ’ ಸಿನೆಮಾವನ್ನು ಬಲಪಂಥೀಯ ಹಿನ್ನೆಲೆಯ ಜನರು ವಿರೋಧಿಸುತ್ತಿದ್ದರೆ ಸಿನಿಮಾ ಮಾತ್ರ ಬಿಡುಗಡೆಗೂ ಮುನ್ನವೇ 21 ಕೋಟಿಗೂ ಹೆಚ್ಚು ಹಣವನ್ನು ಮುಂಗಡ ಬುಕಿಂಗ್ ನಲ್ಲಿ ಮಾಡಿರುವುದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿದೆ.