ರಾಜ್ಯದಲ್ಲಿ ಹವಾಮಾನದ ವೈಪರೀತ್ಯ ಹಿನ್ನಲೆ ಭಾರಿ ಮಳೆ ಸುರಿಯುತ್ತಿದೆ. ಹಲವೆಡೆ ಪ್ರವಾಹ ಭೀತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಮಹಾಮಾರಿ ಡೆಂಗ್ಯೂ ಕೂಡ ಹೆಚ್ಚಳವಾಗಿದೆ.
ಹೌದು, ಮಳೆಯ ನಡುವೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಎಲ್ಲೆಡೆ ಚಿಕೂನ್ ಗುನ್ಯಾ, ಡೆಂಗ್ಯೂ ಸಾಂಕ್ರಾಮಿಕ ರೋಗ ಹರಡುತ್ತಿದೆ. ರಾಜ್ಯದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಈ ವಾರದಲ್ಲಿ 264 ಪ್ರಕರಣಗಳು ದೃಢಪಟ್ಟಿವೆ.
ಈ ವರ್ಷ 1.10 ಲಕ್ಷಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 47 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಈವರೆಗೆ 5,656 ಡೆಂಗ್ಯೂ ಕಂಡುಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ 28 ಜಿಲ್ಲೆಗಳಲ್ಲಿ 1,354 ಚಿಕೂನ್ ಗುನ್ಯಾ ಪ್ರಕರಣಗಳು ಕೂಡ ಪತ್ತೆಯಾಗಿವೆ.
ಕಳೆದ ತಿಂಗಳು ಆಗಸ್ಟ್ ನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 5 ಸಾವಿರ ಇತ್ತು. ಆಗಲೂ ನಾಲ್ಕು ಸಾವುಗಳು ವರದಿಯಾಗಿದ್ದವು. ಬೆಂಗಳೂರು ಒಂದರಲ್ಲೇ 1102 ಕೇಸ್ ದಾಖಲಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ ಎಂದು NDTV ವರದಿ ಮಾಡಿದೆ.
2016 ರಲ್ಲಿ 6083 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ ಎಂಟು ಮಂದಿ ಸಾವನಪ್ಪಿದ್ದರು. 2017 ರಲ್ಲಿ 17,844 ಪ್ರಕರಣಗಳು ವರದಿಯಾದರೆ, ಹತ್ತು ಮಂದಿ ಸಾವನಪ್ಪಿದ್ದರು. 2018 ರಲ್ಲಿ 4,848 ಜನರಿಗೆ ಡೆಂಗ್ಯೂ ಡೃಢವಾಗಿದ್ದು, ನಾಲ್ಕು ಮಂದಿ ಸಾವನಪ್ಪಿದ್ದರು. 2019 ರಲ್ಲಿ 18,183 ಪ್ರಕರಣ ದಾಖಲಾಗಿದ್ದು 17 ಜನ ಸಾವನಪ್ಪಿದ್ದರು. 2021 ರಲ್ಲಿ 7,189 ಪ್ರಕರಣಗಳು ದಾಖಲಾದರೆ. ಐದು ಮಂದಿ ಸಾವನಪ್ಪಿದ್ದಾರೆ. 2022 ರ ಇಲ್ಲಿವರೆಗೆ 4738 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಜನರು ಸಾವನಪ್ಪಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಮಳೆ ನೀರು ಇಳಿಮುಖವಾದ ನಂತರ ಅನೇಕ ರೋಗಗಳು ಹರಡುವ ಅಪಾಯವಿದೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ ತಜ್ಞರು.
ಮಳೆ ಮತ್ತು ಪ್ರವಾಹದಿಂದಾಗಿ ಅತಿಸಾರ, ಕಾಲರಾ, ಟೈಫಾಯಿಡ್, ಗ್ಯಾಸ್ಟ್ರೋ ಎಂಟರೈಟಿಸ್, ಚರ್ಮ ರೋಗಗಳು, ಕಣ್ಣಿನ ಸೋಂಕುಗಳು, ಹೆಪಟೈಟಿಸ್-ಎ, ಡೆಂಗ್ಯೂ, ಲೆಪ್ಟೊಸ್ಪೈರೋಸಿಸ್, ಮಲೇರಿಯಾ ಇತ್ಯಾದಿಗಳು ಹರಡುವ ಅಪಾಯವಿದೆ. ವೈರಲ್ ಸೋಂಕಿನ ಪ್ರಕರಣಗಳು ಸಹ ಹೆಚ್ಚಾಗಬಹುದು.