ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರತಿಪಕ್ಷ ನಾಯಕರುಗಳ ಭೇಟಿಯ ಬೆನ್ನಲ್ಲೇ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರತಿಪಕ್ಷಗಳು ಒಟ್ಟಾಗಿ ಮುಂದಿನ ಲೋಕಸಭೆ ಚುನಾವಣೆ ಮಾತನ್ನಾಡಿದ್ದಾರೆ. ಅದರಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಹಾರ ಮತ್ತು ಜಾರ್ಖಂಡ್ ನಲ್ಲಿರುವ ನನ್ನ ಸಹವರ್ತಿಗಳು ಮತ್ತು ಹಲವಾರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಲು ನಾನು ಸಿದ್ಧನಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ದುರಹಂಕಾರ, ದುರಾಡಳಿತ ಮತ್ತು ಜನರ ಕೋಪದಿಂದಾಗಿ ಸೋಲನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸುವುದರೊಂದಿಗೆ ನಮ್ಮ ಪಕ್ಷ ಅಭೂತಪೂರ್ವ ಜಯ ಗಳಿಸಿತ್ತು. ಜಾರ್ಖಂಡ್ ನಲ್ಲೂ ಕೂಡ ಹೇಮಂತ್ ಸೋರೆನ್ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದರು. ಈಗ ನಿತೀಶ್ ಕುಮಾರ್ ಕೂಡಾ NDA ಇಂದ ಹೊರಬಂದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಇದೊಂದು ಸ್ವಾಗತಾರ್ಹ ನಿರ್ಧಾರ. ಇದೇ ಮಾದರಿಯಲ್ಲಿ ಬಿಜೆಪಿಯನ್ನು ಕೇಂದ್ರದಿಂದಲೂ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ತನ್ನ ಹಣಬಲ ಮತ್ತು ಅಧಿಕಾರ ಬಲದಿಂದ ನಿರಂತರವಾಗಿ ನಮ್ಮಿಂದ ಅಧಿಕಾರ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಜಾರ್ಖಂಡ್ ನಲ್ಲೂ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿತ್ತು. ಮತ್ತು ಪಶ್ಚಿಮ ಬಂಗಾಳದಲ್ಲೂ ಕೂಡಾ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿ ನಮ್ಮ ಶಾಸಕರಿಗೆ ಬೆದರಿಕೆ ತೋರಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಎಷ್ಟು ನಮ್ಮನ್ನು ಕೆಣಕುತ್ತದೆಯೋ ಅಷ್ಟು ಬಾರಿ ತನ್ನ ಸೋಲಿಗೆ ಹತ್ತಿರವಾಗಲಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಧ್ಯ ನಿತೀಶ್ ಕುಮಾರ್ ಕೆಲವೇ ದಿನಗಳ ಹಿಂದೆ ದೆಹಲಿ ಪ್ರವಾಸದಲ್ಲಿ ಪ್ರತಿಪಕ್ಷ ಮುಖಂಡರ ಭೇಟಿಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಮುಂದಿನ 2024 ರ ಲೋಕಸಭಾ ಚುನಾವಣೆಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಕೂಡಾ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಂಡಿದ್ದು ತಳಮಟ್ಟದ ಕಾರ್ಯಕರ್ತರನ್ನು ತಲುಪಿ ಪಕ್ಷ ಸಂಘಟನೆಗೆ ಮುಖ್ಯ ಆದ್ಯತೆ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಏನೆಲ್ಲಾ ತಂತ್ರಗಾರಿಕೆ ರೂಪಿಸಲಿವೆ ಎಝಬ ಕುತೂಹಲ ಹುಟ್ಟಿಸಿದೆ.