ಹಾಸನ : ಮೈಸೂರು ದಸರಾ ಉದ್ಘಾಟನೆ ಮಾಡಿದ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ (Banu Mushtaq) ತಮ್ಮ ಕುಟುಂಬಸ್ಥರ ಜೊತೆ ಹಾಸನದ ಹಾಸನಾಂಬೆ ದೇವಿಯ (Hasanamba temple) ದರ್ಶನ ಪಡೆದಿದ್ದಾರೆ. ಅಲ್ಲದೇ ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ ಎಂದು ಬಾಲ್ಯದ ನೆನಪು ಮೆಲುಕು ಹಾಕಿದ್ದಾರೆ.
ಹಾಸನದ ಹಾಸನಾಂಬೆ ಗರ್ಭಗುಡಿಯಲ್ಲಿ ದೇವಿ ದರ್ಶನ ಪಡೆಯುವುದು ಭಕ್ತರಿಗೆ ಅಪಾರ ಆನಂದ ನೀಡುತ್ತದೆ. ಯಾಕಂದರೆ ಹಾಸನಾಂಬೆ ದೇವಿ ದೇವಸ್ಥಾನ ವರ್ಷಕ್ಕೆ ಒಂದು ಬಾರಿ ಮಾತ್ರ ಅದು ಕೆಲವೇ ದಿನ ತೆರೆದಿರುತ್ತದೆ. ಈ ವೇಳೆ ಹಲವಾರು ಭಕ್ತರು ಬಂದು ಹಾಸನಾಂಬೆ ದರ್ಶನ ಪಡೆಯುತ್ತಾರೆ. ಇದೇ ರೀತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಕೂಡ ಹಾಸನಾಂಬೆ ದರ್ಶನ ಪಡೆದಿದ್ದಾರೆ. ದೇವಿ ದರ್ಶನ ಪಡೆದ ಬಳಿಕ ಮಾತಾಡಿದ ಬಾನು ಮುಷ್ತಾಕ್ ‘ಹಾಸನದ ಹಾಸನಾಂಬೆ ದೇವಿಯ ಆರಾಧನೆ ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ’ ಎಂದು ಹೇಳಿದರು.
ಹಾಸನಾಂಬೆ ದೇವಸ್ಥಾನದ ದರ್ಶನ ಬಾನು ಮುಷ್ತಾಕ್ ಜೀವನದಲ್ಲಿ ವಿಶೇಷ ಸ್ಥಾನದಲ್ಲಿದೆ. ಅವರು ಪ್ರತಿ ಬಾರಿಯೂ ಈ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ವಿಶೇಷವಾಗಿ, ದರ್ಶನೋತ್ಸವದ ಆರನೇ ದಿನದಂದು ದೇವಿಯ ದರ್ಶನ ಮಾಡಿದ್ದು, ಭಕ್ತರಿಗೆ ಸ್ಪೂರ್ತಿ ನೀಡಿದೆ. ಈ ದಿನಗಳಲ್ಲಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ, ಅವರು ತಮ್ಮ ಭಾವುಕತೆಯನ್ನು ವ್ಯಕ್ತಪಡಿಸಿದ್ದಾರೆ. ಈ ದರ್ಶನವು ನನಗೆ ಆಂತರಿಕ ಶಾಂತಿಯನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಹಾಸನಾಂಬೆ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭಾನು ಮುಷ್ತಾಕ್, ‘ಬಹಳ ಹಿಂದಿನಿಂದ ನಮ್ಮ ತಾಯಿ ಹಾಗೂ ನಮ್ಮ ಕುಟುಂಬದ ಪೂರ್ವಿಕರಿಂದ ಬಂದ ಗ್ರಹಿಕೆ ಏನೆಂದರೆ ಮುಸ್ಲಿಂ ಸಮುದಾಯದವರು ಕೂಡ ಇಲ್ಲಿ ಹಸೇನ್ ಬಿ ಎಂದು ಹಾಸನಾಂಬೆಗೆ ಹೆಸರು ಕೊಟ್ಟ ಪ್ರಸಂಗವನ್ನು ನಾನು ನೋಡಿದ್ದೇನೆ. ಆ ಒಂದು ಐತಿಹ್ಯ ಕೂಡ ನನಗೆ ಗೊತ್ತಿದೆ’ ಎಂದರು. ‘ನಾನು ಚಿಕ್ಕವಳಿದ್ದಾಗ ನನ್ನ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತಿದ್ದ ದಿನಗಳು ನೆನಪಾದವು. ಇವತ್ತು ನಿಮ್ಮ ಧ್ಯಾನಕ್ಕೆ ಬಿದ್ದಿದ್ದೇನೆ. ಹಿಂದೆ ಮುಸ್ಲಿಂ ಸಮುದಾಯವೂ ಹಾಸನಾಂಬೆಯನ್ನ ಪೂಜಿಸುತ್ತಿದ್ದರು. ನಮ್ಮ ತಾಯಿಯ ಕಾಲದಲ್ಲಿ ದೇವಿಯನ್ನ ಹಸನ್ ಬಿ ಹುಸೇನ್ ಬೀ ಎಂಬ ನಂಬಿಕೆಯಲ್ಲಿ ಪರಿಚಯಿಸುತ್ತಿದ್ರು’ ಎಂದು ಹೇಳಿದರು
‘ಆ ಕಾಲದಲ್ಲಿ ಮುಸ್ಲಿಂ ಪೂಜೆಯಂತೆ ಸಕ್ಕರೆ ಊದಿನ ಕಡ್ಡಿ ತಂದು ದೇವಿಗೆ ಪೂಜಿಸುತ್ತಿದ್ರು. ಅಂದು ಹೆಚ್ಚಿನ ಮುಸ್ಲಿಂ ಇಲ್ಲಿಗೆ ಬರ್ತಿದ್ರು. ಈಗಲೂ ಕೆಲವರು ಬರ್ತಾರೆ. ಹಾಸನಾಂಬೆ ಒಂದು ಉತ್ತಮ ಭಾವೈಕ್ಯತಾ ಜಾಗ. ಇದು ನಮ್ಮ ಊರ ಹಬ್ಬ. ನಾವೆಲ್ಲಾ ಈ ದೇವಿ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗಿಯಾಗಬೇಕು’ ಎಂದು ಬಾನು ಮುಷ್ತಾಕ್ ಹೇಳಿದರು.