ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದನ್ನು ಪ್ರತಿಪಕ್ಷಗಳೂ ಒಪ್ಪಿಕೊಂಡಿವೆ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ 119ನೇ ವಾರ್ಷಿಕ ಸಮಾವೇಶದಲ್ಲಿ ಶಾ ಮಾತನಾಡಿದರು. ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ 2047ರ ವೇಳೆಗೆ ಭಾರತವು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದರು.
2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ, ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಂಡಿದೆ. ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದು, ಉತ್ತಮ ಸಂಪರ್ಕ, ಡಿಜಿಟಲ್ ಆರ್ಥಿಕತೆ, ರೈಲ್ವೆ ಜಾಲದ ವಿಸ್ತರಣೆ, ಸೆಮಿ ಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಉತ್ಪಾದನಾ ಕೈಗಾರಿಕೆಗಳನ್ನು ಸ್ಥಾಪಿಸುವುದು ಅವುಗಳಲ್ಲಿ ಕೆಲವು ಎಂದು ಅವರು ಹೇಳಿದರು.
ದೇಶದಲ್ಲಿ ಸುಧಾರಣೆ, ಆರ್ಥಿಕ ಅಭಿವೃದ್ಧಿ ತಂದಿದ್ದೇವೆ ಎಂದ ಅವರು, ಈ ಅವಧಿಯಲ್ಲಿ ನಮ್ಮ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದಿಲ್ಲ. ಇದನ್ನು ಪ್ರತಿಪಕ್ಷಗಳೂ ಒಪ್ಪಿಕೊಂಡಿವೆ. ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರವು ಭಯೋತ್ಪಾದನೆ, ನಕ್ಸಲಿಸಂ ಮತ್ತು ಈಶಾನ್ಯ ಉಗ್ರವಾದವನ್ನು 200 ಅಡಿ ಆಳದಲ್ಲಿ ಹೂತು ಹಾಕಿದೆ.
ಹತ್ತು ವರ್ಷಗಳಲ್ಲಿ ವಿಶ್ವದ ಅತಿ ಉದ್ದದ ಸುರಂಗ ಹೆದ್ದಾರಿಯನ್ನು ಭಾರತದಲ್ಲಿ ನಿರ್ಮಿಸಲಾಗಿದೆ ಎಂದು ಶಾ ಹೇಳಿದರು. ವಿಶ್ವದ ಅತಿ ಎತ್ತರದ ಸೇತುವೆ ಭಾರತದಲ್ಲಿದೆ, ಕೋಲ್ಕತ್ತಾದ ನೀರೊಳಗಿನ ಮೆಟ್ರೋ. ಇದೆಲ್ಲ ನಡೆದಿರುವುದು ಹತ್ತು ವರ್ಷಗಳಲ್ಲಿ. ನಾವು ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ರಚಿಸಿದ್ದೇವೆ. ಪ್ರಪಂಚದ ಹಲವು ದೇಶಗಳು ಇದನ್ನು ಅಳವಡಿಸಿಕೊಳ್ಳುತ್ತಿವೆ. ಆಹಾರ ಭದ್ರತೆಯಿಂದ ಹಿಡಿದು ಆರೋಗ್ಯ ಭದ್ರತೆಯವರೆಗೆ ಎಲ್ಲ ಆಯಾಮಗಳಲ್ಲೂ ನಾವು ಕೆಲಸ ಮಾಡಿದ್ದೇವೆ. ದೂರದೃಷ್ಟಿ, ಅನುಭವ, ಬದ್ಧತೆ ಇರುವ ವ್ಯಕ್ತಿ ದೇಶದ ಪ್ರಧಾನಿಯಾದರೆ ತುಂಬಾ ಅನುಕೂಲ ಎಂದು ಅವರು ಹೇಳಿದ್ದಾರೆ.