ಅಗಣಿತ ಬೈಗುಗಳಲ್ಲಿ ಮಾತು ಮೌನಗಳ ಒಡನಾಟ
ಅಬ್ಧಿ ಯ ಅಳಲನ್ನು ಸವಿದವರು ದಿನಕರ-ಸೋಮ ಇಬ್ಬರನ್ನೂ ಮುಳುಗಿಸಿದರು …….
ಸೀತೆಯ ನೆರಳು ಜಲಧಿಯ ಮೇಲೆ ಬಿದ್ದಾಗ
ರಾವಣನೇನು ಆಯುಧ ಹಿಡಿದಿರಲಿಲ್ಲ
ಈ ಬದಿಯ ತೀರದ ನೂರಾರು ಕತೆಗಳು
ಆ ಬದಿಯ ದಡಮುಟ್ಟಿದಾಗ
ಸಂಗ್ರಾಮ ಮಾಡಿಸಿದವರು ಯಾರು?
ನಡುರಾತ್ರಿಯ ಅಲೆಗಳು ಏನು ಹೇಳಿದವೋ ಯಾರಿಗೂ ಗೊತ್ತಿಲ್ಲ!! ಅಲೆಯ ಮೆಚ್ಚಿದಂತೆ ಸುಳ್ಳೇ ನಟಿಸುವ ಯಾರಿಗೂ ಸಮುದ್ರದ ನಿಜಗಮಲು ತಾಕುವುದೇ ಇಲ್ಲ. ಸಣ್ಣ ದೋಣಿಗಳಲ್ಲಿ ಗಮಲಾಗಿ ದುಡಿವವರ ಹರಣದಲ್ಲಿ ಚಂದ್ರ ನಗುವಾಗ
ಮೃತ್ಯುವಿನ ವಾಸನೆ ಬಡಿಯಿತು
ಸೂರ್ಯನೇನು ಅವರ್ಯಾರಿಗೂ ಕೈನೀಡಲಿಲ್ಲ!!!
ದಡದಲ್ಲಿ ಬೆಳಕನ್ನೇ ಇಳಿಸಲು ಕಾದವರಿಗೆ
ಏನು ಹೇಳುವುದು…ಯಾರೋ ಮುಳುಗಿದ
ವರ್ತಮಾನಗಳು!! ಅಯ್ಯೋ! ಎಂಬಲ್ಲಿಗೆ ಅಂತ್ಯ
ಇನ್ನೂ ನಿಜದ ವಾಸನೆಯೊಂದು ಹಬ್ಬಲು ಸಮಯವಿಡಿಯುತ್ತದೆ….
ಯುದ್ದ ಘೋಷಿಸಿದವರು ರಾವಣನನ್ನು ಬಿಡುವುದು ಯಾವಾಗ? ಮೈಥಿಲಿಯನ್ನು ಸುಟ್ಟವರು
ರಾಮನ ನ್ಯಾಯಕ್ಕೆ ಗೋಡೆಕಟ್ಟಿದ್ದಾರೆ….
ಮಂಡೋದರಿಯ ಸಂಕಟವನ್ನು ವಿವರಿಸುವ ಜನ
ಸೀತೆಯನ್ನು ” ಮಾತೆ” ಎನ್ನುತ್ತಲೇ ಕೊಂದರು
ಪುರಾಣಗಳಿಗೆ ಶೃಂಗಾರ ಮಾಡಿ ಸಮುದ್ರದಲ್ಲಿ ತೇಲಿಬಿಟ್ಟಿದ್ದಾರೆ….ಈಗ ಜಲರಾಶಿಯಲ್ಲಿ ವ್ಯಾಪಾರ ಜೋರು… ಕಿನಾರೆಯಲ್ಲಿ ನಿಂತವರ ಕಣ್ಣುಗಳು ಸಣ್ಣ ನಾವೆಯೊಳಗೆ ಕಂದೀಲು ಹಚ್ಚಲಿ……..
– ಗೀತಾ ಎನ್ ಸ್ವಾಮಿ